ದೇವ್ ಜೊತೆಗೆ ಓಡಿ ಹೋಗಿ ಮದುವೆ ಆಗಲು ತಯಾರಾದ ಚುಕ್ಕಿ!
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ದೇವ್ ಬಣ್ಣ ಬಯಲು ಮಾಡಲು ಲೀಲಾ ಹರಸಾಹಸ ಪಡುತ್ತಿದ್ದಾಳೆ. ಆದರೆ, ಪ್ರತೀ ಬಾರಿಯೂ ದೇವ್ ತಪ್ಪಿಸಿಕೊಳ್ಳುತ್ತಿದ್ದಾನೆ. ಲೀಲಾ ಎದುರಿಗೆ ತನ್ನ ಉದ್ದೇಶವನ್ನು ದೇವ್ ಧೈರ್ಯವಾಗಿ ಹೇಳಿದ್ದಾನೆ. ಸಾಕ್ಷಿ ಇಲ್ಲದೇ ಲೀಲಾ ಕೈಕಟ್ಟಿ ಕೂರುವಂತಾಗಿದೆ.
ಎಜೆಗೆ ಈಗ ದೇವ್ ತುಂಬಾ ಒಳ್ಳೆಯವನಂತೆ ಕಾಣುತ್ತಿದ್ದಾನೆ. ಪವಿತ್ರಾಗಾಗಿ ವ್ರತ ಮಾಡಿದ್ದಲ್ಲದೇ, ಸಾಯಲು ಪ್ರಯತ್ನಿಸಿದ್ದಾನೆ ಎಂದು ಎಜೆ ಈಗ ದೇವ್ ಅನ್ನು ಸಂಪೂರ್ಣವಾಗಿ ನಂಬಿದ್ದಾನೆ. ದೇವ್ ಏನೇ ಮಾಡಿದರೂ ತನ್ನ ಹೆಂಡತಿ ಪವಿತ್ರಾಳಾ ಒಳಿತಿಗಾಗಿ ಎಂದು ಅಂದುಕೊಂಡಿದ್ದಾನೆ.
ಕೌಸಲ್ಯ ಈಗ ಒಳ್ಳೆಯ ಶ್ರೀಮಂತ ಹುಡುಗನಿಗೆ ತಮ್ಮ ಮಗಳು ಚುಕ್ಕಿಯನ್ನು ಕೊಟ್ಟು ಮದುವೆ ಮಾಡಬೇಕು ಎಂದು ಆಸೆ ಪಟ್ಟಿದ್ದಾಳೆ. ಹೀಗಾಗಿ ಪದೇ ಪದೆ ಚುಕ್ಕಿಗೆ ತಾನು ತೋರಿಸುವ ಹುಡುಗನನ್ನೇ ಮದುವೆಯಾಗಬೇಕು ಎಂದು ಹೇಳುತ್ತಿದ್ದಾಳೆ. ಈ ಮಾತುಗಳು ಚುಕ್ಕಿಗೆ ತುಂಬಾ ನೋವು ಹಾಗೂ ಗೊಂದಲಕ್ಕೀಡು ಮಾಡುತ್ತಿದೆ.

ದುರ್ಗಾ ಕೌಸಲ್ಯ ಜಗಳ!
ಕೌಸಲ್ಯ ಎಜೆ ಮನೆಗೆ ಬಂದಿದ್ದಾಳೆ. ಬರುವಾಗಲೇ ದೇವ್ ಹಾಗೂ ಸರಸ್ವತಿಯನ್ನು ಕೆಣಕಿದ್ದಾಳೆ. ಬಳಿಕ ಮನೆಗೆ ಬಂದು ಲೀಲಾ ಜೊತೆಗೆ ಮಾತನಾಡುತ್ತಿದ್ದಳು. ಲೀಲಾ ಹಾಲು ತರಲು ಹೋದಾಗ, ದುರ್ಗಾ ಹಾಗೂ ಸರಸ್ವತಿ ಇಬ್ಬರೂ ಬಂದು ಕೌಸಲ್ಯಳನ್ನು ಕೆಣಕಲು ಪ್ರಯತ್ನಿಸಿದ್ದಾರೆ. ಬಡವರನ್ನು ಆಡಿಕೊಳ್ಳುತ್ತೀರಾ? ನನಗೂ ಒಂದು ಕಾಲ ಬರುತ್ತದೆ. ಆಗ ನಿಮ್ಮನ್ನು ನೋಡಿಕೊಳ್ಳುತ್ತೇನೆ. ನನ್ನ ಶಾಪ ನಿಮಗೆ ತಟ್ಟದೇ ಇರದು ಎಂದು ಕೌಸಲ್ಯ ನೊಂದುಕೊಳ್ಳುತ್ತಾಳೆ. ವಾಪಸ್ ಹೋಗುವಾಗಲೂ ಕೌಸಲ್ಯ ದುರ್ಗಾ ಹಾಗೂ ಸರಸ್ವತಿಯನ್ನು ಕೆಣಕುತ್ತಾಳೆ. ಇದು ನನ್ನ ಅಳಿಯನ ಮನೆ. ನಿಮಗಿಂತ ಹೆಚ್ಚು ಹಕ್ಕು ನನಗಿದೆ ಎಂದು ಹೇಳುತ್ತಾಳೆ.

