Weekend with Ramesh : ಡಾ.ಸಿ.ಎನ್.ಮಂಜುನಾಥ್ ರೋಗಿಗಳ ಪಾಲಿಗೆ ಸಾಕ್ಷಾತ್ "ಮಂಜುನಾಥ"
ವೀಕೆಂಡ್ ವಿತ್ ರಮೇಶ್ ಸೀಸನ್- 5ರ ಮೂರನೇ ಅಥಿತಿಯಾಗಿ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರನ್ನು ಕರೆತರಲಾಗಿತ್ತು. ಅವರ ಜೀವನದ ಯಶೋಗಾಥೆಯನ್ನು ಕೇಳಿದ ಪ್ರೇಕ್ಷಕರ ಮನಸ್ಸಿಗೆ ಒಮ್ಮೆ ಹಾಯ್ ಎನ್ನುವ ಅನುಭವವನ್ನು ನೀಡಿತು. ಹಮ್ಮುಬಿಮ್ಮು ಇಲ್ಲದ ಸರಳತೆಯ ವ್ಯಕ್ತಿಯ ಸಾಧನೆಗೆ ಕರ್ನಾಟಕವೇ ತಲೆದೂಗಿತು.
ಡಾ. ಸಿ. ಎನ್.ಮಂಜುನಾಥ್ ಈ ಹೆಸರು ಎಲ್ಲರಿಗೂ ಚಿರಪರಿಚಿತ. ಡಾಕ್ಟರ್ ಅಂದ್ರೆ ಮೂಗು ಮುರಿಯುವ ಈ ಕಾಲದಲ್ಲಿ ಇವರನ್ನು ರೋಗಿಗಳು ದೇವರ ಸ್ಥಾನದಲ್ಲಿ ತಂದು ಕುಳಿಸಿದ್ದಾರೆ. ಬಡವರಿಂದ ಹಿಡಿದು ಶ್ರೀಮಂತರವರೆಗೂ ಇವರು ಬಹಳ ಸ್ನೇಹ ಜೀವಿ ಡಾಕ್ಟರ್. ಅದೆಷ್ಟೋ ರೋಗಿಗಳ ಪಾಲಿಗೆ ಇವರು ಸಾಕ್ಷಾತ್ ಮಂಜುನಾಥನೇ ಆಗಿಬಿಟ್ಟಿದ್ದಾರೆ ಎಂದರೆ ತಪ್ಪಾಗಲ್ಲ.

ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿ 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಡಾ. ಸಿ.ಎನ್ .ಮಂಜುನಾಥ್ ಜಯದೇವ ಹೃದ್ರೋಗ ಸಂಸ್ಥೆಯಿಂದ 50 ಲಕ್ಷಕ್ಕೂ ಹೆಚ್ಚು ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಇನ್ನೂ 6 ಲಕ್ಷಕ್ಕೂ ಹೆಚ್ಚು ಹೃದಯ ಶಸ್ತ್ರ ಚಿಕಿತ್ಸೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ. 54 ಸಾವಿರ ವೈಯಕ್ತಿಕ ಹೃದಯ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿದ್ದಾರೆ. ಇದೆಲ್ಲದರ ಕ್ರೆಡಿಟ್ ಡಾ. ಸಿ.ಎನ್. ಮಂಜುನಾಥ್ ಅವರಿಗೆ ಸಲ್ಲಬೇಕು.
ತನ್ನ ರೋಗಿಗಳೇ ವಿಐಪಿಗಳು ಎಂದ ಏಕೈಕ ವ್ಯಕ್ತಿ ಅಂದರೆ ಅದು ಡಾ.ಸಿ.ಎನ್.ಮಂಜುನಾಥ್ ಒಬ್ಬರೇ ಎಂದು ಸುಧಾ ಬರಗೂರ್ ಅಭಿಪ್ರಾಯ ವ್ಯಕ್ತಪಡಿಸಿದರು. ಹೃದಯ ಆಪರೇಟ್ ಮಾಡೋದು ಸುಲಭ ಆದರೆ ಹೃದಯವನ್ನು ಗೆಲ್ಲೋದು ತುಂಬಾ ಕಷ್ಟ. ಆದರೆ ಲಕ್ಷಾಂತರ ಮಂದಿಯ ಹೃದಯವನ್ನು ಡಾ.ಮಂಜುನಾಥ್ ಗೆದ್ದಿದ್ದಾರೆ ಎಂದು ಸುಧಾ ಬರಗೂರು ತಿಳಿಸಿದರು.
ತಮ್ಮ ಪತಿಗೆ ಹೃದಯ ಸಮಸ್ಯೆ ಎದುರಾದಾಗ ಸಿ.ಎನ್.ಮಂಜುನಾಥ್ ಅವರು ತೋರಿದ ಕಾಳಜಿಯ ಬಗ್ಗೆ ಮನಸಾರೆ ಹೊಗಳಿದರು. ಅವರು ಸೇವೆ ಮಾಡುತ್ತೇನೆ ಎಂದು ಹೇಳುವವರೆಗೂ ಅವರೇ ನಿರ್ದೇಶಕರಾಗಿರಲಿ ಎಂದು ಸರ್ಕಾರಕ್ಕೆ ಮನವಿಯನ್ನು ಸುಧಾ ಬರಗೂರು ಮಾಡಿದರು.

