"ನಾನು ಶ್ರಾವಣಿಯಾಗಿ ನಟಿಸುತ್ತಿರೋದು ಅಮ್ಮನಿಗೆ ಖುಷಿಕೊಟ್ಟಿದೆ": ನಟಿ ಅನುಷಾ ರಮೇಶ್
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿಗಳ ಪೈಕಿ 'ಅವನು ಮತ್ತು ಶ್ರಾವಣಿ' ಒಂದು. ಅದರಲ್ಲಿ ನಾಯಕಿ ಶ್ರಾವಣಿಯಾಗಿ ಅಭಿನಯಿಸುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ಅನುಷಾ. 2015ರಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಶ್ರೀಮತಿ ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ನಾಯಕಿಯ ತಂಗಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಅನುಷಾ ಪರಿಚಿತರಾದರು.
ತದ ನಂತರ ವಿದ್ಯಾಭ್ಯಾಸದ ಸಲುವಾಗಿ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದ ಅನುಷಾ ಎಂಬಿಎ ಪದವೀಧರೆಯೂ ಹೌದು. ವಿದ್ಯಾಭ್ಯಾಸದ ನಂತರ ಇನ್ನೇನು ಕೆಲಸದತ್ತ ಮುಖ ಮಾಡಬೇಕು ಅಷ್ಟರಲ್ಲಿ ಮತ್ತೊಮ್ಮೆ ನಟನಾ ಜಗತ್ತಿನಿಂದ ಅವಕಾಶ ದೊರಕಿತು. ಎಂಟು ವರ್ಷಗಳ ಸುದೀರ್ಘ ಬ್ರೇಕ್ನ ನಂತರ ಶ್ರಾವಣಿಯಾಗಿ ಕಿರುತೆರೆಗೆ ಮರಳಿದ ಅನುಷಾ ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

"ನಟನೆ ಎಂಬುದು ನನಗೆ ಒಂದು ಹವ್ಯಾಸವಾಗಿತ್ತು. ಆದರೆ ಸೀರಿಯಸ್ ಆಗಿ ಅದರ ಬಗ್ಗೆ ಆಲೋಚಿಸಿರಲಿಲ್ಲ. ಇಂದು ನಾನು ಶ್ರಾವಣಿಯಾಗಿ ಕಿರುತೆರೆಯಲ್ಲಿ ರಂಜಿಸುತ್ತಿದ್ದೇನೆ ಎಂದರೆ ಅದಕ್ಕೆ ಮೂಲ ಕಾರಣ ನನ್ನ ಅಮ್ಮ. ಅಮ್ಮನಿಗೆ ನಟನೆ ಎಂದರೆ ತುಂಬಾ ಇಷ್ಟ. ನಾನು ಶ್ರಾವಣಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವುದರಿಂದ ಅಮ್ಮನಿಗೆ ತುಂಬಾನೇ ಖುಷಿಯಾಗಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಸಂತಸ ಹಂಚಿಕೊಳ್ಳುತ್ತಾರೆ ಅನುಷಾ.
"ನನ್ನ ಅಮ್ಮನ ಫ್ರೆಂಡ್ ಒಬ್ಬರು ಸೆಂಚುರಿ ಫಿಲಂ ಇನ್ಸ್ಟಿಟ್ಯೂಟ್ ಎನ್ನುವ ಹೆಸರಿನ ಆ್ಯಕ್ಟಿಂಗ್ ಇನ್ಸ್ಟಿಟ್ಯೂಟ್ ನಡೆಸುತ್ತಿದ್ದರು. ಅಮ್ಮನಿಗೆ ನಟನೆಯತ್ತ ವಿಶೇಷ ಒಲವು ಇದ್ದ ಕಾರಣ ನನ್ನನ್ನು ಸಹ ಇನ್ಸ್ಟಿಟ್ಯೂಟ್ಗೆ ಸೇರಿಸಿದ್ರು. ಅಲ್ಲಿ ನಾನು ಮೂರು ತಿಂಗಳ ಕೋರ್ಸ್ ಮುಗಿಸಿದೆ. ಅದು ಮುಗಿದ ಕೂಡಲೇ ಶ್ರೀಮತಿ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರಕಿತು" ಎಂದು ಫಿಲ್ಮಿಬೀಟ್ ಜೊತೆಗೆ ಹೇಳಿಕೊಂಡಿದ್ದಾರೆ ಅನುಷಾ.