ಸರಸ್ವತಿಗೆ ಚಿಂತೆ!
ಕೌಸಲ್ಯ ಮಾತುಗಳು ದುರ್ಗಾ ಹಾಗೂ ಸರಸ್ವತಿಗೆ ಇರಿಟೇಟ್ ಮಾಡುತ್ತದೆ. ದುರ್ಗಾ ತಾಳ್ಮೆಯಿಂದ ಇರುತ್ತಾಳೆ. ಆದರೆ ಸರಸ್ವತಿಗೆ ತಡೆದುಕೊಳ್ಳಲಾಗದೇ, ಕೌಸಲ್ಯ ಜೊತೆಗೆ ಜಗಳಕ್ಕೆ ನಿಲ್ಲುತ್ತಾಳೆ. ದುರ್ಗಾ ತಡೆದು, ಕೌಸಲ್ಯಳನ್ನು ಕಳಿಸಿಕೊಡುತ್ತಾಳೆ. ಕೌಸಲ್ಯ ಹೋಗುವಾಗ ಸ್ವಲ್ಪ ದಿನದಲ್ಲೇ ನೀವು ಈ ಮನೆಯಿಂದ ಬ್ಯಾನ್ ಆಗುತ್ತೀರಾ ಎಂದು ಹೇಳುತ್ತಾಳೆ. ಈ ಮಾತು ಸರಸ್ವತಿಯ ನಿದ್ದೆಯನ್ನು ಕೆಡಿಸುತ್ತದೆ. ನನ್ನ ಮತ್ತು ನನ್ನ ಅಣ್ಣನ ಬಗ್ಗೆ ಇಷ್ಟೆಲ್ಲಾ ಮಾತನಾಡಿದಳಲ್ಲಾ ಎಂದು ಯೋಚಿಸುತ್ತಿರುತ್ತಾಳೆ.

ಅಮ್ಮನಿಗೆ ಲೀಲಾ ಕ್ಲಾಸ್!
ಇನ್ನು ಲೀಲಾ, ಕೌಸಲ್ಯ ಜೊತೆಗೆ ಮಾತನಾಡಿದ್ದಾಳೆ. "ಅವರ ಜೊತೆಗೆ ಸುಮ್ಮನೆ ಜಗಳಕ್ಕೆ ಹೋಗಬೇಡ ಅಮ್ಮ. ನಿನಗೆ ನನ್ನನ್ನು ನೋಡಬೇಕು ಎನಿಸಿದರೆ ಆಚೆ ಎಲ್ಲಾದರೂ ಸಿಗೋಣ. ಬೇಕಿದ್ದರೆ, ನಿನ್ನನ್ನು ನೋಡಬೇಕು ಎಂದಾಗಲೆಲ್ಲಾ ಮನೆಗೆ ಬರುತ್ತೇನೆ ಎಂದು ಲೀಲಾ ಹೇಳುತ್ತಾಳೆ. ಅವರೆಲ್ಲಾ ಸುಮ್ಮನೆ ಉರಿದು ಬೀಳುತ್ತಾರೆ. ನಾಳೆ ದಿನ ಅದು ನನಗೆ ತಿರುಗಿ ಬೀಳುತ್ತದೆ. ನನಗೆ ನೋವಾಗುತ್ತದೆ ಎಂದು ಹೇಳುತ್ತಾಳೆ." ಲೀಲಾ ಮಾತುಗಳನ್ನು ಕೌಸಲ್ಯ ಅರ್ಥ ಮಾಡಿಕೊಂಡು ನೊಂದುಕೊಳ್ಳುತ್ತಾಳೆ.

ದೇವ್ ಜೊತೆ ಚುಕ್ಕಿ ಎಸ್ಕೇಪ್?
ಇನ್ನು ಮನೆಯಲ್ಲಿ ಕೌಸಲ್ಯ ಚುಕ್ಕಿಗೆ ಮದುವೆಯ ಬಗ್ಗೆ ಹೇಳುತ್ತಾಳೆ. ಆಗ ಚುಕ್ಕಿ ದೇವ್ಗೆ ಫೋನ್ ಮಾಡಿ ನನಗೆ ಇನ್ನು ಕೇಳಿಸಿಕೊಂಡು ಇರೋದಕ್ಕೆ ಆಗೋದಿಲ್ಲ. ಒಂದಾ ನೀನು ಮದುವೆಯಾಗು ಇಲ್ಲ ಅಂದರೆ, ನನ್ನ ಮನೆಯಲ್ಲಿ ಹೇಳಿದಂತೆ ಮದುವೆಯಾಗಲು ಬಿಡು ಎನ್ನುತ್ತಾಳೆ. ಆಗ ದೇವ್ ಮನೆಯಿಂದ ಬಂದು ಬಿಡು ನಾವಿಬ್ಬರು ನಾಳೆ ಮದುವೆಯಾಗೋಣ ಎಂದು ಹೇಳುತ್ತಾನೆ. ದೇವ್ ಮಾತನ್ನು ನಂಬಿದ ಚುಕ್ಕಿ ಮನೆಯಿಂದ ಓಡಿ ಹೋಗಲು ಸಿದ್ಧಳಾಗಿದ್ದಾಳೆ. ಬಟ್ಟೆಯೆಲ್ಲಾ ಪ್ಯಾಕ್ ಮಾಡಿಕೊಂಡಿದ್ದಾಳೆ.


Click it and Unblock the Notifications











