ಜನಶ್ರೀ ವಾಹಿನಿಯಲ್ಲಿ ಉದ್ಯೋಗ ನೇಮಕಾತಿ ಶುರು
ಕಳೆದ ಕೆಲ ವರ್ಷಗಳಿಂದ ಯಾವುದೇ ವಾಹಿನಿಯಲ್ಲೂ ಅಷ್ಟಾಗಿ ಹೊಸ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲ. ಇರುವವರನ್ನೇ ದುಡಿಸಿಕೊಳ್ಳಲಾಗುತ್ತಿದೆ. ಕೆಲವರು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ವಲಸೆ ಹೋಗಿರುವುದನ್ನು ಬಿಟ್ಟರೆ ಹೊಸ ನೇಮಕಾತಿ ತೀರಾ ಕಡಿಮೆ ಎಂದೇ ಹೇಳಬೇಕು.
ಟಿಆರ್ ಪಿ ಭರಾಟೆಯಲ್ಲಿ ಒಂದಷ್ಟು ಮಂದಿ ಹಣ್ಣುಗಾಯಿ ನೀರುಗಾಯಾದರು. ಇನ್ನೊಂದಷ್ಟು ಮಂದಿ ಪತ್ರಿಕೋದ್ಯಮದ ಸಹವಾಸವೇ ಬೇಡ ಎಂದು ಹೊಸ ಹೊಸ ಮಾರ್ಗಗಳನ್ನು ಕಂಡುಕೊಂಡರು. ಹೊಸ ವಾಹಿನಿಗಳು ಆರಂಭವಾದಾಗ ಇದ್ದ ಕ್ರೇಜ್ ಈಗ ಮಾಯವಾಗಿದೆ.
ಅದೇನಾಯಿತೋ ಏನೋ ಕಳೆದೆರಡು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಏನೋ ಒಂಥರಾ ಮಂಕು ಕವಿದ ವಾತಾವರಣ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ನಿರೀಕ್ಷಿಸಿದಷ್ಟು ಸಂಬಳ, ಸೌಲಭ್ಯಗಳು ಇಲ್ಲದಿರುವುದೂ ಒಂದು ಕಾರಣ. ಇನ್ನೊಂದಿಷ್ಟು ಮಂದಿ 24/7 ಕೆಲಸ ಮಾಡಲು ಸಾಧ್ಯವಾಗದೆ ಕೈಚೆಲ್ಲಿದರು.

ಆಂಕರ್, ವಿಡಿಯೋ ಎಡಿಟರ್ಸ್, ರಿಪೋರ್ಟರ್
ಇಂಥಹ ಸಂದರ್ಭದಲ್ಲಿ ಜನಶ್ರೀ ವಾಹಿನಿ ಹೊಸ ಉದ್ಯೋಗಗಳ ನೇಮಕಾತಿಗೆ ಆಹ್ವಾನ ನೀಡಿ ಉತ್ಸಾಹದ ಪನ್ನೀರನ್ನು ಮುಖಕ್ಕೆ ಚುಮುಕಿಸಿದೆ. ಆಂಕರ್, ವಿಡಿಯೋ ಎಡಿಟರ್ಸ್, ವಿಡಿಯೋ ಜರ್ನಲಿಸ್ಟ್, ಕಾಪಿ ಎಡಿಟರ್ಸ್, ರಿಪೋರ್ಟರ್, ಗ್ರಾಫಿಕ್ ಡಿಸೈನರ್ (ಆಫ್ ಲೈನ್ ಮತ್ತು ಆನ್ ಲೈನ್), ಮಿಮಿಕ್ರಿ ಕಲೆ ಗೊತ್ತಿರುವವರು, ಕಾಮಿಡಿ ಬರೆಯಬಲ್ಲವರು ಬೇಕಾಗಿದ್ದಾರೆ.

