ಭಾಗ್ಯಲಕ್ಷ್ಮೀ ವಿರುದ್ಧ ವೀಕ್ಷಕರ ಬೇಸರ; 'ನಾನು ಭಾಗ್ಯ' ಅಭಿಯಾನ ಏನಾಯ್ತು?
ಹೆಣ್ಣು ಮಕ್ಕಳಿಗೂ ಶಕ್ತಿ ಇರುತ್ತದೆ. ಅದನ್ನ ಯಾವಾಗ ಬಳಸಬೇಕೋ ಆ ಸಂದರ್ಭದಲ್ಲಿ ಬಳಸಿಯೇ ತೀರುತ್ತಾರೆ. ಮದುವೆಯಾದ ಮೇಲೆ ಬೇರೆ ದಿಕ್ಕು ಇಲ್ಲ. ಹೊಡೆದರೂ, ಬಡಿದರೂ ಗಂಡನೇ ಗಟ್ಟಿ ಎಂದು ಯಾರೂ ಇರಲ್ಲ.
ಮನೆ, ಮಕ್ಕಳು, ಅತ್ತೆ ಮಾವನಿಗೆ ಬೆಲೆ ಕೊಟ್ಟು ಅಥವಾ ಸಮಾಜದಲ್ಲಿ ತಮ್ಮ ಬಗ್ಗೆ ಗೊತ್ತೇ ಇಲ್ಲದವರ ಚುಚ್ಚು ಮಾತುಗಳಿಗೆ ಆಸ್ಪದ ಕೊಡಬಾರದು ಎಂಬ ಕಾರಣ ಅದೆಷ್ಟೋ ಹೆಣ್ಣು ಮಕ್ಕಳು ಗಂಡ ಕೆಟ್ಟವನಾದರೂ ಮಕ್ಕಳಿಗೋಸ್ಕರ ಎಲ್ಲವನ್ನು ಸಹಿಸಿಕೊಳ್ಳುತ್ತಾರೆ. ಆ ರೀತಿ ನೋವುಂಡು ತನ್ನವರಿಗಾಗಿ ಬದುಕುವ ಹೆಣ್ಣು ಮಕ್ಕಳಿಗೆ ಯಾರಾದರೂ ಸ್ಫೂರ್ತಿಯಾಗಬೇಕು. ಆಗ ತನ್ನೊಳಗಿನ ಶಕ್ತಿಯನ್ನ ಅರಿತು, ಬದುಕುವುದಕ್ಕೆ ನಿಲ್ಲುತ್ತಾರೆ.

'ಭಾಗ್ಯಲಕ್ಷ್ಮೀ' ಧಾರಾವಾಹಿ ಕೂಡ ಅಷ್ಟೇ ನಿರೀಕ್ಷೆಯನ್ನ ಹುಟ್ಟು ಹಾಕಿತ್ತು. ಗಂಡನಿಂದ ಕಣ್ಣೀರು ಹಾಕುತ್ತಿದ್ದ ಭಾಗ್ಯಾ, ಧೈರ್ಯವಾಗಿ ನಿಲ್ಲುವುದಕ್ಕೆ ಶುರು ಮಾಡಿದ್ದಳು. ಓದಿಲ್ಲದೆ ಇದ್ದರೇನಂತೆ ನಂಗೆ ಗೊತ್ತಿರುವ ಕಲೆಯಿಂದಾನೇ ಕೆಲಸ ಹುಡುಕುತ್ತೇನೆಂದು ಛಲ ತೊಟ್ಟವಳು. ಆದರೆ ಅದ್ಯಾಕೋ ಕಥೆ ಸಿಕ್ಕಾಪಟ್ಟೆ ಪೇಲವ ಅನ್ನಿಸೋದಕ್ಕೆ ಶುರುವಾಗಿದೆ. ಅಭಿಯಾನವೇ ಹಳ್ಳ ಹಿಡಿದಿದೆ ಎನ್ನುವ ಚರ್ಚೆ ನಡೀತಿದೆ.
ಶ್ರೇಷ್ಠಾಳನ್ನು ನಡುಗಿಸಿದ್ದ ಅತ್ತೆ-ಸೊಸೆ
ತಾಂಡವ್ಗೆ ಮಾತಿನಲ್ಲಿ ಹೇಳಿದರೆ ಅರ್ಥ ಆಗೋದಿಲ್ಲ ಅನ್ನೋದು ಕುಸುಮಾಗೆ ಅರ್ಥವಾಗಿತ್ತು. ಅದಕ್ಕೆ ಶ್ರೇಷ್ಠಾಳನ್ನು ಮನೆಗೆ ಕರೆತಂದಾಗ ಅವಳನ್ನೆ ಓಡಿಸುವ ಪ್ಲ್ಯಾನ್ ಮಾಡಿದರು. ಆ ಪ್ಲ್ಯಾನ್ ತುಂಬಾ ಚೆನ್ನಾಗಿಯೇ ಇತ್ತು. ಆದರೆ ಸತ್ಯ ನಾರಾಯಣ ಪೂಜೆ ಆದ್ಮೇಲೆ ಎಲ್ಲವೂ ಬದಲಾಗಿದೆ.
ಮತ್ತೆ ತಾಂಡವ್ ರಾದ್ಧಾಂತ ಶುರು
ಅಮ್ಮನಿಗೆ ಎದುರು ಮಾತಾಡ್ತೀಯ ಅಂತ ತಾಂಡವ್, ಶ್ರೇಷ್ಠಾಗೇನೆ ಕಪಾಳಕ್ಕೆ ಹೊಡೆದಿದ್ದ. ಆದ್ರೆ ಈಗ ಶ್ರೇಷ್ಠಾ ಹೇಳಿದ ಮಾತುಗಳನ್ನ ಕೇಳಿಕೊಂಡು ಮತ್ತೆ ಅಪ್ಪ ಅಮ್ಮನ ವಿರುದ್ಧ ತಿರುಗಿ ಬಿದ್ದಿದ್ದಾನೆ. ನಾವೇ ಬೇರೆ ಹೋಗ್ತೀವಿ ಅಂತ ಲಗೇಜು ಸಮೇತ ಬಂದು ನಿಂತಿದ್ದಾರೆ.

