ಗಟ್ಟಿಮೇಳ: ಮನೆಯಲ್ಲಿಯೇ ಇರುವ ಅಮ್ಮನನ್ನು ವೇದಾಂತ್ ಕಂಡು ಹಿಡಿಯುವುದಾದರೂ ಹೇಗೆ ?
ವೇದಾಂತ್ ವಸಿಷ್ಠ ಕೋಪ ಎಂಥದ್ದು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಂಡಿದ್ದಾರೆ. ಅದೇ ಕಾರಣಕ್ಕಾಗಿಯೇ ತಮ್ಮ ಮನದಾಸೆಯನ್ನು ಯಾರು ಕೂಡ ವೇದಾಂತ್ ಬಳಿ ಹೇಳಿರಲಿಲ್ಲ. ಅಮ್ಮನನ್ನು ನೋಡಬೇಕು ಎನಿಸಿದಾಗಲೂ ವೇದಾಂತ್ ಬಳಿ ವ್ಯಕ್ತಪಡಿಸುತ್ತಿರಲಿಲ್ಲ.
ಮನದಲ್ಲಿಯೇ ನೋವು ಇಟ್ಟುಕೊಂಡು ಸಾಕಾಗಿದ್ದ ಮಕ್ಕಳೀಗ ಅಮ್ಮ ಬೇಕು ಅಂತಿದ್ದಾರೆ. ಅಮ್ಮನಿಂದ ದೂರಾದ ಮೇಲೆ ದೊಡ್ಡವನಾಗಿ ಎಲ್ಲಾ ಜವಾಬ್ದಾರಿ ತೆಗೆದುಕೊಂಡು, ಕೇಳಿದ್ದೆಲ್ಲವನ್ನೂ ಕೊಡಿಸಿದ್ದ ವೇದಾಂತ್ ತಮ್ಮ, ತಂಗಿಗಾಗಿ ದೃಢ ನಿರ್ಧಾರಕ್ಕೆ ಬಂದಿದ್ದಾನೆ.
ಇಷ್ಟು ವರ್ಷದಲ್ಲಿ ಹೆತ್ತಮ್ಮ ಸುಹಾಸಿನಿ ಅಂತಾನೇ ಎಲ್ಲರೂ ನಂಬಿದ್ದರು. ವೇದಾಂತ್ಗೆ ಎಲ್ಲವೂ ಗೊತ್ತಿದ್ದರು ಗೊತ್ತಿಲ್ಲದಂತೆ ಇದ್ದ. ಸುಹಾಸಿನಿಯ ಕಪಟ ಪ್ರೀತಿಯನ್ನೇ ನಿಜವಾದ ಪ್ರೀತಿ ಎಂದು ಈಗಲೂ ನಂಬಿದ್ದಾನೆ. ಇಷ್ಟು ವರ್ಷ ಮುಚ್ಚಿಟ್ಟ ಸತ್ಯ ಎಲ್ಲರಿಗೂ ಗೊತ್ತಿದ್ದರು ಆದ್ಯಾಗೆ ಮಾತ್ರ ಗೊತ್ತಾಗಿರಲಿಲ್ಲ. ಆದರೆ ವಿಕ್ರಾಂತ್ ಹಾಗೂ ಅಮೂಲ್ಯ ಮಾತಾಡುತ್ತಿರುವುದನ್ನು ಕೇಳಿಸಿಕೊಂಡ ಆದ್ಯಾ ಇದೀಗ ನಿಜವಾದ ಅಮ್ಮ ಬೇಕು ಅಂತಿದ್ದಾಳೆ.

ವೇದಾಂತ್ ಅಮ್ಮನ ವಿಚಾರದಲ್ಲಿ ಕೋಪ
ವೇದಾಂತ್ ತುಂಬಾ ತಾಳ್ಮೆಯ ಮನುಷ್ಯ. ಎಲ್ಲವನ್ನು ಅರ್ಥ ಮಾಡಿಕೊಂಡು ಮನೆಯವರಿಗೆ ಏನು ಬೇಕು ಎಲ್ಲವನ್ನು ನೀಡುತ್ತಿದ್ದಾನೆ. ಸುಹಾಸಿನಿಯ ಮೇಲೆ ಸ್ಟ್ರಾಂಗ್ ನಂಬಿಕೆಯೊಂದಿದೆ. ಆ ನಂಬಿಕೆಯಿಂದೆ ಸುಹಾಸಿನಿ ಮಾಡುತ್ತಿರುವ ಯಾವ ಕುತಂತ್ರವೂ ಆತನಿಗೆ ಕಾಣಿಸುತ್ತಿಲ್ಲ. ಸುಹಾಸಿನಿ ನಮ್ಮನ್ನೆಲ್ಲಾ ಸಾಕಿದ್ದು, ತ್ಯಾಗ ಎಂದೇ ಭಾವಿಸುವ ವೇದಾಂತ್ ಹೆತ್ತ ತಾಯಿಯನ್ನು ಹುಡುಕುವ ಸಾಹಸಕ್ಕೆ ಕೈ ಹಾಕುತ್ತಿಲ್ಲ. ಯಾಕೆಂದರೆ ಅಮ್ಮ ಬದುಕಿದ್ದಾರೆ ಎಂಬ ನಂಬಿಕೆ ವೇದಾಂತ್ಗೆ ಇಲ್ಲ. ಅವರನ್ನು ಹುಡುಕಲು ಹೋದರೆ ಸುಹಾಸಿನಿಗೆ ನೋವಾಗುತ್ತೆ ಎಂದೇ ಯೋಚಿಸುತ್ತಾನೆ.

