ಮಲಯಾಳಂ ಟಿವಿ ಚಾನೆಲ್ ಅನ್ನು ಮತ್ತೆ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ: ಕಾರಣ?
ಮಲಯಾಳಂ ಟಿವಿ ಚಾನೆಲ್ 'ಮೀಡಿಯಾ ಒನ್' ಪ್ರಸಾರವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಮತ್ತೊಮ್ಮೆ ತಡೆ ಹಿಡಿದಿದೆ.
ಇಲಾಖೆಯು ಯಾವುದೇ ಹೆಚ್ಚಿನ ಕಾರಣ ನೀಡದೆ ಕೇವಲ 'ಭದ್ರತೆ ಕಾರಣ'ಕ್ಕಾಗಿ ಚಾನೆಲ್ ಪ್ರಸಾರವನ್ನು ತಡೆ ಹಿಡಿಯುತ್ತಿರುವುದಾಗಿ ಹೇಳಿದೆ. ಕೇಂದ್ರ ಸರ್ಕಾರದ ಈ ನಡೆಯನ್ನು ಕೇರಳ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಕರೆದಿದೆ.
ಮೀಡಿಯಾ ಒನ್ ಚಾನೆಲ್ನ ಎಡಿಟರ್ ಪ್ರಮೋದ್ ರಾಮನ್ ಮಾತನಾಡಿ, ''ಸರ್ಕಾರವು ಸೂಕ್ತ ಕಾರಣ ನೀಡದೆ ನಮ್ಮ ಚಾನೆಲ್ನ ಪ್ರಸಾರವನ್ನು ತಡೆ ಹಿಡಿದಿದೆ. ನಾವು ನ್ಯಾಯಾಂಗ ಹೊರಾಟಕ್ಕೆ ಸಿದ್ಧರಾಗಿದ್ದು ಕೆಲವೇ ದಿನಗಳಲ್ಲಿ ಮತ್ತೆ ಚಾನೆಲ್ ಪ್ರಸಾರ ಆರಂಭಿಸುವಂತೆ ಮಾಡುವ ಪ್ರಯತ್ನ ಪ್ರಾರಂಭಿಸಿದ್ದೇವೆ'' ಎಂದಿದ್ದಾರೆ.

2020ರ ದೆಹಲಿ ಗಲಭೆ ಸಮಯದಲ್ಲಿ ಮೀಡಿಯಾ ಒನ್ ಹಾಗೂ ಮಲಯಾಳಂ ಏಷಿಯನ್ ನೆಟ್ ಚಾನೆಲ್ ಎರಡನ್ನೂ 48 ಗಂಟೆಗಳ ಕಾಲ ಮಾಹಿತಿ ಮತ್ತು ಪ್ರಸಾರ ಇಲಾಖೆ ಬಂದ್ ಮಾಡಿತ್ತು. ಆಗಲೂ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ನ್ಯೂಸ್ ಚಾನೆಲ್ ಮಾತ್ರವೇ ಅಲ್ಲದೆ ಯೂಟ್ಯೂಬ್ ಚಾನೆಲ್ಗಳ ಮೇಲೂ ಮಾಹಿತಿ ಮತ್ತು ಪ್ರಸಾರ ಇಲಾಖೆ ಕಣ್ಣಿಟ್ಟಿದ್ದು, ಕಳೆದ ತಿಂಗಳು ಸುಮಾರು 20 ಯೂಟ್ಯೂಬ್ ಚಾನೆಲ್ಗಳನ್ನು ಬಂದ್ ಮಾಡಿತ್ತು. ಈ ಯೂಟ್ಯೂಬ್ ಚಾನೆಲ್ಗಳು ದೇಶವಿರೋಧಿ ಕಂಟೆಂಟ್ ಬಿತ್ತರಿಸುತ್ತಿದ್ದವು ಎಂದು ಇಲಾಖೆ ಹೇಳಿತ್ತು.
ನಂತರ ಮಾತನಾಡಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, ''ಸುಳ್ಳು ಸುದ್ದಿ, ದೇಶದ ವಿರುದ್ಧ ಪಿತೂರಿ, ಸಂಚು, ಪ್ರೊಪಾಗಾಂಡ ಹರಡುವ ಯೂಟ್ಯೂಬ್ ಚಾನೆಲ್ ಹಾಗೂ ವೆಬ್ಸೈಟ್ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದ್ದೇನೆ. ಹಲವು ರಾಷ್ಟ್ರಗಳು ಈ ವಿಷಯವಾಗಿ ಜಾಗೃತವಾಗಿವೆ, ಯೂಟ್ಯೂಬ್ ಸಹ ಇಂಥಹಾ ಚಾನೆಲ್ಗಳನ್ನು ಡಿಲೀಟ್ ಮಾಡಲು ಮುಂದೆ ಬಂದಿವೆ'' ಎಂದಿದ್ದರು.
'ಭವಿಷ್ಯದಲ್ಲಿ ಸಹ ದೇಶದ ವಿರುದ್ಧ ಪ್ರಚಾರ ಮಾಡುವ, ಉದ್ದೇಶಪೂರ್ವಕ ಸುಳ್ಳು ಸುದ್ದಿ ಹರಡಿಸುವ, ಸಂಚು ರೂಪಿಸುವ, ದ್ವೇಷ ಹರಡಲು ಯತ್ನಿಸುವ ಯೂಟ್ಯೂಬ್ ಚಾನೆಲ್ ಹಾಗೂ ವೆಬ್ಸೈಟ್ಗಳನ್ನು ಬಂದ್ ಮಾಡಲಾಗುವುದು'' ಎಂದು ಅನುರಾಗ್ ಠಾಕೂರ್ ಹೇಳಿದ್ದರು.


Click it and Unblock the Notifications











