ಬಕೆಟ್ ಅಂದುಕೊಂಡ್ರು ಪರವಾಗಿಲ್ಲ, ದರ್ಶನ್ ಸರ್ ನನಗೆ ದೇವರಿದ್ದಂತೆ - ಅಭಿಜ್ಞಾ ಭಟ್..!
'ದರ್ಶನ್' ಕೇವಲ ನೇರಾ ನೇರ ನಡುವಳಿಕೆಗೆ ಹೆಸರಾದವರಲ್ಲ. ಬದಲಿಗೆ ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್ಮಾರ್ಕ್. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆಯ ದರ್ಶನ್ ಅವರದ್ದು.ಆದರೆ, ದುರ್ದೈವ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ದರ್ಶನ್, ಅ'ಪವಿತ್ರ' ಸಂಬಂಧಕ್ಕೆ ಹಾತೊರೆದರು. ಸಹವಾಸ ದೋಷದಿಂದ ತಮ್ಮ ಇಮೇಜ್ನ ತಾವೇ ಡ್ಯಾಮೇಜ್ ಮಾಡಿಕೊಂಡರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸೆರೆವಾಸ ಕೂಡ ಅನುಭವಿಸಿದರು.
ಇನ್ನು ದರ್ಶನ್ ಜೈಲು ಪಾಲಾದಾಗ ದರ್ಶನ್ ಅವರ ನಿಜವಾದ ಅಭಿಮಾನಿಗಳು ಮಮ್ಮಲ ಮರುಗಿದ್ದರು. ಸಮಾಜಕ್ಕೆ ಉತ್ತಮವಾದ ಸಂದೇಶ ನೀಡಬೇಕಿದ್ದ ನಮ್ಮ ಹೀರೋ ಹೀಗೆ ದುಷ್ಕೃತ್ಯದ ಪಾಲುದಾರರಾಗಿ ಜೈಲು ಸೇರಿದಲ್ಲ ಅಂಥಾ ಅಕ್ಷರಶಃ ಕೊರಗಿದರು.

ಆದರೆ, ಇನ್ನು ಕೆಲವರು ದರ್ಶನ್ ಅವರನ್ನು ಸಮರ್ಥಿಸಿಕೊಂಡರು. ಈಗಲೂ ಸಮರ್ಥಿಸಿಕೊಳ್ಳುತ್ತಿದ್ದಾರೆ.ಈ ಅಭಿಮಾನ ಕಂಡು ಖುದ್ದು ದರ್ಶನ್ ಮೂಕವಿಸ್ಮಿತವಾಗಿದ್ದು ಇದೆ. ಜೈಲಿಂದ ಹೊರ ಬಂದ ನಂತರ ನಿಮ್ಮನ್ನು ಪಡೆದ ನಾನೇ ಧನ್ಯ ಎಂದು ಹೇಳಿಯೂ ಆಗಿದೆ
ಹೀಗಿರುವಾಗ ಇದೀಗ ದರ್ಶನ್ ಅವರ ಗುಣಗಾನವನ್ನು ಅಭಿಜ್ಞಾ ಭಟ್ ಮಾಡಿದ್ದಾರೆ. ಹೌದು, ಅಭಿಜ್ಞಾ ಭಟ್.. 'ಸ್ನೇಹದ ಕಡಲಲ್ಲಿ' ಸೀರಿಯಲ್ನ ಚೆಲುವೆ.
'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋನಲ್ಲಿ ಕೂಡ ಕಾಣಿಸಿಕೊಂಡಿದ್ದ ಇವರು 'ರಾಮಾಚಾರಿ' ಮತ್ತು 'ಗೌರಿಶಂಕರ' ಧಾರಾವಾಹಿಯಲ್ಲಿ ಕೂಡ ನಟಿಸಿದ್ದಾರೆ. ಪಾತ್ರಕ್ಕೆ ತಕ್ಕಂತೆ ಅಭಿನಯಿಸೋ ಈ ಬೆಡಗಿ 'ಹುಡುಗರು' ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ.
