ಮದುವೆಯ ಫೋಟೋ ಹಂಚಿಕೊಂಡರೂ 'ತೂಕ'ದ ಮಾತು ; ವಧು ಚೆನ್ನಾಗಿಲ್ಲ ಎಂದ ಮಹಿಳೆ - ಗ್ರಹಚಾರ ಬಿಡಿಸಿದ ಬ್ರಹ್ಮಗಂಟು ಗೀತಾ ಭಟ್
ಬಣ್ಣದ ಪ್ರಪಂಚದಲ್ಲಿ ಅನೇಕ ನಾಯಕಿಯರು ಸಹಜ ಸೌಂದರ್ಯಕ್ಕೆ ಸರಳ ಸಾಧನೆಗಳ ಮೊರೆ ಹೋಗುತ್ತಾರೆ. ಆದರೂ ಕೂಡ ಕೆಲವೊಮ್ಮೆ ಜೀವನ ಶೈಲಿ, ಆಹಾರ ಕ್ರಮದಲ್ಲಾಗುವ ವ್ಯತ್ಯಾಸ, ಕಾಲ ಕಾಲಕ್ಕೆ ದೇಹದಲ್ಲಿ ಆಗುವ ಹಾರ್ಮೋನ್ಗಳ ಏರುಪೇರಿಂದ ದೇಹದ ಸೌಂದರ್ಯದಲ್ಲಿ ವ್ಯತ್ಯಾಸ ಕಾಣಿಸುತ್ತೆ. ಇದನ್ನರಿಯದ ಅನೇಕರು ಸುಖಾ ಸುಮ್ಮನೆ ಸೆಲೆಬ್ರೀಟಿಗಳಿಗೆ ಪ್ರಶ್ನೆಗಳನ್ನು ಮಾಡುತ್ತಾರೆ. ದೇಹಾಕೃತಿ ಎಂಬ ತೀರಾ ವೈಯಕ್ತಿಕ ವಿಷಯವನ್ನು ಟೀಕಿಸುತ್ತಾರೆ. ಹಂಗಿಸುತ್ತಾರೆ.
ಹೀಗಾದಾಗ ಕೆಲವರು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಮತ್ತೂ ಕೆಲವರು ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡುತ್ತಾರೆ. ಉದಾಹರಣೆಗೆ ಗೀತಾ ಭಟ್.

ಹೌದು, ಗೀತಾ ಭಟ್.. ''ಬ್ರಹ್ಮಗಂಟು'' ಧಾರಾವಾಹಿಯ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದ ನಟಿ. ಆ ನಂತರ ಕಿರುತೆರೆ ಮಾತ್ರವಲ್ಲದೇ ಬೆಳ್ಳಿ ಪರದೆಯಲ್ಲೂ ಅದೃಷ್ಟ ಪರೀಕ್ಷೆ ಮಾಡಿಕೊಂಡ ಇವರ ಹಿಂದೆ ಅದ್ಯಾಕೋ ಏನೋ ಒಂದು ವರ್ಗ ಹೀಯಾಳಿಸಲು ಎಂದೇ ಸದಾ ಬೆನ್ನತ್ತಿರುತ್ತೆ.
ಇದಕ್ಕೆ ಮತ್ತೊಂದು ಪುರಾವೆ ಎನ್ನುವಂತೆ ಕೆಲ ತಿಂಗಳ ಹಿಂದೆ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟಿರುವ ಗೀತಾ ಭಟ್ ಇತ್ತೀಚೆಗೆ ತಮ್ಮ ಮದುವೆಯ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಹಲವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಆದರೆ, ತನ್ನನ್ನೂ ತಾನು ಮಹಿಳೆ ಎಂದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಬಿಂಬಿಸಿರುವ ಮಹಿಳೆಯೊಬ್ಬಳು ಮಾತ್ರ ತಾವೊಬ್ಬ ಮಹಿಳೆಯಾಗಿ ಗೀತಾ ಭಟ್ ಅವರ ಬಾಡಿ ಶೇಮಿಂಗ್ ಮಾಡಿದ್ದಾರೆ. ಮೇಕಪ್ ಚೆನ್ನಾಗಿದೆ ಆದರೆ ವಧುವಿನ ಆಯ್ಕೆ ತಪ್ಪಾಗಿದೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಈ ತರಹದ ಕಾಮೆಂಟ್ ಗಳನ್ನು ಬಹುತೇಕ ತಾರೆಯರು ಕಡೆಗಣಿಸುತ್ತಾರೆ. ಗೀತಾ ಭಟ್ ಕೂಡ ಈ ಹಿಂದೆ ಹಲವು ಬಾರಿ ಈ ತರಹದ ಅಭಿಪ್ರಾಯಗಳನ್ನು ಕಡೆಗಣಿಸಿದ್ದಾರೆ. ಆದರೆ, ಈ ಬಾರಿ ಗೀತಾ ಭಟ್ ಅವರಿಂದ ಕಡೆಗಣಿಸಲು ಸಾಧ್ಯವಾಗಿಲ್ಲ. ಹೀಗಾಗಿಯೇ ಪ್ರತ್ಯುತ್ತರವನ್ನು ಗೀತಾ ಭಟ್ ನೀಡಿದ್ದಾರೆ.

