ತುಳು ಚಿತ್ರರಂಗದ ನಟ ನವೀನ್ ಡಿ ಪಡೀಲ್ ಬಗ್ಗೆ ನಿಮಗೆ ಗೊತ್ತೆ?
ನವೀನ್ ಡಿ ಪಡೀಲ್ ರದ್ದು ತುಳು ಚಿತ್ರರಂಗದಲ್ಲಿ ಜನಪ್ರಿಯ ಹೆಸರು. ನವೀನ್ ಪಡೀಲ್ ಎಂಬುದಕ್ಕಿಂತಲೂ ಮಜಾ ಟಾಕೀಸ್ನ ಗುಂಡು ಮಾಮ ಎಂದರೆ ತಟ್ಟನೆ ನೆನಪಾಗುತ್ತದೆ. ಮಂಗಳೂರಿನ ಪಡೀಲ್ನ ಕರಂಬೂರು ಅನ್ನೋ ಊರಿನಲ್ಲಿ ಜನಿಸಿರುವ ನವೀನ್ ಡಿ ಪಡೀಲ್ ಕೋಸ್ಟಲ್ವುಡ್ನ ಜನಪ್ರಿಯ ಕಾಮಿಡಿ ನಟರಲ್ಲಿ ಒಬ್ಬರು.
ತುಳು ಸಿನಿಮಾ ರಂಗ ಈಗಿರುವ ಎತ್ತರಕ್ಕೆ ಏರುವಲ್ಲಿ ನವೀನ್ ಅವರ ಸೇವೆಯೂ ಇದೆ. ಉತ್ತಮ ಅಬಿನಯವನ್ನು ಮಾಡುತ್ತಾ ಕಾಮಿಡಿಯ ಮೂಲಕ ಜನರನ್ನು ನಗಿಸುತ್ತಾ, ಅಳಿಸುತ್ತಾ ಜನರ ಮೆಚ್ಚುಗೆಗೆ ಭಾಜನಾರಾಗಿದ್ದಾರೆ ಇವರು. ಮಜಾ ಟಾಕೀಸ್ನ ಗುಂಡು ಮಾವ ಪಾತ್ರದ ಮೂಲಕ ಇನ್ನಷ್ಟೂ ಜನರಿಗೆ ಪರಿಚಿತರಾದರು. ಖಾಸಗಿ ಜೀವನದಲ್ಲಿ ಹಲವು ನೋವುಗಳನ್ನುಂಡರೂ ಜನರನ್ನು ನಗಿಸುವ ಕಾರ್ಯದಲ್ಲಿ ನಿರತರಾಗಿದದ್ದಾರೆ.
ನವೀನ್ ಡಿ ಪಡೀಲ್ ಬಾಲ್ಯದಲ್ಲಿಯೇ ಬಹಳ ಬಡತನದ ಬೇಗೆಯಲ್ಲಿ ಬೆಂದವರು. ಮನೆಯಲ್ಲಿ ಕಡು ಬಡತನ ಇದ್ದುದ್ದರಿಂದ 10ನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ ನವೀನ್, ಕುಟುಂಬ ನಿರ್ವಹಣೆಗಾಗಿ ಕೂಲಿ ಕೆಲಸಕ್ಕೆ ತೆರಳಲು ಆರಂಭಿಸಿದರು. ಮನೆಗೆ ಬಣ್ಣ ಹೊಡೆಯುವುದು, ಗಾರೆ ಕೆಲಸ, ಬಾಡಿಗೆ ಆಟೋ ಓಡಿಸುವುದು ಹೀಗೆ ಅನೇಕ ಕೆಲಸಗಳನ್ನು ಚಿಕ್ಕವಯಸ್ಸಿನಿಂದ ಮಾಡುತ್ತಾ ಬಂದರು. ಆದರೆ ತಾನೇನಾದರೂ ಸಾಧಿಸಲೇಬೇಕು ಎಂಬ ಹಠ ಇತ್ತು. ಜೊತೆಗೆ ನಟನೆ ಬಗ್ಗೆ ಸೆಳೆತವೂ ಇತ್ತು. ಹಾಗಾಗಿ ತಮ್ಮ ಗುರುಗಳೊಂದಿಗೆ ಡ್ರಾಮಾದಲ್ಲಿ ಅಭಿನಯಿಸಲು ಶುರು ಮಾಡಿದರು.

