ಡ್ರಾಮಾ ಜ್ಯೂನಿಯರ್ಸ್ ವೇದಿಕೆಯಲ್ಲಿ 'ಪದ್ಮಶ್ರೀ' ಜೋಗತಿ ಮಂಜಮ್ಮ, ಮಕ್ಕಳ ಅಭಿನಯಕ್ಕೆ ಫಿದಾ
ಮಕ್ಕಳ ಅಭಿನಯದ ಮೂಲಕ ಜನರ ಮನಸ್ಸಿಗೆ ಮುದನೀಡುತ್ತಿರುವ ಡ್ರಾಮಾ ಜ್ಯೂನಿಯರ್ನ್ ಸೀಸನ್ 4 ಚೆನ್ನಾಗಿ ಮೂಡಿಬರುತ್ತಿದೆ. ಶನಿವಾರ ಭಾನುವಾರದಂದು ನಡೆಯುವ ಈ ರಿಯಾಲಿಟಿ ಶೋ ನೋಡಲೆಂದು ಬಹುತೇಕ ಅಭಿಮಾನಿಗಳು ಕಾಯುತ್ತಿರುತ್ತಾರೆ. ಡ್ರಾಮಾದ ಮೂಲಕ ಜನರ ಮನಸ್ಸಿಗೆ ಇನ್ನೂ ಹತ್ತಿರವಾಗುತ್ತಿರುವ ಮಕ್ಕಳನ್ನು ಕಂಡರೆ ಬಹುತೇಕರಿಗೆ ಅಕ್ಕರೆ, ಈ ರಿಯಾಲಿಟಿ ಶೋನಲ್ಲಿ ಕೇವಲ ಕಾಮಿಡಿ, ಪೌರಣಿಕ ಪಾತ್ರ ಮಾತ್ರ ತೋರಿಸಲಾಗುತ್ತಿಲ್ಲ, ಬಹುತೇಕರ ಜೀವನದಲ್ಲಿ ನಡೆದಿರುವುದನ್ನು ಕಣ್ಣಿಗೆ ಕಟ್ಟುವ ಹಾಗೆ ಮಕ್ಕಳು ಅಭಿನಯಿಸಿ ತೋರಿಸುತ್ತಿದ್ದಾರೆ.
ಈ ಬಾರಿಯ ಡ್ರಾಮಾ ಜ್ಯೂನಿಯರ್ಸ್ ಸೀಸನ್ 4 ಪ್ರೋಮೋವನ್ನು ಹೊರಬಂದಿದೆ. ಪ್ರೋಮೋದಲ್ಲಿ ಈ ವಾರಾಂತ್ಯ ಡ್ರಾಮಾ ಜ್ಯೂನಿಯರ್ಸ್ ವೇದಿಕೆಯ ಮೇಲೆ ನಡೆಯುವ ಅದ್ಭುತವಾದ ನಾಟಕದ ಝಲಕ್ ಒಂದನ್ನು ನೀಡಿದ್ದಾರೆ. ಈ ಮಕ್ಕಳ ಡ್ರಾಮಾವನ್ನು ನೋಡಿದಾಗ ಒಂದೆಡೆ ಮನಸ್ಸಿಗೆ ಬಹಳ ಸ್ಪೋರ್ತಿದಾಯಕವಾಗುತ್ತದೆ, ಈ ಬಾರಿಯ ಡ್ರಾಮಾ ಜ್ಯೂನಿಯರ್ಸ್ಗೆ ವಿಶೇಷ ಅತಿಥಿಯಾಗಿ ಪದ್ಮ ಶ್ರಿ ಮಂಜಮ್ಮ ಜೋಗತಿಯವರು ಆಗಮಿಸಿದ್ದಾರೆ. ಡ್ರಾಮಾ ವೇದಿಕೆಯಲ್ಲಿ ಮಂಗಳಮುಖಿಯರ ಬುದುಕಿನ ಚಿತ್ರಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ಮಕ್ಕಳು. ಹಾಗೆಯೇ ಜೋಗತಿ ಮಂಜಮ್ಮ ಅವರ ಬದುಕಿನ ಚಿತ್ರಣವನ್ನು ತೆರೆದಿಟ್ಟಿದ್ದಾರೆ.
