ಅನಿರುದ್ಧ್ನ ಕಿರುತೆರೆಯಿಂದ 2 ವರ್ಷ ದೂರು ಇಡುವುದು ಅಷ್ಟು ಸುಲಭನಾ?
ಕಿರುತೆರೆಯ ಜನಪ್ರಿಯ 'ಜೊತೆ ಜೊತೆಯಲಿ' ಧಾರಾವಾಹಿಯಿಂದ ನಟ ಅನಿರುದ್ಧ್ಗೆ ಗೇಟ್ ಪಾಸ್ ಕೊಡಲಾಗಿದೆ. ಜೊತೆಗೆ ಅವರನ್ನು ಕಿರುತೆರೆ ಕಾರ್ಯಕ್ರಮಗಳಿಂದ ಎರಡು ವರ್ಷ ದೂರ ಇಡಲು ನಿರ್ಮಾಪಕರೆಲ್ಲಾ ಸೇರಿ ನಿರ್ಧಾರ ತೆಗೆದುಕೊಂಡಿದ್ದಾರೆ. ಇದೇ ವಿಚಾರವಾಗಿ ವಾಹಿನಿಗಳ ಜೊತೆಗೂ ಚರ್ಚೆ ಆಗಿದೆ. ಹಾಗಾದರೆ ಅಷ್ಟು ಸುಲಭವಾಗಿ ಒಬ್ಬ ನಟನನ್ನು ಈ ರೀತಿಯ ಕಿರುತೆರೆಯಿಂದಲೇ ಹೊರಗಿಡಲು ಸಾಧ್ಯವೇ ಎಂದರೆ ಟೆಕ್ನಿಕಲಿ ಸಾಧ್ಯ ಇಲ್ಲ ಎನ್ನುವ ಉತ್ತರ ಬರುತ್ತದೆ.
ಸ್ಕ್ರಿಪ್ಟ್ ಸರಿಯಿಲ್ಲ ಎನ್ನುವ ಕಾರಣಕ್ಕೆ ನಟ ಅನಿರುದ್ಧ್ 'ಜೊತೆ ಜೊತೆಯಲಿ' ಧಾರಾವಾಹಿಯ ನಿರ್ದೇಶಕರ ಜೊತೆ ಕಿತ್ತಾಡಿಕೊಂಡು ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಕಿರಿಕ್ ಮಾಡಿಕೊಂಡು ಶೂಟಿಂಗ್ ಅರ್ಧಕ್ಕೆ ಬಿಟ್ಟು ಹೋದ ಕಾರಣಕ್ಕೆ ಧಾರಾವಾಹಿಯ ನಿರ್ಮಾಪಕ ಆರೂರ್ ಜಗದೀಶ್ ಅವರ ದೂರಿನ ಹಿನ್ನೆಲೆಯಲ್ಲಿ ಇಂತಹದೊಂದು ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ನಿರ್ಮಾಪಕರೆಲ್ಲರೂ ಒಕ್ಕೊರಲಿನಿಂದ ಇದಕ್ಕೆ ಒಪ್ಪಿಕೊಂಡಿರುವ ಕಾರಣಕ್ಕೆ ಎರಡು ವರ್ಷ ಅನಿರುದ್ಧ್ ಅವರನ್ನು ಧಾರಾವಾಹಿ ಮತ್ತು ರಿಯಾಲಿಟಿ ಶೋಯಿಂದ ದೂರ ಇಡಲು ತೀರ್ಮಾನಿಸಿದ್ದಾರೆ. ಬ್ಯಾನ್ ಎನ್ನುವ ಪದವನ್ನು ಅವರು ಬಳಸದೇ ಇದ್ದರೂ ಪರೋಕ್ಷವಾಗಿ ಬ್ಯಾನ್ ಮಾಡಿದಂತೆಯೇ ಆಗಿದೆ. ಅನಿರುದ್ಧ್ ಮತ್ತೆ ನಟಿಸಲು ಸಿದ್ಧರಿದ್ದರೂ ಅವರ ಮಾತನ್ನು ವಾಹಿನಿ ಆಗಲಿ ನಿರ್ಮಾಪಕರಾಗಲಿ ಕೇಳಲು ಸಿದ್ಧರಿಲ್ಲ.
ಧಾರಾವಾಹಿಯಲ್ಲಿರುವ ಸಾಕಷ್ಟು ಜನ ನಟ ಅನಿರುದ್ಧ್ ಪರವಾಗಿಯೇ ಇದ್ದಾರೆ. ಮತ್ತೆ ಅನಿರುದ್ಧ್ ರಾಜಿ ಮಾಡಿಕೊಂಡು ನಟಿಸುವ ಭರವಸೆಯಲ್ಲಿ ಇದ್ದಾರೆ. ಮತ್ತೊಂದು ಕಡೆ ಧಾರಾವಾಹಿಯ ನಿರ್ಮಾಪಕರು ಆರ್ಯವರ್ಧನ್ ಪಾತ್ರಕ್ಕೆ ಹೊಸ ನಟನ ಹುಡುಕಾಟ ಶುರು ಮಾಡಿದ್ದಾರೆ ಅನ್ನಲಾಗುತ್ತಿದೆ. ವಾಹಿನಿ ಯಾರು ಇರಲಿ ಇಲ್ಲದೇ ಇರಲಿ ಶೋ ಮಸ್ಟ್ ಗೋ ಆನ್ ಅನ್ನುವ ಲೆಕ್ಕಾಚಾರದಲ್ಲಿದೆ. ಹಾಗಾದರೆ ಕಿರುತೆರೆಯಲ್ಲಿ ಅನಿರುದ್ಧ್ ಭವಿಷ್ಯ ಏನು? ನಿಜವಾಗಿಯೂ ಇನ್ನು 2 ವರ್ಷ ಅವರು ಕಿರುತೆರೆಯಲ್ಲಿ ಕಾಣಿಸಿಕೊಳ್ಳೋಕೆ ಸಾಧ್ಯವೇ ಇಲ್ಲವಾ ? ಅನ್ನುವ ಪ್ರಶ್ನೆ ಎದ್ದಿದೆ.

