"ಅನೇಕರಿಗೆ ನಾನು ಗಿರೀಶ್ ಎಂಬುದು ಗೊತ್ತಿಲ್ಲ";'ಗಟ್ಟಿಮೇಳ' ಮುಗಿದ ಬೆನ್ನಲ್ಲೇ ಕಿರುತೆರೆ ನಟ ಹೀಗಂದಿದ್ಯಾಕೆ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ 'ಗಟ್ಟಿಮೇಳ'ವೂ ಒಂದು. ಬರೋಬ್ಬರಿ 1243 ಸಂಚಿಕೆ ಪ್ರಸಾರವಾಗಿದ್ದ ಈ ಧಾರಾವಾಹಿ ಕಳೆದ ಶುಕ್ರವಾರವಷ್ಟೇ ಮುಕ್ತಾಯಗೊಂಡಿದೆ. ಹೌದು, ವಿಭಿನ್ನ ಕಥೆಯ ಜೊತೆಗೆ ಪಾತ್ರವರ್ಗದ ಮೂಲಕವೂ 'ಗಟ್ಟಿಮೇಳ' ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆದಿತ್ತು. ಸುಖಾಂತ್ಯ ಕಾಣುವುದೊಂದಿಗೆ ಈ ಧಾರಾವಾಹಿಯು ತನ್ನ ಪ್ರಸಾರವನ್ನು ನಿಲ್ಲಿಸಿದೆ.
'ಗಟ್ಟಿಮೇಳ' ಧಾರಾವಾಹಿಯಲ್ಲಿ ಸಾರ್ಥಕ್ ಆಗಿ ಅಭಿನಯಿಸುತ್ತಿರುವ ಗಿರೀಶ್ ಬೆಟ್ಟಪ್ಪ ಅವರು ಕೊನೆಯ ಗ್ರೂಪ್ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ "ಸಾರ್ಥಕ್ ಪಾತ್ರಕ್ಕೆ ವಿದಾಯ ಹೇಳುವ ಸಮಯವಿದು. ತುಂಬಾ ಕಷ್ಟವಾಗುತ್ತಿದೆ. ಶೂಟಿಂಗ್ನ ಕೊನೆಯ ದಿನವಂತೂ ತುಂಬಾ ಬೇಸರವಾಗಿತ್ತು. ಇದೊಂದು ಸುಂದರ ಅನುಭವ. ಈ ಅಂತ್ಯವನ್ನು ನೋಡಲು ನಿಮ್ಮ ಆತ್ಮ, ನಿಮ್ಮ ದೇಹ ಮತ್ತು ನಿಮ್ಮ ಮನಸ್ಸು ಸಿದ್ಧವಾಗಿಲ್ಲ" ಎಂದು ಬರೆದುಕೊಂಡಿದ್ದಾರೆ.

"ಕಳೆದ ಐದು ವರ್ಷಗಳಿಂದ ನಾನು ಸಾರ್ಥಕ್ ಪಾತ್ರಕ್ಕೆ ಜೀವ ತುಂಬುತ್ತಿದ್ದೇನೆ. ಪೋಷಕ ಪಾತ್ರವಾಗಿದ್ದರೂ ನಾಯಕನ ಪಾತ್ರದಷ್ಟೇ ಪ್ರಾಮುಖ್ಯತೆ ಸಾರ್ಥಕ್ ಪಾತ್ರಕ್ಕಿತ್ತು. ನಾನು ಇಂದು ಎತ್ತ ಹೋದರೂ ಕೂಡಾ ಜನ ನೀವು ಸಾರ್ಥಕ್ ಅಲ್ವಾ ಎಂದೇ ಗುರುತಿಸುತ್ತಾರೆ. ಇನ್ನು ಅನೇಕರು ಅದುವೇ ನನ್ನ ನಿಜವಾದ ಹೆಸರು ಎಂದು ಗ್ರಹಿಸಿದ್ದಾರೆ. ಅನೇಕರಿಗೆ ನಾನು ಗಿರೀಶ್ ಎಂಬುದು ಗೊತ್ತಿಲ್ಲ" ಎಂದು ಸಾರ್ಥಕ್ ಪಾತ್ರದ ಬಗ್ಗೆ ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ ಗಿರೀಶ್ ಬೆಟ್ಟಪ್ಪ.
"ಬರೋಬ್ಬರಿ ಐದು ವರ್ಷಗಳ ಈ ಸುಂದಯ ಜರ್ನಿ ಇದೀಗ ಮುಕ್ತಾಯಗೊಂಡಿದೆ. ಐದು ವರ್ಷಗಳ ಕಾಲ ಗಟ್ಟಿಮೇಳ ಧಾರಾವಾಹಿಯ ತಂಡದವರು ಕುಟುಂಬದವರ ಹಾಗೇ ಇದ್ದವು. ಈ ಐದು ವರ್ಷಗಳಲ್ಲಿ ಒಂದೇ ಒಂದು ಸಲವೂ ಯಾವ ಕಲಾವಿದರುಗಳ ಮಧ್ಯೆ ಮನಸ್ತಾಪವಾಗಿಲ್ಲ, ಜಗಳವಾಗಿಲ್ಲ. ಎಲ್ಲರೂ ಪರಸ್ಪರ ಹೊಂದಾಣಿಕೆಯಿಂದ ಇದ್ದೆವು" ಎಂದು ಸಹಕಲಾವಿದರ ಭಾಂದವ್ಯದ ಬಗ್ಗೆ ಹೇಳಿಕೊಂಡಿದ್ದಾರೆ ಗಿರೀಶ್ ಬೆಟ್ಟಪ್ಪ.

