ಹಾಟ್ ಸೀಟ್ನಿಂದ ಕತ್ತಲೆ ಕೋಣೆಯವರೆಗೆ ; ಕೆಬಿಸಿಯಲ್ಲಿ ₹50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಅರೆಸ್ಟ್
ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು... ಇಂಥಾ ಧಾವಂತದಿಂದ ಥರ ಥರದ ವೇಷ ತೊಟ್ಟ, ಹೆಜ್ಜೆ ಹೆಜ್ಜೆಗೂ ಮಹಾಮೋಸ ಮಾಡುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮೋಸ ಮಾಡಲು ವಂಚಕರು ಸದಾ ಹೊಸ ದಾರಿಯನ್ನು ಹುಡುಕುತ್ತಲೇ ಇರುತ್ತಾರೆ. ದುರಂತ ಅಂದರೆ ಈ ವಂಚಕರ ಸಾಲಿನಲ್ಲಿ ಕೇವಲ ಜನಸಾಮಾನ್ಯರು ಮಾತ್ರ ಇಲ್ಲ. ಜನಸಾಮಾನ್ಯರು ಮಾತ್ರ ಜನಸಾಮಾನ್ಯರನ್ನು ಖೆಡ್ಡಾಗೆ ಬೀಳಿಸುವುದಿಲ್ಲ.
ಬದಲಿಗೆ ಉನ್ನತ ಹುದ್ದೆಯಲ್ಲಿದ್ದವರು, ಜನ ಸೇವೆ ಮಾಡಲು ಅಧಿಕಾರದಲ್ಲಿದ್ದವರು, ಹಣದಾಸೆಗೆ ಮಾಡಬಾರದ ಕೆಲಸವನ್ನು ಮಾಡುತ್ತಾರೆ. ಉದಾಹರಣೆಗೆ ಅಮಿತಾ ಸಿಂಗ್ ತೋಮರ್.

ಹೌದು, ಅಮಿತಾ ಸಿಂಗ್ ತೋಮರ್.. ಒಂದ್ಕಾಲದಲ್ಲಿ ಅಮಿತಾಬ್ ಬಚ್ಚನ್ ಅವರ ಜಗದ್ವಿಖ್ಯಾತ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ಪತಿಯ ಸ್ಫರ್ಧಿ. ಕೆಬಿಸಿಯ 5ನೇ ಸೀಸನ್ನಲ್ಲಿ ಭಾಗವಹಿಸಿದ್ದ ಅಮಿತಾ ಸಿಂಗ್ ತೋಮರ್ ಆ ಕಾಲದಲ್ಲಿ 50 ಲಕ್ಷ ಗೆದ್ದಿದ್ದರು. ತಮ್ಮ ಬುದ್ದಿವಂತಿಕೆಯಿಂದ ಹಲವರ ಹೃದಯವನ್ನು ಕೂಡ ಆಗ ಗೆದ್ದಿದ್ದರು. ಇಂಥಾ ಅಮಿತಾ ಸಿಂಗ್ ತೋಮರ್ ಸದ್ಯ ಜೈಲು ಹಕ್ಕಿಯಾಗಿದ್ದಾರೆ.
ಪಿಟಿಐ ವರದಿಯ ಪ್ರಕಾರ, ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಅಮಿತಾ ಅವರನ್ನು ನೆರೆ ಪರಿಹಾರ ಕಾರ್ಯಗಳಲ್ಲಿ ನಡೆದ ₹2.5 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. 2021ರಲ್ಲಿ ಶಿಯೋಪುರ್ ಜಿಲ್ಲೆಯ ಬರೋಡಾ ತಹಸೀಲ್ನಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರ್ ಅಮಿತಾ ಸಿಂಗ್ ತೋಮರ್ ಅವರನ್ನು ಬಂಧಿಸಲಾಗಿದ್ದು ನ್ಯಾಯಾಲಯದ ಮುಂದೆ ಅಮಿತಾ ಸಿಂಗ್ ಅವರನ್ನು ಹಾಜರು ಪಡಿಸಲಾಗಿದೆ. ಶಿವಪುರಿ ಜೈಲಿಗೆ ಕೂಡ ಕಳುಹಿಸಲಾಗಿದೆ.
ಬರೋಡಾ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (SDOP) ಅವನೀತ್ ಶರ್ಮಾ ನೇತೃತ್ವದ ವಿಶೇಷ ತಂಡವು ತೋಮರ್ ಅವರನ್ನು ಗ್ವಾಲಿಯರ್ನ ಚಂದ್ರವದನಿ ನಾಕಾ ಪ್ರದೇಶದಲ್ಲಿದ್ದ ಅವರ ಮನೆಯಿಂದ ಬಂಧಿಸಿದ್ದು, ಅಮಿತಾ ಸಿಂಗ್ ತೋಮರ್ ಈ ಹಿಂದೆ ವಿಜಯಪುರದ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಜಿಲ್ಲಾಧಿಕಾರಿ ಅರ್ಪಿತ್ ವರ್ಮಾ ಅವರು ಬುಧವಾರವಷ್ಟೇ ಅವರನ್ನು ಈ ಹುದ್ದೆಯಿಂದ ತೆಗೆದುಹಾಕಿದ್ದರು ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಎಸ್ಪಿ ಸುಧೀರ್ ಕುಮಾರ್ ಅಗರ್ವಾಲ್, ಅಮಿತಾ ಸಿಂಗ್ ತೋಮರ್ ತಮ್ಮ ಕರ್ತವ್ಯಕ್ಕೆ ಗೈರುಹಾಜರಾಗಿದ್ದರು. ಈ ಹಿನ್ನೆಲೆ ಅಮಿತಾ ಜಾಡು ಹಿಡಿದು ಹೊರಟ ಪೊಲೀಸರು ಅಂತಿಮವಾಗಿ ಗ್ವಾಲಿಯರ್ನಲ್ಲಿ ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. ಈ ಹಿಂದೆ ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಉನ್ನತ ನ್ಯಾಯಾಲಯಗಳು ಅವರ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದ್ದವು ಎಂದು ಸದ್ಯ ವರದಿಯಾಗಿದೆ.

