"ಧಾರಾವಾಹಿಯಲ್ಲಿ ನಟಿಸಿ ಖ್ಯಾತಿ ಗಳಿಸುವುದು ಇದೀಗ ಕಷ್ಟವಲ್ಲ" ರಾಜೇಶ್ ನಟರಂಗ
ನಟ ರಾಜೇಶ್ ನಟರಂಗ ಯಾರಿಗೆ ಪರಿಚಯ ಇಲ್ಲ ಹೇಳಿ? ಎರಡು ದಶಕಗಳಿಂದ ಕನ್ನಡ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ಇವರು ಸಿನಿಮಾ ಹಾಗೆ ಧಾರಾವಾಹಿಗಳಿಂದ ಬಹಳ ಖ್ಯಾತರು. ಟಿಎನ್ ಸೀತಾರಾಮ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ 'ಮಾಯಾಮೃಗ' ಧಾರಾವಾಹಿಯಲ್ಲಿ ಅದ್ಭುತವಾಗಿ ನಟಿಸಿ ಜನರನ್ನು ತಮ್ಮತ್ತ ಸೆಳೆದಿದ್ದ ನಟ ರಾಜೇಶ್ ನಟರಂಗ ಅದಾದ ಮೇಲೆ ಹಲವಾರು ಧಾರಾವಾಹಿಗಳಲ್ಲಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ನೈಜ ನಟನೆ ಹಾಗೂ ಆಕರ್ಷಕ ಅಭಿನಯದಿಂದ ಬಹಳಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ.
ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಪಾಪ್ಯುಲಾರಿಟಿಯನ್ನು ಪಡೆಯುತ್ತಿರುವ 'ಅಮೃತಧಾರೆ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಟ ರಾಜೇಶ್ ನಟರಂಗ. ಹೌದು, ಗೌತಮ್ ದಿವಾನ್ ಎಂಬ ಶ್ರೀಮಂತ ಬಿಸಿನೆಸ್ ಮ್ಯಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಇವರು ಇದೀಗ ನೆಚ್ಚಿನ ನಾಯಕ ನಟನೂ ಹೌದು. ಜೀ ಕನ್ನಡ ಕುಟುಂಬ ಅವಾರ್ಡ್ಸ್ ಇತ್ತೀಚೆಗೆ ನಡೆದಿದ್ದು ಅದರಲ್ಲಿ 'ನೆಚ್ಚಿನ ನಾಯಕ ನಟ' ಪ್ರಶಸ್ತಿ ರಾಜೇಶ್ ನಟರಂಗ ಪಾಲಾಗಿದೆ.

ಇನ್ನು ಧಾರಾವಾಹಿಯಲ್ಲಿ ನಾಯಕ ಇತ್ತೀಚೆಗಷ್ಟೇ ಕಥಾ ನಾಯಕಿ ಭೂಮಿಯನ್ನು ಮದುವೆಯಾಗಿದ್ದಾರೆ. ವಿಶೇಷವೆಂದರೆ ಈ ಧಾರಾವಾಹಿಯ ಕಥಾನಾಯಕ ನಾಯಕಿ ಇಬ್ಬರು ಮದುವೆಯ ವಯಸ್ಸು ದಾಟಿದ ನಂತರ ಮದುವೆಯಾಗಿದ್ದಾರೆ. ಮದುವೆಯ ವಯಸ್ಸು ಎಂದಾಕ್ಷಣ ಸಾಮಾನ್ಯವಾಗಿ 25 ರಿಂದ 32. ಆದರೆ ಇಲ್ಲಿ ಕಥಾನಾಯಕ, ನಾಯಕಿ ಇಬ್ಬರು ಈ ವಯಸ್ಸನ್ನು ದಾಟಿದವರು. ಇಂಥ ಕಥಾಂದರವನ್ನು ಇಟ್ಟುಕೊಂಡು ಹೊರಬಂದಿರುವ ಈ ಧಾರಾವಾಹಿ ಇದೀಗ ಬಹಳಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
ಹಳೆಯ ಆಲದ ಮರಕ್ಕೆ ಜೋತು ಬೀಳದೆ ವಿಭಿನ್ನವಾದ ಕಥೆ ಹಾಗೂ ಪ್ರಸ್ತುತ ಬದುಕಿಗೆ ಹತ್ತಿರವಾಗುವಂತಹ ವಿಚಾರಗಳನ್ನು ಹೇಳುವ ಈ ಧಾರಾವಾಹಿಯ ರೀತಿ ಜನರಿಗೆ ಇಷ್ಟವಾಗಿದೆ. ಅಂದ ಹಾಗೇ ರಾಜೇಶ್ ನಟರಂಗಗೆ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಲು ಹಲವಾರು ಅವಕಾಶಗಳು ಬಂದಿದ್ದವು. ಆದರೆ, ಯಾವುದು ಕೂಡಾ ರಾಜೇಶ್ ಇಷ್ಟಕ್ಕೆ ತಕ್ಕನಾದ ಪಾತ್ರವಾಗಿರಲಿಲ್ಲ ಎಂದು ಹೇಳಿದ್ದಾರೆ.