"ಅವನು ಮತ್ತು ಶ್ರಾವಣಿ ಧಾರಾವಾಹಿ ಈಗಷ್ಟೇ ಶುರುವಾಗಿರುವುದರಿಂದ ನಾನು ಈ ಧಾರಾವಾಹಿಯತ್ತ ಮತ್ತೆ ಶ್ರಾವಣಿ ಪಾತ್ರದತ್ತ ಸಂಪೂರ್ಣ ಗಮನ ಹರಿಸಿದ್ದೇನೆ. ಆದರೆ ಮುಂದಿನ ದಿನಗಳಲ್ಲಿ ಸಿನಿಮಾ ಕ್ಷೇತ್ರದಿಂದ ಅವಕಾಶ ಬಂದರೆ, ಉತ್ತಮ ಪಾತ್ರ ದೊರೆತರೆ ಖಂಡಿತಾ ನಟಿಸುತ್ತೇನೆ" ಎಂದು ಹೇಳುವ ಅನುಷಾ "ಅವನು ಮತ್ತು ಶ್ರಾವಣಿ ಧಾರಾವಾಹಿ ತಂಡ ಬೆಸ್ಟ್" ಎಂದು ಫಿಲ್ಮಿಬೀಟ್ ಜೊತೆಗೆ ಸಂತಸ ಹಂಚಿಕೊಂಡಿದ್ದಾರೆ.
"ಇನ್ನೊಂದು ಸಂತಸದ ವಿಚಾರವೆಂದರೆ ಈ ಧಾರಾವಾಹಿಯಲ್ಲಿ ನನ್ನ ತಂಗಿ ನಿಶಿತಾ ಆಗಿ ನಟಿಸುತ್ತಿರುವ ಪೂಜಾ ರಮೇಶ್ ಅವರು ರಿಯಲ್ ಜೀವನದಲ್ಲಿಯೂ ನನ್ನ ತಂಗಿ ಹೌದು. ಮಾಡೆಲಿಂಗ್ ಮೂಲಕ ಗುರುತಿಸಿಕೊಂಡಿರುವ ಈಕೆ ಗಿಣಿರಾಮ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. ಇದೀಗ ಅವನು ಮತ್ತು ಶ್ರಾವಣಿಯಲ್ಲಿ ಜೊತೆಯಾಗಿ ನಟಿಸುತ್ತಿರುವುದು ಖುಷಿ ತಂದಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ ಅನುಷಾ.
"ಇದು ನನ್ನ ಪಾಲಿಗೆ ದೊರಕಿರುವಂತಹ ಬೆಸ್ಟ್ ಟೀಂ. ಈ ಧಾರಾವಾಹಿಯಲ್ಲಿ ಅಶೋಕ್ ಹೆಗ್ಡೆ, ಚೈತ್ರ ಸಚಿನ್, ಸ್ಕಂದ ಅಶೋಕ್, ಸ್ಮೈಲ್ ಗುರು ರಕ್ಷಿತ್ ಅವರಂತಹ ಜನಪ್ರಿಯ ಕಲಾವಿದರುಗಳೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶ ದೊರಕಿದೆ. ಎಲ್ಲರೂ ಕಲಾವಿದರು ಕೂಡಾ ವಿನಮ್ರರಾಗಿದ್ದಾರೆ. ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿರುವುದು ನನಗಂತೂ ಖುಷಿ ನೀಡಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಅನುಷಾ ಹೇಳಿಕೊಂಡಿದ್ದಾರೆ.


Click it and Unblock the Notifications











