ಕಳೆದ ವರ್ಷ ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದ ‘ಬ್ರಹ್ಮಗಂಟು’ ಖ್ಯಾತಿಯ ಶೋಭಿತಾ ಶಿವಣ್ಣ ನಿಧನ..!
ಜೀವಗಳೆರಡು ಭಾವ ಒಂದೇ ಎನ್ನುವ ಪ್ರೀತಿಗೆ ಅನೇಕರು ಹೊತೊರೆಯುತ್ತಾರೆ. ಆದರೆ ಎಲ್ಲರಿಗೂ ಪ್ರೀತಿಯಲ್ಲಿರುವ ಸುಖ ಗೊತ್ತಾಗಲ್ಲ. ಬಹುತೇಕರಿಗೆ ನಿಜವಾದ ಪ್ರೀತಿ ಸಿಗುವುದಿಲ್ಲ. ಹದಿಹರೆಯದ ವಯಸ್ಸಿನಲ್ಲಿ ಬಾಹ್ಯ ಆಕರ್ಷಣೆಯನ್ನೇ ಪ್ರೀತಿ ಎಂದುಕೊಂಡು ಅನೇಕರು ನರಳುತ್ತಾರೆ. ಉಸಿರುಗಟ್ಟಿದಂತೆ ಭಾಸವಾಗಿ ಸಂಬಂಧ ಕಡಿದುಕೊಂಡು ಬಿಡುತ್ತಾರೆ.
ಇನ್ನೂ ಕೆಲವರು ಬದುಕಿನ ಜಂಜಾಟದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಾರೆ. ಸದ್ಯಕ್ಕೆ ಬ್ರಹ್ಮಗಂಟು ಧಾರಾವಾಹಿಯ ಮೂಲಕ ಜನಮನ್ನಣೆ ಗಳಿಸಿದ್ದ ಶೋಭಿತಾ ಅವರ ಅಕಾಲಿಕ ನಿಧನ ಇದೇ ತರಹದ ಅನುಮಾನಗಳನ್ನು ಹುಟ್ಟು ಹಾಕಿದೆ.

ಹೌದು, ನಂಬಲು ಅಸಾಧ್ಯವಾದರೂ ಇದು ಸತ್ಯ. ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಶೋಭಿತಾ ಇಂದು ಉಸಿರು ಚೆಲ್ಲಿದ್ದಾರೆ. ಸದ್ಯ ಶೋಭಿತಾ ಅವರ ನಿಧನಕ್ಕೆ ನಿಖರವಾದ ಕಾರಣವೇನು ಎನ್ನುವುದು ಗೊತ್ತಾಗದೇ ಇದ್ದರೂ ಮದುವೆಯ ನಂತರ ಶೋಭಿತಾ ಹೈದ್ರಾಬಾದ್ನಲ್ಲಿ ವಾಸವಾಗಿದ್ದರು ಎನ್ನುವ ಮಾತು ಕೇಳಿ ಬರುತ್ತಿದೆ. ಇನ್ನೂ ಹೈದ್ರಾಬಾದ್ನಲ್ಲಿ ಕೊನೆಯುಸಿರೆಳೆದ ಶೋಭಿತಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಬೆಂಗಳೂರಿಗೆ ತರುವ ಸಾಧ್ಯತೆಯಿದೆ.
ಕಳೆದ ವರ್ಷ ಮೇ 22ರಂದು ಮದುವೆಯಾಗಿದ್ದ ಶೋಭಿತಾ ಆ ನಂತರ ಕಿರುತೆರೆಯಿಂದ ಅಂತರವನ್ನು ಕಾಪಾಡಿಕೊಂಡಿದ್ದರು. ಆದರೂ ಅಚ್ಚರಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದ ಶೋಭಿತಾ ತಮ್ಮ ಮದುವೆಯ ಫೋಟೊಗಳನ್ನು ಇಲ್ಲಿಯವರೆಗೆ ಹಂಚಿಕೊಂಡಿಲ್ಲ. ತಮ್ಮ ಪತಿಯ ಜೊತೆ ಇರುವ ಒಂದೇ ಒಂದು ಫೋಟೊ ಕೂಡ ಶೇರ್ ಮಾಡಿಕೊಂಡಿಲ್ಲ. ಇನ್ನೂ ಕಳೆದ ವರ್ಷ ಮದುವೆ ಸಮಯದಲ್ಲಿ ಕೂಡ ಮದುವೆ ನಡೆದಿದ್ದು ಯಾವಾಗ, ಮದುವೆಯಾದ ಹುಡುಗ ಯಾರು, ಎಂಬ ಮಾಹಿತಿಯನ್ನು ಕೂಡ ಶೋಭಿತಾ ಹಂಚಿಕೊಂಡಿರಲಿಲ್ಲ.
