'ಗೋಕುಲದಲ್ಲಿ ಸೀತೆ' ಆಧುನಿಕ 'ಸೀತೆ-ಕೃಷ್ಣ'ರ ಕಥೆ
ಹೊಚ್ಚ ಹೊಸ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಈಟಿವಿ ಕನ್ನಡ ವಾಹಿನಿ ಇದೀಗ ಮತ್ತೊಂದು ಮೆಗಾ ಧಾರಾವಾಹಿಯನ್ನು ತನ್ನ ವೀಕ್ಷಕ ಬಳಗಕ್ಕೆ ನೀಡಲು ಸಿದ್ಧವಾಗಿದೆ. ಈಟಿವಿ ಕನ್ನಡದಲ್ಲಿ ಪ್ರಸಾರವಾಗಲಿರುವ ಧಾರಾವಾಹಿ ಹೆಸರು 'ಗೋಕುಲದಲ್ಲಿ ಸೀತೆ'.
ಈ ಮೆಗಾ ಧಾರಾವಾಹಿಯನ್ನು ಸೋಮವಾರದಿಂದ ಶುಕ್ರವಾರದವರೆಗೂ ನವೆಂಬರ್ 24ರಿಂದ ರಾತ್ರಿ 9.30 ಕ್ಕೆ ಪ್ರಸಾರ ಪ್ರಾರಂಭ ಮಾಡಲಿದೆ. ಸೀತೆಯಂತ ಗುಣ ಇರುವ ನಾಯಕಿ, ಗೋಕುಲದ ಕೃಷ್ಣನಂತಹ ಹುಡುಗನನ್ನು ವರಿಸಿದರೆ ಏನಾಗಬಹುದು? ಇದು ಆಧುನಿಕ 'ಸೀತೆ-ಕೃಷ್ಣ' ರ ಕಥೆ ‘ಗೋಕುಲದಲ್ಲಿ ಸೀತೆ' ಧಾರಾವಾಹಿ.
ಸದ್ಗುಣದ ಪಾವನಿ (ಅನುಷಾ) ಶ್ರೀಮಂತ ವ್ಯಾಪಾರಿ ರಾಹುಲ್ (ಸನ್ನಿ ಮಹಿಪಾಲ್) ವಿವಾಹ ಆಗುತ್ತಾರೆ. ಇದು ರಾಹುಲ್ ಅಮ್ಮ ಜಯಂತಿ (ವೀಣಾ ಸುಂದರ್) ಆಸೆ. ವಿವಾಹವಾದ ದಿನದಂದು ರಾಹುಲ್ ತನ್ನ ಮಡದಿಗೆ 11 ತಿಂಗಳ ಕರಾರನ್ನು ಸಹಿ ಮಾಡುವಂತೆ ಆಜ್ಞೆ ಮಾಡುತ್ತಾನೆ. ಆನಂತರ ಮದುವೆ ಕ್ಯಾನ್ಸಲ್ ಆಗುತ್ತದೆ ಎಂದು ಹೇಳುತ್ತಾನೆ.
ಕನ್ನಡದ ಹಲವಾರು ಅತ್ಯುತ್ತಮ ಧಾರಾವಾಹಿಗಳಾದ 'ಅರ್ಧ ಸತ್ಯ, ಪ್ರೀತಿ ಇಲ್ಲದ ಮೇಲೆ, ಗುಪ್ತ ಗಾಮಿನಿ, ಲಕುಮಿ ಹಾಗೂ ಚುಕ್ಕಿ ನಿರ್ದೇಶನ ಮಾಡಿದ ರಮೇಶ್ ಕೃಷ್ಣ ಅವರು 'ಗೋಕುಲದಲ್ಲಿ ಸೀತೆ' ಧಾರವಾಹಿಯ ನಿರ್ದೇಶಕರು. ವೈಷ್ಣವಿ ಮೂವಿ ಮಕೇರ್ಸ್ ಈ ಧಾರವಾಹಿಯ ನಿರ್ಮಾಪಕರು.

ಪೌರಾಣಿಕ ಹೆಸರಿನ ಜೊತೆ ಆಧುನಿಕ ನಿರೂಪಣೆ
ಈಟಿವಿ ವಾಹಿನಿಯ ಮುಖ್ಯಸ್ಥ ಪರಮೇಶ್ವರ್ ಗುಂಡಕಲ್ ಮಾತನಾಡುತ್ತಾ, "ವಾಹಿನಿಯು ಪ್ರಸಾರ ಮಾಡುವ ಧಾರಾವಾಹಿಗಳು ಪ್ರೇಕ್ಷಕರ ಮನಸಿನಲ್ಲಿ ಉಳಿಯುವಂತೆ ಮೂಡಿಬರುತ್ತಿದೆ. ಈ ವಾಹಿನಿಯು ಜನತೆಯ ಕತೆಗಳನ್ನು ಪರಿಣಾಮಕಾರಿಯಾಗಿ ಹೇಳಲು ಬಯಸುತ್ತದೆ. ಪೌರಾಣಿಕ ಹೆಸರಿನ ಜೊತೆ ಆಧುನಿಕ ನಿರೂಪಣೆ ಎಲ್ಲರಿಗೆ ಇಷ್ಟ ಆಗುವ ಆಶಾಭಾವನೆ ಇದೆ" ಎಂದು ಪರಮೇಶ್ವರ್ ಗುಂಡಕಲ್ ಹೇಳುತ್ತಾರೆ.

ಹನ್ನೊಂದು ತಿಂಗಳ ಕರಾರಿನ ಮದುವೆ
ವೈಷ್ಣವಿ ಮೂವಿ ಮೇಕರ್ಸ್ ಸಂಸ್ಥೆಯ ಮಾಲೀಕ ಹಾಗೂ ನಿರ್ದೇಶಕ ರಮೇಶ್ ಕೃಷ್ಣ ಮಾತನಾಡುತ್ತಾ, "ರಾಹುಲ್ ಹಾಗೂ ಪಾವನಿ ಅವರ ವೈಭವದ ಮದುವೆ ಒಳಗೆ ಒಂದು ಸಿಕ್ರೆಟ್ ಅಡಗಿದೆ. ಅದೇ 11 ತಿಂಗಳ ಕರಾರು ಒಳಗೊಂಡ ಮದುವೆ. ಇಂತಹ ಅವಧಿಯಲ್ಲಿ ಪಾವನಿ ತನ್ನ ಗಂಡನ ಮನಸನ್ನು ಬದಲಾಯಿಸಲು ಅವರ ಅತ್ತೆ ಜೊತೆ ಸೇರಿ ಮಾಡುವ ಯೋಜನೆಗಳು ಏನು ಎಂಬುದು ತಿಳಿಯುತ್ತಾ ಹೋಗುತ್ತದೆ.

ಸೀತೆಯಂತ ಗುಣಗಳಿರುವ ಆಧುನಿಕ ಜಗತ್ತಿನ ಕಥಾ ನಾಯಕಿ
ಸೀತೆಯಂತ ಗುಣಗಳಿರುವ ಆಧುನಿಕ ಜಗತ್ತಿನ ಕಥಾ ನಾಯಕಿ ಪಾವನಿ ರೈಲ್ವೇ ಸ್ಟೇಷನ್ ಬಳಿ ಇಡ್ಲಿ ಮಾರುವ ಸಾಮಾನ್ಯ ಹುಡುಗಿ. ಸಣ್ಣ ವ್ಯಾಪಾರದ ಹಣದಿಂದ ಜೀವನ ಸಾಗಿಸುತ್ತಾ ಇರುತ್ತಾಳೆ. ಪಾವನಿಯ ಗುಣಗಳನ್ನು ಮೆಚ್ಚಿ ರಾಹುಲ್ ತಾಯಿ ಜಯಂತಿ ಅನಾರೋಗ್ಯದ ಹೊತ್ತಿನಲ್ಲಿ ಮಗನಿಗೆ ಸರಿಯಾದ ಜೋಡಿ ಎಂದು ನಿರ್ಧರಿಸುತ್ತಾಳೆ. ಆದರೆ ಮದುವೆಯ ಹಿಂದಿನ ರಾತ್ರಿ ರಾಹುಲ್ ಕರಾರಿನ ಬಗ್ಗೆ ಶಾಕ್ ಪಾವನಿಗೆ ನೀಡುತ್ತಾನೆ.

ಗೋಕುಲದಲ್ಲಿ ಸೀತೆಯ ವನವಾಸ
ಮದುವೆಯ ನಂತರವೇ ಶುರುವಾಗುವುದು ಗೋಕುಲದಲ್ಲಿ ಸೀತೆಯ ವನವಾಸ. ಈಟಿವಿ ಕನ್ನಡ - ಕನ್ನಡದಲ್ಲಿ ವಿನೂತನ ಹಾಗೂ ವಿಶಿಷ್ಟ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದು, ಕನ್ನಡ ಸಂಸ್ಕೃತಿ ಜೊತೆಗೆ ಗುಣಮಟ್ಟದ ಕಾರ್ಯಕ್ರಮಗಳನ್ನು ಕಾಪಾಡಿಕೊಂಡು ಬಂದಿದೆ.

ಈಟಿವಿಯ ಹಲವು ಜನಪ್ರಿಯ ಕಾರ್ಯಕ್ರಮಗಳು
ಪಾಪ ಪಾಂಡು, ಸಿಲ್ಲಿ ಲಲ್ಲಿ, ಮನ್ವಂತರ, ಮುಕ್ತ, ಮೂಡಲಮನೆ, ಮಹಾನವಮಿ, ಮುಕ್ತ ಮುಕ್ತ, ನಿನ್ನೋಲುಮೆಯಿಂದಲೇ, ಶುಭಮಂಗಳ, ಡಾನ್ಸ್ ಕರ್ನಾಟಕ ಡಾನ್ಸ್, ಬಿಗ್ ಬಾಸ್, ಮನೆ ಮುಂದೆ ಮಹಾಲಕ್ಷ್ಮಿ, ಪುಟ್ಟ ಗೌರಿ ಮದುವೆ, ಲಕ್ಷ್ಮಿ ಬಾರಮ್ಮ, ಚರಣದಾಸಿ, ಅಶ್ವಿನಿ ನಕ್ಷತ್ರ, ಅಗ್ನಿ ಸಾಕ್ಷಿ, ಯಶೋದೆ ಹಾಗೂ ಕುಲವದು ಕಾರ್ಯಕ್ರಮಗಳು ಜನಪ್ರಿಯಗೊಂಡಿದೆ.


Click it and Unblock the Notifications