ಅಮ್ಮ ಸಿಗುವ ಭರವಸೆ
ಆದ್ಯಾ ಎಂದರೆ ಮನೆ ಮಂದಿಗೆಲ್ಲಾ ಮುದ್ದಿನ ಮಗಳು. ಈಗಲೂ ಮಗುವಿನಂತೆಯೇ ಕಾಣುತ್ತಾರೆ. ಆದರೆ ವೈದೇಹಿ ಬಗ್ಗೆ ಕೇಳಿದಾಗ ತಂಗಿ ಎಂದು ನೋಡದೆ ವೇದಾಂತ್ ಹೊಡೆಯುವುದಕ್ಕೆ ಹೋಗಿದ್ದ. ಇದು ಮನೆಯವರಿಗೆಲ್ಲಾ ಭಯ ತಂದಿತ್ತು. ಅದನ್ನು ಅಲ್ಲಿಗೆ ಬಿಟ್ಟಿದ್ದರು. ಇದೀಗ ಕಿಶೋರ್ ಅಮ್ಮ ಬದುಕಿದ್ದಾರೆ ಅಂತ ಹೇಳುತ್ತಿದ್ದಾರೆ. ಅಲ್ಲಿಗೆ ಬಂದ ಅಮೂಲ್ಯ, ಇದೊಮ್ಮೆ ಅವಕಾಶ ನೀಡು. ಕಿಶೋರ್ ಅಷ್ಟು ಕಾನ್ಫಿಡೆಂಟ್ ಆಗಿ ಹೇಳುತ್ತಿದ್ದಾರೆ ಎಂದರೆ ಅಮ್ಮ ಸಿಕ್ಕೇ ಸಿಗುತ್ತಾರೆ ಎಂಬ ಭರವಸೆಯ ಮಾತುಗಳು ವೇದಾಂತ್ ಮನಸ್ಸನ್ನು ಬದಲಾಯಿಸಿದೆ.

ಅಮ್ಮನಿಗಾಗಿ ಹಠ ಮಾಡುತ್ತಿದ್ದಾರೆ
ಯಾರಿಗೆ ಆಗಲಿ ಹೆತ್ತಮ್ಮ ಯಾರು ಎಂದು ತಿಳಿದುಕೊಳ್ಳಬೇಕು ಎಂಬ ಕಾತುರ ಇದ್ದೆ ಇರುತ್ತದೆ. ನಾವೆಲ್ಲಾ ಇಷ್ಟು ಅದ್ಭುತ ಜೀವನ ಲೀಡ್ ಮಾಡುತ್ತಿರುವಾಗ ಅಮ್ಮ ಹೇಗಿದ್ದಾರೋ ಏನೋ ಎಂಬ ಭಯ ಆದ್ಯಾಳದ್ದು. ಅದೇ ಕಾರಣಕ್ಕೆ ಅಮ್ಮನನ್ನು ಹುಡುಕಲು ಅನುಮತಿ ನೀಡು ಎಂದು ವೇದಾಂತ್ ಮುಂದೆ ಅಮೂಲ್ಯ, ವಿಕ್ರಾಂತ್, ಆದ್ಯಾ ಕೈ ಮುಗಿದು ನಿಂತಿದ್ದಾರೆ. ಮಕ್ಕಳಂತೆ ಸಾಕಿದ್ದೀಯಾ, ಕೇಳುವುದಕ್ಕೂ ಮುನ್ನ ಎಲ್ಲವನ್ನು ಕೊಟ್ಟಿದ್ದೀಯಾ. ಈಗ ಅವರು ಕೇಳುತ್ತಿರುವ ನಿಜವಾದ ಅಮ್ಮನನ್ನು ಹುಡುಕಲು ಅವಕಾಶ ಮಾಡಿಕೊಡು ಎಂದಿದ್ದಾರೆ. ಎಲ್ಲರ ಮನವಿ, ಅವರ ಭಾವನೆ ನೋಡಿ ವೇದಾಂತ್ ಮನಸ್ಸು ಕರಗಿದೆ. ಅಮ್ಮನನ್ನು ಹುಡುಕಲು ಅನುಮತಿ ನೀಡಿದ್ದಾನೆ.

ವೈದೇಹಿ ನಿಜವಾಗಿ ಸಿಗುತ್ತಾಳಾ..?
ವೈದೇಹಿ ಸಿಗಬೇಕು ಎಂದರೆ ಪವಾಡಗಳೇ ನಡೆಯಬೇಕು. ಒಂದು ಅಜ್ಜಿಗೆ ಕಣ್ಣೂ ಬರಬೇಕು, ಇಲ್ಲವಾ ಧ್ರುವ ವಾಸ್ತವತೆಗೆ ಬರಬೇಕು. ಅದ್ಯಾವುದು ಆಗದೆ ಹೋದರೆ ಧ್ರುವ ನೋಡಿದ ವಿಡಿಯೋ ಮತ್ತೆ ಸಿಗಬೇಕು. ಯಾಕೆಂದರೆ ವೈದೇಹಿ ಬೇರೆಲ್ಲೋ ಇದ್ದರೆ ಹುಡುಕಬಹುದು. ತಮ್ಮ ಮನೆಯಲ್ಲಿಯೇ ವೈಜಯಂತಿಯಾಗಿ ಇರುವುದರಿಂದ ಇದು ಕಷ್ಟಕರವಾಗಿದೆ. ಹೀಗಾಗಿ ಯಾವ ಪವಾಡ ಜರುಗುತ್ತೆ ಎಂಬ ಕುತೂಹಲ ನೋಡುಗರಲ್ಲಿಯೂ ಇದೆ.


Click it and Unblock the Notifications











