ಗಣೇಶ ಹಬ್ಬಕ್ಕೆ ಕಿರುತೆರೆಯಲ್ಲಿ ಉಪೇಂದ್ರ 'ಐ ಲವ್ ಯೂ' ಪ್ರಸಾರ
ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯಿಸಿದ್ದ ಐ ಲವ್ ಯೂ ಸಿನಿಮಾವನ್ನ ಥಿಯೇಟರ್ ನಲ್ಲಿ ನೋಡಲು ಮಿಸ್ ಮಾಡಿಕೊಂಡಿದ್ದವರಿಗೆ ಮತ್ತೊಂದು ಅವಕಾಶ. ಈ ಗಣೇಶ ಹಬ್ಬದ ಪ್ರಯುಕ್ತ ಕಿರುತೆರೆಯಲ್ಲಿ 'ಐ ಲವ್ ಯೂ' ಪ್ರಸಾರವಾಗುತ್ತಿದೆ.
ಆರ್.ಚಂದ್ರು ನಿರ್ದೇಶನ ಮತ್ತು ನಿರ್ಮಾಣದ 'ಐ ಲವ್ ಯು' ಕಳೆದ ಜೂನ್ ತಿಂಗಳಲ್ಲಿ ತೆರೆಕಂಡಿತ್ತು. ಔಟ್ ಅಂಡ್ ಔಟ್ ಉಪ್ಪಿ ಸ್ಟೈಲ್ ನಲ್ಲಿ ಬಂದಿದ್ದ ಈ ಸಿನಿಮಾ ಸೆಪ್ಟಂಬರ್ 2 ರಂದು ಸಂಜೆ 5.30 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
ಪ್ರೀತಿ, ಪ್ರೇಮ ಪುಸ್ತಕದ ಬದನೇಕಾಯಿ ಎನ್ನುವ ಸಂತೋಷ್ (ಉಪೇಂದ್ರ) ಒಂದು ಕಡೆ. ಪ್ರೀತಿಯನ್ನು ಅರ್ಥ ಮಾಡಿಕೊಂಡು ಅದರ ಮೇಲೆ ಪಿ ಹೆಚ್ ಡಿ ಪಡೆಯಬೇಕು ಎನ್ನುವ ಧರ್ಮಿಕಾ (ರಚಿತಾ ರಾಮ್) ಮತ್ತೊಂದು ಕಡೆ. ಪ್ರೀತಿಗೆ ವಿಭಿನ್ನ ವ್ಯಾಖ್ಯಾನ ನೀಡುವ ಸಂತೋಷ್ ನನ್ನು ಧರ್ಮಿಕಾ ಪರಿಚಯ ಮಾಡಿಕೊಂಡು ಅವನಿಂದ ಪ್ರೀತಿಯ ಅರ್ಥ ತಿಳಿದುಕೊಳ್ಳಲು ಮುಂದಾಗುತ್ತಾಳೆ.

ಇಲ್ಲಿಂದ ಇವರಿಬ್ಬರ ಕಥೆ ಶುರು ಆಗುತ್ತದೆ. ಧರ್ಮಿಕಾಗೆ ಪ್ರೀತಿ ಪಾಠ ಮಾಡಲು ಹೋಗುವ ಸಂತೋಷ್ ತಾನೇ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ, ಧರ್ಮಿಕಾ ಆತನಿಗೆ ಕೈ ಕೊಡುತ್ತಾಳೆ. ಪಾಠ ಮಾಡಲು ಬಂದವನೇ ಪಾಠ ಕಲಿಯುತ್ತಾನೆ. ಲವ್ ಗಿಂತ ಲೈಫ್ ಹೆಚ್ಚು ಎಂದು ದೊಡ್ಡ ಶ್ರೀಮಂತ ಆಗುತ್ತಾನೆ. ಬೇರೆ ಮದುವೆ ಆಗುತ್ತಾನೆ.
ಆದರೆ, ಆತ ಸಂತೋಷವಾಗಿ ಇರಲ್ಲ. ಹೀಗಿರುವಾಗ ಆತನಿಗೆ ಮತ್ತೆ ತನ್ನ ಲವರ್ ಅನ್ನು ಭೇಟಿ ಮಾಡುವ ಸಂದರ್ಭ ಬರುತ್ತದೆ. ಆಗ ಏನಾಗುತ್ತದೆ?, ಯಾಕೆ ಆತನ ಲೈಫ್ ಗೆ ಆಕೆ ಮತ್ತೆ ಎಂಟ್ರಿ ಕೊಡುತ್ತಾಳೆ ಎನ್ನುವುದಕ್ಕೆ ಉತ್ತರ ಚಿತ್ರದಲ್ಲಿದೆ.
ಉಪೇಂದ್ರ, ರಚಿತಾ ಜೊತೆಯಲ್ಲಿ ಬ್ರಹ್ಮಾನಂದನ್, ಜೈ ಜಗದೀಶ, ಸೋನು ಗೌಡ, ಹೊನ್ನವಳ್ಳಿ ಕೃಷ್ಣ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











