ಅವತ್ತು ಊಟಕ್ಕೆ ಬಜ್ಜಿ ಎಕ್ಸ್ಟ್ರಾ ಕೇಳಿದ್ದಕ್ಕೆ ಕೊಡ್ಲಿಲ್ಲ, ಓನರ್ ಮನೆ ಖಾಲಿ ಮಾಡಿಸಿದ್ರು- ಗಿಲ್ಲಿ ಕಷ್ಟದ ದಿನಗಳು
ಮಂಡ್ಯದ ಹೈದ ಗಿಲ್ಲಿ ಇವತ್ತು ಬಹಳ ಜನಪ್ರಿಯತೆ ಗಳಿಸಿದ್ದಾರೆ. ಎಲ್ಲಾ ಕಡೆ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ರಾಜಕೀಯ ಮುಖಂಡರನ್ನು ಗಿಲ್ಲಿ ಸುಲಭವಾಗಿ ಭೇಟಿ ಮಾಡಿ ಬರುತ್ತಿದ್ದಾರೆ. ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಬಿಗ್ಬಾಸ್ ವಿನ್ನರ್ ಗಿಲ್ಲಿಯನ್ನು ಆಹ್ವಾನಿಸುತ್ತಿದ್ದಾರೆ. ಆದರೆ ಕೆಲ ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ.
ಗಿಲ್ಲಿ ನಟ ಕೂಡ ಸಾಕಷ್ಟು ಅವಮಾನ, ಅಪಮಾನಗಳನ್ನು ಎದುರಿಸಿದ್ದಾರೆ. ಬಿಗ್ಬಾಸ್ ಶೋ ಗೆದ್ದು ಲಕ್ಷ ಲಕ್ಷ ಹಣ ಸಂಪಾದಿಸಿದ್ದಾರೆ. ಬರೀ ಇನ್ಸ್ಟಾಗ್ರಾಮ್ನಿಂದ ಮುಂದೆ ಗಿಲ್ಲಿಗೆ ಒಳ್ಳೆಯ ಆದಾಯ ಬರಬಹುದು. ಸಿನಿಮಾ, ಕಿರುತೆರೆ ಕಾರ್ಯಕ್ರಮಗಳಲ್ಲಿ ಅವಕಾಶ ಸಿಗಬಹುದು. ಆದರೆ ಒಂದ್ಕಾಲದಲ್ಲಿ ಗಿಲ್ಲಿ ಕಿರುತೆರೆ ಕಾರ್ಯಕ್ರಮಗಳ ಸೆಟ್ ಕೆಲಸಕ್ಕೆ ಕೂಲಿ ಆಗಿದ್ದರು. ಹೀಗೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ಬಳಿಕ ನಿಧಾನವಾಗಿ ಲೈಮ್ಲೈಟ್ಗೆ ಬಂದಿದ್ದರು.

ಸ್ಕಿಟ್ ವಿಡಿಯೋಗಳನ್ನು ಮಾಡುತ್ತಾ ಗಮನ ಸೆಳೆದ ಗಿಲ್ಲಿ ಬಳಿಕ ರಿಯಾಲಿಟಿ ಶೋಗಳಲ್ಲಿ ಅವಕಾಶ ಗಿಟ್ಟಿಸಿದ್ದರು. ತಮ್ಮ ಕಾಮಿಡಿ, ಜೋಕ್ಗಳ ಮೂಲಕ ವೀಕ್ಷಕರನ್ನು ರಂಜಿಸಿದ್ದರು. ಬಿಗ್ಬಾಸ್ ಮನೆ ಸೇರಿ ತಮ್ಮ ಎಂಟರ್ಟೈನ್ಮೆಂಟ್ ಮೂಲಕ ಟ್ರೋಫಿ ಗೆದ್ದಿದ್ದಾರೆ. ಮಾತಿನ ಮೂಲಕ ಮೋಡಿ ಮಾಡಿ ವಿನ್ನರ್ ಪಟ್ಟ ಅಲಂಕರಿಸಿದ್ದಾರೆ. ಆದರೆ ಗಿಲ್ಲಿ ಸಾಕಷ್ಟು ಕಷ್ಟ ಅನುಭವಿಸಿ ಎಂದು ಗೆಲುವಿನ ಅಂಬಾರಿ ಏರಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಇದ್ದಾಗ "ಜನರು ದುಡ್ಡು, ಚಿನ್ನ ಕದ್ದ ಕಥೆ ಕೇಳಿರುತ್ತೀರಿ. ಆದರೆ ನಾನು ಅನ್ನ ಕದ್ದು ತಿಂದ ದಿನಗಳಿವೆ" ಎಂದು ಗಿಲ್ಲಿ ತಮ್ಮ ಕಷ್ಟದ ದಿನಗಳನ್ನು ನೆನೆದಿದ್ದರು.
ಧಾರಾವಾಹಿಗಳಿಗೆ ಸೆಟ್ ಕೆಲಸ ಮಾಡುತ್ತಿದ್ದ ದಿನಗಳನ್ನು ಜೀ-ಕನ್ನಡ ನ್ಯೂಸ್ ಸಂದರ್ಶನದಲ್ಲಿ ಗಿಲ್ಲಿ ನೆನಪಿಸಿಕೊಂಡಿದ್ದಾರೆ. "ಸೆಟ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡ್ತಿದ್ದೆ. ಆಗ ಗಾಡಿಯಲ್ಲಿ ಕರ್ಕೊಂಡ್ ಬಂದು ಅರ್ಧ ದಾರಿಯಲ್ಲಿ ಬಿಟ್ಟು ಹೋಗಿಬಿಡುತ್ತಿದ್ದರು. ಆಗ ಏನು ಮಾಡೋದು ಎಂದು ಗೊತ್ತಾಗುತ್ತಿರಲಿಲ್ಲ. ಆಗ ನೋಡಲು ಕಳ್ಳನ ತರ ಇದ್ದೆ, ಹೊಯ್ಸಳ ಪೊಲೀಸರು ಹಿಡ್ಕೊಂಡು ಏನು, ಎತ್ತ ಎಂದು ಕೇಳಿದ್ರೆ, ಹೇಗೆಪ್ಪಾ ಅಂತೆಲ್ಲಾ ಭಯ ಆಗ್ತಿತ್ತು. ಕೆಲಸ ಮಾಡುವ ವೇಳೆ ಮರ್ಯಾದೆ ಇರುತ್ತಿರಲ್ಲಿಲ್ಲ, ಹೆಸ್ರು ಹೇಳಿ ಕರೆಯುವುದು ಬಿಟ್ಟು ಹೇಯ್ ಸೆಟ್ಟು ಎಂದು ಕರೆಯುತ್ತಿದ್ದರು" ಅದೆಲ್ಲಾ ಬೇಸರ ತರುತ್ತಿತ್ತು ಎಂದು ಗಿಲ್ಲಿ ಹೇಳಿದ್ದಾರೆ.
ಊಟದ ವಿಚಾರಕ್ಕೆ ಒಮ್ಮೆ ಅವಮಾನ ಎದುರಿಸುವಂತಹ ಸಂದರ್ಭ ಬಂದಿತ್ತು ಎಂದು ಗಿಲ್ಲಿ ಹೇಳಿದ್ದಾರೆ. "ಅವ್ರು ನಮ್ಮ ಸ್ನೇಹಿತರೇ.. ಪ್ರೊಡಕ್ಷನ್ನಲ್ಲಿ ಊಟ ಕೊಡುತ್ತಿದ್ದರು. ಒಂದು ಎಕ್ಸ್ಟ್ರಾ ಬಜ್ಜಿ ಕೇಳಿದ್ದಕ್ಕೆ ಕೊಟ್ಟಿರಲಿಲ್ಲ. ಊರಿನ ಕಡೆ ಕಾರ್ಯಕ್ರಮಕ್ಕೆ ಹೋದಾಗ ಏನಾದರೂ ಎಕ್ಸ್ಟ್ರಾ ಕೊಡ್ತಾರೆ. ಆದರೆ ಇಲ್ಲಿ ಏನಪ್ಪಾ ಹಿಂಗಾಯ್ತು ಒಂದು ಬಜ್ಜಿ ಕೊಡಲಿಲ್ಲ ಎಂದು ಬಹಳ ಬೇಸರವಾಗಿತ್ತು" ಎಂದಿದ್ದಾರೆ.
2018-2019ರ ಸಮಯದಲ್ಲಿ ಗಿಲ್ಲಿ ಬೆಂಗಳೂರಿನ ಶ್ರೀನಗರದ ಬಳಿ ಸ್ನೇಹಿತರ ರೂಮ್ಗಳಲ್ಲಿ ಉಳಿದುಕೊಳ್ಳುತ್ತಿದ್ದರಂತೆ. "ಒಮ್ಮೆ ನಾನು, ನನ್ನ ಸ್ನೇಹಿತ ಮತ್ತೊಬ್ಬ ಸ್ನೇಹಿತನ ರೂಮ್ನಲ್ಲಿ ಉಳಿದುಕೊಂಡಿದ್ದೆವು. ಯಾವುದೋ ಗಲಾಟೆ ಆಗಿತ್ತು. ಆಗ ಮನೆ ಓನರ್ ಬಂದು ಕೂಡಲೇ ನಾನು ನನ್ನ ಸ್ನೇಹಿತ ಮನೆಯಿಂದ ಹೊರಗೆ ಹೋಗಬೇಕು ಎಂದು ಪಟ್ಟು ಹಿಡಿದರು. ನಾವಿಬ್ಬರು ಅಲ್ಲೇ ಉಳಿದುಕೊಳ್ಳೋಣ ಎಂದು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಓನರ್ ಪದೇ ಪದೆ ಬಂದು ನಾವಿಬ್ಬರು ಹೊರಗೆ ಹೋದ್ವಾ ಎಂದು ಕೇಳುತ್ತಿದ್ದರು. ಬೇರೆ ವಿಧಿಯಿಲ್ಲದೇ ಸ್ನೇಹಿತನಿಗೆ ತೊಂದರೆ ಆಗುವುದು ಬೇಡ ಎಂದು ಅಲ್ಲಿಂದ ಹೊರಟುಬಿಟ್ಟೆವು" ಎಂದು ಗಿಲ್ಲಿ ನೆನಪಿಸಿಕೊಂಡಿದ್ದಾರೆ.
ಬಳಿಕ ಜಿಂಕೆ ಪಾರ್ಕ್ ಬಳಿ ಇರುತ್ತಿದ್ದೆವು. ನಮ್ಮ ಚಿಕ್ಕಪ್ಪನ ಮನೆ ಅಲ್ಲೇ ಸಮೀಪದಲ್ಲಿ ಇತ್ತು. ಆದರೆ ಅಲ್ಲಿಗೆ ಹೋಗುವ ಮನಸ್ಸಾಗಲಿಲ್ಲ. ಬಳಿಕ ಸ್ನೇಹಿತರ ರೂಮ್ಗಳಲ್ಲಿ ಉಳಿದುಕೊಂಡು ಒಂದು ವಾರ ಕಾಲ ದೂಡಿದ್ದೆವು. ಬಳಿಕ ಹಣ ಕಲೆ ಹಾಕಿ ರೂಮ್ ಮಾಡಿಕೊಂಡು ನಾನು, ನಮ್ಮ ಸ್ನೇಹಿತ ಅಲ್ಲಿಗೆ ಹೋಗಿ ಸೇರಿಕೊಂಡೆವು ಎಂದು ಗಿಲ್ಲಿ ವಿವರಿಸಿದ್ದಾರೆ.


Click it and Unblock the Notifications











