ನನ್ನ ತಾಯಿಯ ಸಾವಿಗೆ ನಾನೇ ಕಾರಣ ; ಪಾಪಪ್ರಜ್ಞೆಯಿಂದ ಕಣ್ಣೀರು ಹಾಕಿದ ನಟ
ತಾಯಿ ಮತ್ತು ಮಗು ಸಂಬಂಧ ತುಂಬಾ ಅನನ್ಯವಾದದ್ದು. ಪವಿತ್ರವಾದದ್ದು. ಯಾವುದೇ ಪ್ರತಿಫಲ ಅಪೇಕ್ಷಿಸದ, ತ್ಯಾಗ ಮತ್ತು ಮಮತೆಯಿಂದ ಕೂಡಿದ ಸಂಬಂಧ ಇದು. ಭೂಮಿಯ ಮೇಲೆ ಜನ್ಮ ಪಡೆದ ಮಗು ಮೊದಲು ಕೇಳುವುದೇ ತಾಯಿಯ ಸ್ವರ. ತಾಯಿಯ ಅಪ್ಪುಗೆಯಲ್ಲಿ ಎಲ್ಲವನ್ನು ಒಂದು ಸಲ ಮರೆತು ಬಿಡುತ್ತೆ. ಮಗು ಎಡವಿ ಬಿದ್ದಾಗ ತಾಯಿ ತನ್ನ ನೋವನ್ನೂ ಮರೆತು ರಕ್ಷಾಕವಚವಾಗುತ್ತಾಳೆ.
ಬದುಕಿನಲ್ಲಿ ಎದುರಾಗುವ ಬಿರುಗಾಳಿಯಿಂದ ಪಾರು ಮಾಡುತ್ತಾಳೆ. ತಾನು ಬಿಸಿಲಿನಲ್ಲಿ ಬೆಂದು ಮಕ್ಕಳಿಗೆ ನೆರಳು ನೀಡುತ್ತಾಳೆ. ಆದರೆ ಕಾಲಚಕ್ರ ಉರುಳಿದಂತೆ ತಾಯಿಯ ಈ ಆಸರೆ ಕಣ್ಮರೆಯಾಗುತ್ತೆ. ನಿಂತ ನೆಲ ಕುಸಿಯುತ್ತೆ. ಕೆಲವರಿಗೆ ನೋವು ಜೀವನಪೂರ್ತಿ ಕಾಡುತ್ತೆ. ಇಂತಹದ್ದೇ ಒಂದು ನೋವನ್ನು ರಾಜೀವ್ ಖಂಡೇಲ್ವಾಲ್ ಅನುಭವಿಸುತ್ತಿದ್ದಾರೆ.

ಹೌದು, ರಾಜೀವ್ ಖಂಡೇಲ್ವಾಲ್.. ಹಿಂದಿ ಬೆಳ್ಳಿತೆರೆ ಮತ್ತು ಕಿರುತೆರೆಯ ಚೆಲುವ. ''ಕ್ಯಾ ಹಾದ್ಸಾ ಕ್ಯಾ ಹಕೀಕತ್'' ಧಾರಾವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದ ರಾಜೀವ್ ಖಂಡೇಲ್ವಾಲ್ ಮನೆ ಮಾತಾಗಿದ್ದು ''ಕಹೀ ಥೋ ಹೋಗಾ'' ಧಾರಾವಾಹಿಯ ಮೂಲಕ. ಆ ನಂತರ ''ಲೆಫ್ಟ್ ರೈಟ್ ಲೆಫ್ಟ್''.. ''ಟೈಮ್ ಬಾಂಬ್ 9/11''..''ರಿಪೋರ್ಟರ್ಸ್''.. ಧಾರಾವಾಹಿಯಲ್ಲಿ ಮಿಂಚಿದ ರಾಜೀವ್ ಖಂಡೇಲ್ವಾಲ್ ''ಸಚ್ ಕಾ ಸಾಮ್ನಾ'' ಎಂಬ ಕಾರ್ಯಕ್ರಮಕ್ಕೆ ತಮ್ಮ ನಿರೂಪಣೆಯಿಂದ ಮೆರಗು ತಂದು ನೀಡಿದರು.
ಇನ್ನು ಬೆಳ್ಳಿತೆರೆಯಲ್ಲಿ ''ಆಮೀರ್'' ಇವರ ಮೊದಲ ಚಿತ್ರ. 2008ರಲ್ಲಿ ಈ ಚಿತ್ರ ತೆರೆಗೆ ಬಂದಿತ್ತು. ''ಶೈತಾನ್''.. ''ಟೇಬಲ್ ನಂ 21''.. ''ಸೌಂಡ್ ಟ್ಯ್ರಾಕ್''.. ''ಸಾಮ್ರಾಟ್ & ಕೋ''.. ಇವರ ಕೆಲ ಪ್ರಮುಖ ಚಿತ್ರಗಳು. ಇಂಥಾ ರಾಜೀವ್ ಖಂಡೇಲ್ವಾಲ್ ಸದ್ಯ ಕಿರುತೆರೆಗೆ ಮರಳಿದ್ದಾರೆ. ''ತುಮ್ ಹೋ ನಾ'' ಎಂಬ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ತಮ್ಮ ತಾಯಿಯನ್ನು ನೆನೆದು ರಾಜೀವ್ ಖಂಡೇಲ್ವಾಲ್ ಭಾವುಕರಾಗಿದ್ದಾರೆ. ನನ್ನ ತಾಯಿಯ ಸಾವಿಗೆ ನಾನೇ ಕಾರಣ ಎಂದು ಕಣ್ಣೀರು ಹಾಕಿದ್ದಾರೆ.
ತಮ್ಮ ತಾಯಿಯ ಕುರಿತು ಈ ಕಾರ್ಯಕ್ರಮದಲ್ಲಿ ಮಾತನಾಡಿರುವ ರಾಜೀವ್ ಖಂಡೇಲ್ವಾಲ್, ನನ್ನ ತಾಯಿಗೆ ಕ್ಯಾನ್ಸರ್ ಇತ್ತು, ಆದರೆ ನಾನು ಅದರ ಆರಂಭಿಕ ಲಕ್ಷಣಗಳನ್ನು ಗುರುತಿಸಲಿಲ್ಲ ಎಂದು ಹೇಳಿದ್ದಾರೆ. ನನ್ನ ಈ ತಪ್ಪಿಗೆ ನಾನು ಇವತ್ತು ಕೂಡ ಪಶ್ಚಾತಾಪ ಪಡುತ್ತಿದ್ದೇನೆ ಎಂದಿದ್ದಾರೆ.
ಈ ಕಾರ್ಯಕ್ರಮ ಭಾರತದ ಎಲ್ಲಾ ಮಹಿಳೆಯರಿಗೆ ಸಮರ್ಪಿತವಾದ ಕಾರ್ಯಕ್ರಮ ಎಂದು ಹೇಳಿರುವ ರಾಜೀವ್ ಖಂಡೇಲ್ವಾಲ್, ಬೆನ್ನು ನೋವು, ಹಸಿವು ಆಗದಿರುವುದು, ಹೊಟ್ಟೆ ಉಬ್ಬುವುದು, ಗ್ಯಾಸ್ಟ್ರಿಕ್ ಸಮಸ್ಯೆ, ಇದರಲ್ಲಿ ಯಾವುದಾದರೂ ದೀರ್ಘಕಾಲದವರೆಗೆ ನಿಮಗೆ ಕಾಡಿದರೆ ಕೂಡಲೇ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮಹಿಳೆಯರಿಗೆ ಸಲಹೆ ನೀಡಿದ್ದಾರೆ.