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರಿಗೆ ಗಣರಾಜ್ಯೋತ್ಸವ 2021ರ ಸಂದರ್ಭದಲ್ಲಿ ಜಾನಪದ ಕ್ಷೇತ್ರದ ಸಾಧನೆಗಾಗಿ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಬಳ್ಳಾರಿ ಜಿಲ್ಲೆಯ ತಗ್ಗಿನಮಠ ಎಂಬ ಊರಿನಲ್ಲಿ ಜನಿಸಿದ ಮಂಜಮ್ಮ ಕಲಾಲೋಕಕ್ಕೆ ಚಿರಪರಿಚಿತರು. ಹನುಮಂತಯ್ಯ ಶೆಟ್ಟಿ ಮತ್ತು ಜಯಲಕ್ಷ್ಮಿ ದಂಪತಿಯ ಸುಪುತ್ರರಾಗಿ ಜನ್ಮನಾಮ ಬಿ. ಮಂಜುನಾಥ ಶೆಟ್ಟಿ ಎಂಬುವುದಾಗಿತ್ತು. ಎಲ್ಲ ಮಕ್ಕಳಂತೆ ಆಡು, ಓದು, ಕುಣಿತದ ಸಡಗರದ ಬಾಲ್ಯ ಹೊಂದಿದ್ದರು. ಏಳನೇ ತರಗತಿಯ ವೇಳೆಗೆ ಶರೀರದಲ್ಲಿ ವಿಚಿತ್ರ ಏರುಪೇರು, ದೇಹದಲ್ಲಿ ದಿಢೀರಾಗಿ ಹೆಣ್ಣಿನ ಲಕ್ಷಣಗಳು ಗೋಚರಿಸಿದಾಗ ಹೆಣ್ಣಾಗಿ ಬದುಕಬೇಕೆಂಬ ಹಂಬಲ ಮೂಡಿದೆ. ಲೋಕಕ್ಕೆ ಅಸಹಜವಾದ ಸ್ಥಿತಿ ಹಾಗೂ ಕೌಟುಂಬಿಕ, ಸಾಮಾಜಿಕ ಬಹಿಷ್ಕಾರದ ಬರಸಿಡಿಲು ಎದುರಿಸಬೇಕಾಯಿತು. ಆತ್ಮಹತ್ಯೆಗೆ ಯತ್ನಿಸಿಯೂ ಬದುಕಿಕೊಂಡ ಮೇಲೆ ಬದುಕು-ಭಾವವೆರಡು ಸಮಾಜಮುಖಿಯಾಗಲು ದೃಢತೀರ್ಮಾನ ಕೈಗೊಳ್ಳುವಂತೆ ಮಾಡಿತು. ಮಂಜುನಾಥಶೆಟ್ಟಿ ಮಂಜಮ್ಮಳಾಗಿ ರೂಪಾಂತರಗೊಂಡರು. ಆ ಹಂತದಲ್ಲಿ ದೊರೆತ ಕಾಳವ್ವ ಜೋಗತಿಯೇ ಗುರು, ತಾಯಿ, ಮಾರ್ಗದರ್ಶಕಿಯಾದರು.

ಜೀ ಕನ್ನಡ ಚಾನೆಲ್ನಲ್ಲಿ ಡ್ರಾಮಾ ಜ್ಯುನಿಯರ್ಸ್ ಸೀಸನ್ 4ರ ನಾಳೆ (ಮೇ 21) ನಡೆಯಲಿರುವ ವಿಶೇಷ ಸಂಚಿಕೆಯ ಪ್ರೋಮೋವನ್ನು ಬಿತ್ತರಿಸಿದ್ದಾರೆ. ಅದರಲ್ಲಿ ಜೋಗತಿ ಮಂಜಮ್ಮ ಅವರ ಬದುಕಿನ ಕಥೆಯನ್ನು ಮಕ್ಕಳು ಅಭಿನಯದ ಮೂಲಕ ಬಿತ್ತರಿಸಿದ್ದಾರೆ. ಅವ್ವ ನಾನು ಶಾಲೆಗೆ ಹೋಗ್ಬರ್ತ್ತೀನಿ ಎಂದು ಶಾಲೆಗೆ ತೆರಳುವುದು ಹಾಗೆಯೇ ಜೋಗಿತಿ ಮಂಜಮ್ಮ ಅವರ ಅಮ್ಮ ಹೇಳುವ ಮಾತುಗಳು , ಅವರ ತಂದೆತಾಯಿ ಅವರಿಗೆ ಬಯ್ಯುವ ದೃಶ್ಯ, ಡಾಕ್ಟರ್ ಬಳಿ ತೆರಳುವುದು, ಮನೆಯಿಂದ ಆಕೆಯನ್ನು ಹೊರಗೆ ಹಾಕಿದ ರೀತಿ, ಕುಣಿತ ಕಲಿತುಕೊಂಡ ರೀತಿ ಇದನ್ನೆಲ್ಲ ಬಿಡಿ ಬಿಡಿಯಾಗಿ ಮಕ್ಕಳು ಅಭಿನಯಿಸಿ ತೋರಿಸಿದ್ದಾರೆ, ಇದನ್ನು ನೋಡಿದ ಮಂಜಮ್ಮ ಕಣ್ಣೀರಿಟ್ಟಿದ್ದಾರೆ. ಸವಾಲಿನ ಜೀವನವನ್ನು ಎದುರಿಸಿ ದಿಟ್ಟತನದಿಂದ ಬದುಕಿ ಸಾಧಿಸಿದ ಜೋಗತಿ ಮಂಜಮ್ಮ ಅವರಿಗೆ ಹಿರಿಯ ನಟಿ ಲಕ್ಷ್ಮೀ, ರವಿಂಚಂದ್ರನ್ ಸಾಂತ್ವನ ಹೇಳಿದ್ದಾರೆ. ನಾವು ಹೆಣ್ಣು ಅಲ್ಲ ಗಂಡು ಅಲ್ಲ ನಾವೆಲ್ಲರೂ ಕಲಾವಿದರು ಎಂದು ಹೇಳುವ ಮಾತು ಜನರ ಮನಗೆದ್ದಿದೆ. ಹುಟ್ಟಿದ ಮನೆಯಿಂದಲೇ ಬಹಿಷ್ಕಾರಗೊಂಡು, ಸಮಾಜದ ತುಳಿತಕ್ಕೆ ಒಳಗಾಗಿ, ನೋವುಗಳಲ್ಲೇ ಜೀವನ ಸವೆಸಿ, ಕಷ್ಟಗಳನ್ನೇ ಮೆಟ್ಟಿಲಾಗಿಸಿಕೊಂಡು ಬೆಳೆದ ಜೋಗತಿ ಮಂಜಮ್ಮ ಅವರ ಕತೆ ಮುಂದಿನ ಸಂಚಿಕೆಯಲ್ಲಿ ಪ್ರಸಾರವಾಗುತ್ತಿದೆ ಈ ಕಾರ್ಯಕ್ರಮ ನೋಡಲು ವೀಕ್ಷಕರು ಕಾತರರಾಗಿದ್ದಾರೆ.


Click it and Unblock the Notifications