ಅದೆಷ್ಟೋ ರೋಗಿಗಳ ಪಾಲಿಗೆ ಡಾ. ಸಿ.ಎನ್.ಮಂಜುನಾಥ್ ಅವರು ಸಾಕ್ಷಾತ್ ಧರ್ಮಸ್ಥಳದ ಮಂಜುನಾಥನಾಗಿದ್ದಾರೆ. ಉಚಿತವಾಗಿ ಚಿಕಿತ್ಸೆ ನೀಡಿ ಪ್ರಾಣವನ್ನು ಉಳಿಸಿದ್ದಾರೆ. ಇವರಿಂದ ಜೀವದಾನ ಪಡೆದವರು ಯಾರು ಸಹ ಇವರನ್ನು ಮರೆತಿಲ್ಲ. ಪ್ರತಿನಿತ್ಯವೂ ಜಯದೇವ ಆಸ್ಪತ್ರೆಯಲ್ಲಿ ಅದೆಷ್ಟೋ ಬಡ ರೋಗಿಗಳಿಗೆ ಸದ್ದಿಲ್ಲದೇ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ನೀಡಲಾಗುತ್ತಿದೆ.
ವೀಕ್ ಎಂಡ್ ವಿಥ್ ರಮೇಶ್ ಶೋಗೆ ಬಂದವರು ಡಾ. ಸಿ.ಎನ್ .ಮಂಜುನಾಥ್ ಅವರು ಯಾವ ರೀತಿಯಲ್ಲಿ ಮಂಜುನಾಥ್ ಅವರು ಉಚಿತವಾಗಿ ಚಿಕಿತ್ಸೆ ನೀಡಿ ಕಾಪಾಡಿದ್ದರ ಬಗ್ಗೆ ವೇದಿಕೆಯಲ್ಲಿ ಹಂಚಿಕೊಂಡರು. ನಮ್ಮ ಪಾಲಿಗೆ ಅವರೇ ಧರ್ಮಸ್ಥಳ ಮಂಜುನಾಥ ಸ್ವಾಮಿಯಾಗಿದ್ದಾರೆ. ಅವರಿಂದ ಈ ಜೀವ ಬದುಕಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.
ಸರಳತೆಯ ಸಾಕಾರ ಮೂರ್ತಿಯಾಗಿರುವ ಡಾ.ಮಂಜುನಾಥ್ ಅವರು ಶ್ರೀಧರ್ಮಸ್ಥಳ ಮಂಜುನಾಥನ ಹರಕೆಯ ಫಲವಾಗಿ ಜನಿಸಿದರು. ಇವರ ಹೆಸರನ್ನು ಏಕೆ ಮಂಜುನಾಥ್ ಎಂದು ಹೆಸರಿಡಲಾಗಿದೆ ಎಂಬುದರ ಬಗ್ಗೆ ಕುಟುಂಬದವರು ರಿವೀಲ್ ಮಾಡಿದ್ದಾರೆ. ತಂದೆ-ತಾಯಿ ಮಗುವಾಗಲಿ ಎಂದು ಧರ್ಮಸ್ಥಳ ಮಂಜುನಾಥನಿಗೆ ಹರಕೆಯನ್ನು ಕಟ್ಟಿಕೊಂಡಿದ್ದರಂತೆ. ನಂತರ ಹುಟ್ಟಿದ ಮಗುವಿಗೆ ಮಂಜುನಾಥ ಎಂದು ಹೆಸರನ್ನು ಇಡಲಾಗಿದೆ.
ಮಗನನ್ನು ಡಾಕ್ಟರ್ ಆಗಿ ನೋಡಬೇಕು ಎಂಬುದು ಮನೆಯವರೆಲ್ಲರ ಆಸೆಯಾಗಿರುತ್ತದೆ. ಅಮ್ಮನ ಆಸೆಯಂತೆ ಇಂದು ಮಗ ದೊಡ್ಡ ಮಟ್ಟದಲ್ಲಿ ಹೆಸರನ್ನು ಸಂಪಾದನೆ ಮಾಡಿದ್ದಾರೆ ಎಂಬುದು ಎಲ್ಲರ ಕಣ್ಣಲ್ಲಿ ಸಂತೋಷವನ್ನು ತಂದಿದೆ.
ಜಯದೇವ ನಿರ್ದೇಶಕರಾದ ಮೇಲೆ ಕೆಲಸಗಾರರ ಸಂಬಳವನ್ನು ಹೆಚ್ಚಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಹೊರಗುತ್ತಿಗೆದಾರರಿಗೂ ಸಹ ಸಂಬಳವನ್ನು ಹೆಚ್ಚಿಸಿದ್ದಾರೆ. ಇನ್ನೂ ಸುಧಾಮೂರ್ತಿ ಅವರು ಸಹ ಸಾಧಕರ ಕುರ್ಚಿಯಲ್ಲಿ ಡಾ.ಮಂಜುನಾಥ್ ಅವರು ಕುಳಿತಿರುವುದನ್ನು ನೋಡಿ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications











