ಗಿಲ್ಲಿನೇ ಈ ಬಾರಿಯ ಬಿಗ್ ಬಾಸ್ ವಿನ್ನರ್ ; ಟೇಬಲ್ ತಟ್ಟಿ ಭವಿಷ್ಯ ನುಡಿದ ಶಿವಣ್ಣ
''ಬಿಗ್ ಬಾಸ್'' ಕನ್ನಡ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪಿದೆ. ಇನ್ನೇನು ಇದೇ ಭಾನುವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಸದ್ಯ ಮನೆಯಲ್ಲಿ ಗಿಲ್ಲಿ.. ಅಶ್ವಿನಿ ಗೌಡ.. ಕಾವ್ಯ ಶೈವ.. ರಘು ಮತ್ತು ಧನುಷ್ ಇದ್ದಾರೆ. ಈ 5 ಜನರಲ್ಲಿ ಈ ಬಾರಿಯ ಬಿಗ್ ಬಾಸ್ ಯಾರಾಗ್ತಾರೆ ಎನ್ನುವುದಕ್ಕೆ ಉತ್ತರ ಕೆಲ ಗಂಟೆಗಳಲ್ಲಿ ಸಿಗಲಿದೆಯಾದರೂ ಹಲವರ ಪ್ರಕಾರ ಗಿಲ್ಲಿ ಈಗಾಗಲೇ ''ಬಿಗ್ ಬಾಸ್'' ಗೆದ್ದಾಗಿದೆ.
ಹೌದು, ಚಿತ್ರರಂಗದಲ್ಲಿ ಮಿಂಚಬೇಕೆಂಬ ಆಸೆಯಲ್ಲಿ ಬೆಂಗಳೂರಿಗೆ ಬಂದ ಗಿಲ್ಲಿ ಕೊರೊನಾ ಕಾಲದಲ್ಲಿ ಜನ ಮನ ಗೆಲ್ಲಲು ಶುರು ಮಾಡಿದ್ದರು. ಪಕ್ಕಾ ಗ್ರಾಮ್ಯ ಶೈಲಿಯ ಡೈಲಾಗ್ಗಳಿಂದಲೇ ದಿನಗಳು ಉರುಳಿದಂತೆ ಜನಪ್ರಿಯನಾದ ಗಿಲ್ಲಿ, ಸಂದರ್ಭಕ್ಕಾನುಸಾರ ಹಾಸ್ಯದ ಹೊನಲು ಹರಿಸಿ ಕರುನಾಡಿನೆಲ್ಲೆಡೆ ಜನಪ್ರಿಯರಾದರು.

''ಕಾಮಿಡಿ ಕಿಲಾಡಿ''ಗಳು ಸೀಸನ್ 4ರಲ್ಲಿ ರನ್ನರ್ ಅಪ್ ಆಗಿ ಕೂಡ ಹೊರ ಹೊಮ್ಮಿದ ಗಿಲ್ಲಿ ಆ ನಂತರ 'ʻಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ʼ' ಕಾರ್ಯಕ್ರಮದ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದರು. ''ಭರ್ಜರಿ ಬ್ಯಾಚುಲರ್ಸ್'' ರಿಯಾಲಿಟಿ ಶೋನಲ್ಲಿ ಕೂಡ ಮಿಂಚಿದರು.
ಇವರ ಈ ಜನಪ್ರಿಯತೆ ಇವರನ್ನು ''ಬಿಗ್ ಬಾಸ್'' ಬಾಗಿಲಿನವರೆಗೆ ಕೂಡ ಕರೆದುಕೊಂಡು ಬಂತು. ಮನೆಯನ್ನು ಪ್ರವೇಶಿಸಿದ ಮೊದಲ ದಿನದಿಂದಲೇ ತನ್ನ ಚಾಕಚಕ್ಯತೆಯಿಂದಲೇ ಬೇರೆ ಸ್ಫರ್ಧಿಗಳನ್ನು ಮಣ್ಣು ಮುಕ್ಕಿಸಿದ ಗಿಲ್ಲಿ ಸದ್ಯಕ್ಕೆ ರೇಸ್ನಲ್ಲಿ ಮುಂಚೂಣಿಯಲ್ಲಿರುವ ಕುದುರೆ.
ಇಂಥಾ ಗಿಲ್ಲಿ ಈ ಬಾರಿಯ ''ಬಿಗ್ ಬಾಸ್'' ಗೆಲ್ಲಬೇಕು ಎನ್ನುವುದು ಹಲವರ ಆಶಯ. ಕೇವಲ ಜನಸಾಮಾನ್ಯರಲ್ಲಿ ಮಾತ್ರವಲ್ಲ ಚಿತ್ರರಂಗದ ವಲಯದಲ್ಲಿ ಕೂಡ ಗಿಲ್ಲಿ ಫೇವರೆಟ್. ಇದಕ್ಕೆ ಕೈಗನ್ನಡಿ ಎಂಬಂತೆ ಈ ಬಾರಿ ಗಿಲ್ಲಿಯೇ ಗೆಲ್ಲೋದು ಎಂಬ ಭವಿಷ್ಯವಾಣಿಯನ್ನು ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ನುಡಿದಿದ್ದಾರೆ.
ಹೌದು, ಶಿವಣ್ಣಗೆ ಮೊದಲಿಂದ ಗಿಲ್ಲಿ ಅಂದರೆ ಅಚ್ಚು ಮೆಚ್ಚು. ಜೀ ಕನ್ನಡದ ''ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'' ಕಾರ್ಯಕ್ರಮದಲ್ಲಿಯೇ ಶಿವಣ್ಣ ಹೃದಯವನ್ನು ಗಿಲ್ಲಿ ಗೆದ್ದಿದ್ದರು. ಖುದ್ದು ಶಿವಣ್ಣ ಮುಂದೊಂದು ದಿನ ಗಿಲ್ಲಿ ಜೊತೆ ಕೆಲಸ ಮಾಡುವ ಆಶಯವನ್ನು ಕೂಡ ವ್ಯಕ್ತಪಡಿಸಿದ್ದರು. ತಮಿಳಿನ ಹಾಸ್ಯ ನಟ ಚಂದ್ರಬಾಬು ಅವರ ಜೊತೆ ಗಿಲ್ಲಿಯನ್ನು ಹೋಲಿಸಿದ್ದರು.

