ದೇವರಿದ್ದಾನೆ ಹುಷಾರು, ನಿಮ್ಮ ಸಂಸಾರವನ್ನು ಖಂಡಿತ ಬಿಡಲ್ಲ, ನಾಶ ಮಾಡ್ತಾನೆ; ದಿಲೀಪ್ ರಾಜ್ ಪತ್ನಿ ಪೋಸ್ಟ್
ನಟ ದಿಲೀಪ್ ರಾಜ್ ವಿಧಿವಶರಾಗಿ 5 ದಿನ ಕಳೆದಿದೆ. ಆ ನೋವು ಮಾತ್ರ ಇನ್ನು ಕರಗಿಲ್ಲ. ಸೋಶಿಯಲ್ ಮೀಡಿಯಾ ತುಂಬೆಲ್ಲಾ ದಿಲೀಪ್ ರಾಜ್ ಫೋಟೊ, ವೀಡಿಯೋ ವೈರಲ್ ಆಗುತ್ತಲೇ ಇದೆ. ಅಂತಹ ಒಳ್ಳೆಯ ನಟ, ವ್ಯಕ್ತಿಯನ್ನು ದೇವರು ಇಷ್ಟು ಬೇಗ ಕರೆದುಕೊಂಡುಬಿಟ್ಟ ಎಂದು ಅಭಿಮಾನಿಗಳು, ಆಪ್ತರು ವಿಷಾದ ವ್ಯಕ್ತಪಡಿಸುತ್ತಲೇ ಇದ್ದಾರೆ. ಇನ್ನು ದಿಲೀಪ್ ರಾಜ್ ಮಡದಿ, ಮಕ್ಕಳ ದುಃಖ ಹೇಳ ತೀರದು.
ಬಹಳ ಚಿಕ್ಕ ವಯಸ್ಸಿನಲ್ಲೇ ದಿಲೀಪ್ ರಾಜ್ ಹಾಗೂ ಶ್ರೀವಿದ್ಯಾ ಪ್ರೀತಿಸಿ ಮದುವೆ ಆಗಿದ್ದರು. ಪೋಷಕರು ವಿರೋಧದ ನಡುವೆಯೂ ಒಂದಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುವುದರ ಜೊತೆಗೆ ತಮ್ಮದೇ ಸಂಸ್ಥೆ ಮೂಲಕ ಧಾರಾವಾಹಿಗಳನ್ನು ದಿಲೀಪ್ ರಾಜ್ ನಿರ್ಮಿಸುತ್ತಿದ್ದರು. ಅದಕ್ಕೆ ಪತ್ನಿ ಬೆಂಬಲವಾಗಿ ನಿಂತಿದ್ದರು. ಇತ್ತೀಚೆಗೆ ಬುಲೆಟ್ ಮೈಕ್ರೋ ಡ್ರಾಮಾ ಸೀರಿಸ್ ಕಟ್ಟಿಕೊಡುತ್ತಿದ್ದರು ದಿಲೀಪ್ ರಾಜ್.

ಪತಿ ಅಗಲಿಕೆ ನೋವಿನಲ್ಲಿ ಶ್ರೀವಿದ್ಯಾ ಹಾಕಿರುವ ಪೋಸ್ಟ್ ಸಖತ್ ವೈರಲ್ ಆಗ್ತಿದೆ. ದೇವರನ್ನು ಶಪಿಸಿ ಅವರು ನೋವು ತೋಡಿಕೊಂಡಿದ್ದಾರೆ. "ನನಗೆ ಈಗ ಸದ್ಯದ ಪರಿಸ್ಥಿತಿಯಲ್ಲಿ ಏನನ್ನಿಸುತ್ತಿದೆಯೆಂದರೆ - ಒಂದು ಸಂಸಾರ ಹೇಗಿರಬೇಕು ಅಂದ್ರೆ, ಒಬ್ಬ ಗಂಡ ಹೆಂಡತಿಯನ್ನುಯಾವಾಗಲೂ ಹೊಡೀತಾ ಇರಬೇಕು, ಕುಡಿದು ಬಂದು ಗಲಾಟೆಮಾಡ್ತಾ ಇರಬೇಕು. ಒಬ್ಬ ಹೆಂಡತಿ ಯಾವಾಗಲೂ ಗಂಡನನ್ನೇ ದೂಷಿಸುತ್ತಾ ಇರಬೇಕು. ಮಕ್ಕಳು ತಂದೆ-ತಾಯಿಯನ್ನು ಗೌರವಿಸಬಾರದು. ತಂದೆ-ತಾಯಿಯೂ ಅಷ್ಟೇ, ಮಕ್ಕಳನ್ನು ಯಾವಾಗಲೂ ದೂಷಿಸುತ್ತಾ ಇರಬೇಕು.ಒಂದು ಮನೆಯಲ್ಲಿ ಶಾಂತಿ, ನೆಮ್ಮದಿ ಅನ್ನೋದೇ ಇರಬಾರದು. ಒಬ್ಬರು ಒಬ್ಬರು ಕಿತ್ತಾಡ್ಕೊಂಡೇ ಇರಬೇಕು. ಯಾಕೆಂದರೆ ದೇವರಿದ್ದಾನೆ, ಹುಷಾರಾಗಿರಿ. ಯಾರ ಮನೆ ಚೆನ್ನಾಗಿದೆ, ಯಾರ ಮನೆಯಲ್ಲಿ ಯಾವಾಗಲೂ ನಗು ಇರುತ್ತದೆ, ಯಾರು ತುಂಬಾ ಖುಷಿಯಿಂದ ಬದುಕುತ್ತಿರ್ತಾರೋ ಅಂಥವರ ಮನೆಯ ಮೇಲೆ ಅವನಿಗೆ ಯಾವಾಗಲೂ ಕಣ್ಣು ಇರುತ್ತದೆ. ದೇವರಿದ್ದಾನೆ, ಹುಷಾರಾಗಿರಿ" ಎಂದು ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ.