ಅಂದ್ಹಾಗೇ 2021ರ ನೆರೆ ಪರಿಹಾರ ಹಗರಣದಲ್ಲಿ ಇಲ್ಲಿಯವರೆಗೆ 22 ಕಂದಾಯ ಅಧಿಕಾರಿಗಳು ಮತ್ತು ಓರ್ವ ತಹಸೀಲ್ದಾರ್ ಅವರನ್ನು ಅರೆಸ್ಟ್ ಮಾಡಲಾಗಿದ್ದು, ಹಣವನ್ನು ದುರುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಬರೋಬ್ಬರಿ 2.5 ಕೋಟಿ ರೂ. ಹಣವನ್ನು ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿರುವ ಆರೋಪ ಇವರ ಮೇಲಿದೆ. ಒಟ್ಟು 110 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು ಶಿಯೋಪುರ ಜಿಲ್ಲೆಯ ಬರೋಡಾ ಎಸ್ಡಿಒಪಿ ಈ ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ.
ಇನ್ನುಳಿದಂತೆ ಅಮಿತಾ ಸಿಂಗ್ ತೋಮರ್, ಫಾಸ್ಟೆಸ್ಟ್ ಫಿಂಗರ್ ಪ್ರಿಂಟ್ ಸುತ್ತಿನಲ್ಲಿ ಗೆದ್ದು ''ಕೌನ್ ಬನೇಗಾ ಕರೋಡ್ಪತಿ''ಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ₹50 ಲಕ್ಷ ಬಹುಮಾನ ಗೆದ್ದಿದ್ದರು. ಕೆಬಿಸಿ ಸೀಸನ್ 5 ರ 21ನೇ ಸಂಚಿಕೆಯಲ್ಲಿ ಇವರು ಕಾಣಿಸಿಕೊಂಡಿದ್ದರು.
1857ರ ಯುದ್ಧದಲ್ಲಿ, ಗ್ವಾಲಿಯರ್ನಲ್ಲಿ ರಾಣಿ ಲಕ್ಷ್ಮೀಬಾಯಿ ಮತ್ತು ತಾತ್ಯಾ ಟೋಪೆ ವಿರುದ್ಧ ಹೋರಾಡಿದ ಬ್ರಿಟಿಷ್ ಸೈನ್ಯದ ಕಮಾಂಡರ್ ಯಾರು? ಎಂಬ ಪ್ರಶ್ನೆಯನ್ನು ಅಮಿತಾಬ್ ಬಚ್ಚನ್ 50 ಲಕ್ಷದ ಕೊನೆಯ ಪ್ರಶ್ನೆಯನ್ನಾಗಿ ಇವರಿಗೆ ಕೇಳಿದ್ದರು. A) ಹ್ಯೂ ರೋಸ್, B) ಕರ್ನಲ್ ನೀಲ್, C) ವಿಲಿಯಂ ಹಾಡ್ಸನ್, ಮತ್ತು D) ಜಾನ್ ನಿಕೋಲ್ಸನ್, ಹೀಗೆ ನಾಲ್ಕು ಆಯ್ಕೆ ನೀಡಿದ್ದರು. ಈ ಪ್ರಶ್ನೆಗೆ ಅಮಿತಾ ಸಿಂಗ್ ತೋಮರ್ ಆಯ್ಕೆ ಹ್ಯೂ ರೋಸ್ ಅವರ ಹೆಸರೇಳಿ 50 ಲಕ್ಷ ಬಹುಮಾನ ಪಡೆದಿದ್ದರು. ಇಂತಹ ಬುದ್ದಿವಂತೆ ಅಮಿತಾ ಸಿಂಗ್ ತೋಮರ್ ಈಗ ಹಣದಾಸೆಯಿಂದ ಜೈಲು ಪಾಲಾಗಿದ್ದಾರೆ.


Click it and Unblock the Notifications











