BBK12: ಕಾಮಿಡಿ ಬಿಟ್ರೆ ಗಿಲ್ಲಿದು ಬೇರೇನಿಲ್ಲ, ಆದ್ರು ಗೆಲ್ಲೋದು ಅವ್ನೇ, ಯಾಕಂದ್ರೆ?- ಜಾಹ್ನವಿ
ಬಿಗ್ಬಾಸ್ ಕನ್ನಡ-12ರಲ್ಲಿ 10 ಜನ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ನಾಲ್ವರು ವೈಲ್ಡ್ಕಾರ್ಡ್ ಎಂಟ್ರಿ ಪಡೆದಿದ್ದಾರೆ. ಕಳೆದ ವಾರ ಜಾಹ್ನವಿ ಬಿಗ್ಬಾಸ್ ಜರ್ನಿ ಮುಗಿಸಿ ಹೊರ ಬಂದಿದ್ದರು. ತಮ್ಮ ಬಿಗ್ಬಾಸ್ ದಿನಗಳು ಹಾಗೂ ಮುಂದೆ ಯಾರು ಗೆಲ್ಲಬಹುದು ಎಂದು ಜಾಹ್ನವಿ ಮಾತನಾಡಿದ್ದಾರೆ.
ಶೋನಲ್ಲಿ ಗಿಲ್ಲಿ ಕಾಮಿಡಿ ಮಾಡುತ್ತಾ ಎಲ್ಲರನ್ನು ನಗಿಸುತ್ತಿರುವುದು ಗೊತ್ತೇಯಿದೆ. ಆತನೇ ಗೆಲ್ಲೋದು ಎಂದು ವೀಕ್ಷಕರು ಹೇಳುತ್ತಿದ್ದಾರೆ. ಇದೇ ಮಾತನನ್ನು ಜಾಹ್ನವಿ ಕೂಡ ಒಪ್ಪಿಕೊಂಡಿದ್ದಾರೆ. ಆದರೆ ನನಗೆ ವೈಯಕ್ತಿಕವಾಗಿ ಅಶ್ವಿನಿ ಗೌಡ ಗೆಲ್ಲಬೇಕು ಎಂದು ಹೇಳಿದ್ದಾರೆ. ಗಿಲ್ಲಿ, ಅಶ್ವಿನಿ ಹಾಗೂ ರಕ್ಷಿತಾ ಬಿಟ್ರೆ ಟಾಪ್-5ಗೆ ಬರುವಂತಹ ಸ್ಪರ್ಧಿಗಳು ಯಾರು ಮನೆಯಲ್ಲಿ ಇಲ್ಲ ಎಂದಿದ್ದಾರೆ. ಟಿವಿ-9 ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಜಾಹ್ನವಿ ಈ ಬಗ್ಗೆ ಮಾತನಾಡಿದ್ದಾರೆ.

ಗ್ರ್ಯಾಂಡ್ ಓಪನಿಂಗ್ ವೇಳೆ 5ನೇ ಸ್ಪರ್ಧಿಯಾಗಿ ಜಾಹ್ನವಿ ಬಿಗ್ಬಾಸ್ ಮನೆ ಪ್ರವೇಶಿಸಿದ್ದರು. 63 ದಿನಗಳ ಕಾಲ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು. ಅಂತಿಮವಾಗಿ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಅಶ್ವಿನಿ ಜೊತೆಗಿನ ಸ್ನೇಹ, ಕಿರಿಕ್ ವಿಚಾರದಿಂದ ಆಕೆ ಸುದ್ದಿ ಆಗಿದ್ದರು. ಇಬ್ಬರೂ ಸೇರಿ ರಕ್ಷಿತಾ ಶೆಟ್ಟಿ ಮೇಲೆ ಹಾರಾಡಿದ್ದು ಕೂಡ ವೀಕ್ಷಕರು ಕೆಂಗಣ್ಣಿಗೆ ಗುರಿಯಾಗಿತ್ತು. ಅದೆಲ್ಲದರ ಬಗ್ಗೆ ಜಾಹ್ನವಿ ಮಾತನಾಡಿದ್ದಾರೆ.
ನಿಮ್ಮ ಪ್ರಕಾರ ಬಿಗ್ಬಾಸ್ ಸೀಸನ್-12ರಲ್ಲಿ ಯಾರು ಗೆಲ್ಲಬೇಕು? ಯಾರು ಗೆಲ್ಲಬಹುದು? ಟಾಪ್-5ನಲ್ಲಿ ಯಾರು ಇರ್ತಾರೆ? ಎನ್ನುವ ಪ್ರಶ್ನೆಗೆ ಜಾಹ್ನವಿ ಪ್ರತಿಕ್ರಿಯಿಸಿ "ಅಶ್ವಿನಿ, ಗಿಲ್ಲಿ, ರಕ್ಷಿತಾ ಟಾಪ್-5ನಲ್ಲಿ ಇರ್ತಾರೆ ಅನ್ನಿಸ್ತಿದೆ. ಇರಬೇಕು ಕೂಡ. ಕಾರಣ ಚೆನ್ನಾಗಿ ಆಡ್ತಿದ್ದಾರೆ. ಅವರಿಬ್ಬರು ನನ್ನ ಫೇವರಿಟ್ ಅಲ್ಲ, ಆದರೆ ಚೆನ್ನಾಗಿ ಆಡ್ತಿದ್ದಾರೆ. ಉಳಿದವರು ಬಹಳ ಹಿಂದೆ ಉಳಿದಿದ್ದಾರೆ. ಇನ್ನಿಬ್ಬರು ಯಾರು ಎಂದು ಹೇಳವುದು ಕಷ್ಟ. ಅಷ್ಟು ಸಮರ್ಥರು ಯಾರು ಇಲ್ಲ ಅಂತ ನನಗೆ ಅನ್ನಿಸ್ತಿದೆ" ಎಂದಿದ್ದಾರೆ.

