ಗಣೇಶ್ ಅಭಿನಯದ 'ಮುಗುಳು ನಗೆ' ಚಿತ್ರದ ಕಥೆ ಏನು.?
ಬ್ಲಾಕ್ ಬಸ್ಟರ್ 'ಮುಂಗಾರು ಮಳೆ' ಹಾಗೂ ಸೂಪರ್ ಹಿಟ್ 'ಗಾಳಿಪಟ' ಸಿನಿಮಾ ಬಳಿಕ ನಿರ್ದೇಶಕ ಯೋಗರಾಜ್ ಭಟ್ ಹಾಗೂ ಗಣೇಶ್ ಒಂದಾಗಿರುವ ಸಿನಿಮಾ 'ಮುಗುಳು ನಗೆ'.
ಎರಡು ಹಿಟ್ ಗಳನ್ನು ಕೊಟ್ಟಿರುವ ಈ ಜೋಡಿಯ ಹ್ಯಾಟ್ರಿಕ್ ಸಿನಿಮಾ 'ಮುಗುಳು ನಗೆ' ಮೇಲೆ ಈಗ ಎಲ್ಲರ ಕಣ್ಣಿದೆ.

ಕಳೆದ ಎರಡು ಚಿತ್ರಗಳಂತೆ, 'ಮುಗುಳು ನಗೆ' ಸಿನಿಮಾದಲ್ಲೂ ಮಳೆ ಸುರಿಯಲಿದ್ಯಾ.? 'ಮುಗುಳು ನಗೆ' ಚಿತ್ರದ ಕಥೆ ಏನು.? ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲಿಯೂ ಕಾಡುತ್ತಿತ್ತು. ಈ ಪ್ರಶ್ನೆಗೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಉತ್ತರ ಕೊಟ್ಟಿದ್ದಾರೆ.

''ಎಂದೆಂದೂ ಅಳಲು ಬಾರದ ಮಗುವಿನ ಕಥೆ ಇದು. ಹುಟ್ಟಿದಾಗಿನಿಂದಲೂ ಒಂದೇ ಒಂದು ಕಣ್ಣೀರು ಆಚೆ ಬಂದಿರುವುದಿಲ್ಲ. ಡಾಕ್ಟರ್ ಹತ್ತಿರ ತೋರಿಸಿದರೂ ಪ್ರಯೋಜನ ಆಗಿರುವುದಿಲ್ಲ. ಕಡೆಗೆ ಬದುಕಿನಲ್ಲಿ ಹುಡುಗಿಯರು, ತಂದೆ-ತಾಯಿ, ಸ್ನೇಹಿತರು... ಎಲ್ಲರದ್ದೂ ಒಂದೊಂದು ಕಥೆ ಇದೆ. ಆ ಐದಾರು ಕಥೆಗಳು ಸೇರಿ ಎಂದೆಂದೂ ಕಣ್ಣೀರು ಬಾರದ ಮಗುವಿಗೆ ಒಂದು ದಿನ ಕಣ್ಣೀರು ಬರುತ್ತದೆ. ಒಂದು ಹನಿ ಕಣ್ಣೀರ ಕಥೆ 'ಮುಗುಳು ನಗೆ'' ಎಂದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಯೋಗರಾಜ್ ಭಟ್ ಹೇಳಿದರು.
ಬಹು ನಿರೀಕ್ಷಿತ 'ಮುಗುಳು ನಗೆ' ಸಿನಿಮಾ ಆಗಸ್ಟ್ ಮೊದಲ ವಾರದಲ್ಲಿ ಬಿಡುಗಡೆ ಆಗಲಿದೆ.


Click it and Unblock the Notifications