ಮತ್ತೆ ವೀಕ್ ಆದ್ಲಾ ಭಾಗ್ಯಾ
ಭಾಗ್ಯಾ ಇತ್ತೀಚೆಗೆ ತನ್ನ ಗಂಡನನ್ನೇ ನಡುಗಿಸಿದ್ದಳು. ಅಳು ಮುಂಜಿ ಭಾಗ್ಯಾಳನ್ನ ನೋಡಿ ತುಂಬಾ ದಿನ ಆಗಿತ್ತು. ಆದರೆ ತಾಂಡವ್, ಶ್ರೇಷ್ಠಾಳನ್ನ ತಬ್ಬಿಕೊಂಡಿದ್ದು ನೋಡಿ ಕಣ್ಣೀರಿಟ್ಟಳು. ಇದು ಸಹಜ ಬಿಡಿ. ಸಂಸಾರ ಸರಿ ಮಾಡಿಕೊಳ್ಳಬೇಕು ಎಂದು ಹೋರಾಡುತ್ತಿರುವ ಭಾಗ್ಯಾಗೆ ಗಂಡ ಕಣ್ಣ ಮುಂದೆಯೇ ತಪ್ಪು ದಾರಿ ಹಿಡಿದರೆ ನೋವಾಗದೆ ಇರಲಾರದು. ಆದರೆ ವೀಕ್ಷಕರಿಗಿರುವ ತಾನೂ ವೀಕ್ ಅನ್ನೋದನ್ನ ಭಾಗ್ಯಾಳೆ ಮತ್ತೆ ಮತ್ತೆ ಪ್ರೂವ್ ಮಾಡುತ್ತಿರುವ ಸನ್ನಿವೇಶವೂ ನಿರ್ಮಾಣವಾಗುತ್ತಿದೆ. ತಾಂಡವ್ ನೋಡಿ ಸುಮ್ಮನೆ ಆಗ್ತಾಳೆ, ಶ್ರೇಷ್ಠಾಳ ರಾದ್ಧಾಂತ ನೋಡಿ ಸೈಲೆಂಟ್ ಆಗಿ ಹೋಗ್ತಾಳೆ. ಇದನ್ನ ಸ್ವೀಕರಿಸುವುದಕ್ಕೆ ಭಾಗ್ಯಾ ಅಭಿಮಾನಿಗಳಿಂದ ಆಗ್ತಾ ಇಲ್ಲ.
ನಾನು ಭಾಗ್ಯಾ ಅಭಿಯಾನ
ಕಲರ್ಸ್ ಕನ್ನಡ ಇತ್ತೀಚೆಗೆ 'ನಾನು ಭಾಗ್ಯಾ' ಎಂಬ ಅಭಿಯಾನ ಶುರು ಮಾಡಿತ್ತು. ಅಂದ್ರೆ ಭಾಗ್ಯಾ ತನ್ನ ಜೀವನದ ಮುಖ್ಯ ಘಟ್ಟದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ವಿಚಾರವದು. ಗಂಡನೇ ಬೇಡ ಎಂದು ಡಿವೋರ್ಸ್ ಪೇಪರ್ ಬಿಸಾಡಿ ಬಂದ ದಿನ ಅದು. ಭಾಗ್ಯಾಳಂತ ಅದೆಷ್ಟೋ ಹೆಣ್ಣು ಮಕ್ಕಳಿಗೆ ಇದು ಸ್ಪೂರ್ತಿಯಾಗಿತ್ತು. ಮುಂದೆ ಭಾಗ್ಯಾಳ ಗಟ್ಟಿ ನಿರ್ಧಾರಗಳು ಬದುಕನ್ನು ಬದಲಾಯಿಸುತ್ತವೆ ಎಂದೇ ಭಾವಿಸಲಾಗಿತ್ತು. ಭಾಗ್ಯಾಳೇ ತಾಂಡವ್ ನ ಬದಲಾಯಿಸುತ್ತಾಳೆ, ಸಂಸಾರ ಸರಿಯಾಗುತ್ತೆ ಎಂದು ಭಾವಿಸಿದ್ದವರಿಗೆ ಎಲ್ಲವೂ ಉಲ್ಟಾ ಆಗಿದೆ. ಮತ್ತದೇ ಜಗಳ, ತಾಂಡವ್ ಗಲಾಟೆ, ಭಾಗ್ಯಾಗೆ ಡಿವೋರ್ಸ್ ಸುದ್ದಿಯದ್ದೇ ಸದ್ದು. ಇನ್ನೆಲ್ಲಿ ಈ ಧಾರಾವಾಹಿ ನೋಡಿ ಹೆಣ್ಣು ಮಕ್ಕಳು ಸ್ಟ್ರಾಂಗ್ ಆಗೋದು.


Click it and Unblock the Notifications











