ರಿಯಲ್ ಲೈಫ್ನಲ್ಲಿ ಒಂದಾದ ರೀಲ್ ಜೋಡಿ ; ವಿರಾಟ್ ವತ್ಸಲ್ ಜೊತೆ ಸಪ್ತಪದಿ ತುಳಿದ ತೇಜಸ್ವಿನಿ ಆಚಾರ್
ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಬದುಕಿನ ಮಹತ್ವದ ಹಂತ. ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಇಂತಹ ಬಂಧನಕ್ಕೆ ಈ ವರ್ಷ ಹಲವು ತಾರೆಯರು ಒಳಗಾಗಿದ್ದಾರೆ. ಈ ಸಾಲಿಗೆ ಇತ್ತೀಚಿಗಷ್ಟೇ ನಂದಗೋಕುಲದ ರಕ್ಷಾ ಸೇರಿಕೊಂಡಿದ್ದರು. ಈಗ ಕನ್ನಡ ಕಿರುತೆರೆಯ ಜೋಡಿ ಹಕ್ಕಿ ತೇಜಸ್ವಿನಿ ಆಚಾರ್ ಮತ್ತು ವಿರಾಟ್ ವತ್ಸಲ್ ಸರದಿ.
ಹೌದು, ತೇಜಸ್ವಿನಿ ಆಚಾರ್ ಮತ್ತು ವಿರಾಟ್ ವತ್ಸಲ್ .. ಕನ್ನಡ ಕಿರುತೆರೆಯ ತಾರೆಯರು. ''ಸೌಭಾಗ್ಯವತಿ'' ಧಾರಾವಾಹಿಯ ಮೂಲಕ ಆಕಸ್ಮಿಕವಾಗಿ ಕಿರುತೆರೆಯನ್ನು ಪ್ರವೇಶ ಮಾಡಿದ ಮೈಸೂರು ಮೂಲದ ತೇಜಸ್ವಿನಿ ಆ ನಂತರ ''ಮಹಾನದಿ'' ಧಾರಾವಾಹಿ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದರು.

ಇದರ ನಡುವೆ ''ಮಧುಬಾಲಾ'' ಧಾರಾವಾಹಿಯಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡ ತೇಜಸ್ವಿನಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ ''ನೀಲಿ''ಯಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಭಕ್ತಿಪ್ರಧಾನ ಧಾರಾವಾಹಿ ''ಶ್ರೀ ಉಧೋ ಉಧೋ ರೇಣುಕ ಯಲ್ಲವ್ವ'' ದಲ್ಲಿ ರೇಣು ಮಹಾರಾಜನ ಮೂರನೇ ಪತ್ನಿ ಇಂದುಮತಿಯಾಗಿ ಬಣ್ಣ ಹಚ್ಚಿದ ತೇಜಸ್ವಿನಿ ಕಾರಣಾಂತರಗಳಿಂದ ಆ ಧಾರಾವಾಹಿಯಿಂದ ಹೊರಬಂದಿದ್ದರು.
ಇನ್ನು ದಾವಣಗೆರೆಯವರಾದ ವಿರಾಟ್ ವತ್ಸಲ್ ''ಕಸ್ತೂರಿ'' ವಾಹಿನಿಯಲ್ಲಿ ನಡೆಯುತ್ತಿದ್ದ ರಿಯಾಲಿಟಿ ಶೋ ನಲ್ಲಿ ಕೊನೆವರೆಗೂ ಪೈಪೋಟಿ ನೀಡಿ ರನ್ನರ್ ಅಪ್ ಆಗಿ ಹೊರ ಬಂದರು. ಈ ರಿಯಾಲಿಟಿ ಶೋ ವಿರಾಟ್ ಅವರಿಗೆ ಬಹಳಷ್ಟು ಖ್ಯಾತಿ ನೀಡಿತು. ಮುಂದೆ ತನ್ನದೇ ಸ್ವಂತ ಡ್ಯಾನ್ಸ್ ಸ್ಕೂಲ್ ಆರಂಭಿಸಿದರು. 7-8 ವರ್ಷ ಡ್ಯಾನ್ಸ್ ಕೋರಿಯೋಗ್ರಾಫರ್ ಆಗಿದ್ದರು. ಹೋಟೆಲ್ ಉದ್ಯಮಕ್ಕೆ ಕೂಡ ಕಾಲಿಟ್ಟಿದ್ದರು.
ಆದರೆ ಕೊರೊನಾ ಇವರ ನೆಮ್ಮದಿಗೆ ಕೊಳ್ಳಿ ಇಟ್ಟಿತ್ತು. ಆರ್ಥಿಕ ಸಂಕಷ್ಟ ಎದುರಾಯ್ತು. ಡ್ಯಾನ್ಸ್ ಸ್ಕೂಲ್ ಕೂಡ ಮುಚ್ಚಬೇಕಾಯ್ತು. ಇದೇ ಸಮಯದಲ್ಲಿ ಮುಂದೇನು ಎಂದು ಯೋಚನೆ ಮಾಡುತ್ತಿದ್ದ ವಿರಾಟ್ಗೆ ಸಿಕ್ಕ ಧಾರಾವಾಹಿಯೇ ''ಸಂಘರ್ಷ''. ಇದೇ ಧಾರಾವಾಹಿಯ ನಾಯಕಿ ಆಗಿದ್ದವರು ತೇಜಸ್ವಿನಿ. ಇವರ ಪ್ರೇಮಕಥೆಗೆ ಈ ''ಸಂಘರ್ಷ'' ಧಾರಾವಾಹಿಯೇ ಬುನಾದಿ.
''ಸಂಘರ್ಷ'' ಸೀರಿಯಲ್ನಲ್ಲಿ ಜೊತೆಯಾಗಿ ಅಭಿನಯಿಸಿದ್ದ ಇವರಿಬ್ಬರ ನಡುವೆ ಕಾಲ ಕ್ರಮೇಣ ಸ್ನೇಹ ಚಿಗುರೊಡೆದಿತ್ತು. ಆ ನಂತರ ''ರಾಧಿಕಾ'' ಧಾರಾವಾಹಿಯಲ್ಲಿ ಮತ್ತೆ ಇಬ್ಬರು ಜೊತೆಯಾದರು. ಈ ಸಮಯದಲ್ಲಿ ಆ ಸ್ನೇಹ ಪ್ರೀತಿಯ ಸ್ವರೂಪ ಪಡೆಯಿತು.

ಸದ್ಯ ತೇಜಸ್ವಿನಿ ಮತ್ತು ವಿರಾಟ್ ಅವರಿಗೆ ಕಿರುತೆರೆಯ ಹಲವರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಅಭಿಮಾನಿಗಳು ಕೂಡ ಹ್ಯಾಪಿ ಮ್ಯಾರೀಡ್ ಲೈಫ್ ಎಂದು ಹರಸಿ ಹಾರೈಸುತ್ತಿದ್ದಾರೆ.


Click it and Unblock the Notifications











