ನವೀನ್ ಗೌಡ ಅಂತಿದ್ದ ಹೆಸರು ಯಶ್ ಅಂತ ಬದಲಿಸಿದ್ಯಾರು? ಅದಕ್ಕೆ ಕಾರಣವೇನು?
ಇವತ್ತು ರಾಂಕಿಂಗ್ ಸ್ಟಾರ್ ಯಶ್ ಅವರ ಹುಟ್ಟಿದ ಹಬ್ಬ. ಕೆಜಿಎಫ್ ಸರಣಿ ಆದ ಮೇಲೆ ಮುಂದಿನ ಸಿನಿಮಾ ಯಾವುದಿರಬಹುದು ಎಂಬ ಕುತೂಹಲ ಎಲ್ಲಾ ಅಭಿಮಾನಿಗಳಿಗೂ ಕಾಡುತ್ತಿದೆ. ಯಾಕಂದ್ರೆ ಯಶ್ ಅವರ ರೇಂಜ್ ಈಗ ಸಂಪೂರ್ಣವಾಗಿ ಬದಲಾಗಿದೆ. ಸಿನಿಮಾಗಳನ್ನು ಒಪ್ಪಿಕೊಳ್ಳುವಾಗಲೂ ಯಶ್ ಅವರ ಯೋಚನೆ ಬೇರೆಯದ್ದೇ ಆಗಿರುತ್ತದೆ. ಹೀಗಾಗಿ ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಕಳೆದ ಎರಡು ವರ್ಷದಿಂದ ಕೊರೊನಾ ಕಂಟಕದಿಂದ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಳ್ಳಲಾಗಿರಲಿಲ್ಲ. ಈ ಬಾರಿ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಿಸುತ್ತಾರೆ ಎಂಬ ನಂಬಿಕೆ ಇತ್ತು. ಆದ್ರೆ ಹೊಸ ಸಿನಿ.ಅದ ಅಪ್ಡೇಟ್ ನೀಡುತ್ತೇನೆ ಎಂದು ದುಬೈಗೆ ಹಾರಿರುವ ಯಶ್, ಹುಟ್ಟುಹಬ್ಬವನ್ನು ಅಲ್ಲಿಯೆ ಆಚರಿಸುತ್ತಾರೆ. ಆದ್ರೆ ಈಗಿನ ವಿಚಾರ ಯಶ್ ಹೆಸರಿನ ಬಗ್ಗೆ. ಅದನ್ನ ಯಾರು ಕೊಟ್ಟಿದ್ದು, ಹೇಗೆ ಬಂದಿದ್ದು ಎಂಬ ಮಾಹಿತಿ ಇಲ್ಲಿದೆ.

ನವೀನ್ ಗೌಡ ಆಗಿ ಚಿತ್ರರಂಗಕ್ಕೆ ಬಂದಿದ್ದ ಯಶ್
ನವೀನ್ ಗೌಡ ಅಂದ್ರೆ ಅಷ್ಟು ಬೇಗ ಯಾರಿಗೂ ಗೊತ್ತಾಗುವುದಿಲ್ಲ. ಅದೇ ಯಶ್ ಅಂದ್ರೆ ಎಲ್ಲರಿಗೂ ಗೊತ್ತಾಗುತ್ತೆ. ಬರೀ ಕನ್ನಡ, ಕರ್ನಾಟಕದವರಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಈಗ ಯಶ್ ಅಂದ್ರೆ ಯಾರು ಎಂಬುದು ಗೊತ್ತಾಗಿದೆ. ಕೆಜಿಎಫ್ ಸಿನಿಮಾ ಮಾಡಿದ ಬಳಿಕ ಎಲ್ಲರೂ ಯಶ್ ಫ್ಯಾನ್ ಆಗಿ ಬಿಟ್ಟಿದ್ದಾರೆ. ಹೀಗಾಗಿ ಎಲ್ಲಿಯೇ ಹೋದರೂ ಯಶ್ಗೆ ಅವರದ್ದೇ ಆದ ಫ್ಯಾನ್ ಫಾಲೋವರ್ಸ್ ಹುಟ್ಟಿಕೊಂಡಿದ್ದಾರೆ. ಮುಂಬೈ, ಹೈದ್ರಾಬಾದ್ ಅಂತ ಹೋದಾಗಲೂ ಯಶ್ಗೆ ಅಭಿಮಾನಿಗಳು ಮುತ್ತಿಗೆ ಹಾಕಿಕೊಂಡು ಬಿಡುತ್ತಾರೆ.