ಮಲಯಾಳಂ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ
ಬಳಿಕ ಇವರು ಮಲಯಾಳಂ 'ವಿಧೇಯನ್' ಹೆಸರಿನ ಸಿನಿಮಾವೊಂದರಲ್ಲಿ ಪ್ರಥಮವಾಗಿ ನಟಿಸಿದರು. ಆ ಸಿನಿಮಾವನ್ನು ಭಾರತದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರಾದ ಅಡೂರು ಗೋಪಾಲಕೃಷ್ಣನ್ ನಿರ್ದೇಶಿಸಿದ್ದರು. ಆ ನಂತರ ತುಳುರಂಗ ಭೂಮಿ ಯಲ್ಲಿ ಸಕ್ರಿಯವಾಗಿ ತೊಡಗಿಕೊಂಡ ನವೀನ್ ನಿಧಾನಕ್ಕೆ 2000 ಇಸವಿಯ ಬಳಿಕ ತುಳು ಸಿಸಿನಿಮಾಗಳಲ್ಲಿ ಹೆಚ್ಚು-ಹೆಚ್ಚು ಸಕ್ರಿಯರಾದರು. ಹಲವಾರು ತುಳು ಸಿನಿಮಾಗಳಲ್ಲಿ ನಟಿಸಿರುವ ನವೀನ್ ಇಂದು ಕೇವಲ ಕರಾವಳಿಯಲ್ಲಿ ಮಾತ್ರ ಅಲ್ಲ ಬೇರೆಡೆಯಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಪ್ರಥಮವಾಗಿ ನವೀನ್ ಅವರನ್ನು ಒಬ್ಬ ಕಾಮಿಡಿ ಪಾತ್ರದಲ್ಲಿ ನೋಡುತ್ತಿದ್ದ ಜನ ಈಗೀಗಾ ಸೀರಿಯಸ್ ಪಾತ್ರಗಳಲ್ಲಿಯೂ ನೋಡುತ್ತಿದ್ದಾರೆ.

ಬಹಳ ಕಷ್ಟದ ಬಾಲ್ಯ ಕಳೆದಿರುವ ನವೀನ್
ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಗಿದ್ದು ತಾಯಿಯ ಆಶಿರ್ವಾದದಿಂದ ಎಂದು ನೆನಪಿಸಿಕೊಳ್ಳುತ್ತಾರೆ ನವೀನ್, ಬಹಳ ಕಷ್ಟಪಟ್ಟು ನವೀನ್ ಅವರನ್ನು ಸಾಕಿ ಬೆಳೆಸಿದ್ದಾರಂತೆ ಅವರ ತಾಯಿ. ಮನೆಯಲ್ಲಿ ಬಹಳ ಕಷ್ಟದ ಪರಿಸ್ಥಿತಿ ಇತ್ತು. ತಾಯಿ ಮನೆಕೆಲಸ ಮಾಡಿಕೊಂಡು ಅಲ್ಲಿಂದ ಊಟಗಳನ್ನು ತೆಗೆದುಕೊಂಡು ಬಂದು ನವೀನ್ ಹಾಗೂ ಅವರ ತಂಗಿಗೆ ಬಡಿಸುತ್ತಿದ್ದರಂತೆ. ನವೀನ್ಗೆ ನಾಟಕದಲ್ಲಿ ಪಾತ್ರ ಮಾಡಲು ಮೊದಲು ಅವಕಾಶ ಸಿಕ್ಕಿದ್ದು ಹೈಸ್ಕೂಲಿಗೆ ಹೋದ ಸಂದರ್ಭದಲ್ಲಿ. ಅಲ್ಲಿಂದ ಶುರುವಾಯಿತು ನಟನೆ ಮೇಲಿನ ಪ್ರೇಮ.

