BARC TRP Rating: ಗಟ್ಟಿಮೇಳ Vs ಲಕ್ಷ್ಮೀಬಾರಮ್ಮ : ಎರಡೂ ಧಾರಾವಾಹಿಗಳು ಪ್ರೇಕ್ಷಕರನ್ನು ಸೆಳೆದಿದ್ದೇನು?
ಕಿರುತೆರೆ ಧಾರಾವಾಹಿಯ ಟಿಆರ್ಪಿ ಬಂದಿದೆ. ಈ ಮೂಲಕ ನೋಡುಗ ಮಹಾಶಯ ಯಾರ ಪರವಾಗಿದ್ದಾನೆ ಎಂಬುದು ಗೊತ್ತಾಗಲಿದೆ. ಒಂದೊಂದು ವಾರ ಒಂದೊಂದು ಧಾರಾವಾಹಿಯ ರೇಟಿಂಗ್ ಪಾಯಿಂಟ್ ಏರಿಳಿತವಾಗ್ತಾ ಇರುತ್ತೆ. ಮನರಂಜನಾ ಚಾನೆಲ್ ಗಳಿಗೆ ಇದೊಂದು ರೀತಿಯ ಚಾಲೆಂಜಿಂಗ್ ಅಂತಾನೇ ಹೇಳಬಹುದು. ಯಾಕಂದ್ರೆ, ಜನರ ನಾಡಿಮಿಡಿತ ಅರಿತುಕೊಳ್ಳುವುದಕ್ಕೆ ಉಪಯೋಗವಾಗುತ್ತದೆ.
ಸದ್ಯ ಇದು ಧಾರಾವಾಹಿ ಜಗತ್ತು. ಸಿನಿಮಾಗಿಂತ ಹೆಚ್ಚಿನ ಜನ ಧಾರಾವಾಹಿಯನ್ನೇ ನೋಡುತ್ತಾರೆ. ಹೀಗಾಗಿ ಧಾರಾವಾಹಿಗಳಲ್ಲು ಅದ್ಧೂರಿತನ ಎದ್ದು ಕಾಣುತ್ತೆ, ಆಗಾಗ ಜನರಿಗೆ ಬೇಕಾದಂತ ಬದಲಾವಣೆಗಳು ಕಾಣಿಸುತ್ತಾ ಇರುತ್ತದೆ. ಒಂದೇ ವಾಹಿನಿಯಾದರೂ ವಿಭಿನ್ನವಾದ ಧಾರಾವಾಹಿಗಳನ್ನು ನೀಡುತ್ತೆ. ಸದ್ಯ ಕಾಂಪಿಟೇಷನ್ ಜಗತ್ತಲ್ಲಿ ಯಾವ ಧಾರಾವಾಹಿ ಮುಂದಿದೆ ಎಂಬುದನ್ನು ನೋಡಬೇಕು ಅಂದ್ರೆ ಇಲ್ಲಿದೆ ನೋಡಿ ಡಿಟೈಲ್.