ಮಾತು ಮುಂದುವರೆಸಿದ ಜಾಹ್ನವಿ "ಅಶ್ವಿನಿ ಅವ್ರು ಗೆಲ್ಲಬೇಕು. ಶೃತಿ ಮೇಡಂ ಬಿಟ್ಟರೆ ಮಹಿಳೆಯರು ಯಾರು ಗೆದ್ದಿಲ್ಲ. ಮಾತಿನ ಭರದಲ್ಲಿ ತಪ್ಪಾಗಿದೆ ನಿಜ. ಅದನ್ನು ಸರಿಪಡಿಸಿಕೊಂಡು ಆಡುತ್ತಿದ್ದಾರೆ. ಗೆಲ್ಲಲು ಅರ್ಹವಾಗಿದ್ದಾರೆ. ಹೌದು ಗಿಲ್ಲಿ ಚೆನ್ನಾಗಿ ಆಡ್ತಿದ್ದಾರೆ. ಎಲ್ಲರನ್ನು ನಗಿಸ್ತಿದ್ದಾರೆ ನಿಜ. ಆದರೆ ಬಿಗ್ಬಾಸ್ ವ್ಯಕ್ತಿತ್ವದ ಆಟ. ಕಾಮಿಡಿ ಬಿಟ್ಟರೆ ಗಿಲ್ಲಿಯ ಬೇರೆ ಎಮೋಷನ್ಸ್ ನೋಡಿಲ್ಲ. ಕೋಪ, ತಾಪ, ದಯೆ, ಎಮೋಷನ್ ಯಾವುದು ಇಲ್ಲ. ತೋರಿಸಿಕೊಳ್ತಿಲ್ಲ ಅನ್ನಿಸ್ತಿದೆ, ನಾನಂತೂ ನೋಡಿಲ್ಲ. ಗೆಲ್ಲೋದು ಅವ್ನೇ, ಆದರೆ ನನಗೆ ಅಶ್ವಿನಿ ಅವ್ರು ಗೆಲ್ಲಬೇಕು" ಎಂದು ಜಾಹ್ನವಿ ವಿವರಿಸಿದ್ದಾರೆ.
ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಕರೆದ್ರೆ ಮತ್ತೆ ಬಿಗ್ಬಾಸ್ ಮನೆಗೆ ಹೋಗ್ತೀನಿ. ಧಾರಾವಾಹಿಗಳಲ್ಲಿ ನಟಿಸೋಕೆ ಕೆಲವರು ಕೇಳುತ್ತಿದ್ದಾರೆ. ಗೊತ್ತಿಲ್ಲ ಮುಂದೆ ಎಲ್ಲಿದೆ ಋಣ ಅಂತ. ಒಂದು ಸಿನಿಮಾ ಚಿತ್ರೀಕರಣ ಕೊಂಚ ಬಾಕಿಯಿದೆ. ಮೊದಲು ಅದನ್ನು ಮುಗಿಸಬೇಕಿದೆ ಎಂದು ಜಾಹ್ನವಿ ಹೇಳಿದ್ದಾರೆ.
"ಗಿಲ್ಲಿ ಕ್ರೇಜ್ ನೋಡಿದಾಗ ಜನ ಮರುಳೋ ಜಾತ್ರೆ ಮರುಳೋ ಅನ್ನಿಸುತ್ತಿದೆ. ಅದರಲ್ಲಿ ನನಗೇನು ವಿಶೇಷ ಅನ್ನಿಸಲಿಲ್ಲ. ಜನ ಇಷ್ಟಪಟ್ಟರೆ ಅದು ಅವರ ಚಾಯ್ಸ್. ಗಿಲ್ಲಿ ಕಾಮಿಡಿ ನೋಡಿ ಜನ ಇಷ್ಟಪಟ್ಟಿರುವುದರಲ್ಲಿ ಆಶ್ಚರ್ಯ ಎನಿಸುತ್ತಿಲ್ಲ. ಗಿಲ್ಲಿ ಜೊತೆ ಜಂಟಿಯಾಗಿ ಹೋಗಿದ್ದು ಕಾವ್ಯಾಗೆ ಪ್ಲಸ್ ಆಗಿದೆ. ಕಾವ್ಯಾ ಗಿಲ್ಲಿ ಇದ್ರು ಡಲ್ ಅನ್ನಿಸ್ತಾರೆ, ಗಿಲ್ಲಿ ಇಲ್ಲದೇ ಹೋಗಿದ್ರೆ, ಇನ್ನು ಡಲ್ ಆಗ್ತಿದ್ರು. ಗಿಲ್ಲಿ ಮಾತ್ರ ಯಾರಿಲ್ಲ ಅಂದ್ರು ಡಲ್ ಆಗೋದಿಲ್ಲ. ಮಾತನಾಡಿ ಕಂಟೆಂಟ್ ಕ್ರಿಯೇಟ್ ಮಾಡುವಲ್ಲಿ ಗಿಲ್ಲಿ ಕಿಲಾಡಿ ಇದ್ದಾನೆ. ಕಾವ್ಯ ಇಲ್ಲ ಅಂದ್ರು ಗಿಲ್ಲಿ ಚೆನ್ನಾಗಿ ಆಡ್ತಾನೆ" ಎಂದು ಜಾಹ್ನವಿ ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications











