ಈಟಿವಿ ಯಲ್ಲಿ ವೀಕ್ಷಿಸಿ 'ಶ್ರೀ ರಾಘವೇಂದ್ರ ಮಹಿಮೆ'

ಕಲಾಗೊಂಗೋತ್ರಿ ಮಂಜು ನಿರ್ದೇಶನದ ಈ ಧಾರಾವಾಹಿ ಈಟಿವಿ ಕನ್ನಡದಲ್ಲಿ ಇಂದಿನಿಂದ (13 ಆಗಸ್ಟ್ 2012) ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8-00 ಗಂಟೆಗೆ ಪ್ರಸಾರವಾಗಲಿದೆ. ವಿಶೇಷವೆಂದರೆ ಈ ಧಾರಾವಾಹಿಯಲ್ಲಿ ರಾಘವೇಂದ್ರ ಸ್ವಾಮಿಗಳ ಪಾತ್ರಧಾರಿಯಾಗಿ ಹಿರಿಯ ನಟ ಶ್ರೀಧರ್ ಕಾಣಿಸಿಕೊಳ್ಳಲಿದ್ದಾರೆ. ಇಷ್ಟು ಕಾಲ ಸಾಕಷ್ಟು ಬಾರಿ ಶಿವನ ಪಾತ್ರ ಮಾಡಿದ್ದ ನಟ ಶ್ರೀಧರ್, ಇದೇ ಮೊದಲ ಬಾರಿಗೆ ರಾಘವೇಂದ್ರ ಸ್ವಾಮಿ ಪಾತ್ರ ಪೋಷಿಸುತ್ತಿದ್ದಾರೆ.
"ಈ ಧಾರಾವಾಹಿಯಲ್ಲಿ ನಾವು ಪುರಾಣದಲ್ಲಿ ಉಲ್ಲೇಖಿಸಿರುವ ವಿಷಯ ಬಿಟ್ಟು ಬೇರೆ ಹೊಸದಾಗಿ ಏನನ್ನೂ ಹೇಳಲಾಗುವುದಿಲ್ಲ. ಬರಲಿರುವ ಹೊಸ 'ಶ್ರೀ ರಾಘವೇಂದ್ರ ಮಹಿಮೆ' ಧಾರಾವಾಹಿಯಲ್ಲಿ ಕೂಡ ಈ ಹಿಂದೆ ಹೇಳಲಾಗಿರುವ ರಾಯರ ಕಥೆಗಳು, ಪವಾಡಗಳು ಹಾಗೂ ಮಹಿಮೆಗಳನ್ನು ಸಾರುವಂತಹ ಕಥೆಯೇ ಇದೆ. ಆದರೆ ನಮ್ಮ ನಿರೂಪಣೆ ವಿಭಿನ್ನವಾಗಿ ಮೂಡಿಬರಲಿದೆ.
ಈ ಧಾರಾವಾಹಿಯ ಮೂಲಕ ರಾಯರು ಬೃಂದಾವನ ಸೇರಿದ ನಂತರದ ಘಟನೆಗಳನ್ನು ಹೇಳುವ ಪ್ರಯತ್ನ ನಮ್ಮದು. ಇದೊಂದು ಪೌರಾಣಿಕ ಧಾರಾವಾಹಿಯಾದ್ದರಿಂದ ನಾವು ಪುರಾಣದ, ಐತಿಹ್ಯದ ಚೌಕಟ್ಟಿನಲ್ಲೇ ಸಾಗಬೇಕು. ಆದರೆ ಈ ಧಾರಾವಾಹಿ ಮೂಲಕ ರಾಯರ ಬಗೆಗಿನ ಹೊಸ ಇನ್ನಷ್ಟು ಅಂಶಗಳನ್ನು ಹೇಳುವ ಪ್ರಯತ್ನ ಮಾಡುತ್ತೇವೆ. ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿರುವ ನಟ ಶ್ರೀಧರ್, ಪಾತ್ರಕ್ಕೆ ಬಹಳಷ್ಟು ಹೊಂದಿಕೊಂಡಿದ್ದಾರೆ.
ಶ್ರೀ ರಾಘವೇಂದ್ರ ವೈಭವ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿ ಭವ್ಯಶ್ರೀ ರೈ ಕೂಡ ನಟಿಸಿದ್ದಾರೆ. ಈ ಧಾರಾವಾಹಿ ಬಹಳಷ್ಟು ಶ್ರೀಮಂತವಾಗಿ ಮೂಡಿಬರಬೇಕೆಂಬ ಉದ್ದೇಶದಿಂದ ಕೆಲವು ದೃಶ್ಯಗಳ ಚಿತ್ರೀಕರಣಕ್ಕಾಗಿ ಸೆಟ್ ಕೂಡ ಹಾಕಲಾಗಿದೆ" ಎಂದಿದ್ದಾರೆ ನಿರ್ದೇಶಕರಾದ ಕಲಾ ಗಂಗೋತ್ರಿ. ಇಂದಿನಿಂದ ರಾತ್ರಿ 8-00 ಕ್ಕೆ ಈಟಿವಿ ಕನ್ನಡ, ರಾಘವೇಂದ್ರ ಸ್ವಾಮಿ ಭಕ್ತರಿಗೆ ಮತ್ತೊಮ್ಮೆ ಕಿರುತೆರೆಯಲ್ಲಿ ರಾಯರ ದರ್ಶನ ಭಾಗ್ಯ ಕಲ್ಪಿಸಲಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











