BBK 11: ಯಾರಿಂದಲೂ ಹನುಮಂತನ ಗೆಲುವು ತಡೆಯೋಕ್ಕಾಗಲಿಲ್ಲ; ಕೊನೆಗೂ ಬಿಗ್ಬಾಸ್ ಮೆಚ್ಚಿದ ವೀಕ್ಷಕರು
ಅಭಿಮಾನಿಗಳ ನಿರೀಕ್ಷೆಯಂತೆ ಹನುಮಂತ ಬಿಗ್ಬಾಸ್ ಕನ್ನಡ ಸೀಸನ್ 11 ಟ್ರೋಫಿ ಎತ್ತಿ ಹಿಡಿದಿದ್ದಾನೆ. ಘಟಾನುಘಟಿ ಸ್ಪರ್ಧಿಗಳನ್ನು ಹಿಂದಿಕ್ಕಿ ಗೆಲುವಿನ ನಗೆ ಬೀರಿದ್ದಾನೆ. ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಟ್ರೋಫಿ ಜೊತೆಗೆ 50 ಲಕ್ಷ ರೂ. ನಗದು ಬಹುಮಾನ ಮನೆಗೆ ತೆಗೆದುಕೊಂಡು ಹೋಗಿದ್ದಾನೆ.
ಹನುಮಂತ ಗೆಲುವನ್ನು ರಾಜ್ಯಾದ್ಯಂತ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಪಟಾಕಿ ಸಿಡಿಸಿ ಉತ್ತರ ಕರ್ನಾಟಕ ಹೈದನ ಗೆಲುವಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮೊದಲಿನಿಂದಲೂ ಬಿಗ್ಬಾಸ್ ಬಗ್ಗೆ ಒಂದು ಅಪವಾದ ಇದೆ. ಅರ್ಹರನ್ನು ಗೆಲ್ಲಿಸುವುದಿಲ್ಲ. ಚೆನ್ನಾಗಿ ಆಡಿದವರನ್ನು ಬಿಟ್ಟು ಯಾರನ್ನೋ ಗೆಲ್ಲಿಸುತ್ತಾರೆ, ಇಡೀ ಶೋ ಸ್ಕ್ರಿಪ್ಟೆಡ್ ಅಂತೆಲ್ಲಾ ಕೆಲವರು ಹೇಳುತ್ತಿರುತ್ತಾರೆ. ಆದರೆ ಈ ಬಾರಿ ಆ ರೀತಿ ಆಗಲಿಲ್ಲ ಎಂದು ಸಮಾಧಾನಪಡುತ್ತಿದ್ದಾರೆ.

ಲಾಯರ್ ಜಗದೀಶ್ ಹಾಗೂ ರಂಜಿತ್ ಶೋ ನಡುವೆ ಶಿಕ್ಷೆ ಅನುಭವಿಸಿ ಹೊರ ಬಂದಿದ್ದರು. ಹಾಗಾಗಿ ಹನುಮಂತ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಒಳಗೆ ಹೋಗಿದ್ದರು. ಜೀ ಕನ್ನಡ ವಾಹಿನಿ ಶೋಗಳಲ್ಲಿ ಮಿಂಚಿದ ಹನುಮಂತನಿಗೆ ಕಲರ್ಸ್ ಕನ್ನಡದಲ್ಲಿ ದೊಡ್ಡ ಅವಕಾಶ ಸಿಕ್ಕಿತ್ತು. ಅದನ್ನು ಸದುಪಯೋಗಪಡಿಸಿಕೊಂಡು ಕೊನೆಗೆ ಗೆದ್ದಿದ್ದಾರೆ.
ಹನುಮಂತ ಅಥವಾ ಉಗ್ರಂ ಮಂಜು ಗೆಲ್ಲುತ್ತಾರೆ ಎಂದು ಮೊನ್ನೆಯವರೆಗೆ ಬಹುತೇಕರು ಭಾವಿಸಿದ್ದರು. ಆದರೆ ಮಂಜು ಹೊರ ಬಂದಮೇಲೆ ತ್ರಿವಿಕ್ರಮ್ ಗೆಲ್ಲಬಹುದು ಎಂದು ಕೆಲವರು ಊಹಿಸಿದ್ದರು. ಕಾರಣ ಹನುಮಂತ ವೈಲ್ಡ್ ಕಾರ್ಡ್ ಎಂಟ್ರಿ. ಆದರೆ ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿಸಿ ಹನುಮಂತ ಗೆದ್ದಿದ್ದಾನೆ. ತನ್ನ ಮುಗ್ಧತೆ, ಹಾಡುಗಾರಿಕೆಯಿಂದ ಬಡ್ನಿ ಹೈದ ಮನೆಯೊಳಗೆ ಗಮನ ಸೆಳೆದಿದ್ದ.
