ಈಗಲೂ ಹೋಟೆಲ್ನಲ್ಲಿ ಕೆಲಸ ಮಾಡ್ತೀನಿ- 'ಗಿಚ್ಚಿ ಗಿಲಿ ಗಿಲಿ' ವಿನ್ನರ್ ಶಿವು
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಜಾ ಭಾರತ' ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನ ಗೆದ್ದಿರುವ ಶಿವು, ಸದ್ಯ 'ಗಿಚ್ಚಿ ಗಿಲಿ ಗಿಲಿ' ರಿಯಾಲಿಟಿ ಶೋನ ವಿಜೇತರಾಗಿ ಹೊರಹೊಮ್ಮಿದ್ದಾರೆ. ತಮ್ಮ ಅಮೋಘ ನಟನೆಯ ಮೂಲಕ ಶಿವು ಕೇವಲ ತೀರ್ಪುಗಾರರಷ್ಟೇ ಅಲ್ಲ, ಸಂಪೂರ್ಣ ಕನ್ನಡಿಗರ ಮನ ತಲುಪಿದ್ದಾರೆ. ಹಾಸ್ಯ, ಅಳು, ಕೋಪ, ನಗು ಯಾವುದೇ ಭಾವನೆಗಳಿದ್ದರೂ ಶಿವು ಸರಾಗವಾಗಿ ವೇದಿಕೆ ಮೇಲೆ ನಟಿಸುತ್ತಿದ್ದರು.
ಈ ಮೊದಲೇ 'ನಮ್ಮಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋ ವಿನ್ನರ್ ಆಗಿದ್ದ ಮಾಸ್ಟರ್ ಆನಂದ್ ಪುತ್ರಿ ವಂಶಿಕಾಗೆ ಜೊತೆಯಾಗಿ ಶಿವು 'ಗಿಚ್ಚಿ ಗಿಲಿ ಗಿಲಿ'ಯ ಪ್ರಯಾಣ ಆರಂಭಿಸಿದರು. ಇವರಿಬ್ಬರ ಕಾಂಬಿನೇಶನ್ನಲ್ಲಿ ಬಂದ ಎಲ್ಲಾ ಸ್ಕಿಟ್ಗಳೂ ಸೂಪರ್ ಹಿಟ್ ಆಗಿವೆ. ಇನ್ನು ಶಿವು-ವಂಶಿಕಾ ಕೆಲವು ಸ್ಕಿಟ್ಗಳಂತೂ ನೋಡುಗರನ್ನು ಕಣ್ಣೀರಾಗಿಸಿದೆ. ಅಷ್ಟರ ಮಟ್ಟಿಗೆ ಇಬ್ಬರು ವೇದಿಕೆ ಮೇಲೆ ನಟಿಸುತ್ತಿದ್ದರು. 'ಗಿಚ್ಚಿ ಗಿಲಿ ಗಿಲಿ' ಗೆಲುವಿನ ಬಳಿಕ ಶಿವು ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ್ದು, ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಬೆಂಗಳೂರಿಗೆ ಬಂದ ಆರಂಭದ ದಿನಗಳ ಬಗ್ಗೆ ಮಾತನಾಡಿದ ಶಿವು, ನಮ್ಮ ಊರಲ್ಲಿ ನಾಟಕದಲ್ಲಿ ಪಾತ್ರ ಮಾಡುತ್ತಿದ್ದ ನಾನು, ಬಳಿಕ ಬೆಂಗಳೂರಿಗೆ ಬಂದೆ. ಮೊದಲಿಗೆ ನಿರ್ದೇಶಕ ಮಹಂತೇಶ್ ಬಡಿಗೇರ್ ಅವರ ಜೊತೆ ಸೆಟ್ ವರ್ಕ್ ಕೆಲಸಗಳನ್ನು ಮಾಡುತ್ತಿದ್ದೆ. ಮೊದಲಿನಂದಲೂ ನನಗೆ ಸಂಗೀತದ ವಾದ್ಯಗಳನ್ನು ನುಡಿಸುವುದೆಂದರೆ ಹುಚ್ಚು. ಪುಟ್ಟರಾಜು ಗವಾಯಿಗಳ ಆಶ್ರಮದಲ್ಲಿ ಒಂದು ಜೊತೆ ತಬಲ ತೆಗೆದುಕೊಂಡು ಅಭ್ಯಾಸ ಮಾಡುತ್ತಿದ್ದೆ. ಪ್ರಕಾಶ್ ಬಡಿಗೇರ್ ಎನ್ನುವವರು ನನಗೆ ತಬಲ ಹೇಳಿಕೊಟ್ಟರು. ಹೀಗಾಗಿ ಮ್ಯೂಸಿಕ್ ಸ್ವಲ್ವ ಗೊತ್ತಿತ್ತು. ಹೀಗಾಗಿ ಬೆಂಗಳೂರಿಗೆ ಬಂದ ಹೊಸತರಲ್ಲಿ ಸೆಟ್ ಕೆಲಸದ ಜೊತೆ ಒಂದಿಷ್ಟು ನಾಟಕಗಳಿಗೆ ತಬಲ ನುಡಿಸುತ್ತಿದ್ದೆ. ಅದರಿಂದ ಸ್ವಲ್ಪ ಸಂಪಾದನೆ ಆಗುತಿತ್ತು ಎಂದರು.

