ಪಹಲ್ಗಾಮ್ ದಾಳಿಯಲ್ಲಿ ಹುತಾತ್ಮರಾದ ನೌಕಾಪಡೆ ಅಧಿಕಾರಿ ಪತ್ನಿ ಬಿಗ್ ಬಾಸ್ ಮನೆಗೆ?
ಒಂದು ಕಾಲದಲ್ಲಿ ಸಂಚಲನ ಸೃಷ್ಟಿಸಿ, ಕಿರುತೆರೆಯಲ್ಲಿ ಹೊಸದೊಂದು ಅಲೆಯನ್ನು ಎಬ್ಬಿಸಿದ ಕಾರ್ಯಕ್ರಮ ''ಬಿಗ್ ಬಾಸ್''. ತಮ್ಮ ಮನೆಯ ಹತ್ತು ಹಲವು ಸಮಸ್ಯೆಗಳನ್ನು ಮರೆತು ಈ ಮನೆಯಲ್ಲಿನ ಸಮಸ್ಯೆಗಳನ್ನು ಹಲವಾರು ಜನ ಕಣ್ತುಂಬಿಕೊಳ್ಳುತ್ತಿದ್ದರು. ಆದರೆ ಕಾಲ ಕ್ರಮೇಣ ಈ ಕಾರ್ಯಕ್ರಮ ಹಳಿ ತಪ್ಪಿತು. ಬಿಗ್ ಬಾಸ್ ವಿವಾದಾತ್ಮಕ ವ್ಯಕ್ತಿಗಳಿಗಷ್ಟೇ ಲಾಯಕ್ಕು ಎನ್ನುವ ಅಭಿಪ್ರಾಯ ವ್ಯಕ್ತವಾಗಲು ಶುರುವಾಯ್ತು.
ಹಾಗಂಥ .. ಈ ಕಾರ್ಯಕ್ರಮದ ಜನಪ್ರಿಯತೆ ಕಡಿಮೆ ಆಗಲಿಲ್ಲ. ಯಾಕೆಂದರೆ.. ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಬಿಗ್ ಬಾಸ್ ಕಾರ್ಯಕ್ರಮವನ್ನ ಜನ ಈಗಲೂ ಕೂಡ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ.

ಇನ್ನು ಪ್ರತಿ ವರ್ಷ ಪ್ರೇಕ್ಷಕರನ್ನು ಸೆಳೆಯಲು ''ಬಿಗ್ ಬಾಸ್'' ನಲ್ಲಿ ನಾನಾ ಕಸರತ್ತುಗಳಾಗುತ್ತವೆ. ಆ ಪೈಕಿ ಕೆಲ ಒಮ್ಮೆ ಮಾಡಿದ ಪ್ಲ್ಯಾನ್ ವರ್ಕೌಟ್ ಆಗಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸುತ್ತದೆ. ಇನ್ನು ಕೆಲ ಒಮ್ಮೆ ಪ್ಲ್ಯಾನ್ ತಲೆ ಕೆಳಗಾಗಿ ಟಿಆರ್ಪಿ ನೆಲ ಕಚ್ಚುತ್ತೆ. ಆ ಭಾಷೆ .. ಈ ಭಾಷೆ ಅಂತಲ್ಲ. ಎಲ್ಲ ಭಾಷೆಯಲ್ಲಿ ಕೂಡ ಪ್ರತಿ ವರ್ಷ ಈ ಸರ್ಕಸ್ ನಡೆದೇ ನಡೆಯುತ್ತೆ. ಇದಕ್ಕೆ ಪುರಾವೆ ಎನ್ನುವಂತೆ ಈಗಾಗಲೇ ಮಲಯಾಳಂನಲ್ಲಿ 19 ಜನರನ್ನು ಹುಡುಕಿ ಮನೆಗೆ ಕಳುಹಿಸಲಾಗಿದೆ.
ಇನ್ನು ಹಿಂದಿಯಲ್ಲಿ ಈ ಆಗಸ್ಟ್ 24ರಿಂದ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಲಿದೆ. ಈ ಹಿನ್ನೆಲೆ ಹಿಂದಿಯಲ್ಲಿ ಕೂಡ ಸ್ಫರ್ಧಿಗಳನ್ನು ಅಳೆದು ತೂಗಿ ಹುಡುಕಲಾಗುತ್ತಿದ್ದು ಸದ್ಯ ''ಹಿಮಾಂಶಿ ನರ್ವಾಲ್'' ಅವರನ್ನು ಬಿಗ್ ಬಾಸ್ ಮನೆಗೆ ಕರೆತರುವ ಪ್ರಯತ್ನವಾಗುತ್ತಿದೆ ಎಂದು ''ಟೆಲಿ ಚಕ್ಕರ್'' ವರದಿಯನ್ನು ಮಾಡಿದೆ.
ಹೌದು, ಹಿಮಾಂಶಿ ನರ್ವಾಲ್.. ಇವರು ಬೇರೆ ಯಾರು ಅಲ್ಲ ಪಹಲ್ಗಾಮ್ ದಾಳಿಯಲ್ಲಿ ಹುತಾತ್ಮರಾದ ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ಅವರ ಪತ್ನಿ. ವಿನಯ್ ಮತ್ತು ಹಿಮಾಂಶಿ ಹನಿಮೂನ್ಗೆ ಕಾಶ್ಮೀರಕ್ಕೆ ಹೋದಾಗ ಪೈಶಾಚಿಕ ಕೃತ್ಯ ನಡೆಸಿದ ಭಯೋತ್ಪಾದಕರು 26 ಜನರ ಪ್ರಾಣವನ್ನು ಬಲಿ ಪಡೆದಿದ್ದರು.
ಈ ದಾಳಿಯಲ್ಲಿ ತಮ್ಮ ಪತಿಯನ್ನು ಕಳೆದುಕೊಂಡ ಹಿಮಾಂಶಿ ಪತಿಯ ಮೃತದೇಹದ ಪಕ್ಕದಲ್ಲಿ ಕುಳಿತುಕೊಂಡು ಕಣ್ಣೀರು ಹಾಕಿದ್ದರು. ಇವರು ಕಣ್ಣೀರು ಹಾಕುತ್ತಿದ್ದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇಂತಹ ಹಿಮಾಂಶಿ ಇದೀಗ ಬಿಗ್ ಬಾಸ್ಗೆ ಬರುತ್ತಿದ್ದಾರೆ ಎಂದು ಟೆಲಿ ಚಕ್ಕರ್ ವರದಿ ಮಾಡಿದೆ. ಕಾರ್ಯಕ್ರಮ ನೋಡುವ ಪ್ರೇಕ್ಷಕರಿಗೆ ಬಹುಬೇಗ ಕನೆಕ್ಟ್ ಆಗಬೇಕು ಎಂಬ ಉದ್ದೇಶದಿಂದ ಹಿಮಾಂಶಿ ನರ್ವಾಲ್ ಅವರನ್ನು ಆಯೋಜಕರು ಸಂಪರ್ಕ ಮಾಡುತ್ತಿದ್ದಾರೆ ಎಂದು ಕೂಡ ತನ್ನ ವರದಿಯಲ್ಲಿ ಟೆಲಿ ಚಕ್ಕರ್ ಉಲ್ಲೇಖಿಸಿದೆ.
ಈ ಕುರಿತು ಹಿಮಾಂಶಿ ನರ್ವಾಲ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಬಿಗ್ ಬಾಸ್ ಕಡೆಯಿಂದ ಕೂಡ ಯಾವುದೇ ರೀತಿಯ ಉತ್ತರ ಬಂದಿಲ್ಲ. ಇನ್ನು ಇದೇ ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿರುವ ಹಲವರು ಹಿಮಾಂಶಿ ಅವರನ್ನು ಬಿಗ್ ಬಾಸ್ ಸಂಪರ್ಕಿಸಿಲ್ಲ ಅವರು ಕಾರ್ಯಕ್ರಮದಲ್ಲಿ ಭಾಗಿಯೂ ಆಗುವುದಿಲ್ಲ ಎನ್ನುವ ವಾದವನ್ನು ಮಾಡುತ್ತಿದ್ದಾರೆ.
ಅಂದ್ಹಾಗೇ ಓಟಿಟಿಯಲ್ಲಿ ಪ್ರಸಾರವಾಗಿದ್ದ ಬಿಗ್ ಬಾಸ್ನ ಎರಡನೇ ಸೀಸನ್ ವಿನ್ನರ್ ಎಲ್ವಿಶ್ ಯಾದವ್ ಅವರ ಸ್ನೇಹಿತೆ ಹಿಮಾಂಶಿ ನರ್ವಾಲ್. ಈ ಕಾರಣಕ್ಕೆ ಹಿಮಾಂಶಿ ನರ್ವಾಲ್ ಅವರನ್ನು ಎಲ್ವೀಶ್ ಯಾದವ್ ಮೂಲಕ ಬಿಗ್ ಬಾಸ್ ಸಂಪರ್ಕ ಮಾಡಿರಬಹುದು ಎನ್ನುವ ಚರ್ಚೆಯನ್ನು ಕೂಡ ಕೆಲವರು ಮಾಡುತ್ತಿದ್ದಾರೆ. ಇನ್ನುಳಿದಂತೆ ಈ ಬಾರಿಯ ಬಿಗ್ ಬಾಸ್ ಆಗಸ್ಟ್ 24ರಿಂದ ಶುರುವಾಗಲಿದ್ದು, ಯಾರೆಲ್ಲ ಮನೆಗೆ ಬರ್ತಾರೆ ಎನ್ನುವುದು ಅವತ್ತೇ ಗೊತ್ತಾಗಲಿದೆ.


Click it and Unblock the Notifications