ಈಗ ಗಿಲ್ಲಿಯ ಬಗ್ಗೆ ಶಿವಣ್ಣ ಭವಿಷ್ಯ ನುಡಿದಿದ್ದಾರೆ. ಸಹಕಾರನಗರದಲ್ಲಿ ರೆಸ್ಟೋರೆಂಟ್ವೊಂದರ ಉದ್ಘಾಟನೆಗೆ ಆಗಮಿಸಿದ್ದ ಶಿವಣ್ಣ ಗಿಲ್ಲಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಗಿಲ್ಲಿಯೇ ಈ ಬಾರಿ ಗೆಲ್ಲೋದು ಎಂದು ಟೇಬಲ್ ತಟ್ಟಿ ಹೇಳಿದ್ದಾರೆ. ಗಿಲ್ಲಿಯ ಅನುಕರಣೆ ಮಾಡಿ ''ಆಲ್ ದಿ ಬೆಸ್ಟ್'' ಎಂದು ಹೇಳಿ ನಗೆಗಡಲಿನಲ್ಲಿ ಎಲ್ಲರನ್ನೂ ತೇಲಿಸಿದ್ದಾರೆ.
ಮುಂದುವರೆದು ಗಿಲ್ಲಿ ಅವರದ್ದು ನೇರ ವ್ಯಕ್ತಿತ್ವ. ಕೆಲವರು ಕಂಟೆಂಟ್ಗೋಸ್ಕರ ಮಾತನಾಡುತ್ತಾರೆ. ಆದರೆ ಗಿಲ್ಲಿ ಹಾಗಲ್ಲ. ನ್ಯಾಚುರಲ್ ಇನ್ಸ್ಟೆಂಟ್ ಇದೆ, ಅದೇ ಜನರಿಗೆ ಇಷ್ಟವಾಗೋದು ಎಂದು ಕೂಡ ಶಿವಣ್ಣ ಹೇಳಿದ್ದಾರೆ. ಎಲ್ಲೂ ಫೇಕ್ ಇಲ್ಲ ಅದಕ್ಕೆ ನನಗೆ ಇಷ್ಟ ಆಗೋದು ಎಂದು ಕೂಡ ಹೇಳಿದ್ದಾರೆ.
ಶಿವಣ್ಣ ಅವರ ಈ ಮಾತು ಸದ್ಯ ಗಿಲ್ಲಿ ಅಭಿಮಾನಿಗಳಿಗೆ ಖುಷಿ ನೀಡಿದೆ. ಗಿಲ್ಲಿ ಬಗ್ಗೆ ಶಿವಣ್ಣ ಮಾತನಾಡಿರುವ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನುಳಿದಂತೆ ಸದ್ಯ ಗಿಲ್ಲಿಯ ಪರ ಹಲವರು ಪ್ರಚಾರ ಮಾಡುತ್ತಿದ್ದಾರೆ. ''ಬಿಗ್ ಬಾಸ್'' ಈ ಬಾರಿ ಗಿಲ್ಲಿನೇ ಗೆಲ್ಲಬೇಕು ಎಂದು ಅಭಿಯಾನ ಮಾಡುತ್ತಿದ್ದಾರೆ. ಇನ್ನು ಕೆಲವರು ಪ್ರಯಾಣ ಉಚಿತ ಎಂದು ಘೋಷಿಸಿದ್ದಾರೆ. ಕೆಲ ಹೋಟೆಲ್ನವರು ಬಿರಿಯಾನಿ, ಫಿಶ್ ಫ್ರೈ ಉಚಿತವಾಗಿ ನೀಡುವುದಾಗಿ ಹೇಳಿದ್ದಾರೆ. ಮತ್ತೂ ಕೆಲವರು ಮೈಮೇಲೆ ಗಿಲ್ಲಿ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನದ ಪ್ರದರ್ಶನವನ್ನು ಮಾಡಿದ್ದಾರೆ.


Click it and Unblock the Notifications