'ಗಟ್ಟಿಮೇಳ' ಈ ವಾರವೂ ನಂಬರ್ ಒನ್
ಒಂದು ಧಾರಾವಾಹಿಯನ್ನು ಜನರಿಗೆ ಬೇಸರವಾಗದಂತೆ ಅಬ್ಬಬ್ಬಾ ಅಂದ್ರೆ ಒಂದು ವರ್ಷ ಓಡಿಸುವುದೇ ಕಷ್ಟ. ಅಂತದ್ರಲ್ಲಿ ನಾಲ್ಕು ವರ್ಷ ಓಡಿಸುವುದು ಅಂದ್ರೆ ಸುಲಭದ ಮಾತಲ್ಲ. ಅದು ನಂಬರ್ ಒನ್ ಧಾರಾವಾಹಿಯಾಗಿ. ಇಷ್ಟು ವರ್ಷ ಕೂಡ ಗಟ್ಟಿಮೇಳ ಧಾರಾವಾಹಿ ತನ್ನ ಮೊದಲ ಸ್ಥಾನ ಕಳೆದುಕೊಂಡಿಲ್ಲ. ಎಷ್ಟೇ ಹೊಸ ಧಾರಾವಾಹಿ ಬಂದರೂ ಕೂಡ. ಒಮ್ಮೆ ಎರಡು ಅಥವಾ ಮೂರನೇ ಸ್ಥಾನಕ್ಕೆ ಹೋಗಿದೆ. ಆದರೆ ಹೆಚ್ಚಾಗಿ ಉಳಿಸಿಕೊಂಡಿರುವುದು ಮೊದಲ ಸ್ಥಾನವನ್ನೇ. ಸದ್ಯ ಅದಿತಿ ಮದುವೆ ಮಾಡಲು ಹೊರಟ ಮಂಜುಗೆ, ಅಂಜಲಿಯನ್ನು ಮುಂದಿಟ್ಟುಕೊಂಡು ತೇಜಸ್ ಆಟವಾಡಿಸುತ್ತಾ ಇದ್ದಾನೆ. ಈಗ ಅವನಿಗಾಗಿ ಅಮೂಲ್ಯಾಳ ಒಡವೆಯನ್ನೆ ಕದ್ದಿದ್ದಾನೆ. ಸದ್ಯ ಗಟ್ಟಿಮೇಳ 7.5 ಪಡೆಯುವ ಮೂಲಕ ಜೀ ಕನ್ನಡದಲ್ಲಿ ಮೊದಲ ಸ್ಥಾನದಲ್ಲಿದೆ.
ಕಲರ್ಸ್ ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ ನಂ 1
'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಶುರುವಾಗಿ ಕೇವಲ 40 ಎಪಿಸೋಡ್ ಅಷ್ಟೇ ಆಗಿರುವುದು. ಈ ಮೊದಲು ಕೂಡ 'ಲಕ್ಷ್ಮೀ ಬಾರಮ್ಮ' ಎಂಬ ಹೆಸರಿನಲ್ಲಿ ಧಾರಾವಾಹಿ ಬರ್ತಾ ಇತ್ತು. ಆದರೆ ಇದು ಬೇರೆ. ಭಾಗ್ಯ ತನ್ನ ತಂಗಿ ಲಡ್ಡುಗೆ ಮದುವೆ ಮಾಡಿದ ಮೇಲೆ 'ಲಕ್ಷ್ಮೀ ಬಾರಮ್ಮ' ಕುಟುಂಬ ಬೇರೆ ಬೇರೆ ಆಯ್ತು. ಈಗ ತಂಗಿ ಕಥೆಯನ್ನೇ ಜನ ಜಾಸ್ತಿ ಒಪ್ಪಿದ್ದಾರೆ. ಲಕ್ಷ್ಮೀ ಮತ್ತು ವೈಷ್ಣವ್ ಹೊಸ ಜೀವನ ಶುರು ಮಾಡುವಾಗಲೇ ಕೀರ್ತಿಯ ರೋಧನೆ ಜಾಸ್ತಿಯಾಗಿದೆ.
ಪುಟ್ಟಕ್ಕನ ಮಕ್ಕಳಿಗೂ ಎರಡನೇ ಸ್ಥಾನ
ಪುಟ್ಟಕ್ಕನ ಮಕ್ಜಳು ಮೊದಲಿನಿಂದಲೂ ಮೊದಲ ಸ್ಥಾನದಲ್ಲಿಯೇ ಇತ್ತು. ಈ ವಾರ 'ಗಟ್ಟಿಮೇಳ'ಕ್ಕೆ ಬಿಟ್ಟುಕೊಟ್ಟು ಎರಡನೇ ಸ್ಥಾನಕ್ಕೆ ಬಂದು ಕುಳಿತಿದೆ. ಪ್ರೀತಿ ಪ್ರೇಮದ ಜೊತೆಗೆ ಟ್ವಿಸ್ಟ್ ಕೂಡ ಶುರುವಾಗಿದೆ. ಬಂಗಾರಮ್ಮನಿಗೆ ಮಗನ ಪ್ರೀತಿಯ ಬಗ್ಗೆಯೂ ಗೊತ್ತಾಗಿದೆ. ಸ್ನೇಹಾಳನ್ನು ದೂರ ಮಾಡಲು ಯತ್ನಿಸುತ್ತಿದ್ದಾಳೆ. ಈ ಕಡೆ ಪುಟ್ಟಕ್ಕ ಸತ್ಯ ಹೇಳಿ ನಿರಾಳರಾಗಿದ್ದಾರೆ.

'ರೇಣುಕಾ ಯಲ್ಲಮ್ಮ'ನಿಗೆ ಉಧೋ ಉಧೋ
ಸ್ಟಾರ್ ಸುವರ್ಣ ವಾಹಿನಿಯಲ್ಲೂ ಹೊಸ ಹೊಸ ಧಾರಾವಾಹಿಗಳು ಸೆಟ್ಟೇರುತ್ತಲೇ ಇದೆ. ಸದ್ಯಕ್ಕೆ 'ಶ್ರೀರೇಣುಕಾ ಯಲ್ಲಮ್ಮ' ಧಾರಾವಾಹಿ ಎಲ್ಲರ ಅಚ್ಚುಮೆಚ್ಚಾಗಿದೆ. ಅರಮನೆಯಲ್ಲಿ ಮೂವರು ಮಹಾರಾಣಿಯರಿದ್ದರು, ಒಬ್ಬಳೇ ರಾಜಕುಮಾರಿ ಹುಟ್ಟಿರುವುದು. ಆದರೆ ಆ ರಾಜಕುಮಾರಿಗೆ ದೊಡ್ಡಮ್ಮ, ಚಿಕ್ಕಮ್ಮನದ್ದೆ ಪ್ರಾಣ ಕಂಟಕ. ಈ ಸಮಸ್ಯೆಗಳ ನಡುವೆ ಒಬ್ಬಳು ಪ್ರಾಣ ಸ್ನೇಹಿತೆ ಕೂಡ ಇದ್ದಾಳೆ. ಅವಳಿಂದಾನೆ ನೆಮ್ಮದಿಯಾಗಿರುವುದು. ಸದ್ಯ ಪ್ರಾಣಪಾಯದಿಂದ ರೇಣುಕೆಯನ್ನು ಯಲ್ಲಮ್ಮನೇ ಕಾಪಾಡಬೇಕಿದೆ.


Click it and Unblock the Notifications











