'ಭರ್ಜರಿ ಬ್ಯಾಚುಲರ್ಸ್'ನಲ್ಲಿ ಕಾಣಿಸಿಕೊಂಡ 'ಗೌರಿಶಂಕರ' ಧಾರಾವಾಹಿಯ ಐಶು; ಈ ನಟಿಯ ಹಿನ್ನೆಲೆಯೇನು?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಗೌರಿಶಂಕರ' ಕೂಡಾ ಒಂದು. 'ಗೌರಿಶಂಕರ' ಧಾರಾವಾಹಿಯಲ್ಲಿ ನಾಯಕ ಶಂಕರನ ತಂಗಿ ಐಶೂ ಆಗಿ ನಟಿಸುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ಅಭಿಜ್ಞಾ ಭಟ್. ಬಜಾರಿ ಹೆಣ್ಣು ಮಗಳಾಗಿ ತೆರೆಯ ಮೇಲೆ ಮೋಡಿ ಮಾಡುತ್ತಿರುವ ಅಭಿಜ್ಞಾ ಭಟ್ ಧಾರಾವಾಹಿಯ ಜೊತೆಗೆ ರಿಯಾಲಿಟಿ ಶೋವಿನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
ಹೌದು, ಜೀ ಕನ್ನಡ ವಾಹಿನಿಯಲ್ಲಿ ಶುರುವಾಗಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ಭರ್ಜರಿ ಬ್ಯಾಚುಲರ್ಸ್' ನಲ್ಲಿ ಮೆಂಟರ್ ಆಗಿ ಅಭಿಜ್ಞಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಅಭಿಜ್ಞಾ ಭಟ್ ಅವರ ಕಿರುತೆರೆ ಪಯಣ ಶುರುವಾಗಿದ್ದು ಕೂಡಾ ರಿಯಾಲಿಟಿ ಶೋವಿಂದಲೇ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್' ಸೀಸನ್ 4ರ ಸ್ಪರ್ಧಿಯಾಗಿ ಕಿರುತೆರೆಗೆ ಕಾಲಿಟ್ಟಿದ್ದ ಅಭಿಜ್ಞಾ ಭಟ್ ಆ ಶೋವಿನಲ್ಲಿ ಫೈನಲಿಸ್ಟ್ ಆಗಿಯೂ ಹೊರಹೊಮ್ಮಿದ್ದರು. ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಕ್ಕು ವಿಥ್ ಕಿರಿಕ್ಕು' ರಿಯಾಲಿಟಿ ಶೋವಿನಲ್ಲಿ ಕಾಣಿಸಿಕೊಂಡ ಅಭಿಜ್ಞಾ ಭಟ್ 'ರಾಮಚಾರಿ' ಧಾರಾವಾಹಿಯಲ್ಲಿ ದೀಪಾಳಾಗಿ ಅಭಿನಯಿಸಿದ್ದರು.
'ರಾಮಚಾರಿ' ಧಾರಾವಾಹಿಯಲ್ಲಿ ನಾಯಕ ರಾಮಾಚಾರಿಯ ಮಾವನ ಮಗಳು ದೀಪಾ ಆಗಿ ನಟಿಸಿದ್ದರು ಅಭಿಜ್ಞಾ ಭಟ್. ಮುಂದೆ 'ಗೌರಿಶಂಕರ' ಧಾರಾವಾಹಿಯ ಐಶೂ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಾಗ ದೀಪಾ ಪಾತ್ರಕ್ಕೆ ಈಕೆ ವಿದಾಯ ಹೇಳಿದ್ದರು. 'ರಾಮಾಚಾರಿ'ಯ ದೀಪಾ ಪಾತ್ರಕ್ಕೆ ಅಷ್ಟೊಂದು ಪ್ರಾಮುಖ್ಯತೆ ಇರಲಿಲ್ಲ ಎಂಬುದು ಇವರ ಅಭಿಪ್ರಾಯ.
