ಗಟ್ಟಿಮೇಳ: ಅಜ್ಜಿಗೆ ದೃಷ್ಟಿ ಬಂದೇ ಬಿಡ್ತು.. ಸುಹಾಸಿಯ ಆಟ ಮುಗಿಯುತ್ತಾ..?
ವಸಿಷ್ಠ ಮನೆಗೆ ಇಷ್ಟು ದಿನ ಕವಿದಿದ್ದ ಕತ್ತಲು ಸರಿಯುವ ಸಮಯ ಹತ್ತಿರವಾದಂತಿದೆ. ಸುಹಾಸಿನಿಯ ಗ್ರಹಗತಿಗಳೆಲ್ಲಾ ಚೆನ್ನಾಗಿದ್ದ ಕಾರಣ ಮುಟ್ಟಿದ್ದೆಲ್ಲವೂ ಚಿನ್ನವೇ ಆಗುತ್ತಿತ್ತು. ಆದರೆ ಈಗ ಸುಹಾಸಿನಿಯ ಅದೃಷ್ಟ ಕೆಟ್ಟಂತೆ ಕಾಣುತ್ತಿದೆ. ಸದ್ಯ ಸುಹಾಸಿನಿ ಅಂದುಕೊಳ್ಳುತ್ತಿರುವುದೆಲ್ಲಾ ಉಲ್ಟಾ ಆಗುತ್ತಿದೆ. ಏನು ಆಗಬಾರದು ಎಂದು ಬಯಸುತ್ತಾಳೋ ಅದೇ ನಡೆಯುತ್ತಿದೆ. ಇದರಿಂದ ಕಂಗೆಟ್ಟು ಹೋಗಿದ್ದಾಳೆ.
ವೇದಾಂತ್ಗೆ ಸತ್ಯ ಗೊತ್ತಾದ ದಿನ ನನ್ನ ಸ್ಥಿತಿ ಕೆಟ್ಟದಾಗಿರುತ್ತದೆ ಎಂಬುದಂತು ಸುಹಾಸಿನಿಯ ಅರಿವಿನಲ್ಲಿಯೇ ಇದೆ. ಅದಕ್ಕೆಂದೆ ವೇದಾಂತ್ಗೆ ಸತ್ಯ ತಿಳಿಯುವುದಕ್ಕೂ ಮುನ್ನ ಸಾಕ್ಷಿಗಳನ್ನು ನಾಶ ಮಾಡಲು ಹೊರಟಿದ್ದಾಳೆ. ಈಗಾಗಲೇ ಆ ಪ್ರಯತ್ನಕ್ಕೆ ಕೈ ಹಾಕಿ ಅರ್ಧಂಬರ್ಧ ಸೋಲು ಅನುಭವಿಸಿ ಸುಮ್ಮನಾಗಿದ್ದಾಳೆ. ಇದೀಗ ವಸಿಷ್ಠ ಮನೆಗೆ ಒಂದು ಖುಷಿಯ ಘಟನೆ ನಡೆದಿದೆ. ಅದುವೇ ಅಜ್ಜಿಗೆ ಕಣ್ಣು ಕಾಣಿಸುವಂತಾಗಿದೆ.

ಅಜ್ಜಿಗೆ ದೃಷ್ಟಿ ಬಂದೇ ಬಿಡ್ತು
ಮನೆಯಲ್ಲಿ ಅಮ್ಮನನ್ನು ಹುಡುಕುವ ಪ್ರಯತ್ನ ಶುರುವಾಗಿದೆ. ಅದರ ಭಾಗವಾಗಿ ವೇದಾಂತ್ ಹುಟ್ಟೂರಿನ ಕಡೆಗೂ ಹೊರಟಿದ್ದ. ಆದರೆ ಸಿಡಿಯ ಮತ್ತೊಂದು ಕಾಪಿ ಸಿಕ್ಕ ಪರಿಣಾಮ ವಾಪಾಸ್ಸಾಗಿದ್ದಾನೆ. ಇದರ ನಡುವೆ ವಸಿಷ್ಠ ಮನೆಯಲ್ಲಿ ಹೆಚ್ಚು ಸಂತಸ ಪಡುವಂತ ಮತ್ತೊಂದು ವಿಚಾರ ನಡೆದಿದೆ. ಅದುವೇ ಅಜ್ಜಿಗೆ ದೃಷ್ಟಿ ಬಂದಿರುವುದು. ಅಜ್ಜಿ ಮನೆಯವರನ್ನೆಲ್ಲಾ ಕರೆದಿದ್ದಾರೆ. ಮಕ್ಕಳೆಲ್ಲಾ ಬಂದ ಮೇಲೆ ನನಗೆ ಎಲ್ಲವೂ ಕಾಣಿಸುತ್ತಿದೆ. ನಿಮ್ಮನ್ನೆಲ್ಲಾ ಮತ್ತೆ ನೋಡಬಹುದು ಎಂದು ಹೇಳಿದ್ದಾರೆ. ಇದನ್ನು ಕೇಳಿದ ಮನೆ ಮಂದಿಯೆಲ್ಲಾ ತುಂಬಾನೇ ಖುಷಿ ಪಟ್ಟಿದ್ದಾರೆ.