ಆದರೆ 'ಅಮೃತಧಾರೆ' ಧಾರಾವಾಹಿ ಪಾತ್ರದ ಬಗ್ಗೆ ಕೇಳಿದಾಕ್ಷಣ ಬಹಳ ಖುಷಿಯಾಯಿತಂತೆ. ಯಾವುದೇ ವಯಸ್ಸಿನ ಅಂತರವಿಲ್ಲದೆಯೂ ವೈವಾಹಿಕ ಜೀವನವನ್ನು ಆರಂಭಿಸಬಹುದು ಎಂಬ ಮಹತ್ತರವಾದ ಸಂದೇಶವನ್ನು ಈ ಧಾರಾವಾಹಿ ಜನರಿಗೆ ಕೊಡುವ ಕಾರಣ ರಾಜೇಶ್ಗೂ ಇದು ಇಷ್ಟವಾಯಿತು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಇದಕ್ಕೆ ಯಾವ ರೀತಿಯ ಕಾಂಪ್ರಮೈಸ್ಗಳ ಅವಶ್ಯಕತೆಯೂ ಇಲ್ಲ. ದೈಹಿಕವಾಗಿ ನಾನು ಹೇಗಿದ್ದೇನೋ ಹಾಗೆಯೇ ಈ ಪಾತ್ರವನ್ನು ನಿಭಾಯಿಸಬಹುದಾದ ಅನುಕೂಲವಿದ್ದಿದ್ದರಿಂದ ಸಂತೋಷದಿಂದ ಒಪ್ಪಿಕೊಂಡರಂತೆ.
ಇವತ್ತು ಧಾರಾವಾಹಿಯಲ್ಲಿ ನಟಿಸಿ ಖ್ಯಾತಿ ಗಳಿಸುವುದು ಕಷ್ಟದ ವಿಚಾರವಾಗಿ ಉಳಿದಿಲ್ಲ ಎಂಬುದು ರಾಜೇಶ್ ನಟರಂಗ ಅಭಿಪ್ರಾಯ. ಸೋಶಿಯಲ್ ಮೀಡಿಯಾ ಬಹಳಷ್ಟು ಪಾಪ್ಯುಲಾರಿಟಿಯನ್ನು ಆದಷ್ಟು ಬೇಗ ತಂದು ಕೊಡುವ ಹೊಸ ಆವಿಷ್ಕಾರವಾಗಿದೆ. ಮೊದಲೆಲ್ಲಾ ಧಾರಾವಾಹಿಯಲ್ಲಿ ನೂರಾರು ಎಪಿಸೋಡ್ಗಳ ಕಾಲ ನಟಿಸಿದರೂ ಕಲಾವಿದರನ್ನು ಜನ ಗುರುತಿಸುವ ಸಾಧ್ಯತೆ ತೀರ ಕಮ್ಮಿ ಇತ್ತು. ಈಗ ಹಾಗಲ್ಲ ಕೇವಲ ಎರಡು ನಿಮಿಷದ ಒಂದು ವಿಡಿಯೋ ಮೂಲಕ ಜಗತ್ತಿಗೆ ಪರಿಚಯವಾಗಬಹುದು. ಈ ಹೊಸ ಆವಿಷ್ಕಾರವನ್ನು ಕಲಾವಿದರ ಅನುಕೂಲಕ್ಕೆ ತಕ್ಕಂತೆ ಬಳಸಿ ಪಾಪ್ಯುಲಾರಿಟಿಯನ್ನು ಪಡೆಯುವುದು ಕೂಡಾ ಕಲಾವಿದರುಗಳ ಕೈಯಲ್ಲಿದೆ ಎಂಬುದು ರಾಜೇಶ್ ನಟರಂಗ ಅಭಿಪ್ರಾಯ.


Click it and Unblock the Notifications











