'ಜಂಗಲ್ ಮಂಗಲ್' ಮೂಲಕ ಮತ್ತೆ ಸಿನಿಮಾಗೆ ಕಾಲಿಟ್ಟ ಕನ್ನಡತಿ; ಹರ್ಷಿತಾ ರಾಮಚಂದ್ರ ಬಗ್ಗೆ ನಿಮಗೇನು ಗೊತ್ತು?
'ಅವನು ಮತ್ತು ಶ್ರಾವಣಿ' ಧಾರಾವಾಹಿಯಲ್ಲಿ ನಾಯಕ ಅಭಿಮನ್ಯುವಿನ ತಂಗಿ ಆದ್ಯಾ ಪಾತ್ರದಲ್ಲಿ ಅಭಿನಯಿಸುತ್ತಿರುವ ಕಿರುತೆರೆ ನಟಿ ಹರ್ಷಿತಾ ರಾಮಚಂದ್ರ ಇದೀಗ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ರಕ್ಷಿತ್ ಕುಮಾರ್ ನಿರ್ದೇಶನದ 'ಜಂಗಲ್ ಮಂಗಲ್' ಸಿನಿಮಾದಲ್ಲಿ ಹರ್ಷಿತಾ ರಾಮಚಂದ್ರ ನಾಯಕಿಯಾಗಿ ಅಭಿನಯಿಸಿದ್ದಾರೆ. ಈಗಾಗಲೇ 'ಜಂಗಲ್ ಮಂಗಲ್' ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಶೀಘ್ರದಲ್ಲಿ ಸಿನಿಮಾ ತೆರೆ ಕಾಣಲಿದೆ.
ಅಂದ ಹಾಗೇ 'ಜಂಗಲ್ ಮಂಗಲ್' ಸಿನಿಮಾ ಅರೆ ಮಲೆನಾಡಿನಲ್ಲಿ ನಡೆಯುವ ಪ್ರೇಮ ಕಥೆಯಾಗಿದೆ. ಇನ್ನು ಚಿತ್ರದ ಅರ್ಧಕ್ಕೂ ಹೆಚ್ಚಿನ ಭಾಗದ ಚಿತ್ರೀಕರಣ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ಆಸುಪಾಸಿನ ಕಾಡಿನಲ್ಲಿ ನಡೆದಿರುವುದು ವಿಶೇಷ. ಯಶ್ ಶೆಟ್ಟಿ, ಹರ್ಷಿತಾ ರಾಮಚಂದ್ರ ಹೊರತಾಗಿ ಉಗ್ರಂ ಮಂಜು ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಯಶ್ ಶೆಟ್ಟಿ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ಹರ್ಷಿತಾ ರಾಮಚಂದ್ರ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಂದ ಹಾಗೇ ದಿವ್ಯಾ ಎನ್ನುವ ಪಾತ್ರದಲ್ಲಿ ಹರ್ಷಿತಾ ಅವರು ಅಭಿನಯಿಸುತ್ತಿದ್ದು ಜವಾಬ್ದಾರಿಯುತ ಕರಾವಳಿಯ ಹೆಣ್ಣು ಮಗಳಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಜವಾಬ್ದಾರಿ ಇಲ್ಲದ ಹುಡುಗನನ್ನು ಪ್ರೀತಿಸಿರುವ ಈಕೆಗೆ ಇರುವುದೇ ಎರಡು ಆಯ್ಕೆ. ಒಂದು ಕಡೆ ಕುಟುಂಬವಾದರೆ, ಇನ್ನೊಂದು ಕಡೆ ಪ್ರೀತಿ. ನಾಯಕಿ ದಿವ್ಯಾ ಯಾವುದನ್ನು ಆಯ್ಕೆ ಮಾಡುತ್ತಾಳೆ ಎಂಬುದು ಸಿನಿಮಾ ನೋಡಿದ ಬಳಿಕವಷ್ಟೆ ತಿಳಿಯಬೇಕಿದೆ.
'ಅವನು ಮತ್ತು ಶ್ರಾವಣಿ' ಧಾರಾವಾಹಿಯಲ್ಲಿ ಆದ್ಯಾಳಾಗಿ ನಟಿಸುತ್ತಿರುವ ಹರ್ಷಿತಾ ರಾಮಚಂದ್ರ ಕಿರುತೆರೆಗೆ ಪೋಷಕ ಪಾತ್ರದ ಮೂಲಕ ಕಾಲಿಟ್ಟಿದ್ದು, ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದ್ದಾರೆ. ಅಂದ ಹಾಗೇ ಹರ್ಷಿತಾ ರಾಮಚಂದ್ರ ಅವರ ನಟನಾ ಪಯಣ ಶುರುವಾಗಿದ್ದು 'ಕನ್ನಡತಿ' ಧಾರಾವಾಹಿಯ ಮೂಲಕ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಕನ್ನಡತಿ' ಧಾರಾವಾಹಿಯಲ್ಲಿ ಪತ್ರಕರ್ತೆ ಪೂಜಾಳಾಗಿ ಈಕೆ ನಟಿಸಿದ್ದರು.
ಅಂದ ಹಾಗೇ ಪೂಜಾ ಪಾತ್ರ ಸಂಪೂರ್ಣ ನೆಗೆಟಿವ್ ರೋಲ್ ಎಂದು ಹೇಳಿದರೆ ತಪ್ಪಾಗಲಾರದು. ಮೊದಲ ಧಾರಾವಾಹಿಯಲ್ಲಿಯೇ ಖಳನಾಯಕಿಯಾಗಿ ಅಭಿನಯಿಸಿರುವ ಹರ್ಷಿತಾ ರಾಮಚಂದ್ರ ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆದಿರುವ ಬೆಡಗಿ. ಇದೀಗ ಆದ್ಯಾ ಪಾತ್ರಕ್ಕೆ ಜೀವ ತುಂಬುತ್ತಿರುವ ಈಕೆ ಇಂಜಿನಿಯರಿಂಗ್ ಪದವೀಧರೆ ಹೌದು.

ನಟನೆಯ ಹೊರತಾಗಿ ಹರ್ಷಿತಾ ರಾಮಚಂದ್ರ ಅವರು ನಿರೂಪಕಿಯಾಗಿಯೂ ಗುರುತಿಸಿಕೊಂಡಿರುವ ಬೆಡಗಿ. ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿರುವ ಈಕೆ ಹತ್ತು ಹಲವು ಈವೆಂಟ್ಗಳ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಂದ ಹಾಗೇ ಹರ್ಷಿತಾ ಅವರಿಗೆ ಸಿನಿಮಾ ಹೊಸದೇನಲ್ಲ. ಈ ಹಿಂದೆ 'ಗಜಾನನ ಅಂಡ್ ಗ್ಯಾಂಗ್' ಸಿನಿಮಾದಲ್ಲಿ ಈಕೆ ಅಭಿನಯಿಸಿದ್ದರು.


Click it and Unblock the Notifications