ದೇವರು ಸುಖ- ಶಾಂತಿ ಸಂತೋಷ ತುಂಬಿದ ಸಂಸಾರವನ್ನೇ ದೇವರು ಗುರಿಯಾಗಿಸಿ ಶಿಕ್ಷಿಸುತ್ತಾನೆ ಎನ್ನುವ ಅರ್ಥದಲ್ಲಿ ಶ್ರೀವಿದ್ಯಾ ಪೋಸ್ಟ್ ಮಾಡಿದ್ದಾರೆ. "ನಿಮ್ಮ ಸಂಸಾರವನ್ನು ಖಂಡಿತವಾಗಿಯೂ ಬಿಡುವುದಿಲ್ಲ. ಖಂಡಿತ ನಾಶ ಮಾಡದೆ ಬಿಡುವುದಿಲ್ಲ. ದೇವರಿದ್ದಾನೆ, ಹುಷಾರಾಗಿರಿ" ಎಂದು ಬೇಸರ, ನೋವು, ಆಕ್ರೋಶ ಹೊರ ಹಾಕಿದ್ದಾರೆ. ಏನೇನೊ ಸಮಸ್ಯೆಗಳಿರುವ ಸಂಸಾರಗಳು ಚೆನ್ನಾಗಿಯೇ ಇದೆ. ಆದರೆ ನೆಮ್ಮದಿ ನಗು ತುಂಬಿದ್ದ ನಮ್ಮ ಸಂಸಾರದ ಮೇಲೆ ದೇವರ ಕಣ್ಣು ಬಿತ್ತು, ಅದು ಹೀಗಾಯ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಾಲೇಜಿನಲ್ಲಿ ದಿಲೀಪ್ ರಾಜ್ ಅವರಿಗೆ ಶ್ರೀವಿದ್ಯಾ ಅಭಿಮಾನಿ ಆಗಿದ್ದರು. ಸ್ನೇಹಿತರ ಮೂಲಕ ಈ ವಿಚಾರ ಗೊತ್ತಾಗಿ ಆಕೆಯನ್ನು ಕರೆದು ಮಾತನಾಡಿಸಿದ್ದರಂತೆ. ದಿನ ಬಂದು ನನ್ನ ಜೊತೆ ಮಾತನಾಡಿ ಹೋಗಬೇಕು ಎಂದಿದ್ದರಂತೆ. ಶ್ರೀವಿದ್ಯಾ ಅವರ ಗುಣಕ್ಕೆ ದಿಲೀಪ್ ರಾಜ್ ಮಾರು ಹೋಗಿದ್ದರು. ನೀನೇ ನನ್ನ ಬಾಳ ಸಂಗಾತಿ ಎಂದು ಒಪ್ಪಿಕೊಂಡಿದ್ದರು. ಮದುವೆಯಾದ ಹೊಸತರಲ್ಲಿ ಸಿನಿಮಾ ನಂಬಿಕೊಂಡು ನಟಿಸುತ್ತಿದ್ದ ಧಾರಾವಾಹಿ ಬಿಟ್ಟಿದ್ದರು ದಿಲೀಪ್ ರಾಜ್. ಎರಡೂವರೆ ವರ್ಷಗಳ ಕಾಲ ಯಾವುದೇ ಆದಾಯ ಇರಲಿಲ್ಲ. ಆಗ ಪತ್ನಿ ಶ್ರೀವಿದ್ಯಾ ಕೆಲಸಕ್ಕೆ ಹೋಗಿ ಮನೆ ನಿಭಾಯಿಸಿದ್ದರು. ಅದನ್ನು ದಿಲೀಪ್ ರಾಜ್ ಕೊನೆಯವರೆಗೂ ಮರೆತ್ತಿರಲಿಲ್ಲ. 'ಧೈರ್ಯವಾಗಿರಿ ಮೇಡಂ' ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಇತ್ತೀಚೆಗೆ ಮಗಳು ಧೃತಿ ಕೂಡ ಅಪ್ಪನ ಬಗ್ಗೆ ಭಾವುಕವಾಗಿ ಪೋಸ್ಟ್ ಮಾಡಿದ್ದರು. "ನಾನು ಭೇಟಿಯಾದವರಲ್ಲಿ ನೀನು ಬಹಳ ಗ್ರೇಟ್. ನನ್ನ ಜೀವನದ 16 ವರ್ಷಗಳಿಂದ ನೀನು ಗೊತ್ತು, ನೀನು ಇಲ್ಲದೆ ನಾನು ನಟಿಯಾಗುವುದು ಹೇಗೆ ಎಂದು ನನಗೆ ಊಹಿಸಲೂ ಸಾಧ್ಯವಿಲ್ಲ. ನಾನು ಹೇಳಲು ಸಾಧ್ಯವಾಗದಷ್ಟು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಎಂದಾದರೂ ನಟಿಯಾಗಿ ಬೆಳೆದರೆ ನಿನ್ನ ಹೆಸರನ್ನು ನನ್ನೊಂದಿಗೆ ತೆಗೆದುಕೊಂಡು ಹೋಗುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ. ನಮ್ಮಿಬ್ಬರ ಹೆಸರಿನ ಮೊದಲ DR (ದಿಲೀಪ್ ರಾಜ್, ಧೃತಿ ರಾಜ್) ಅಕ್ಷರಗಳು ಒಂದೇ. ನಿನ್ನ ಮರೆಯಲ್ಲ ಅಪ್ಪಾ" ಎಂದು ಬರೆದುಕೊಂಡಿದ್ದರು.


Click it and Unblock the Notifications