ಜನಶ್ರೀ ವಾಹಿನಿಯ ಕಂಡೀಷನ್ಸ್ ಹೀಗಿವೆ
ಜನಶ್ರೀ ವಾಹಿನಿಯ ಕಂಡೀಷನ್ಸ್ ಹೀಗಿವೆ. ಅನುಭವಿ ಆಂಕರ್ ಗಳು ಬೇಕಿಲ್ಲ. ಹೊಸಬರಿಗೆ ಮಾತ್ರ ಅವಕಾಶ. ಪದವಿ ಮುಗಿಸಿರುವ ಹುಡುಗ-ಹುಡುಗಿಯರು ಅರ್ಜಿ ಸಲ್ಲಿಸಬಹುದು. ಚನ್ನಾಗಿ ಮಾತನಾಡುವ ಕಲೆ, ಭಾಷಾ ಜ್ಞಾನ, ಸಾಮಾನ್ಯ ಜ್ಞಾನ, ಆಕರ್ಷಕ ವ್ಯಕ್ತಿತ್ವ ನಿಮ್ಮದಾಗಿದ್ದರೆ ಅರ್ಜಿ ಸಲ್ಲಿಸಬಹುದು.

ಎರಡು ದಿನಗಳ ಒಳಗೆ ಕಳುಹಿಸಬಹುದು
ಜೊತೆಗೆ ನಿಮ್ಮ ಒಂದೆರಡು ಫೋಟೋಗಳೂ ಇರಲಿ. ನಿಮ್ಮ ಜಾತಿಯನ್ನು ಯಾವುದೇ ಕಾರಣಕ್ಕೂ ನಮೂದಿಸಬೇಡಿ. ನೀವು ಈಗಾಗಲೇ ಬರೆದದ್ದೇನಾದರೂ ಇದ್ದರೆ, ನಿಮ್ಮ ವಿಡಿಯೋ ತುಣುಕುಗಳಿದ್ದರೆ ಕಳುಹಿಸಿ. ಅರ್ಜಿಗಳನ್ನು [email protected] ಗೆ ಎರಡು ದಿನಗಳ ಒಳಗೆ ಕಳುಹಿಸಬಹುದು.

ಹೊಸ ರೂಪ, ಹೊಸ ಶೈಲಿ, ಹೊಸ ವಿನ್ಯಾಸ
ಜನಶ್ರೀ ವಾಹಿನಿ ಹುಟ್ಟಿ 33 ತಿಂಗಳು ಕಳೆದಿವೆ. ನವೆಂಬರ್ 1ರಿಂದ ಜನಶ್ರೀ ವಿನೂತವಾಗಿ ಪ್ರಸಾರ ಆರಂಭಿಸಿದೆ. ಹೊಸ ರೂಪ, ಹೊಸ ಶೈಲಿ, ಹೊಸ ವಿನ್ಯಾಸ, ಹೊಸ ಹುಟ್ಟು ಪಡೆಯುತ್ತಿದೆ. ಈಗ ಹೊಸಬರಿಗೂ ಅವಕಾಶ ನೀಡಿ ಇನ್ನಷ್ಟು ಹೊಸ ಪ್ರಯೋಗಗಳಿಗೆ ಮುಂದಾಗಿದೆ.

ಇದು ಹೊಸತನಕ್ಕೆ ನಾಂದಿಯೇ?
ಹೊಸ ನೀರು ಹರಿಯುತ್ತಿರಬೇಕು, ಹೊಸ ಬೆಳಕು ಚಿಮ್ಮಬೇಕು, ಹೊಸತು ಅರಳಬೇಕು, ಹೊಸತು ಸೃಜಿಸಬೇಕು ಎಂದು ಜನಶ್ರೀ ವಾಹಿನಿ ರಾಜ್ಯೋತ್ಸವ ಸಂದರ್ಭದಲ್ಲಿ ಹೇಳಿಕೊಂಡಿತ್ತು. ಇದು ಹೊಸತನಕ್ಕೆ ನಾಂದಿಯೇ?


Click it and Unblock the Notifications