ಬ್ಯಾನ್ ಆಗುವಂತಹ ತಪ್ಪು ಮಾಡಿದ್ರಾ?
ಅಲ್ಲಾ ಸ್ವಾಮಿ ಒಂದು ಮನೆ ಅಂದಮೇಲೆ, ತಂಡ ಅಂದಮೇಲೆ ಗಲಾಟೆ ಸಹಜ. ಮಾತಿಗೆ ಮಾತು ಬೆಳೆಯುವುದು, ಯಾರೋ ಕೋಪಿಸಿಕೊಂಡು ಹೋಗುವುದು ಮತ್ತೆ ರಾಜಿ ಮಾಡಿಕೊಳ್ಳುವುದು ಎಲ್ಲಾ ಸರ್ವೇ ಸಾಮಾನ್ಯ. ಅದು 'ಜೊತೆ ಜೊತೆಯಲಿ' ತಂಡದಲ್ಲೂ ನಡೀತಿತ್ತು ಎಂದು ನಿರ್ಮಾಪಕರು ಒಪ್ಪಿಕೊಂಡಿದ್ದಾರೆ. ಅನಿರುದ್ಧ್ ಕೂಡ ಹೇಳಿದ್ದಾರೆ. ಈಗಲೂ ಆಗಿರುವುದು ಅದೇ ಅಲ್ಲವೇ. ಸ್ಕ್ರಿಪ್ಟ್ ಸರಿಯಿಲ್ಲ ಎನ್ನುವ ಕಾರಣಕ್ಕೆ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್ ಗಲಾಟೆ ಮಾಡಿಕೊಂಡು ಶೂಟಿಂಗ್ ಬಿಟ್ಟು ಸೆಟ್ನಿಂದ ಎದ್ದು ಹೋಗಿದ್ದಾರೆ. ಅಷ್ಟಕ್ಕೆ 2 ವರ್ಷ ಬ್ಯಾನ್ ಎಂದರೆ ಹೇಗೆ? ಎನ್ನುವುದು ಕೆಲವರ ವಾದ.

ಅನಿರುದ್ಧ್ ಹಲ್ಲೆ ಮಾಡಿದ್ದಾರಾ?
ಸಾಮಾನ್ಯವಾಗಿ ಬ್ಯಾನ್ ಎನ್ನುವ ಮಾತು ಬರುವುದು ದೊಡ್ಡಮಟ್ಟದಲ್ಲಿ ಗಲಾಟೆ ನಡೆದಾಗ, ಮಾರಾಮಾರಿ ನಡೆದು ಯಾರ ಮೇಲಾದರೂ ಹಲ್ಲೆ ಮಾಡಿದ್ದಾಗ, ಅದು ಕ್ಷಮಿಸಲಾಗದಂತಹ ತಪ್ಪು ಎಂದಾಗ, ಅವರಿಂದ ಮತ್ತೆ ಸಮಸ್ಯೆ ಆಗಬಹುದು ಎನ್ನುವ ಭಯ ಇದ್ದಾಗ ಈ ರೀತಿ ನಿರ್ಧಾರ ಕೈಗೊಳ್ಳುವುದು ಸಮಂಜಸ ಎನ್ನಿಸುತ್ತದೆ. ಆದರೆ ನಟ ಅನಿರುದ್ಧ್ ಅಂತಹ ತಪ್ಪು ಮಾಡಿಯೇ ಇಲ್ಲವಲ್ಲ. ಈ ಕ್ಷಣಕ್ಕೂ ನಿರ್ಮಾಪಕರನ್ನು ಬಿಟ್ಟು ತಂಡದ ಬಹುತೇಕ ಎಲ್ಲರೂ ಅನಿರುದ್ಧ್ ತಂಡಕ್ಕೆ ವಾಪಸ್ ಬರಬೇಕು ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