ನೋಡಲು ಅಮಾಯಕನಂತೆ ಕಂಡಲೂ ಬಹಳ ಬುದ್ಧಿವಂತ ಹನುಮಂತ ಅಂತ ಕೆಲ ಸ್ಪರ್ಧಿಗಳು ಹೇಳುತ್ತಾ ಬಂದಿದ್ದರು. ತನ್ನ ಆಟದ ಮೂಲಕ ಅದನ್ನು ಹನುಮಂತ ತೋರಿಸುತ್ತಾ ಬಂದಿದ್ದರು. ಜೊತೆಗೆ ಅಭಿಮಾನಿಗಳ ವೋಟ್ ಮಾಡಿ ಗೆಲ್ಲಿಸಿದ್ದಾರೆ. ಮತಗಳ ಅಂತರ ಕಮ್ಮಿ ಇದ್ದಾಗ ಬೇರೆಯವರನ್ನು ಗೆಲ್ಲಿಸಿಬಿಡಬಹುದೇನೋ, ಆದರೆ 2 ಸ್ಥಾನ ಪಡೆದ ಸ್ಪರ್ಧಿಗಿಂತ ಎರಡರಷ್ಟು ಮತಗಳನ್ನು ಪಡೆದ ಹನುಮಂತನ ಗೆಲುವನ್ನು ಯಾರಿಂದಲೂ ತಡೆಯೋಕೆ ಸಾಧ್ಯವಾಗಿಲ್ಲ.
ಅಂದಹಾಗೆ ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ತಾಂಡಾದ ನಿವಾಸಿ ಹನುಮಂತ ಲಮಾಣಿ. ತನ್ನ ಗಾಯನದಿಂದ ಗಮನ ಸೆಳೆದಿದ್ದ ಆತ ಜೀ ಕನ್ನಡದ 'ಸರಿಗಮಪ' ಸೀಸನ್ 15ರ ಸ್ಪರ್ಧಿಯಾಗಿ ಇಡೀ ರಾಜ್ಯಕ್ಕೆ ಪರಿಚಿತರಾಗಿದ್ದರು. ಭಜನೆ ಹಾಡುಗಳನ್ನು ಚಿಕ್ಕಂದಿನಿಂದ ಹಾಡುತ್ತಿದ್ದ ಹನುಮಂತ ಬಳಿಕ ಕುರಿ ಮೇಯಿಸಲು ಹೋಗುತ್ತಿದ್ದಾಗ ಹಾಡುತ್ತಾ ಅಭ್ಯಾಸ ಮಾಡಿದ್ದರು. ಅದು ಇಂದು ಅವರನ್ನು ಇಲ್ಲಿಗೆ ಕರೆತಂದು ನಿಲ್ಲಿಸಿದೆ.
ಬಿಗ್ಬಾಸ್ 11 ಫಿನಾಲೆಗೆ ಮೊದಲು ಟಿಕೆಟ್ ಪಡೆದಿದ್ದು ಕೂಡ ಹನುಮಂತ. ಮಂಜು, ತ್ರಿವಿಕ್ರಮ್ ರೀತಿಯ ಪ್ರಬಲ ಸ್ಪರ್ಧಿಗಳನ್ನು ಹಿಂದಿಕ್ಕಿ ಜವಾರಿ ಹೈದ ಗೆದ್ದು ಬೀಗಿದ್ದಾರೆ. ಹನುಮಂತ ಬಿಗ್ಬಾಸ್ ಮನೆಗೆ ಬಂದಿದ್ದೇ ಆಕಸ್ಮಿಕ. ಜಗದೀಶ್ ಹಾಗೂ ರಂಜಿತ್ ಅಷ್ಟು ಬೇಗ ಮನೆಯಿಂದ ಹೊರಗೆ ಬರದೇ ಇದ್ದಿದ್ದರೆ ವೈಲ್ಡ್ ಕಾರ್ಡ್ ಎಂಟ್ರಿ ಸಿಗುತ್ತಿರಲಿಲ್ಲ.
ವೋಟ್ ವಿಚಾರಕ್ಕೆ ಬಂದರೆ ಸಾಕಷ್ಟು ಜನ ಹಳ್ಳಿ ಹೈದ ಗೆಲ್ಲಬೇಕು ಎಂದು ವೋಟ್ ಮಾಡಿದ್ದರು. ಅದರಲ್ಲೂ ಉತ್ತರ ಕರ್ನಾಟಕದ ಮಂದಿ ದೊಡ್ಡಮಟ್ಟದಲ್ಲಿ ಬೆಂಬಲ ಸೂಚಿಸಿರುವುದು ಗೊತ್ತಾಗುತ್ತಿದೆ. ಕಳೆದ ಸೀಸನ್ ವಿನ್ನರ್ ಎರಡೂವರೆ ಕೋಟಿ ವೋಟ್ ಸಿಕ್ಕಿತ್ತು. ಈ ಬಾರಿ ರನ್ನರ್ ಅಪ್ ತ್ರಿವಿಕ್ರಮ್ಗೆ ಅಷ್ಟು ಮತಗಳು ಸಿಕ್ಕಿದೆ. ಅದಕ್ಕಿಂತ ಎರಡು ಪಟ್ಟು ಹನುಮಂತನ ಪಾಲಾಗಿದೆ.


Click it and Unblock the Notifications