ಅಲ್ಲದೇ, ಸುವರ್ಣದ 'ಸೂಪರ್ ಸ್ಟಾರ್', 'ಕುಕ್ಕು ವಿತ್ ಕಿರಿಕ್ಕು' ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ. ಸದ್ಯ ಭರ್ಜರಿ ಬ್ಯಾಚುಲರ್ಸ್ನಲ್ಲಿ ಕಾಣಿಸಿಕೊಂಡಿರುವ ನಟಿ ಅಭಿಜ್ಞಾ ಭಟ್ ನಾನು ದರ್ಶನ್ ಅವರ ಹುಚ್ಚು ಅಭಿಮಾನಿ ಎಂದು ಹೇಳಿದ್ದಾರೆ. ದರ್ಶನ್ ಅವರ ಮೇಲೆ ತಮಗೆ ಇರುವ ಅಭಿಮಾನ ಎಂತಹದ್ದು ಎನ್ನುವುದನ್ನು ಕೂಡ ವಿವರಿಸಿದ್ದಾರೆ.

ಈ ಕುರಿತು ''ಬಾಸ್ ಟಿವಿ''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅಭಿಜ್ಞಾ ಭಟ್ ಅವರು ನನ್ನ ಫೇವರಿಟ್, ನನ್ನ ಹೀರೋ, ನನ್ನ ಪ್ರೇರಣೆ ಎಂದು ಹೇಳಿದ್ದಾರೆ. ಇವತ್ತು ನಾನು ನನ್ನ ಜೀವನದಲ್ಲಿ ಸಿಕ್ಕಾಪಟ್ಟೆ ಏರಿಳಿತಗಳನ್ನು ನೋಡಿದ್ರೂ ಕೂಡ, ಇಲ್ಲ ಮುಂದೆ ನನ್ನ ಜೀವನ ಚೆನ್ನಾಗಿರುತ್ತದೆ, ಅನ್ನೋ ಒಂದು ನಂಬಿಕೆಯಿಂದ ಬದುಕುತ್ತಿರುವುದಕ್ಕೆ ಪ್ರಮುಖ ಕಾರಣನೇ ಡಿ ಬಾಸ್ ಎಂದಿರುವ ಅಭಿಜ್ಞಾ ಭಟ್ ಅವರ ಕಷ್ಟಗಳ ಮುಂದೆ ನಮ್ಮ ಕಷ್ಟಗಳು ಏನೂ ಇಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಅವರೊಂತರಾ ನನಗೆ ''ದೇವರು'' ಇದ್ದಂತೆ ಎಂದು ಹೇಳಿರುವ ಅಭಿಜ್ಞಾ ಅವರಂದರೆ ನನಗೆ ತುಂಬಾ ಇಷ್ಟ, ನಾನು ಇತ್ತೀಚೆಗೆ ನೀಡಿದ ಹಲವಾರು ಸಂದರ್ಶನದಲ್ಲಿಯೂ ಕೂಡ ಅವರು ನನ್ನ ಇಷ್ಟದ ವ್ಯಕ್ತಿ ಎಂದು ಹೇಳಿದ್ದೇನೆ ಎಂದು ಹೇಳಿದ್ದಾರೆ.
ಕೆಲವರು 'ಬಕೆಟ್', ಅದು ಇದು ಅಂತ ಅಂದುಕೊಳ್ತಾರೆ. ಆದರೆ ಡಿ ಬಾಸ್ ಅಭಿಮಾನಿಗಳಿಗೆ ಮಾತ್ರ ಗೊತ್ತು, ಆ ಕ್ರೇಜ್ ಏನು ಅಂತ. ಡಿ ಬಾಸ್ ಫ್ಯಾನ್ ಬೇಸ್ ಇದೆಯೆಲ್ಲಾ ನಾವೆಲ್ಲಾ ಕ್ರೇಜಿ ಫ್ಯಾನ್ಸ್. ಜೀವ ಇರುವವರೆಗೂ ನಾವು ಬಾಸ್ ಫ್ಯಾನ್. ಅವರ ಜೊತೆ ನಟಿಸಲು ಅವಕಾಶ ಸಿಕ್ಕರೆ ನನ್ನಷ್ಟು ಖುಷಿ ಪಡುವವರು ಯಾರೂ ಇರಲ್ಲ ಎಂದು ಹೇಳಿರುವ ಅಭಿಜ್ಞಾ, ಡಿ ಬಾಸ್ ಜೊತೆ ಅಭಿನಯಿಸುವ ಅವಕಾಶ ಆದಷ್ಟು ಬೇಗ ಸಿಗಲಿ ಎಂದು ನಾನು ರಾಯರಲ್ಲಿ ಪ್ರಾರ್ಥನೆಯನ್ನು ಮಾಡುತ್ತೇನೆ ಎಂದು ಕೂಡ ಹೇಳಿದ್ಧಾರೆ.