'ಒರಿಯರ್ದ್ ಒರಿ' ಡ್ರಾಮಾದಲ್ಲಿ ನಟನೆ
ಬಳಿಕ ಹೈಸ್ಕೂಲ್ ಮುಗಿದ ಬಳಿಕ ಕಲ್ಲಡ್ಕದಲ್ಲಿ ಒಂದು ನಾಟಕದ ಮೂಲಕ ಅಭಿನಯ ಆರಂಭ ಮಾಡಿದರು ನವೀನ್. ಪ್ರಥಮವಾಗಿ ನವೀನ್ ಅವರನ್ನು ಪುರುಷೋತ್ತಮ್ ಎಂಬುವವರು ನಾಟಕಕ್ಕೆ ಕರೆತಂದರು, ಅರ್ಧನಿದ್ರೆ ಎಂಬ ಡ್ರಾಮಾದ ಮೂಲಕ ನಾಟಕ ರಂಗಕ್ಕೆ ಎಂಟ್ರಿ ನೀಡಿದರು. ಬಳಿಕ 'ಒರಿಯರ್ದ್ ಒರಿ' ಎನ್ನುವ ಡ್ರಾಮಾದ ಭಜನೆ ಬಸಪ್ಪಣ್ಣನ ಪಾತ್ರದಲ್ಲಿ ನವೀನ್ ಮಿಂಚಿದರು. ಬಳಿಕ ಗುಂಡು ಮಾವ ಎಂಬ ಪಾತ್ರದಲ್ಲಿ ಜನರ ಮನಗೆದ್ದರು. ನವೀನ್ ಅವರ ತಂದೆಗೆ ಕೊಂಚ ಮಟ್ಟಿಗೆ ಕುಡಿತದ ಸ್ವಭಾವ ಇದ್ದದುರಿಂದ ಅದನ್ನು ನೋಡುತ್ತಾ ಬೆಳೆದ ನವೀನ್ ಅವರಿಗೆ ಆ ಪಾತ್ರದಲ್ಲಿ ನಟಿಸಲು ಸುಲಭವಾಗುತ್ತಿತ್ತು. ಸ್ಟಾರ್ ಆದರೂ ನವೀನ್ ರಂಗಭೂಮಿ ಮರೆತಿಲ್ಲ. ಇದೀಗ ಹೊಸ ರಂಗಭೂಮಿ ತಂಡವನ್ನು ಕಟ್ಟುತ್ತಿದ್ದಾರಂತೆ ನವೀನ್.

ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ನವೀನ್
ವಿದೇಶದಲ್ಲೂ ನಾಟಕ ಪ್ರದರ್ಶನವನ್ನು ನವೀನ್ ನೀಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನವೀನ್ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. 'ದಬಕ ದಬ ಅಯಿಸಾ', 'ಏಸಾ' ಸಿನಿಮಾದಲ್ಲಿ ಕೂಡ ವಿಭಿನ್ನವಾದ ಪಾತ್ರದಲ್ಲಿ ಜನರ ಮನಗೆದ್ದಿದ್ದಾರೆ. ಕರಾವಳಿಯ ಜನರಿಗೆ ಸಿನಿಮಾದಲ್ಲಿ ಮೊದಲು ಹಾಸ್ಯ ಬೇಕು, ಜನರ ಅಭಿರುಚಿಗೆ ತಕ್ಕಂತೆ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ನವೀನ್ ಕರಾವಳಿಯ ಜನಪ್ರಿಯ ನಟ. ಸಿನಿಮಾದ ಮೂಲಕ ಹಾಸ್ಯವನ್ನು ಉಣಬಡಿಸುತ್ತಾ ಜನರ ಮನೆಮಾತಾಗಿದ್ದಾರೆ ನವೀನ್ ಡಿ ಪಡೀಲ್. ''ಪೆಪ್ಪೆರೆರೆ ಪೆರೆರೆ', "ಬಬನ್ನಾನಾ ಟ್ಯಾಕ್ಸಿ', "ಸರ್ಕಸ್' ಮುಂತಾದ ಪ್ರಾಜೆಕ್ಟ್ಗಳಲ್ಲಿ ನವೀನ್ ಬಣ್ಣ ಹಚ್ಚುತ್ತಿದ್ದಾರೆ. "ಗಿರ್ಗಿಟ್' ಸಿನಿಮಾ ಮೂಲಕ ನವೀನ್ ತುಳು ಉದ್ಯಮದಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿದ್ದರು. ಇನ್ನೂ ಅನೇಕ ಯಶಸ್ಸುಗಳು ನವೀನ್ ಅವರಿಗಾಗಿ ಕಾದಿವೆ.


Click it and Unblock the Notifications