ನಂದಗೋಕುಲದಿಂದ ಬಂದಿದ್ದ ಯಶ್
ಎಲ್ಲರಿಗೂ ನೆನಪಿರಬಹುದು 2004 ರಲ್ಲಿ ಈಟಿವಿ ಕನ್ನಡ ಫೇಮಸ್ ಇದ್ದಂತ ಚಾನೆಲ್ ಆಗಿತ್ತು. ಅದರಲ್ಲಿ ಬರುತ್ತಿರುವಂತ ಧಾರಾವಾಹಿಗಳು ಎಲ್ಲರ ಮನಸ್ಸನ್ನು ಗೆದ್ದಿತ್ತು. ಆ ಧಾರಾವಾಹಿ ಮೂಲಕ ಮನೆ ಮನಕ್ಕೂ ಪರಿಚಿತರಾಗಿದ್ದು, ನವೀನ್ ಗೌಡ ಹಾಗೂ ರಾಧಿಕಾ ಪಂಡಿತ್. ಈ ಧಾರಾವಾಹಿಯಲ್ಲಿ ಮೊದಲಿಗೆ ಅಣ್ಣ ತಂಗಿಯಾಗಿ ಕಾಣಿಸಿಕೊಂಡಿದ್ದರು. ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿ ಆಗಿತ್ತು ಎಂದರೆ ತಪ್ಪಾಗಲಾರದು. ರೇಖಾ ರಾಣಿ ಈ ಧಾರಾವಾಹಿಯ ನಿರ್ಮಾಪಕರಾಗಿದ್ದರೆ, ಅವರ ಪತಿ, ಈಗಿನ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿರುವ ಅಶೋಕ್ ಕಶ್ಯಪ್ ನಿರ್ದೇಶಕರಾಗಿದ್ದರು.

ಅಶೋಕ್ ಕಶ್ಯಪ್ ನಾಮಕರಣ ಮಾಡಿದ್ದ ಹೆಸರು
'ನಂದಗೋಕುಲ' ಧಾರಾವಾಹಿ ಶುರು ಮಾಡುವಾಗ ಹೊಸ ಮುಖಗಳಿಗಾಗಿ ರೇಖಾ ರಾಣಿ ಹಾಗೂ ಅಶೋಕ್ ಕಶ್ಯಪ್ ಹುಡುಕಾಟ ನಡೆಸುತ್ತಿದ್ದರು. ಆಗತಾನೇ ಇಂಡಸ್ಟ್ರಿಗೆ ಬರಲೇಬೇಕೆಂದು ಒದ್ದಾಡುತ್ತಿದ್ದಂತ ನವೀನ್ ಗೌಡ, ಅಶೋಕ್ ಕಶ್ಯಪ್ ದಂಪತಿಯನ್ನುಭೇಟಿ ಮಾಡಿದ್ದರಂತೆ. ಒಂದೇ ಒಂದು ಚಾನ್ಸ್ ಕೊಡಿ ಎಂದು ಕೇಳಿ ಪಡೆದಿದ್ದರಂತೆ. ಬಳಿಕ ನವೀನ್ ಗೌಡ ಎಂಬುದು ನಾರ್ಮಲ್ ಹೆಸರಾಗಿದ್ದ ಕಾರಣ, ಅಶೋಕ್ ಕಶ್ಯಪ್ ಅವರೇ ಯಶ್ ಎಂದು ನಾಮಕರಣ ಮಾಡಿದ್ದರಂತೆ.

ಯಶ್ ಕಾಣುತ್ತಿದ್ದ ಕನಸೇ ದೊಡ್ಡದು
ಯಶ್ ಸಿನಿಮಾಗಳನ್ನು ನೋಡಿದವರಿಗೆ ಒಂದಂತು ಅರ್ಥವಾಗುತ್ತೆ. ಜೀವನದಲ್ಲಿ ಅದೇನು ಗುರಿ ಇಟ್ಟುಕೊಂಡಿದ್ದಾರೋ ಅದೇ ಗುರಿ ಸಿನಿಮಾದಲ್ಲಿ ಡೈಲಾಗ್ ಆಗಿ ಬರುತ್ತೆ ಅಂತಾರೆ. ಅದಕ್ಕೆ ಉದಾಹರಣೆ 'ಮಾಸ್ಟರ್ ಪೀಸ್' ಸಿನಿಮಾ. ಜೊತೆಗೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲೂ ತಮ್ಮ ಆಸೆಗಳನ್ನು ವ್ಯಕ್ತಪಡಿಸಿದ್ದರು. ಗಾಂಧಿನಗರದಲ್ಲಿ ನಾನೊಂದು ದೊಡ್ಡ ಹೆಸರು ಮಾಡಬೇಕು ಎಂದಿದ್ದರು. ಅದೇ ರೀತಿ ಇವತ್ತು ದೊಡ್ಡ ಹೆಸರು ಮಾಡಿ ಆಗಿದೆ. ಆದರೆ ಮೊದಲ ಧಾರಾವಾಹಿಗೆ ಬಂದ ನವೀನ್ ಗೌಡಗೆ ಮೊದಲು ಅವಕಾಶದತ್ತ ಮಾತ್ರ ಚಿತ್ತವಿತ್ತಂತೆ. ಸೆಟ್ನಲ್ಲಿ ಎಲ್ಲೂ ಕೂಡ ತನ್ನ ಆಸೆ ಆಕಾಂಕ್ಷೆಗಳನ್ನು ವ್ಯಕ್ತಪಡಿಸುತ್ತಾ ಇರಲಿಲ್ಲವಂತೆ.


Click it and Unblock the Notifications











