ಪ್ರಾಣಿಗಳಿಗೆ ಪ್ರೀತಿ ಧಾರೆ ಎರೆದಾಕೆಗೆ ಸಿಗಲಿಲ್ಲ ಪ್ರೀತಿ ? ಕೇವಲ 23ನೇ ವಯಸ್ಸಿಗೆ ಸಾವಿಗೆ ಶರಣಾದ ಖ್ಯಾತ ಕಂಟೆಂಟ್ ಕ್ರಿಯೇಟರ್
ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯ ಕೂಡ ಮುಖ್ಯ. ಆದರೆ.. ದೈಹಿಕ ಆರೋಗ್ಯದ ಕುರಿತು ಇನ್ನಿಲ್ಲದಷ್ಟು ಕಾಳಜಿ ವಹಿಸುವ ನಾವು ಮಾನಸಿಕ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದಿಲ್ಲ. ಮಹತ್ವ ನೀಡುವುದಿಲ್ಲ. ಕೆಲವರು ತಮ್ಮ ಮಾನಸಿಕ ಆರೋಗ್ಯದ ಕುರಿತು ತಮ್ಮ ಖಿನ್ನತೆಯ ಕುರಿತು ಮಾತನಾಡಲು ಕೂಡ ಹಿಂಜರಿಯುತ್ತಾರೆ.
ಇದೆಲ್ಲದರ ಪರಿಣಾಮ ಎಂಬಂತೆ ವಿಶ್ವದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕಾಯಿಲೆಗಳಲ್ಲಿ ''ಮಾನಸಿಕ ಖಿನ್ನತೆ''ಗೆ ಮೊದಲ ಸ್ಥಾನ ಇದೆ. ಇನ್ನು ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಪ್ರತಿ 20 ಜನರಲ್ಲಿ ಒಬ್ಬರಿಗೆ ಈ ಕಾಯಿಲೆ ಇದೆ. ಸಾವು, ಸೋಲು, ನಿರಾಶೆ, ಕಷ್ಟ, ನಷ್ಟಗಳಿಂದ ಅನೇಕರು ಖಿನ್ನತೆಗೊಳಗಾಗುತ್ತಾರೆ. ಹೀಗೆ ಖಿನ್ನತೆಗೊಳಗಾದವರು ಕೆಲ ಒಮ್ಮೆ ಖಿನ್ನತೆಯಿಂದ ಪಾರಾಗುತ್ತಾರೆ. ಕೆಲ ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ.

ಆದರೆ ಇನ್ನೂ ಕೆಲವೊಮ್ಮೆ ಈ ಖಿನ್ನತೆಯಿಂದ ಹೊರ ಬರಲು ಸಾಧ್ಯವಾಗದೇ ಒದ್ದಾಡುತ್ತಾರೆ. ಕೊನೆಗೆ ಜೀವನದಲ್ಲಿ ನಾನಾ ಸಮಸ್ಯೆಗಳಿಂದ ಬೇಸತ್ತು, ತಾಳ್ಮೆಯ ಕೊರತೆಯಿಂದ ಆತ್ಮ*ಹತ್ಯೆ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ಸಯೋನಿ ಚಕ್ರವರ್ತಿ.
ಹೌದು, ಸಯೋನಿ ಚಕ್ರವರ್ತಿ.. ಜನಪ್ರಿಯ ಬಂಗಾಳಿ ವ್ಲಾಗರ್. ಪ್ರಾಣಿ ಪ್ರೇಮಿ. ಅದರಲ್ಲಿಯೂ ದನ-ಕರು ಮತ್ತು ನಾಯಿಗಳು ಅಂದರೆ ಸಯೋನಿಗೆ ಅಚ್ಚು ಮೆಚ್ಚು. ಪ್ರಾಣಿಗಳ ರಕ್ಷಣೆ ಮತ್ತು ಆರೈಕೆಗೆ ಸಂಬಂಧಿಸಿದ ವ್ಲಾಗ್ಗಳ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರು ಇವರು.
ಗ್ರಾಮೀಣ ಜೀವನ ಶೈಲಿ ಮತ್ತು ಸಾಕು ಪ್ರಾಣಿಗಳ ಕುರಿತು ಮಾತನಾಡುತ್ತಲೇ ಹಲವರನ್ನು ಆಯಸ್ಕಾಂತದಂತೆ ಸೆಳೆದಿದ್ದ ಸಯೋನಿ ಚಕ್ರವರ್ತಿ , ಇತ್ತೀಚಗೆಷ್ಟೇ ಎಲ್ಎಲ್ಬಿ ಪದವಿಯನ್ನು ಪೂರ್ಣಗೊಳಿಸಿದ್ದರು.
ಆದರೆ, ಕ್ಯಾಮೆರಾ ಮುಂದೆ ಕಾಣಿಸುತ್ತಿದ್ದ ಆ ನಗು ಮತ್ತು ಆ ಹ್ಯಾಪಿ ಫ್ರೇಮ್ಗಳ ಹಿಂದೆ ಯಾರ ಕಣ್ಣಿಗೆ ಕಾಣದ ನೋವು ಅವರಲ್ಲಿತ್ತು. ಇತ್ತೀಚಿನ ವರದಿಗಳ ಪ್ರಕಾರ, ಕೇವಲ 23ರ ಹರೆಯದ ಇನ್ಫ್ಲುಯೆನ್ಸರ್ ಸಯೋನಿ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಸದಾ ಹಸನ್ಮುಖಿಯಂತೆ ಕಾಣಿಸುತ್ತಿದ್ದ ಸಯೋನಿ ಒಳಗೊಳಗೆ ಮನದ ಆತಂಕ, ದುಗುಡ, ದುಮ್ಮಾನದ ವಿರುದ್ದ ಹೋರಾಡುತ್ತಿದ್ದರು.