"ಅಂದ ಹಾಗೇ ಗಟ್ಟಿಮೇಳ ಧಾರಾವಾಹಿಯು ಮುಕ್ತಾಯಗೊಂಡಿದೆ ಎಂಬ ಬೇಸರ ಒಂದೆಡೆ. ಇದರ ಜೊತೆಗೆ ಇನ್ನು ನಮ್ಮ ಸಹಕಲಾವಿದರುಗಳ, ತಂಡದ ಭೇಟಿಯಾಗುವುದು ಕಷ್ಟ ಎಂಬ ಬೇಸರ ಇನ್ನೊಂದೆಡೆ. ಯಾವುದೇ ಅಂತ್ಯ ಆಗಲಿ, ಅದು ಮತ್ತೊಂದು ಹೊಸತರ ಆರಂಭಕ್ಕೆ ಮುನ್ನುಡಿ ಎಂದು ನಾನು ಭಾವಿಸಿದ್ದೇನೆ" ಎಂದು ಫಿಲ್ಮಿಬೀಟ್ ಜೊತೆಗೆ ಮಾತನಾಡುವಾಗ ಹಂಚಿಕೊಂಡಿದ್ದಾರೆ ಗಿರೀಶ್ ಬೆಟ್ಟಪ್ಪ.
ಅಂದ ಹಾಗೇ ಗಿರೀಶ್ ಬೆಟ್ಟಪ್ಪ ಅವರ ಬಣ್ಣದ ನಂಟು ಶುರುವಾಗಿದ್ದು ರಂಗಭೂಮಿಯ ಮೂಲಕ. ರಂಗಭೂಮಿಯಲ್ಲಿ ಸಾಕಷ್ಟು ಪಳಗಿದ ಅವರು ತದ ನಂತರ ಕಾಲಿಟ್ಟದ್ದು ಕಿರುತೆರೆಗೆ. ಗಟ್ಟಿಮೇಳ ಧಾರಾವಾಹಿಯ ಜೊತೆಗೆ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಗಿರೀಶ್ ಅವರು ಸ್ಯಾಂಡಲ್ವುಡ್ನಲ್ಲೂ ಮಿಂಚಿದ ಪ್ರತಿಭೆ. 'ಬಡವ ರಾಸ್ಕಲ್', 'ದಿಲ್ ಪಸಂದ್' ಸಿನಿಮಾಗಳ ಮೂಲಕ ಹಿರಿತೆರೆಯಲ್ಲಿ ನಟನಾ ಕಂಪನ್ನು ಗಿರೀಶ್ ಬೆಟ್ಟಪ್ಪ ಪಸರಿಸಿದ್ದಾರೆ. ಇದರ ಜೊತೆಗೆ "ನಗುವ ಹೂಗಳ ಮೇಲೆ" ಸಿನಿಮಾ ಬಿಡುಗಡೆಯಾಗಬೇಕಿದೆ.


Click it and Unblock the Notifications











