ಗೋಲ್ಡನ್ ಗ್ಯಾಂಗ್: 'ಮುಂಗಾರು ಮಳೆ' ಟೀಂನಲ್ಲಿ ಜಗಳ, ಪತ್ನಿ ಬಗ್ಗೆಯೂ ಗಣೇಶ್ ಮಾತು
ಕಿರುತೆರೆಯಿಂದಲೇ ಸ್ಟಾರ್ ಆಗಿ ಬೆಳೆದ ಗೋಲ್ಡನ್ ಸ್ಟಾರ್ ಗಣೇಶ್ ಆಗಾಗ್ಗೆ ಕಿರುತೆರೆಗೆ ಬರುತ್ತಲೇ ಇರುತ್ತಾರೆ. ಕಾಮಿಡಿ ಟೈಂನಿಂದ ಮನರಂಜನಾ ಕ್ಷೇತ್ರಕ್ಕೆ ಕಾಲಿಟ್ಟ ಗಣೇಶ್ ಈಗಾಗಲೇ ಕೆಲವು ಜನಪ್ರಿಯ ಟಿವಿ ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿದ್ದಾರೆ. ಇದೀಗ ಹೊಸ ಶೋ ಜೊತೆಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
'ಗೋಲ್ಡನ್ ಗ್ಯಾಂಗ್' ಹೆಸರಿನ ಹೊಸ ಶೋ ಜೊತೆಗೆ ನಟ ಗಣೇಶ್ ಮತ್ತೆ ಕಿರುತೆರೆಗೆ ಬಂದಿದ್ದಾರೆ. ಇಷ್ಟು ದಿನ ಜನರೊಟ್ಟಿಗೆ ಆಟವಾಡಿ ಅವರಿಗೆ ಹಣ ನೀಡುತ್ತಿದ್ದ ಗಣೇಶ್ ಈ ಬಾರಿ ಗೆಳೆತನದ ಮಹತ್ವವನ್ನು ಕಿರುತೆರೆಯ ಮೂಲಕ ಸಾರಲು ಹೊರಟಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಗಣೇಶ್ ನಡೆಸಿಕೊಡುವ 'ಗೋಲ್ಡನ್ ಗ್ಯಾಂಡ್' ಶೋ ಪ್ರಸಾರವಾಗಲಿದೆ. ಈ ಶೋ ನನ್ನ ಗೆಳೆಯರೇ ಗೆಳೆಯರಿಗೋಸ್ಕರ ಮಾಡಿದ್ದಾರೆ ಎಂದು ಗಣೇಶ್ ಹೇಳಿದ್ದಾರೆ. ತಮ್ಮ ಜೀವನದ ಗೆಳೆಯರ ಬಗ್ಗೆ ಅವರೊಟ್ಟಿಗಿನ ಜಗಳ, ಪ್ರೀತಿ, ಕಷ್ಟ-ಸುಖಗಳ ಬಗ್ಗೆ ನಟ ಗಣೇಶ್ ಮಾತನಾಡಿದ್ದಾರೆ.

ಶೋ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ನಟ ಗಣೇಶ್, ''ಗೆಳೆತನದಲ್ಲಿ ಮನಸ್ತಾಪಗಳು ಇದ್ದೇ ಇರುತ್ತವೆ. ಮನಸ್ತಾಪ ಮುಗಿದು ಮತ್ತೆ ಗೆಳೆತನ ಮರುಸ್ಥಾಪಿತವಾದಾಗ ಅದು ಹಿಂದಿಗಿಂತಲೂ ಗಟ್ಟಿಯಾಗಿರುತ್ತದೆ'' ಎಂದಿದ್ದಾರೆ. ಅದಕ್ಕೆ ಉದಾಹರಣೆಯಾಗಿ 'ಮುಂಗಾರು ಮಳೆ' ತಂಡದವರ ನಡುವೆ ಆದ ಮನಸ್ಥಾಪವನ್ನೇ ಉದಾಹರಣೆಯಾಗಿ ನೀಡಿದ್ದಾರೆ.