ಸದ್ಯ ಶೋಭಿತಾ ಶಿವಣ್ಣ ಅವರ ಅಕಾಲಿಕ ನಿಧನದ ಸುದ್ದಿಯನ್ನು ಕೇಳಿ ಇವರ ಅಭಿನಯಕ್ಕೆ ಮನಸೋತಿದ್ದ ಅನೇಕ ಅಭಿಮಾನಿಗಳು ದಿಗ್ಭ್ರಾಂತರಾಗಿದ್ದಾರೆ. ಆಘಾತಕ್ಕೊಳಗಾದ ಕುಟುಂಬಸ್ಥರು ಹಾಗೂ ಸ್ನೇಹಿತರು ಹೈದ್ರಾಬಾದ್ನತ್ತ ಹೊರಟಿದ್ದಾರೆ.
ಇನ್ನುಳಿದಂತೆ ಮೂಲತಃ ಸಕಲೇಶಪುರದವರಾದ ಶೋಭಿತಾ ಶಿವಣ್ಣ ಮೊದಲಿನಿಂದಲೂ ನಟನೆಯಲ್ಲಿ ಅತೀವ ಆಸಕ್ತಿ ಹೊಂದಿದ್ದರು.ಆರಂಭದಲ್ಲಿ ರಾಜ್ ಮ್ಯೂಸಿಕ್ ಚಾನೆಲ್ ನಲ್ಲಿ VJ ಆಗಿದ್ದ ಶೋಭಿತಾ, ಆ ನಂತರ ಕಿರುತೆರೆಯಲ್ಲಿ ಸಿಕ್ಕ ಅವಕಾಶವನ್ನೆಲ್ಲಾ ಬಳಸಿಕೊಂಡು ಮಿಂಚಿದ್ದರು.ತಾನೊಬ್ಬ ಒಳ್ಳೆಯ ಕಲಾವಿದೆ ಆಗಬೇಕು ಎಂದು ಹಗಲಿರುಳು ಎನ್ನದೆ ಶ್ರಮವಹಿಸಿ, ಕೆಲಸ ಮಾಡಿ ಇದೀಗ ಸಿನಿಮಾ ಹಾಗೂ ಕಿರುತೆರೆಯಲ್ಲಿ ತನ್ನದೇ ಆದ ಛಾಪನ್ನು ಕೂಡ ಶೋಭಿತಾ ಮೂಡಿಸಿದ್ದರು. ಕನ್ನಡದ ಬ್ರಹ್ಮಗಂಟು ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ್ದ ಶೋಭಿತಾ ನಿನ್ನಿಂದಲೇ ಧಾರಾವಾಹಿಯಲ್ಲಿ ಕೂಡ ಆಕ್ಟ್ ಮಾಡಿದ್ದರು. ಇತರ ಭಾಷೆಯ ಧಾರಾವಾಹಿಗಳಲ್ಲಿಯೂ ಕೂಡ ನಟಿಸಿದ್ದರು.
ಇನ್ನು ಕೇವಲ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿ ಕೂಡ ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಿಕೊಂಡಿದ್ದ ಶೋಭಿತಾ ಅಟೆಂಪ್ಟ್ ಟು ಮರ್ಡರ್ ಹಾಗೂ ಜಾಕ್ಪಾಟ್ ಸಿನಿಮಾಗಳಲ್ಲಿ ನಟಿಸಿದ್ದರು. ಮಾತ್ರವಲ್ಲದೇ ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನಟ ಚಂದು ಗೌಡ ಜೊತೆ ಶತಭಿಷೆ ಚಿತ್ರದಲ್ಲೂ ನಟಿಸಿದ್ದರು. ಇದಲ್ಲದೇ ಶೋಭಿತಾ ''ಫಸ್ಟ್ ಡೇ ಫಸ್ಟ್ ಷೋ" ಸಿನಿಮಾಗೋಸ್ಕರ ಕೂಡ ಬಣ್ಣ ಹಚ್ಚಿದ್ದರು. ತೀರಾ ಇತ್ತೀಚೆಗಷ್ಟೇ ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿಯ ಶುಭಾಶಯವನ್ನು ಕೋರಿ ಅತೀ ಶೀಘ್ರದಲ್ಲಿ 'ಫಸ್ಟ್ ಡೇ, ಫಸ್ಟ್ ಷೋ' ನಿಮ್ಮ ಮುಂದೆ. ಕನ್ನಡ ಚಿತ್ರರಂಗದಲ್ಲೇ ಹಿಂದೆಂದೂ ನೋಡಿರದ ಮನರಂಜನೆಯ ಕಥಾ ಹಂದರ, ತಾಯಿ ಭುವನೇಶ್ವರಿ ಆಶೀರ್ವದಿಸಿ ಹಾಗು ಕೋಟ್ಯಂತರ ಕನ್ನಡಿಗರು ಹೆಮ್ಮೆಯಿಂದ ಮೆಚ್ಚಿ "ಹೌದೌದು" ಎನ್ನುವ ಚಿತ್ರರಂಗದ ಬಗೆಗಿನ ಒಂದು ಅಪ್ಪಟ ಕನ್ನಡ ಚಿತ್ರ. ಹರಸಿ ಹಂಚಿ ಆಶೀರ್ವದಿಸಿ' ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದರು.


Click it and Unblock the Notifications











