ಅಂದು ನಾನು ಅವಕಾಶ ನೀಡದಿದ್ದರೆ ಗಿಲ್ಲಿ ಟ್ಯಾಲೆಂಟ್ ಮುಚ್ಚಿ ಹೋಗುತ್ತಿತ್ತು ; ಟ್ರೋಲಿಗರಿಗೆ ಆಹಾರವಾದ ಯಶಸ್ವಿನಿ
ಬದುಕೇ ಹಾಗೆ ... ಅದು ಯಾರನ್ನು, ಯಾವಾಗ, ಎಲ್ಲಿಗೆ ಬೇಕಾದರೂ ಕರೆದುಕೊಂಡು ಬಂದು ನಿಲ್ಲಿಸುತ್ತದೆ. ನಾನು ಅಂತಾ ಮೆರೆಯುವವರನ್ನು ನಡುಬೀದಿಗೆ ಬಿಡಬಹುದು; ನಾನೇನೂ ಅಲ್ಲ ಅಂದುಕೊಂಡೇ ಕುಂತರೆ ಇದ್ದಲ್ಲೇ ಇರಬಹುದು. ಅಥವಾ, ನನ್ನಲ್ಲೇನೋ ಇದೆ ಅಂದುಕೊಳ್ಳುವುದರ ಜೊತೆಗೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿಕೊಂಡವನು, ಮತ್ತದನ್ನು ಹೊರತೆಗೆಯುವಲ್ಲಿ ಶ್ರಮಿಸಿದರೆ ಒಂದಿಲ್ಲೊಂದು ದಿನ ಪ್ರತಿಫಲ ಸಿಕ್ಕಿಯೇ ಸಿಗುತ್ತೆ. ಇದಕ್ಕೆ ಉದಾಹರಣೆಯೇ ಗಿಲ್ಲಿ ನಟ.
ಹೌದು, ಗಿಲ್ಲಿ ನಟ ಸ್ವಸಾಮರ್ಥ್ಯದಿಂದ ಮೇಲೆ ಬಂದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರದ ಹಳ್ಳಿಯ ರೈತ ಕುಟುಂಬದಿಂದ ಬಂದ ಹುಡುಗ. ನಿರ್ದೇಶಕನಾಗಬೇಕೆಂಬ ಕನಸು ಕಂಡಿದ್ದ ಗಿಲ್ಲಿಗೆ ಕೈ ಹಿಡಿದಿದ್ದು ಮಾತ್ರ ಅವರ ಮಾತು ಮತ್ತು ಅವರಲ್ಲಿನ ಹಾಸ್ಯ ಪ್ರಜ್ಞೆ.

''ನಲ್ಲಿ ಮೂಳೆ'' ಮೂಲಕ ಹಲವರಿಗೆ ಪರಿಚಯವಾದ ಗಿಲ್ಲಿ ಆ ನಂತರ ''ಕಾಮಿಡಿ ಕಿಲಾಡಿ''ಗಳು ಸೀಸನ್ 4ರಲ್ಲಿ ಹಾಸ್ಯದ ರಸದೌತಣ ಬಡಿಸಿದರು. ರನ್ನರ್ ಅಪ್ ಆಗಿ ಕೂಡ ಹೊರ ಹೊಮ್ಮಿದರು. ''ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'' ಕಾರ್ಯಕ್ರಮದ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದ ಗಿಲ್ಲಿ ಆ ನಂತರ ''ಭರ್ಜರಿ ಬ್ಯಾಚುಲರ್ಸ್'' ರಿಯಾಲಿಟಿ ಶೋನಲ್ಲಿ ಕೂಡ ಮಿಂಚಿದರು.
ಇಂಥಾ ಗಿಲ್ಲಿ ಸದ್ಯ ಕರುನಾಡಿನ ಮನ ಗೆದ್ದಿದ್ದಾರೆ. ಕರುನಾಡಿನೆಲ್ಲೆಡೆ ಮನೆ ಮಾತಾಗಿದ್ದಾರೆ. ಅಸಂಖ್ಯಾತ ಜನರ ಆಶಯದಂತೆ ''ಬಿಗ್ ಬಾಸ್'' ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಆದರೆ ಈ ಗೆಲುವು ಯಾರದ್ದು..? ಗಿಲ್ಲಿ ಅವರದ್ದಾ..? ಅಥವಾ ಬೇರೆಯವರ ಉದಾರ ಮನೋಭಾವದಿಂದ ಗೆಲ್ಲಿ ಗೆದ್ದಿದ್ದು, ಬೆಳೆದಿದ್ದಾ..? ಎನ್ನುವ ಪ್ರಶ್ನೆ ಸದ್ಯ ಹಲವರನ್ನು ಕಾಡುತ್ತಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಕೂಡ ನಡೆಯುತ್ತಿದೆ. ಇದಕ್ಕೆ ಕಾರಣವಾಗಿದ್ದು ಯಶಸ್ವಿನಿ ಸ್ವಾಮಿ ಅವರಾಡಿದ ಅದೊಂದು ಮಾತು.
ಹೌದು, ಆಗಲೇ ಹೇಳಿದಂತೆ ''ಬಿಗ್ ಬಾಸ್'' ಮನೆ ಪ್ರವೇಶ ಮಾಡುವ ಮೊದಲು ಅವಕಾಶಕ್ಕಾಗಿ ಗಿಲ್ಲಿ ತುಂಬಾ ಸೈಕಲ್ ಹೊಡೆದಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ಧಾರೆ. ಆ ಪೈಕಿ ''ಭರ್ಜರಿ ಬ್ಯಾಚುಲರ್ಸ್'' ಕೂಡ ಒಂದು.

