ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಗಣೇಶ'ನಿಗೆ ಸ್ವರಾಭಿಷೇಕ
ಗಣೇಶ ಹಬ್ಬ ಬಂದರೆ ಎಲ್ಲೆಡೆ ಸಡಗರ, ಸಂಭ್ರಮ. ಈ ಸಡಗರ, ಸಂಭ್ರಮವನ್ನ ಇಮ್ಮಡಿಗೊಳಿಸಲು ಕಲರ್ಸ್ ಕನ್ನಡ ವಾಹಿನಿ ಸಜ್ಜಾಗಿದೆ. ಗಜಮುಖನಿಗೆ ವಂದನೆ ಸಲ್ಲಿಸುವ 'ಸ್ವರಾಭಿಷೇಕ' ಸಂಗೀತ ಸುಧೆಯ ಕಾರ್ಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆಗಸ್ಟ್ 25 ರಿಂದ 27ರವರೆಗೆ ಪ್ರಸಾರ ಆಗಲಿದೆ.
'ಜೈ ಹೋ' ಖ್ಯಾತಿಯ ವಿಜಯ್ ಪ್ರಕಾಶ್ ಸಾರಥ್ಯದಲ್ಲಿ 'ಸ್ವರಾಭಿಷೇಕ' ಕಾರ್ಯಕ್ರಮ ಮೂಡಿಬರಲಿದೆ.

'ವ್ರಕತುಂಡ'ನಿಗೆ ವಂದನೆ
ಗಣೇಶ ಹಬ್ಬದಂದು (ಅಗಸ್ಟ್ 25, ಶುಕ್ರವಾರ) ಮಧ್ಯಾಹ್ನ 12 ಗಂಟೆಗೆ ಗಣೇಶ 'ಸ್ವರಾಭಿಷೇಕ'ದಲ್ಲಿ ಸಂಗೀತಲೋಕದ ದಿಗ್ಗಜರುಗಳಾದ ಆರ್.ಕೆ.ಪದ್ಮನಾಭ್, ಬಿ.ಜಯಶ್ರೀ, ವಾರೀಜಾಶ್ರೀ ಕಂಠಸಿರಿಯಲ್ಲಿ ವಕ್ರತುಂಡನಿಗೆ ವಂದನೆ ಸಲ್ಲಿಸಲಾಗುವುದು. ವಿಘ್ನನಿವಾರಕನ ಆರಾಧನೆ ಕುರಿತ ಕ್ಲಾಸಿಕಲ್ ಹಾಡುಗಳನ್ನು ಆರ್.ಕೆ.ಪದ್ಮನಾಭ್, ರಂಗಗೀತೆಗಳನ್ನು ಬಿ.ಜಯಶ್ರೀ, ಕ್ಲಾಸಿಕಲ್ ವರ್ಲ್ಡ್ ಫ್ಯೂಶನ್ ಗೀತೆಗಳನ್ನು ವಾರಿಜಾಶ್ರೀ ಹಾಗೂ ಗಣಪತಿ ಹಬ್ಬದಲ್ಲಿ ಹೆಚ್ಚು ಜನಪ್ರಿಯತೆ ಪಡೆದ ಆರ್ಕೆಸ್ಟ್ರಾ ಹಾಡುಗಳನ್ನು ವಿಜಯ್ ಪ್ರಕಾಶ್ ಹಾಡಲಿದ್ದಾರೆ.

ವಿಜಯ್ ಪ್ರಕಾಶ್ ಪತ್ನಿ
ವಿಶೇಷವೆಂದರೆ, ಗಣೇಶನ 'ಸ್ವರಾಭಿಷೇಕ'ದಲ್ಲಿ ಪ್ರಪ್ರಥಮವಾಗಿ ವಿಜಯ್ ಪ್ರಕಾಶ್ ಅವರ ಜೊತೆ ಪತ್ನಿ ಮಹತಿ ಕೂಡ ದನಿ ಸೇರಿಸಿದ್ದಾರೆ.

ಸುಮಧುರ ಗೀತೆಗಳ ಸಮಾಗಮ
ಗಾನ ಕೋಗಿಲೆಗಳಾದ ವಿಜಯ್ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ರವರ ಕಂಠಸಿರಿಯಲ್ಲಿ ಪ್ರೀತಿ ಪ್ರೇಮದ ಸುಮಧುರ ಗೀತೆಗಳನ್ನು ಅಗಸ್ಟ್ 26 ಮತ್ತು 27 ರಂದು ರಾತ್ರಿ 9 ಗಂಟೆಗೆ ಸ್ವರಾಭಿಷೇಕದಲ್ಲಿ ಕೇಳಿ ಆನಂದಿಸಬಹುದು. 60ರ ದಶಕದ ಹಾಡುಗಳಿಂದ ಹಿಡಿದು ಇಲ್ಲಿಯವರೆಗಿನ ಹಾಡನ್ನು ರಾಜೇಶ್ ಕೃಷ್ಣನ್ ಹಾಡುವುದರ ಜೊತೆಗೆ ಅವರ ಸಂಗೀತಾನುಭವ, ಹರಟೆ ಮಾತುಕತೆಯೂ ಇರಲಿದೆ.

ತಪ್ಪದೇ ವೀಕ್ಷಿಸಿ
ಗಾನಲೋಕಕ್ಕೆ ಕರೆದೊಯ್ಯುವ ಸಂಗೀತ ಸುಧೆಯ "ಸ್ವರಾಭಿಷೇಕ" ಕಾರ್ಯಕ್ರಮವನ್ನು ಶುಕ್ರವಾರದಿಂದ ಭಾನುವಾರದವರೆಗೆ ಕಲರ್ಸ್ ಕನ್ನಡದಲ್ಲಿ ತಪ್ಪದೇ ವೀಕ್ಷಿಸಿ.


Click it and Unblock the Notifications