ಈ ಹೋರಾಟದಲ್ಲಿ ಕೊನೆಗೂ ಸೋಲನ್ನೊಪ್ಪಿಕೊಂಡ ಸಯೋನಿ, ದುರಂತ ಅಂತ್ಯವನ್ನು ಕಂಡಿದ್ದು ಪಶ್ಚಿಮ ಬಂಗಾಳದ ಹುಗ್ಲಿ ಜಿಲ್ಲೆಯಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ಧಾರೆ. ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾಗಿದ್ದಾರೆ.
ಪೊಲೀಸ್ ಮತ್ತು ಸ್ಥಳೀಯರು, 23 ವರ್ಷದ ಸಯೋನಿ ಆತ್ಮಹತ್ಯೆ ಮಾಡಿಕೊಂಡಿರಬಹದು ಎಂದು ಶಂಕೆಯನ್ನು ವ್ಯಕ್ತಪಡಿಸಿದ್ದು, ಮೊಗ್ರಾ ಪೊಲೀಸ್ ಠಾಣೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗಾಗಿ ಚಿನ್ಸುರಾ ಇಮಾಂಪಾಡಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಹುಗ್ಲಿ ರೂರಲ್ ಪೊಲೀಸ್ನ ಹಿರಿಯ ಅಧಿಕಾರಿಯೊಬ್ಬರು ಕುಟುಂಬದವರು ಯಾವುದೇ ಔಪಚಾರಿಕ ದೂರು ಸಲ್ಲಿಸಿಲ್ಲ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದು, ನಂತರದ ದಿನಗಳಲ್ಲಿ ದೂರು ಸಲ್ಲಿಸುವ ಸಾಧ್ಯತೆ ಇರುವುದಾಗಿ ಕುಟುಂಬದವರು ಸೂಚಿಸಿದ್ದಾರೆ ಎಂದಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಎಲ್ಲಾ ಸಂಭಾವ್ಯ ಆಯಾಮಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನು ಸಯೋನಿ ಇತ್ತೀಚೆಗೆ ಯುವಕನ ಜೊತೆ ಪ್ರೇಮ ಸಂಬಂಧದಲ್ಲಿದ್ದರು, ಎನ್ನುವ ಮಾತನ್ನು ಕುಟುಂಬ ಸದಸ್ಯರು ಹೇಳಿದ್ದು, ಈ ಸಂಬಂಧಕ್ಕೆ ಸಂಬಂಧಿಸಿದ ವೈಯಕ್ತಿಕ ಸಮಸ್ಯೆಗಳಿಂದ ಖಿನ್ನತೆಗೆ ಜಾರಿ ಸಯೋನಿ ಆತುರದ ನಿರ್ಧಾರ ತೆಗೆದುಕೊಂಡಿರಬಹುದು ಎನ್ನುವ ಶಂಕೆಯನ್ನು ಕೂಡ ಪೊಲೀಸರು ಸದ್ಯ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಘಟನೆಯ ನಿಖರ ಕಾರಣಗಳನ್ನು ಪತ್ತೆ ಹಚ್ಚಲು ತನಿಖೆಯನ್ನು ಮುಂದುವರೆಸಿದ್ದಾರೆ.
Disclaimer : ಆತ್ಮ*ಹತ್ಯೆ ಎಲ್ಲದಕ್ಕೂ ಪರಿಹಾರ ಅಲ್ಲ. ಆತ್ಮ*ಹತ್ಯೆ ತಡೆ ಸಹಾಯವಾಣಿ. ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ ಇಂತಿದೆ 080 - 25497777.


Click it and Unblock the Notifications