ಅದೇ ಸಮಯಕ್ಕೆ 'ಗೌರಿಶಂಕರ' ಧಾರಾವಾಹಿಯ ಐಶೂ ಪಾತ್ರದಲ್ಲಿ ನಟಿಸುವ ಅವಕಾಶ ಅಭಿಜ್ಞಾಗೆ ದೊರಕಿತು. 'ಗೌರಿ ಶಂಕರ' ಧಾರಾವಾಹಿಯ ಮ್ಯಾನೇಜರ್ ಕರೆ ಮಾಡಿ ಧಾರಾವಾಹಿಯಲ್ಲಿ ಹೀರೋ ತಂಗಿಯ ಪಾತ್ರಕ್ಕೆ ನಟಿಸುವ ಆಫರ್ ಕೊಟ್ಟರು. ಆ ಸಮಯದಲ್ಲಿ ಎಂಬಿಎ ಮಾಡುತ್ತಿರುವುದರಿಂದ ಎರಡೆರಡು ಧಾರಾವಾಹಿಗಳಿಗೆ ಸಮಯ ಸಾಕಾಗುವುದಿಲ್ಲ ಎಂದು ಅಭಿಜ್ಞಾ ಬಂದ ಅವಕಾಶವನ್ನು ನಿರಾಕರಿಸಿದರು.
'ಗೌರಿಶಂಕರ' ಧಾರಾವಾಹಿಯಲ್ಲಿ ಹೀರೋ ತಂಗಿ ಪಾತ್ರವಾದರೂ ಎರಡನೇ ಹೀರೋಯಿನ್ ಅಷ್ಟು ಪ್ರಾಮುಖ್ಯತೆ ಇದೆ ಎಂದು ಹೇಳಿದ್ದರು. ಆ ಸಮಯದಲ್ಲಿ ಅಭಿಜ್ಞಾ ಉತ್ತಮ ಸಂಭಾವನೆಯನ್ನು ಡಿಮ್ಯಾಂಡ್ ಮಾಡಿದ್ದರು. ಧಾರಾವಾಹಿ ತಂಡ ಅದಕ್ಕೂ ಒಪ್ಪಿತ್ತು. ಆ ಕಾರಣದಿಂದ 'ರಾಮಾಚಾರಿ'ಯ ದೀಪಾ ಪಾತ್ರಕ್ಕೆ ವಿದಾಯ ಹೇಳಿ ನಾಯಕಿಯಷ್ಟೇ ಪ್ರಾಮುಖ್ಯತೆ ಇರುವ ಐಶು ಪಾತ್ರವನ್ನು ಒಪ್ಪಿಕೊಂಡ ಈಕೆ ಇಂದು ಕಿರುತೆರೆ ವೀಕ್ಷಕರ ಪಾಲಿಗೆ ಪ್ರೀತಿಯ ಐಶು.
ಇನ್ನು ಐಶು ಪಾತ್ರಕ್ಕೆ ಅಭಿಜ್ಞಾ ಭಟ್ ಅವರು ಯಾವೊಂದು ಆಡಿಶನ್ ಇಲ್ಲದೇ ಆಯ್ಕೆಯಾದವರು. ಉಡುಪಿ ಮೂಲದವರಾದ ಈಕೆ ಐಶು ಪಾತ್ರದಲ್ಲಿ ಮಂಡ್ಯ ಕಡೆಯ ಭಾಷೆ ಮಾತನಾಡುತ್ತಿದ್ದು ಅದಕ್ಕಾಗಿ ತರಬೇತಿಯನ್ನು ಪಡೆದಿದ್ದಾರೆ. ದೀಪಾ ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರೂ ಆ ಪಾತ್ರ ನನಗೆ ಸಮಾಧಾನ ನೀಡಿರಲಿಲ್ಲ. ಆದರೆ, ಆ ಸಮಾಧಾನ ನನಗೀಗ ಐಶು ಪಾತ್ರದಿಂದ ದೊರೆತಿದೆ ಎಂದು ಈ ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.


Click it and Unblock the Notifications