ಈ ಸಮಯದಲ್ಲಿ 'ಮಜಾ ಭಾರತದ' ಆಡಿಷನ್ ನಡೆಯುತಿತ್ತು. ನವೀನ್ ಮಂಡ್ಯ ಅಂತಾ ಒಬ್ಬರು ಅದರಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮಾರ್ಗದರ್ಶನದ ಮೇಲೆ 'ಮಜಾ ಭಾರತ'ಕ್ಕೆ ಆಡಿಷನ್ ಕೊಟ್ಟೆ. ಈ ಹಿಂದೆ ಮಾಡಿದ್ದ ನಾಟಕದ ಕೆಲವು ಹಾಸ್ಯ ಪಾತ್ರವನ್ನು ಆಡಿಷನ್ನಲ್ಲಿ ಮಾಡಿದೆ. ಮೊದಲ ರೌಂಡ್ ಅಲ್ಲೇ ಸೆಲೆಕ್ಟ್ ಆಯ್ತು. ಅಲ್ಲಿಂದ ಇಲ್ಲಿವರೆಗೂ ಟಿವಿ ಪಯಣ ಉತ್ತಮವಾಗಿಯೇ ಸಾಗುತ್ತಿದೆ ಎಂದು ತಾವು 'ಮಜಾ ಭಾರತ'ಕ್ಕೆ ಆಯ್ಕೆಯಾದ ಸಮಯವನ್ನು ನೆನಪಿಸಿಕೊಂಡರು.
ಬಳಿಕ ಮಾತು ಮುಂದುವರಿಸಿದ ಅವರು, ಹೋಟೆಲ್ನಲ್ಲಿ ಕೆಲಸ ಮೊದಮೊದಲು ಖುಷಿಕೊಡುತ್ತಿತ್ತು. ನಾನು ದುಡಿಯುತ್ತಿದ್ದೇನೆ ಎನ್ನುವ ಖುಷಿ ಇತ್ತು. ಆದರೆ ಹೋಟೆಲ್ಗೆ ಬರುವ ಫ್ಯಾಮಿಲಿಗಳನ್ನು ನೋಡಿದಾಗ, ನಾನು ಚೆನ್ನಾಗಿ ಓದಿದ್ದರೆ, ನನ್ನ ಫ್ಯಾಮಿಲಿ ಜೊತೆ ನಾನು ಹೀಗೆ ಹೋಟೆಲ್ಗೆ ಬಂದು ತಿನ್ನಬಹುದಿತ್ತು ಅನಿಸುತ್ತಿತ್ತು. ಒಂದೊಂದು ಸಾರಿ ಅಳು ಬರುತಿತ್ತು. ಆದರೆ ನೋವು ನುಂಗಿಕೊಂಡು ಕೆಲಸ ಮಾಡುತ್ತಿದ್ದೆ. ಆದರೆ ಹೋಟೆಲ್ಗೆ ಬರುತ್ತಿದ್ದವರು ನನ್ನನ್ನು ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಫ್ಯಾಮಿಲಿ ತರ ನೋಡುತ್ತಿದ್ದರು ಅದು ಖುಷಿ ಕೊಡುತ್ತಿತ್ತು ಎಂದರು.
ಇನ್ನು ನಾನು ಹೋಟೆಲ್ನಲ್ಲೂ ಚೆನ್ನಾಗಿ ಕೆಲಸ ಮಾಡುತ್ತಿದೆ. ಬೇಜಾರು, ಖುಷಿ, ಎಲ್ಲಾದರೊಂದಿಗೆ ಹೋಟೆಲ್ ಜೀವನ ಮುಗಿಸಿದೆ. ನಮ್ಮ ಹೋಟೆಲ್ ಮಾಲೀಕರು ಕೂಡ ತುಂಬಾ ಒಳ್ಳೆ ವ್ಯಕ್ತಿ. ಪ್ರಫುಲ್ ಶೆಟ್ಟಿ ಅಂತಾ ಮಂಗಳೂರಿನವರು. ಅವರು ನನಗೆ ಸಿಕ್ಕಾಪಟ್ಟೆ ಸಹಾಯ ಮಾಡಿದ್ದಾರೆ. ಈಗಲೂ ಫೋನ್ ಮಾಡಿ ತುಂಬಾ ಚೆನ್ನಾಗಿ ಮಾತನಾಡುತ್ತಾರೆ. ನಾನು ಈಗಲೂ ರಜೆ ಇದ್ದಾಗ ಹೋಗಿ ಹೋಟೆಲ್ನಲ್ಲಿ ಕೆಲಸ ಮಾಡುತ್ತೇನೆ. ಅಲ್ಲಿ ಕೆಲಸ ಮುಗಿಸಿ ಊರಿಗೆ ಹೋಗುತ್ತೇನೆ. ಅಷ್ಟು ಚೆನ್ನಾಗಿ ಹೋಟೆಲ್ ಓನರ್ ನನ್ನನ್ನು ನೋಡಿಕೊಂಡಿಕೊಂಡಿದ್ದಾರೆ ಎಂದು ಹೋಟೆಲ್ ಜೀವನದಲ್ಲಿ ಕಂಡ ಅನುಭವಗಳನ್ನು ಹಂಚಿಕೊಂಡರು.


Click it and Unblock the Notifications