ವೇದಾಂತ್ ಯೋಚನೆ ಮಾಡಿದ್ದು ಯಾವ ವಿಚಾರ
ಅಜ್ಜಿಗೆ ಕಣ್ಣು ಬಂದಿದೆ ಎಂದು ಗೊತ್ತಾದ ಕೂಡಲೇ ವಿಕ್ರಾಂತ್, ವೇದಾಂತ್ ಗೆ ಕರೆ ಮಾಡಿದ್ದಾನೆ. ಆ ಕಡೆ ಅಮೂಲ್ಯ ವೇದಾಂತ್ ಗೆ ಏನೆಲ್ಲಾ ಇಷ್ಟವಾಗುತ್ತೋ ಆ ರೀತಿಯ ಕೆಲಸಗಳನ್ನು ಮಾಡಿಸುತ್ತಿದ್ದಾಳೆ. ವೇದಾಂತ್ ಗೆ ಒಂದು ದಿನ ಆಟೋ ಓಡಿಸಬೇಕು ಎಂಬ ಆಸೆ ಇತ್ತು. ಹೀಗಾಗಿ ಒಂದು ರೌಂಡ್ ಆಟೋವನ್ನು ಅಮೂಲ್ಯ ತೆಗೆದುಕೊಂಡು ಬಂದಿದ್ದಳು. ಎಲ್ಲವೂ ಮುಗಿದ ಮೇಲೆ ಮನೆಯಿಂದ ಕಾಲ್ ಬಂದಿದೆ. ಅಜ್ಜಿಗೆ ಕಣ್ಣು ಸ್ವಲ್ಪಮಟ್ಟಿಗೆ ಕಾಣಿಸುತ್ತಿದೆ ಎಂದು ವಿಕ್ರಾಂತ್ ಹೇಳಿದ್ದೆ ತಡ. ವೇದಾಂತ್ ತುಂಬಾ ಖುಷಿ ಪಟ್ಟಿದ್ದಾನೆ. ಅಮ್ಮನನ್ನು ಹುಡುಕಲು ಅಜ್ಜಿಯ ಸಹಾಯ ಮಹತ್ವದ್ದು ಎಂದು ಮತ್ತೆ ಯೋಚಿಸಿದ್ದಾನೆ.

ಮಗಳ ಭಾವನೆ ಸೆಳೆಯುವುತ್ತಾ?
ವೈದೇಹಿಯನ್ನು ಹುಡುಕುವ ಪ್ರಯತ್ನದಲ್ಲಿ ಸಾಕಷ್ಟು ಏರಿಳಿತಗಳಾಗಿವೆ. ಆದರೆ ವೈದೇಹಿ ಸಿಗಬೇಕು ಎಂದರೆ ಒಂದಷ್ಟು ಜನರ ಸಹಾಯ ಬೇಕಾಗಿದೆ. ಅದು ಅಜ್ಜಿ ಮತ್ತು ಧ್ರುವನದ್ದು. ಈಗ ಒಂದೊಂದಾಗಿ ಆಗುತ್ತಾ ಇದೆ. ಧ್ರುವನ ಸ್ಥಿತಿ ಇನ್ನು ಸುಧಾರಿಸಿಲ್ಲ. ಆದರೆ ಅಜ್ಜಿಗೆ ದೃಷ್ಟಿ ಸ್ವಲ್ಪಮಟ್ಟಿಗಾದರೂ ಬಂದಿದೆ. ಇದರಿಂದಾನೇ ಅರ್ಧ ಸಹಾಯವಾದಂತೆ ಆಗುವುದರಲ್ಲಿ ಅನುಮಾನವಿಲ್ಲ. ಮನೆಯಲ್ಲಿರುವ ವೈದೇಹಿಯನ್ನು ಕಂಡು ಹಿಡಿಯುವುದಕ್ಕೆ ಅಜ್ಜಿಯ ದೃಷ್ಟಿ ಬಹಳ ಮುಖ್ಯವಾಗುತ್ತದೆ. ಇದು ಸುಹಾಸಿನಿಯ ಅಂತ್ಯ ಕಾಲಕ್ಕೂ ಹತ್ತಿರವಾಗಿರಬಹುದು.

ಸುಹಾಸಿನಿಯಿಂದ ಹೆತ್ತ ತಾಯಿಗೆ ಅಪಾಯ?
ಒಮ್ಮೊಮ್ಮೆ ಇದನ್ನು ಸುಳ್ಳು ಎಂದು ಹೇಳುವುದಕ್ಕೆ ಆಗುವುದಿಲ್ಲ. ಅಜ್ಜಿಯ ದೃಷ್ಟಿ ಹೋಗುವುದಕ್ಕೆ ಕಾರಣ ಸುಹಾಸಿನಿ ಹಾಗು ತಮ್ಮ. ಅಜ್ಜಿಯನ್ನು ಕೋಲಿನಿಂದ ಹೊಡೆದ ಕಾರಣ ಅಜ್ಜಿ ದೃಷ್ಟಿ ಕಳೆದುಕೊಳ್ಳುವಂತೆ ಆಯಿತು. ಈಗ ಅಜ್ಜಿಗೆ ದೃಷ್ಟಿ ಬಂದಿದೆ ಎಂದಾದರೆ ಸುಹಾಸಿನಿಯ ಅಂತ್ಯಕಾಲ ಸನಿಹವಾಗಿದೆ ಎಂದೇ ಅರ್ಥ. ಮೊದಲೇ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲು ಒದ್ದಾಡುತ್ತಿರುವ ಸುಹಾಸಿನಿ, ಈಗ ಹೆತ್ತ ತಾಯಿ ಎಂಬುದನ್ನು ನೋಡದೆ ತೊಂದರೆ ಕೊಡುತ್ತಾಳೆ ಎಂಬ ಭಯ ಕಾಡುತ್ತಿದೆ.


Click it and Unblock the Notifications











