ಶ್ರೀಮನ್ನಾರಾಯಣನ ಮೇಲೆ ಮುನಿಸಿಕೊಂಡ ಫ್ಯಾನ್ಸ್: ಇದ್ದಕ್ಕಿದ್ದಂತೆ ಪ್ರೋಮೋ ಮಾಯವಾಗಿದ್ದೇಕೆ?
Recommended Video
ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾ ಡಿಸೆಂಬರ್ ಕೊನೆಯ ವಾರದಲ್ಲಿ ತೆರೆಕಂಡಿತ್ತು. ಸ್ಯಾಂಡಲ್ವುಡ್ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದ್ದ ಶ್ರೀಮನ್ನಾರಾಯಣ ಸಿನಿಮಾ ದಾಖಲೆಯ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ.
ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಶ್ರೀಮನ್ನಾರಾಯಣ ಸಿನಿಮಾ ಇನ್ನೂ ಅನೇಕ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿದೆ. ಯಶಸ್ವಿ 25 ದಿನ ಪೂರೈಸಿ ಮುನ್ನುಗ್ಗುತ್ತಿರುವ ಸಂದರ್ಭದಲ್ಲಿ ಶ್ರೀಮನ್ನಾರಾಯಣ ಸಿನಿಮಾ ಕಿರುತೆರೆಯಲ್ಲಿ ಬರ್ತಿದೆ ಎಂಬ ವಿಷಯ ಬಹಿರಂಗವಾಗಿದೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಅವನೇ ಶ್ರೀಮನ್ನಾರಾಯಣ ಸಿನಿಮಾ ಅತಿ ಶೀಘ್ರದಲ್ಲಿ ಪ್ರಸಾರವಾಗುತ್ತಿದೆ ಎಂಬ ಪ್ರೋಮೋ ಇತ್ತೀಚಿಗಷ್ಟೆ ಫೇಸ್ ಬುಕ್ನಲ್ಲಿ ಪೋಸ್ಟ್ ಆಗಿತ್ತು. ಇದನ್ನು ನೋಡಿದ ಚಿತ್ರರಸಿಕರ ಖುಷಿ ಪಟ್ಟರು. ಖುಷಿಯ ಜೊತೆ ಅನೇಕರು ಮುನಿಸಿಕೊಂಡರು. ಯಾಕೆ ಎಂದು ತಿಳಿಯಲು ಮುಂದೆ ಓದಿ...

ಇಷ್ಟು ಬೇಗ ಕಿರುತೆರೆಗೆ ಯಾಕೆ?
ಸಿನಿಮಾ ರಿಲೀಸ್ ಆಗಿ 25 ದಿನ ಮಾತ್ರ ಆಗಿದೆ. ಇನ್ನು ಅನೇಕ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ಒಂದು ಸಿನಿಮಾ ಯಶಸ್ವಿಯಾಗಿ ಹೋಗಬೇಕಾದರೆ ಅಷ್ಟು ಬೇಗ ಕಿರುತೆರೆಯಲ್ಲಿ ಪ್ರಸಾರ ಮಾಡುವುದು ಎಷ್ಟು ಸರಿ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಥಿಯೇಟರ್ ಗೆ ಏಕೆ ಹೋಗಬೇಕಿತ್ತು
ಇಷ್ಟು ಬೇಗ ಟಿವಿಯಲ್ಲಿ ಸಿನಿಮಾ ಪ್ರಸಾರ ಮಾಡುವುದಾದರೇ, ನಾವೇಕೆ ದುಡ್ಡು ಕೊಟ್ಟು ಚಿತ್ರಮಂದಿರದಲ್ಲಿ ನೋಡಬೇಕಿತ್ತು. ಸಿನಿಮಾ ಚೆನ್ನಾಗಿದ್ದರೂ ಇನ್ನು ಅನೇಕ ಕಡೆ ಅವನೇ ಶ್ರೀಮನ್ನಾರಾಯಣ ಸಿನಿಮಾ ತಲುಪಲಿಲ್ಲ. ಇದರಿಂದ ಇಂಡಸ್ಟ್ರಿ ಬೆಳೆಯುವುದು ಹೇಗೆ ಎಂದು ಸಿನಿರಸಿಕರ ಕಾಮೆಂಟ್ ಮಾಡಿದ್ದಾರೆ.

ಬಿಸಿನೆಸ್ ಲೆಕ್ಕಾಚಾರವೇ ಮುಖ್ಯ!
ಹಾಗ್ನೋಡಿದ್ರೆ, ನಿರ್ಮಾಪಕರಿಗೆ ಬಿಸಿನೆಸ್ ಮುಖ್ಯವಾಗಿದೆ. ಸಿನಿಮಾ ಮಾಡುವುದು, ರಿಲೀಸ್ ಮಾಡುವುದಕ್ಕೆ ಮುಂಚೆಯೇ ಟಿವಿ ಹಕ್ಕು, ಆಡಿಯೋ ಹಕ್ಕು, ಆನ್ ಲೈನ್ ಹಕ್ಕು ಅಂತ ದುಡ್ಡು ಗಳಿಸುವುದರ ಕಡೆ ಮಾತ್ರ ಗಮನ ಕೊಡಲಾಗುತ್ತಿದೆ ಎಂದು ಚಿತ್ರತಂಡ ಹಾಗೂ ಖಾಸಗಿ ವಾಹಿನಿಯ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರೋಮೋ ಕಾಣೆಯಾಗಿದೆ
ಇನ್ನು ಅತಿ ಶೀಘ್ರದಲ್ಲಿ ಅವನೇ ಶ್ರೀಮನ್ನಾರಾಯಣ ಸಿನಿಮಾ ನಿಮ್ಮ ಮುಂದೆ ಎಂದು ಪ್ರೋಮೋ ಪ್ರಸಾರ ಮಾಡಿದ್ದ ವಾಹಿನಿ, ಈಗ ತಮ್ಮ ಫೇಸ್ ಬುಕ್ ಖಾತೆಯಿಂದ ಪ್ರೋಮೋ ಡಿಲೀಟ್ ಮಾಡಿದೆ. ಬಹುಶಃ ಅಭಿಮಾನನಿಗಳಿಂದ ಒತ್ತಡ ಹೆಚ್ಚಾದ ಕಾರಣ, ಪ್ರೋಮೋ ತೆಗೆದಿರಬಹುದು.

ಸದ್ಯಕ್ಕೆ ಪ್ರಸಾರದ ದಿನಾಂಕ ಇಲ್ಲ
ಸದ್ಯದ ಮಾಹಿತಿ ಪ್ರಕಾರ, ಅವನೇ ಶ್ರೀಮನ್ನಾರಾಯಣ ಸಿನಿಮಾ ಕಿರುತೆರೆಯಲ್ಲಿ ಸದ್ಯಕ್ಕೆ ಪ್ರಸಾರವಾಗಲ್ಲ. ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಸಿನಿಮಾ ಮೊದಲು ಟೆಲಿಕಾಸ್ಟ್ ಆಗಬೇಕಿದೆ. ಬಳಿಕ ಅವನೇ ಶ್ರೀಮನ್ನಾರಾಯಣನ ಆಗಮನವಾಗಲಿದೆ. ಶಿವಣ್ಣನ ಸಿನಿಮಾದ ಪ್ರಸಾರ ದಿನಾಂಕವೇ ಇನ್ನು ಬಹಿರಂಗವಾಗಿಲ್ಲ. ಅದಾದ ಬಳಿಕ ನಾರಾಯಣನ ಬಗ್ಗೆ ನಿರ್ಧರಿಸಬೇಕಿದೆ.


Click it and Unblock the Notifications











