ಪತ್ನಿ-ಸೊಸೆ ಮೇಲೆ ಆಸಿಡ್ ದಾಳಿ: ದೇಶದ ಜನತೆಗೆ ಗೊತ್ತಿಲ್ಲದ ಸತ್ಯ ಹೇಳಿದ ದೇವೇಗೌಡ.!
ಅದು ಫೆಬ್ರವರಿ 21, 2001... ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನಲ್ಲಿ ಇರುವ ಈಶ್ವರ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಬರುವಾಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪತ್ನಿ ಚನ್ನಮ್ಮ ಹಾಗೂ ಸೊಸೆ ಭವಾನಿ (ಎಚ್.ಡಿ.ರೇವಣ್ಣ ಪತ್ನಿ) ಮೇಲೆ ಆಸಿಡ್ ದಾಳಿ ನಡೆಯಿತು.
ಎಚ್.ಡಿ.ದೇವೇಗೌಡ ರವರ ತಮ್ಮನ ಮಗನೇ ಆಸಿಡ್ ಎರಚಿದ್ದರಿಂದ, ಕೌಟುಂಬಿಕ ವೈಷಮ್ಯವೇ ಈ ಆಸಿಡ್ ದಾಳಿಗೆ ಕಾರಣ ಎಂಬ ವರದಿಗಳು ದಿನಪತ್ರಿಕೆಗಳಲ್ಲಿ ವರದಿ ಆದವು. ಆದ್ರೆ, ಇದರ ಹಿಂದೆ ರಾಜಕೀಯ ಮುಖಂಡರ ಪ್ರೇರಣೆ ಇತ್ತು ಎಂದು ಎಚ್.ಡಿ.ದೇವೇಗೌಡ ಬಾಯಿಬಿಟ್ಟಿದ್ದಾರೆ.
ಆಸಿಡ್ ಎರಚಿದ ಪ್ರಕರಣದಲ್ಲಿ ಲೋಕೇಶ್ (ಎಚ್.ಡಿ.ದೇವೇಗೌಡ ತಮ್ಮನ ಮಗ) ಅಪರಾಧಿ ಎಂದು ಸಾಬೀತಾಗಿ ನ್ಯಾಯಾಲಯ ಎಂಟು ವರ್ಷ ಜೈಲು ಶಿಕ್ಷೆ ವಿಧಿಸಿತು. ಇನ್ನೂ ನಾಲ್ಕುವರೆ ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿದ್ದರೂ, ತಮ್ಮನ ಆರೋಗ್ಯ ಸ್ಥಿತಿ ಕಂಡು ಹೈಕೋರ್ಟ್ ನ್ಯಾಯಮೂರ್ತಿ ರವರ ಬಳಿ ಮನವಿ ಮಾಡಿ ಲೋಕೇಶ್ ರನ್ನ ಎಚ್.ಡಿ.ದೇವೇಗೌಡ ಬಿಡುಗಡೆ ಮಾಡಿಸಿದರಂತೆ.
ದೇಶದ ಜನತೆಗೆ ಗೊತ್ತಿಲ್ಲದ ಈ ವಿಚಾರವನ್ನ ಎಚ್.ಡಿ.ದೇವೇಗೌಡ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಜಗಜ್ಜಾಹೀರುಗೊಳಿಸಿದರು. ಮುಂದೆ ಓದಿರಿ...

ಪತ್ನಿ ಚನ್ನಮ್ಮ ಬಗ್ಗೆ ಎಚ್.ಡಿ.ದೇವೇಗೌಡ ಮನದಾಳ
''ಮದುವೆ ಮಾಡಿಕೊಂಡ ಮೇಲೆ ನಾನು ಇಷ್ಟು ಎತ್ತರಕ್ಕೆ ಬಂದಿದ್ರೆ, ನನ್ನ ಪತ್ನಿಯ ಸಹಕಾರ ಕಾರಣ'' ಎಂದು ಪತ್ನಿ ಚನ್ನಮ್ಮ ಬಗ್ಗೆ ಮಾತನಾಡಲು ಆರಂಭಿಸಿದ ಎಚ್.ಡಿ.ದೇವೇಗೌಡ 'ಆಸಿಡ್ ದಾಳಿ' ಪ್ರಕರಣದ ಬಗ್ಗೆಯೂ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮಾತನಾಡಿದರು.

ತಮ್ಮನ ಮಗನೇ ಆಸಿಡ್ ಹಾಕಿದ್ದು.!
''ನನ್ನ ತಮ್ಮನ ಮಗನೇ ಆಸಿಡ್ ಹಾಕಿದ್ದು. ಅದಕ್ಕೆ ರಾಜಕೀಯ ಮುಖಂಡರ ಪ್ರೇರಣೆ ಇತ್ತು'' ಎಂದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಎಚ್.ಡಿ.ದೇವೇಗೌಡ ಹೇಳಿದರು.