ಕಿರುತೆರೆ ನಿರ್ಮಾಪಕರ ಸಂಘ ಇದ್ಯಾ?
ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ನಲ್ಲಿ ನಿರ್ಮಾಪಕರದ್ದು ಒಂದು ವಿಭಾಗ ಅಷ್ಟೇ ಎನ್ನುವ ಮಾತಿದೆ. ಆದರೆ ನಿರ್ಮಾಪಕರ ಸಂಘದಲ್ಲಿ ನಾವು ನಿರ್ಧಾರ ಕೈಗೊಂಡಿದ್ದೇವೆ ಎಂದು ಮೊನ್ನೆ ಸುದ್ದಿಗೋಷ್ಠಿಯಲ್ಲಿ ಆರೂರು ಜಗದೀಶ್ ಅಂಡ್ ಟೀಂ ಹೇಳಿಕೊಂಡಿದೆ. ನಿಮ್ಮ ಧಾರಾವಾಹಿಯಲ್ಲಿ ಅನಿರುದ್ಧ್ ನಟಿಸುವುದು ಬೇಡ ಎಂದರೆ ಬೇಡ. ಅವರನ್ನು ಕೈ ಬಿಟ್ಟು ಬೇರೆಯವರನ್ನು ಆಯ್ಕೆ ಮಾಡಿಕೊಳ್ಳುವುದು ನಿಮಗೆ ಬಿಟ್ಟ ವಿಚಾರ. ಆದರೆ ಬೇರೆ ಯಾವುದೇ ವಾಹಿನಿಯ ಯಾವುದೇ ಕಾರ್ಯಕ್ರಮ, ಧಾರಾವಾಹಿಯಲ್ಲಿ ಅವರು ನಟಿಸಬಾರದು ಎಂದರೆ ಹೇಗೆ? ಎನ್ನುವ ಟೆಕ್ನಿಕಲ್ ಪ್ರಶ್ನೆಯನ್ನು ಕೆಲವರು ಕೇಳುತ್ತಿದ್ದಾರೆ.

ಅನಿರುದ್ಧ್ ಧಾರಾವಾಹಿ ನಿರ್ಮಾಣಕ್ಕಿಳಿದರೆ ಮುಂದೇನು?
ಕಿರುತೆರೆಯ ನಿರ್ಮಾಪಕರೆಲ್ಲಾ ಸೇರಿ ಅನಿರುದ್ಧ್ ಅವರನ್ನು 2 ವರ್ಷ ಕಿರುತೆರೆಯಿಂದ ದೂರ ಇಡುವ ನಿರ್ಧಾರಕ್ಕೆ ಬಂದಿದ್ದೀವಿ ಎಂದು ಹೇಳುತ್ತಿದ್ದೀರಾ. ಒಂದು ವೇಳೆ ಅನಿರುದ್ಧ್ ಸ್ವತಃ ತಾವೇ ಧಾರಾವಾಹಿ ನಿರ್ಮಾಣ ಮಾಡುತ್ತೀನಿ ಎಂದರೆ? ಅಥವಾ ಬೇರೆ ಯಾವುದಾದರೂ ವಾಹಿನಿ ಅಥವಾ ಹೊಸ ನಿರ್ಮಾಪಕರು ಅನಿರುದ್ಧ್ ಅವರನ್ನು ಬಳಸಿಕೊಂಡು ಕಾರ್ಯಕ್ರಮ ಮಾಡಿದರೆ ಅದನ್ನು ಬೇಡ ಎನ್ನಲು ಸಾಧ್ಯವೇ? ಎನ್ನುವ ಪ್ರಶ್ನೆಯನ್ನು ಕೆಲವರು ಎತ್ತಿದ್ದಾರೆ. ಒಟ್ಟಾರೆ ಈ ಹಗ್ಗ ಜಗ್ಗಾಟ ಎಲ್ಲಿಗೆ ಹೋಗಿ ನಿಲ್ಲುತ್ತದೋ ಸದ್ಯಕ್ಕಂತೂ ಕುತೂಹಲ.


Click it and Unblock the Notifications