ಇದೇ ಕಾರ್ಯಕ್ರಮದಲ್ಲಿ ಗಿಲ್ಲಿ ಜೊತೆ ವೇದಿಕೆಯನ್ನು ಹಂಚಿಕೊಂಡಿದ್ದವರು ಯಶಸ್ವಿನಿ. ಸದ್ಯ ಇದೇ ಯಶಸ್ವಿನಿ ಸಂದರ್ಶನವೊಂದರಲ್ಲಿ ಗಿಲ್ಲಿಯ ಕುರಿತು ಮಾತನಾಡಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಲವರ ಆಕ್ರೋಶಕ್ಕೆ ಕೂಡ ಗುರಿಯಾಗಿದ್ದಾರೆ.
ಈ ಕುರಿತು ''ಸುಮನ್ ಟಿವಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಯಶಸ್ವಿನಿ ಅಂದು ''ಭರ್ಜರಿ ಬ್ಯಾಚುಲರ್ಸ್''ನಲ್ಲಿ ಗಿಲ್ಲಿ ನಟನನ್ನ ನಾನು ಎಲ್ಲೋ ಒಂದ್ಕಡೆ ಅವನಿಗೆ ಮಾತನಾಡೋದಕ್ಕೆ ಅವಕಾಶ ಕೊಡದೇ ಹೋಗಿದಿದ್ರೆ, ಅವನಲ್ಲಿರುವ ಒಂದು ಪ್ರತಿಭೆ ಮುಚ್ಚಿ ಹೋಗುತ್ತಿತ್ತು ಎಂದು ಹೇಳಿದ್ದಾರೆ.
ಈಗಲೂ ನನಗೆ ಅದು ಖುಷಿ ಕೊಡುವ ವಿಷಯ ಎಂದಿರುವ ಯಶಸ್ವಿನಿ ಅವತ್ತು ಆ ವೇದಿಕೆಯಲ್ಲಿ ನಾನು ಅವನಿಗೆ ಮಾತನಾಡೋದಕ್ಕೆ ಅಥವಾ ಅಲ್ಲಿ ಒಂದು ಜಾಗ ಮಾಡಿಕೊಟ್ಟು, ಅವನನ್ನ ಇಲ್ಲಿಯವರೆಗೂ ತರೋದಕ್ಕೆ ಒಂದು ಸಣ್ಣ ಪ್ರಯತ್ನ ನಾನು ಮಾಡಿದ್ದೇನೆ ಅನ್ನೋದಕ್ಕೆ ನನಗೆ ಈಗಲೂ ಖುಷಿ ಇದೆ ಎಂದು ಹೇಳಿದ್ದಾರೆ.
ಸದ್ಯ ಯಶಸ್ವಿನಿ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಗೆಲುವಿನಲ್ಲಿ ಪಾಲು ಕೇಳಲು ಯಶಸ್ವಿನಿ ಬಂದರು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಗಿಲ್ಲಿಯಲ್ಲಿನ ಪ್ರತಿಭೆ ನಲ್ಲಿ ಮೂಳೆ ವಿಡಿಯೋ ಹೊರ ಬಂದಾಗಲೇ ಎಲ್ಲರಿಗೆ ಗೊತ್ತಾಗಿತ್ತು ಎಂದು ಕೂಡ ಹೇಳಿರುವ ಹಲವರು ನೀವು ಗಿಲ್ಲಿಯಿಂದ ಬೆಳೆದಿದ್ದೀರಾ ಹೊರತು ಗಿಲ್ಲಿ ನಿಮ್ಮಿಂದ ಬೆಳೆದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ಧಾರೆ. 2026ರ ಅತ್ಯುತ್ತಮ ಜೋಕ್ ಇದು ಎಂದು ಯಶಸ್ವಿನಿಯವರ ಕಾಲೆಳೆಯುತ್ತಿದ್ದಾರೆ.


Click it and Unblock the Notifications