ನನಗೆ ಅವರ ಆಕ್ಟಿಂಗ್, ಪರ್ಸನಾಲಿಟಿ, ಆ ಲುಕ್ಸ್.. ತುಂಬಾ ಇಷ್ಟ ಎಂದಿರುವ ಅಭಿಜ್ಞಾ ಭಟ್ ಕಳೆದ ಒಂದು ವರ್ಷದಿಂದ ಡಿ ಬಾಸ್ ಅವರ ಬದುಕಿನಲ್ಲಿ ಏನೇನೋ ನಡೆದು ಹೋಯ್ತು, ಅವರು ಬದುಕನ್ನು ಬೇರೆ ದೃಷ್ಟಿಕೋನದಿಂದ ನೋಡಿದ್ದಾರೆ, ಅವರಲ್ಲಿನ ಆ ನೇರವಂತಿಕೆ.. ಕೆಲವರು ತುಂಬಾ ಪಾಲಿಷ್ ಆಗಿ ಮಾತನಾಡ್ತಾರೆ, ಅವರಿಗೂ ನಮ್ಮ ಬಾಸ್ಗೂ ತುಂಬಾ ವ್ಯತ್ಯಾಸ ಇದೆ ಎಂದು ಹೇಳಿದ್ದಾರೆ. ನಾನು ಅವರಂತೆಯೇ ಮುಖಕ್ಕೆ ಹೊಡೆದಂತೆ ಮಾತನಾಡ್ತೀನಿ. ಈ ಗುಣ ಬಹುಶಃ ಡಿ ಬಾಸ್ ಅವರಿಂದಲೇ ಬಂದಿದೆ ಅನ್ಸುತ್ತೆ ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲ ಇದ್ದಿದ್ದನ್ನು ಇದ್ದಂತೆ ಹೇಳುವ ಅವರ ಶೈಲಿ.. ಏನೇ ಆದರೂ ಮತ್ತೆ ಎದ್ದು ಬರುತ್ತೇನೆ ಎನ್ನುವ ಅವರ ಮನಸ್ಥಿತಿ.. ನಮಗೆ ಅವರು ನೀಡುವ ಪ್ರೀತಿ.. ಅವರ ಮೇಲೆ ನಮಗೆ ಇರುವ ಪ್ರೀತಿ.. ಅವರ ಸಿನಿಮಾಗಳಿರಬಹುದು ಹೀಗೆ ಇನ್ನು ತುಂಬಾ ವಿಚಾರಗಳಿಂದ ಅವರ ಅಭಿಮಾನಿ ಎಂದು ಹೇಳಿಕೊಳ್ಳುವುದಕ್ಕೆ ನಮಗೆ ತುಂಬಾ ಹೆಮ್ಮೆ ಆಗುತ್ತೆ ಎಂದು ಕೂಡ ಅಭಿಜ್ಞಾ ಹೇಳಿದ್ದಾರೆ. ಇಡೀ ಸಂದರ್ಶನದಲ್ಲಿ ದರ್ಶನ್ ಅವರ ಹೆಸರನ್ನೇ ಕನವರಿಸಿದ್ದಾರೆ. ದರ್ಶನ್ ಅವರನ್ನು ಬಾಯ್ತುಂಬ ಹೊಗಳಿದ್ದಾರೆ.


Click it and Unblock the Notifications











