ನಾನು ಸದಾ ಅವಳೊಂದಿಗೆ : ಅಸಹ್ಯ, ಅಶ್ಲೀಲ, ದ್ವೇಷ - ಕೆರಳಿ ಕೆಂಡವಾಗಿದ್ದೇಕೆ ನಮ್ರತಾ ಗೌಡ?
ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ.. ಅಥವಾ ರಂಗಭೂಮಿಯಲ್ಲಿ ನಡೆಯುವ ಭಿನ್ನ - ವಿಭಿನ್ನ ಪ್ರಯತ್ನ ಪ್ರಯೋಗಗಳೇ ಇರಲಿ.. ಖಳನಾಯಕ ಅಥವಾ ಖಳನಾಯಕಿಯ ಪಾತ್ರವನ್ನು ನಿರ್ವಹಿಸುವ ಅಥವಾ ಸಾರ್ವಜನಿಕರಿಗೆ ಇಷ್ಟವಾಗದ ಪಾತ್ರಗಳ ಪೋಷಣೆ ಮಾಡಿದಾಗ, ಪ್ರೇಕ್ಷಕರ ಕೆಂಗಣ್ಣಿಗೆ ಆಯಾ ಕಲಾವಿದರು ಗುರಿಯಾಗಬೇಕಾಗುತ್ತೆ. ತೀರಾ ವ್ಯೆಯಕ್ತಿಕವಾಗಿ ಅನೇಕರು ನೆಗೆಟಿವ್ ಮಾತುಗಳನ್ನು ಕೇಳಬೇಕಾಗುತ್ತೆ. ಅಸಹ್ಯ ಎನಿಸಿದರೂ ಕೂಡ ಸಹಿಸಿಕೊಳ್ಳಬೇಕಾಗುತ್ತೆ.
ನಟಭಯಂಕರ ವಜ್ರಮುನಿ ಅವರಿಂದ ಹಿಡಿದು ಹಲವರು ಈ ತರಹದ ಪ್ರಸಂಗವನ್ನು ಎದುರಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿಯೇ ಸಾರ್ವಜನಿಕರಿಂದಲೇ ಮುಜುಗರಕ್ಕೀಡಾಗಿದ್ದಾರೆ. ಅದು ಕೇವಲ ಪಾತ್ರವಷ್ಟೇ.. ತಾವೂ ಮಾಡಿದ್ದು ನಿರ್ದೇಶಕ ಹೇಳಿರುವ ಕೆಲಸವನ್ನು ಮಾತ್ರ ಎಂದು ಹೇಳಿದರೂ ಕೂಡ ಹಲವರು ಈ ಮಾತುಗಳನ್ನು ಮನವಿಯನ್ನು ಒಪ್ಪುವುದೇ ಇಲ್ಲ. ಬದಲಿಗೆ ತೆರೆಯ ಮೇಲೆ ತಮಗೆ ಕಂಡಿದ್ದೇ ಅವರ ನಿಜವಾದ ವ್ಯಕ್ತಿತ್ವ ಎಂದುಕೊಂಡು ಕಿಡಿ ಕಾರಲು ಪ್ರೇಕ್ಷಕರು ಶುರು ಮಾಡುತ್ತಾರೆ.

ಇನ್ನೂ ಇದು 5G ಯುಗ. ಕೇಳಬೇಕಾ ? ದ್ವೇಷದ ಕಿಡಿ ಧಗಧಗನೇ ಉರಿಯುತ್ತೆ. ಹಲವು ಕಲಾವಿದರ ನೆಮ್ಮದಿಗೆ ಕೊಳ್ಳಿ ಇಡುತ್ತೆ. ಉದಾಹಾರಣೆಗೆ ನಮ್ರತಾ ಗೌಡ ಅವರನ್ನೇ ತೆಗೆದುಕೊಳ್ಳಿ
ಹೌದು, ಕನ್ನಡ ಕಿರುತೆರೆಯ ಸೂಪರ್ ಹಿಟ್ ಧಾರಾವಾಹಿಗಳ ಪೈಕಿ ''ಕನ್ನಡತಿ'' ಕೂಡ ಒಂದು. ಈ ಸೀರಿಯಲ್ನಲ್ಲಿ ನಾಯಕನಾಗಿ ನಟಿಸಿ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದವರು ಹ್ಯಾಂಡ್ಸಮ್ ಹೀರೋ ಕಿರಣ್ ರಾಜ್. ಕನ್ನಡತಿ ಮುಕ್ತಾಯಗೊಂಡ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಕಿರಣ್ ರಾಜ್, ಇದೀಗ ''ಕರ್ಣ'' ಧಾರಾವಾಹಿ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ.
ಇನ್ನೂ ನಮ್ರತಾ ಗೌಡ ಕಿರುತೆರೆಯ ನಾಗಿಣಿ. ನಾಗಿಣಿ 2 ಧಾರಾವಾಹಿ ಮೂಲಕವೇ ಅಸಂಖ್ಯಾತ ಜನರ ಹೃದಯ ಗೆದ್ದ ನಮ್ರತಾ ಗೌಡ ಆ ನಂತರ್ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಿದರು. ಇವರಿಬ್ಬರ ಜೊತೆ ಭವ್ಯಾ ಗೌಡ ಕೂಡ ಕೈ ಜೋಡಿಸಿದ್ದಾರೆ.
ಈ ತ್ರಿವಳಿ ಸಂಗಮದಲ್ಲಿ ಸದ್ಯ "ಕರ್ಣ'' ಧಾರಾವಾಹಿ ಮೂಡಿ ಬರುತ್ತಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಖೂಡ ಸೆಳೆಯುತ್ತಿದೆ. ಆದರೆ, ಇದೇ ಸಮಯದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಪ್ರೋಮೋವನ್ನು ಕಂಡು ಒಂದು ವರ್ಗ ಕಿಡಿ ಕಾರುತ್ತಿದೆ. ನಮ್ರತಾ ಗೌಡ ಅವರ ಬಗ್ಗೆ ಅಸಹ್ಯ- ಅಶ್ಲೀಲ ಪದ ಬಳಸಿ ಕಾಮೆಂಟ್ಗಳನ್ನು ಮಾಡುತ್ತಿದೆ.

ಸಹಜವಾಗಿ ತಮ್ಮ ಬಗ್ಗೆ ವ್ಯಕ್ತವಾಗುತ್ತಿರುವ ಈ ಅಭಿಪ್ರಾಯಗಳನ್ನು ನಮ್ರತಾ ಗೌಡ ಗಮನಿಸಿದ್ದಾರೆ. ತಮ್ಮ ತೇಜೋವಧೆಯಾಗ್ತಿರುವುದನ್ನು ಕಂಡು ನೊಂದುಕೊಂಡಿದ್ದಾರೆ. ಈ ಹಿನ್ನೆಲೆ ತಮ್ಮ ನೋವನ್ನು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿರುವ ನಮ್ರತಾ ಗೌಡ ನಿಮ್ಮೆಲ್ಲರ ದ್ವೇಷ ನೋಡಿ ನನಗೆ ಬೇಸರವಾಯ್ತು ಎಂದು ಹೇಳಿದ್ದಾರೆ.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನಮ್ರತಾ ಗೌಡ ಬರೆದುಕೊಂಡಿದ್ದು ''ಸುಮಾರು 23 ವರ್ಷಗಳ ಸುದೀರ್ಘ ನಟನೆಯ ಅನುಭವದಲ್ಲಿ ಸಾಕಷ್ಟು ವಿಭಿನ್ನ ಪಾತ್ರಗಳು. ಕೊಂಚ ಬ್ರೇಕ್ನ ನಂತರ ಕೇಳಿದ ಪಾತ್ರವೇ ನಿತ್ಯ. ಕಥೆ ಮತ್ತು ಪಾತ್ರದ ಆಳ ಕೇಳಿದಾಗ ನನಗೆ ತುಂಬ ಹಿಡಿಸಿದವಳು. ಬಲಿಷ್ಠಳು, ಸ್ವತಂತ್ರಳು, ಸದಾ ತನಗಿಂತ ಇತರರ ಅಗತ್ಯಗಳನ್ನು ಮೊದಲು ಯೋಚಿಸುವವಳು. ಇಷ್ಟೆಲ್ಲಾ ಹಂತಗಳನ್ನು ಒಳಗೊಂಡಿರುವ ಪಾತ್ರವನ್ನು ಒಲ್ಲೆ ಎನ್ನಲು ಮನಸಾಗಲಿಲ್ಲ'' ಎಂದು ಹೇಳಿದ್ದಾರೆ.
ಮುಂದುವರೆದು ''ಇತ್ತೀಚೆಗಿನ ಪ್ರೋಮೋ ಕಂಡು ನಿತ್ಯಾಳ ಮೇಲೆ ನೀವು ತೋರಿಸುತ್ತಿರುವ ದ್ವೇಷ ಕಂಡು ಬೇಸರವುಂಟಾಯಿತು. Its okay. ನಿತ್ಯ ನಾನು ಪೋಷಿಸಿದ ಪಾತ್ರ. ತುಂಬಾ ಪ್ರೀತಿಯಿಂದ ಒಪ್ಪಿದ ಪಾತ್ರ. ಅವಳೊಂದಿಗೆ ನಾನಿದ್ದೇನೆ. ಅವಳನ್ನು ನನ್ನನ್ನು ಪ್ರೀತಿಸುವ ಅಭಿಮಾನಿಗಳು ಸದಾ ನಮ್ಮೊಂದಿಗೆ ಇರುವರು ಎಂದು ಭಾವಿಸುವೆ. ಪ್ರೀತಿಯಿಂದ, ನಿಮ್ಮವಳು'' ಎಂದು ಬರೆದುಕೊಂಡಿದ್ದಾರೆ ನಮ್ರತಾ ಗೌಡ.
ಸದ್ಯ ನಮ್ರತಾ ಗೌಡ ಅವರ ಈ ಮನದ ಮಾತುಗಳಿಗೆ ಹಲವರು ಸ್ಪಂದಿಸಿದ್ದು, ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಈ ಪಾತ್ರವನ್ನು ಈಗ ಎಲ್ಲರೂ ದ್ವೇಷಿಸಬಹುದು ಆದರೆ ಮುಂದೆ ಒಂದು ದಿನ ಇದೇ ಪಾತ್ರವನ್ನು ಎಲ್ಲರೂ ಕೊಂಡಾಡುತ್ತಾರೆ ಎಂದರೆ, ನಿಮಗೆ ನೀಡಲಾದ ಕೆಲಸವನ್ನು ನೀವು ಮಾಡುತ್ತಿದ್ದೀರಾ, ಅದರಲ್ಲೇನಿದೆ ಎಂದು ಕೂಡ ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