'ಮುಂಗಾರು ಮಳೆ' ಸಿನಿಮಾಕ್ಕೆ ಮುಂಚೆಯಿಂದಲೇ ಯೋಗರಾಜ್ ಭಟ್, ನಾನು, ಪ್ರೀತಂ ಗುಬ್ಬಿ ಎಲ್ಲ ಗೆಳೆಯರಾಗಿದ್ದೆವು. ಆದರೆ ಸಿನಿಮಾ ಮುಗಿದ ಬಳಿಕ ನನಗೂ ಪ್ರೀತಂ ಗುಬ್ಬಿಗೂ ಮನಸ್ತಾಪ ಆಗಿಬಿಟ್ಟಿತು. ನಾನು, ಪ್ರೀತಂ ಗುಬ್ಬಿ ಮಾತನಾಡುವುದನ್ನು ಬಿಟ್ಟುಬಿಟ್ಟೆವು. ಆದರೆ ಬಳಿಕ ನಾವು ಒಂದಾದೆವು. ಇಂಥಹಾ ಅನೇಕ ವಿಷಯಗಳನ್ನು ನಾನು ಆ ಶೋನಲ್ಲಿ ಹಂಚಿಕೊಂಡಿದ್ದೇನೆ'' ಎಂದು ಗಣೇಶ್ ಹೇಳಿದರು.
ಪತ್ನಿ ಶಿಲ್ಪಾ ಬಗ್ಗೆಯೂ ಮಾತನಾಡಿರುವ ಗಣೇಶ್, ''ನಾನು, ಶಿಲ್ಪಾ ಸಹ ಕೂಡ ಸ್ನೇಹಿತರಾಗಿದ್ದೆವು, ನಂತರ ನಾವು ಪ್ರೀತಿ ಮಾಡಿ ವಿವಾಹವಾದೆವು. ನಮ್ಮಿಬ್ಬರ ಸ್ನೇಹದ ಬಗ್ಗೆಯೂ ಶೋನಲ್ಲಿ ಮಾತನಾಡಿದ್ದೇನೆ. ಹೀಗೆ ಹಲವು ವಿಷಯಗಳ ಬಗ್ಗೆ ನಾನು ಶೋನಲ್ಲಿ ಮಾತನಾಡಿದ್ದೇನೆ'' ಎಂದಿದ್ದಾರೆ ಗಣೇಶ್.
''ಗೋಲ್ಡನ್ ಗ್ಯಾಂಗ್' ಶೋ ಸ್ನೇಹಿತರು ಸೇರಿ ಸ್ನೇಹಕ್ಕಾಗಿ ಮಾಡಿದ ಶೋ. ಈ ಶೋಗೆ ಮುನ್ನ ಸುಮಾರು 100 ದಿನಗಳ ಕಾಲ ನಾವು ಚರ್ಚೆ ಮಾಡಿ ಯಾವ ಕಾರ್ಯಕ್ರಮವನ್ನು ಕಿರುತೆರೆಯಲ್ಲಿ ಮಾಡಬೇಕು, ಮಾಡಿದರೆ ಕಾರ್ಯಕ್ರಮದ ರೂಪು-ರೇಷೆ ಹೇಗಿರಬೇಕು ಎಂಬಿತ್ಯಾದಿ ವಿಷಯಗಳನ್ನು ಚರ್ಚೆ ಮಾಡಿ ಸ್ನೇಹದ ಬಗ್ಗೆ ಶೋ ಮಾಡಲು ನಿಶ್ಚಯಿಸಿದೆವು'' ಎಂದಿದ್ದಾರೆ ಗಣೇಶ್.
''ನಾನು ವೃತ್ತಿ ಜೀವನ ಆರಂಭಿಸಿದ್ದೇ ಕಿರುತೆರೆ ಮೂಲಕ, ಮೂರು ನಮಸ್ಕಾರದ ಮೂಲಕವೇ ನನ್ನ ಕಿರುತೆರೆ ಜರ್ನಿ ಆರಂಭವಾಯಿತು. ನನಗೂ ಕಿರುತೆರೆಗೂ ಭಾವನಾತ್ಮಕ ನಂಟಿದೆ. ಕಿರುತೆರೆ ಮೂಲಕ ಕುಟುಂಬದ ಎಲ್ಲರಿಗೂ ಮನರಂಜನೆ ನೀಡಲು ಸಾಧ್ಯ. ಎಲ್ಲ ವಯೋಮಾನದವರಿಗೂ ಮನರಂಜನೆ ನೀಡುವ ಖುಷಿ ಸಿಗುತ್ತದೆ'' ಎಂದಿದ್ದಾರೆ ಗಣೇಶ್.


Click it and Unblock the Notifications