ಮಹಿಳೆ ಮಾಡಿದ ಕಾಮೆಂಟ್ಗೆ ಉತ್ತರವನ್ನು ನೀಡಿರುವ ಗೀತಾ ಭಟ್, ನಾನು ಕೂಡ ನಿಮ್ಮ ಬಣ್ಣ, ಮುಖದ ಲಕ್ಷಣ, ಇನ್ನಿತರ ವಿಷಯಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಬಹುದು ಅಥವಾ ನಿಮ್ಮನ್ನು ನಾನು ಕೂಡ ಅವಮಾನಿಸಬಹುದು, ದೇವರ ಪ್ರತಿಯೊಂದು ಸೃಷ್ಟಿಯೂ ತನ್ನದೇ ಆದ ರೀತಿಯಲ್ಲಿ ಸುಂದರವಾಗಿರುತ್ತದೆ ಎಂದು ನಾನು ನಂಬುತ್ತೇನೆ. ಸಾಧ್ಯವಾದರೆ ಇತರರ ಬಗ್ಗೆ ಕರುಣೆಯಿಂದ ಇರಿ, ಇಲ್ಲದಿದ್ದರೆ ಸುಮ್ಮನಿರಿ ಎಂದು ಹೇಳಿದ್ದಾರೆ. ಈ ಮೂಲಕ ಯಾರದ್ದೋ ಮೈಬಣ್ಣ, ವೈಶಿಷ್ಟ್ಯ ಅಥವಾ ನೋಟದ ಬಗ್ಗೆ ಕಾಮೆಂಟ್ ಮಾಡುವುದು ಸುಲಭ, ಆದರೆ ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಸುಂದರ ಎನ್ನುವುದನ್ನು ಕೂಡ ಗೀತಾ ಭಟ್ ಸಾರಿ ಹೇಳಿದ್ದಾರೆ.
ಗೀತಾ ಭಟ್ ಅವರ ಈ ಉತ್ತರಕ್ಕೆ ಹಲವರು ಚಪ್ಪಾಳೆಯನ್ನು ಹೊಡೆದಿದ್ದು, ತಮ್ಮನ್ನು ಬೆಂಬಲಿಸಿದವರಿಗೆ ಕೂಡ ಗೀತಾ ಭಟ್ ಇದೇ ಸಮಯದಲ್ಲಿ ಧನ್ಯವಾದ ಹೇಳಿದ್ದಾರೆ. ನನಗೆ ಬಂದ ಕೆಟ್ಟ ಕಾಮೆಂಟ್ಗಳ ಬಗ್ಗೆ ನೀವು ಪ್ರತಿಯೊಬ್ಬರು ನೀಡುತ್ತಿರುವ ಪ್ರತಿಕ್ರಿಯೆಯಿಂದ ಪುಳಕಿಗೊಂಡೆ ಎಂಬರ್ಥದಲ್ಲಿ ಸಂದೇಶ ರವಾನೆ ಮಾಡಿರುವ ಗೀತಾ ಭಟ್, ನಿಮ್ಮೆಲ್ಲರ ಪ್ರೀತಿ ಮತ್ತು ಕರುಣೆಯ ಮಾತುಗಳನ್ನು ಕಂಡು ನಾನು ನಿಜಕ್ಕೂ ಭಾವುಕಳಾಗಿದ್ದೇನೆ ಎಂದು ಹೇಳಿದ್ದಾರೆ. ಇದೆಲ್ಲವನ್ನೂ ಅರಗಿಸಿಕೊಳ್ಳಲು ನನಗೆ ಇನ್ನೂ ಟೈಮ್ ಬೇಕು ಎಂದಿರುವ ಗೀತಾ ಭಟ್, ನೀವು ಕೊಟ್ಟ ಪ್ರೀತಿಯಿಂದ ನಾನು ಧನ್ಯಳಾಗಿದ್ದೇನೆ. ನನಗೆ ಇಷ್ಟು ಪ್ರೀತಿ, ಒಳ್ಳೆಯ ಮಾತುಗಳನ್ನು ಕಳುಹಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ. ನಿಮ್ಮೆಲ್ಲರಿಗೆ ನಾನು ನಿಜಕ್ಕೂ ಚಿರಋಣಿ ಎಂದು ಗೀತಾ ಭಟ್ ಹೇಳಿದ್ದಾರೆ. ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ ಅವರ ಯೋಗ್ಯತೆ ತೋರಿಸಬೇಕಿತ್ತು ಹೀಗಾಗಿ ನಾನು ಮಾತನಾಡಿದೆ ಎಂದಿದ್ದಾರೆ.



Click it and Unblock the Notifications