ಮಗನ ಮೇಲೆ ಆಸಿಡ್ ಹಾಕಬೇಕಿತ್ತು
''ನನ್ನ ಮಗನ ಮೇಲೆ (ಎಚ್.ಡಿ.ರೇವಣ್ಣ) ಮೇಲೆ ಆಸಿಡ್ ಹಾಕಬೇಕು ಎಂದು ಪ್ಲಾನ್ ಮಾಡಿದ್ದರು. ನಾವೆಲ್ಲ ಮಹಾದೇಶ್ವರ ಬೆಟ್ಟಕ್ಕೆ ಹೋದಾಗ ಎಚ್.ಡಿ.ರೇವಣ್ಣ ಬಂದಿರಲಿಲ್ಲ. ನನ್ನ ಪತ್ನಿ ಹಾಗೂ ಸೊಸೆ ಮೇಲೆ ಆಸಿಡ್ ಅಟ್ಯಾಕ್ ಆಯ್ತು'' - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ.

ದೇಶದ ಜನತೆಗೆ ಗೊತ್ತಿಲ್ಲದ ವಿಷಯ ಇದು
''ದೇಶದ ಜನಕ್ಕೆ ಗೊತ್ತಿಲ್ಲ ಇದು. ಆ ಹುಡುಗ ಅಪರಾಧಿ ಎಂದು ಪ್ರೂವ್ ಆಯ್ತು. ನನ್ನ ತಮ್ಮನಿಗೆ ಕ್ಯಾನ್ಸರ್ ಇತ್ತು. ಆರು ವರ್ಷ ಬದುಕಬಹುದಿತ್ತು. ಹೈಕೋರ್ಟ್ ನಲ್ಲಿ ಒಬ್ಬರು ಜಡ್ಜ್ ಇದ್ದರು. ಅವರಿಗೆ ನಾನು ಫೋನ್ ಮಾಡಿದೆ. ''ನನ್ನ ತಮ್ಮ ಸಾಯುತ್ತಾನೆ, ಮಗನನ್ನು ಬಿಟ್ಟುಬಿಡಿ'' ಎಂದು ಕೇಳಿಕೊಂಡೆ. ಇನ್ನೂ ನಾಲ್ಕು ವರ್ಷ ಅವನು ಜೈಲಿನಲ್ಲಿ ಇರಬೇಕಿತ್ತು'' - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ.

ತಮ್ಮನ ಮಗನನ್ನು ಬಿಡಿಸಿದ ಎಚ್.ಡಿ.ಡಿ
''ಮಾಜಿ ಪ್ರಧಾನಿ ಪತ್ನಿ ಮೇಲೆ ಆಸಿಡ್ ದಾಳಿ ನಡೆದಿದೆ. ಅಪರಾಧಿಗೆ ಜೀವಾವಧಿ ಶಿಕ್ಷೆ, ಗಲ್ಲಿಗೆ ಏರಿಸಬೇಕು ಎಂದು ಚರ್ಚೆ ನಡೆಯುತ್ತಿದೆ. ನೀವು ನೋಡಿದರೆ ಬಿಡುಗಡೆ ಮಾಡಿ ಎನ್ನುತ್ತಿದ್ದೀರಲ್ಲ'' ಎಂದು ಹೈಕೋರ್ಟ್ ಜಡ್ಜ್ ಕೇಳಿದರು. ಅದಕ್ಕೆ ನಾನು, ''ನನ್ನ ತಮ್ಮ ಸಾಯುತ್ತಾನೆ, ಬೇಡ'' ಎಂದು ಹೇಳಿ ಬಿಡಿಸಿದೆ'' - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ.

ಪತ್ನಿಗೆ ಬೇಸರ ಆಗಲಿಲ್ಲ
''ಇದಕ್ಕೆ ನನ್ನ ಹೆಂಡತಿ ಬೇಸರ ಮಾಡಿಕೊಳ್ಳಲಿಲ್ಲ. ಅವಳಿಗೆ ಎಲ್ಲವೂ ಗೊತ್ತಿತ್ತು. ಆಕೆಯ ಸ್ವಭಾವ ಹೇಗೆ ಅಂದ್ರೆ, ನಾನು ಬರುವವರೆಗೂ ಆಕೆ ಊಟ ಮಾಡುವುದಿಲ್ಲ'' - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ.

ಎರಡು ತಿಂಗಳು ಪ್ರಜ್ಞೆ ಇರಲಿಲ್ಲ
''ಆಸಿಡ್ ದಾಳಿ ನಡೆದಾಗ, ನನಗೆ ಎರಡು ತಿಂಗಳು ಪ್ರಜ್ಞೆ ಇರಲಿಲ್ಲ. ಆಗ ಅವರು ತುಂಬಾ ಬೇಜಾರು ಮಾಡಿಕೊಂಡು ಅಳುತ್ತಿದ್ದರು'' ಎಂದು ಹಳೆ ಘಟನೆಯನ್ನು ನೆನಪಿಸಿಕೊಂಡರು ಎಚ್.ಡಿ.ದೇವೇಗೌಡ ಪತ್ನಿ ಚನ್ನಮ್ಮ.


Click it and Unblock the Notifications











