ಅಪ್ಪುಗಾಗಿ 'ಎದೆ ತುಂಬಿ ಹಾಡಿದ' ಗಾಯಕರು
ಇತ್ತೀಚೆಗಷ್ಟೆ ನಿಧನರಾದ ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ಹಲವರು ಹಲವು ವಿಧವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.
ರಿಯಾಲಿಟಿ ಶೋಗಳು ಪುನೀತ್ ಸ್ಮರಣಾರ್ಥ ವಿಶೇಷ ಎಪಿಸೋಡ್ಗಳನ್ನು ತೆರೆಗೆ ತರುತ್ತಿವೆ. ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಗಾಯನ ರಿಯಾಲಿಟಿ ಶೋ 'ಎದೆ ತುಂಬಿ ಹಾಡುವೆನು' ಇದೀಗ ಪುನೀತ್ಗಾಗಿ ವಿಶೇಷ ಎಪಿಸೋಡ್ ಅನ್ನು ತೆರೆಗೆ ತಂದಿದ್ದು, ಎಪಿಸೋಡ್ ಶನಿವಾರ ಮತ್ತು ಭಾನುವಾರ ಪ್ರಸಾರವಾಗಲಿದೆ.
ಎಪಿಸೋಡ್ನ ಪ್ರೋಮೊ ಇದೀಗ ಬಿಡುಗಡೆ ಆಗಿದ್ದು, ಹಲವು ಗಾಯಕರು ಕಣ್ಣೀರು ತುಂಬಿಕೊಂಡೆ ಅಪ್ಪುವನ್ನು ನೆನಪುವನ್ನು ನೆನಪು ಮಾಡಿಕೊಂಡಿದ್ದಾರೆ. ಗಾಯಕ ರಾಜೇಶ್ ಕೃಷ್ಣನ್ ಸೇರಿದಂತೆ ಹಲವು ಗಾಯಕರು ಅಪ್ಪುಗಾಗಿ ವಿಶೇಷ ಹಾಡುಗಳನ್ನು ಪ್ರಸ್ತುತಿ ಪಡಿಸಿದ್ದಾರೆ.

ನಿರ್ದೇಶಕ ಭಗವಾನ್, ಅಪ್ಪುವನ್ನು ಎಳವಯೆಯಿಂದ ಎತ್ತಿ ಆಡಿಸಿದ, ಅಭಿನಯದ ಅ,ಆ,ಇ,ಈ ಹೇಳಿಕೊಟ್ಟ ನಟ ಹೊನ್ನವಳ್ಳಿ ಕೃಷ್ಣ, ಆತ್ಮೀಯ ಗೆಳೆಯ ಗುರುಕಿರಣ್, ನಟಿ ತಾರಾ ಇನ್ನೂ ಹಲವರು ವಿಶೇಷ ಎಪಿಸೋಡ್ನಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದಾರೆ ಎಲ್ಲರೂ ಅಪ್ಪುವಿನೊಂದಿಗಿನ ತಮ್ಮ ನೆನಪನ್ನು ಹಂಚಿಕೊಂಡಿದ್ದಾರೆ.
ಅದರಲ್ಲೂ ಗುರುಕಿರಣ್ ಅಂತೂ ಇನ್ನೂ ಆಘಾತದಿಂದ ಹೊರಬಂದಂತೆ ಕಾಣುತ್ತಿಲ್ಲ, ಅಪ್ಪು ನಿಧನವಾಗುವ ಹಿಂದಿನ ದಿನ ಗುರುಕಿರಣ್ ಜೊತೆ ಹುಟ್ಟುಹಬ್ಬದಲ್ಲಿ ಭಾಗವಹಿಸಿದ್ದರು. ಆ ವಿಷಯವನ್ನು ಗುರುಕಿರಣ್ ಮತ್ತೊಮ್ಮೆ 'ಎದೆ ತುಂಬಿ ಹಾಡುವೆನು' ರಿಯಾಲಿಟಿ ಶೋನಲ್ಲಿ ನೆನಪು ಮಾಡಿಕೊಂಡಿದ್ದಾರೆ.
ಬಹಳ ಭಾವಪೂರ್ಣ ಎಪಿಸೋಡ್ ಇದಾಗಿರಲಿದೆ ಎಂಬುದು ಪ್ರೋಮೋನಿಂದ ತಿಳಿದು ಬರುತ್ತಿದೆ. ಎಪಿಸೋಡ್ ಶನಿವಾರ ಮತ್ತು ಭಾನುವಾರ ರಾತ್ರಿ ಪ್ರಸಾರವಾಗಲಿದೆ. ಕನ್ನಡ ಕಿರುತೆರೆಯ ಹಲವು ರಿಯಾಲಿಟಿಶೋಗಳು ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ವಿಶೇಷ ಎಪಿಸೋಡ್ಗಳನ್ನು ಮಾಡುತ್ತಿವೆ.
ಕರ್ನಾಟಕದ ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಪುನೀತ್ ರಾಜ್ಕುಮಾರ್ ಸ್ಮರಣಾರ್ಥ 'ಅಪ್ಪು ನಮನ' ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜನೆ ಮಾಡುತ್ತಿದೆ. ನವೆಂಬರ್ 16 ರಂದು ಕಾರ್ಯಕ್ರಮವು ಅರಮನೆ ಮೈದಾನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ದೊಡ್ಮನೆ ಕುಟುಂಬದ ಎಲ್ಲ ಸದಸ್ಯರು, ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟದ ಸದಸ್ಯರು, ಕನ್ನಡ ಚಿತ್ರರಂಗದ ಎಲ್ಲ ಮೇರು ನಟರು, ಪುನೀತ್ ರಾಜ್ಕುಮಾರ್ ಆಪ್ತರು, ನೆರೆ-ಹೊರೆಯ ಚಿತ್ರೋದ್ಯಮದ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ಗೀತ ನಮನ ಸಹ ನಡೆಯಲಿದೆ.


Click it and Unblock the Notifications