ಆರಂಭಿಕ ಹಂತದಲ್ಲಿಯೇ ಗೊತ್ತಾದರೆ ಅಂಡಾಶಯದ ಕ್ಯಾನ್ಸರ್ ನ ನಿಯಂತ್ರಣ ಮಾಡಬಹುದು ಎಂದು ಹೇಳಿರುವ ರಾಜೀವ್ ಖಂಡೇಲ್ವಾಲ್, ನನ್ನ ತಾಯಿಗೆ ಕೂಡ ಅಂಡಾಶಯದ ಕ್ಯಾನ್ಸರ್ ಇತ್ತು ಆದರೆ ನನಗೆ ಗೊತ್ತಾಗಲೇ ಇಲ್ಲ ಎಂದಿದ್ದಾರೆ. ನನ್ನ ಈ ತಪ್ಪಿಗೆ ಅಪರಾಧಿ ಭಾವ ನನ್ನನ್ನೂ ಇವತ್ತು ಕಾಡುತ್ತೆ ಎಂದು ಕಣ್ಣೀರಾಗಿದ್ದಾರೆ.
ರಾಜೀವ್ ಖಂಡೇಲ್ವಾಲ್ ಅವರ ತಾಯಿ 2018ರಲ್ಲಿ ಒಂದೂವರೆ ವರ್ಷಗಳ ಕಾಲ ಕ್ಯಾನ್ಸರ್ನೊಂದಿಗೆ ಹೋರಾಡಿ ನಿಧನರಾಗಿದ್ದರು. ಅಂದು ತಮ್ಮ ತಾಯಿಯನ್ನು ನೆನೆದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಎರಡು ದಿನಗಳ ಹಿಂದೆ ನನ್ನ ತಾಯಿ ಒಂದೂವರೆ ವರ್ಷಗಳ ಕಾಲ ಕ್ಯಾನ್ಸರ್ನೊಂದಿಗೆ ಹೋರಾಡಿ ನಿಧನರಾದರು. ನಾವು ಒಟ್ಟಾಗಿ ಹೋರಾಡಿದೆವು, ಒಟ್ಟಾಗಿ ಆಶಿಸಿದೆವು, ಆದರೆ ನಾವು ಒಟ್ಟಾಗಿ ಅದರಿಂದ ಹೊರಬರಲು ಸಾಧ್ಯವಾಗಲಿಲ್ಲ. ನಾನೂ ಮತ್ತು ನನ್ನ ಕುಟುಂಬ ಕ್ಷೇಮವಾಗಿದ್ದು, ಅದನ್ನು ಒಪ್ಪಿಕೊಂಡಿದ್ದೇವೆ. ಈಗ ಅವಳು ನನ್ನೊಳಗೇ ಜೀವಿಸುತ್ತಾಳೆ ಎಂದು ಭಾವುಕರಾಗಿ ಬರೆದುಕೊಂಡಿದ್ದರು.


Click it and Unblock the Notifications