Jothe Jotheyali: ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾದ 'ಜೊತೆ ಜೊತೆಯಲಿ' ಮೇಘಾ ಶೆಟ್ಟಿ!
ಮೇಘಾ ಶೆಟ್ಟಿ ಅವರ ಹೆಸರು ಕೇಳಿದರೆ ಕನ್ನಡ ವೀಕ್ಷಕರಿಗೆ ಮೊದಲು ನೆನಪಾಗುವುದು 'ಜೊತೆ ಜೊತೆಯಲಿ' ಸೀರಿಯಲ್. ಮೊದಲ ಬಾರಿಗೆ ಸೀರಿಯಲ್ ನಲ್ಲಿ ಮೇಘಾ ಶೆಟ್ಟಿ ಅವರ ಪಾತ್ರ ನೋಡಿದ ಅದೆಷ್ಟೋ ಜನರು "ನಮಗೂ ಈ ತರಹ ಒಬ್ಬ ಮಗಳು ಇರಬಾರದಿತ್ತಾ" ಅಂದುಕೊಂಡಿದ್ದು ಉಂಟು.
ಈ ಸೀರಿಯಲ್'ನಲ್ಲಿ ಮಧ್ಯಮ ವರ್ಗದ ದಿಟ್ಟ ಹೆಣ್ಣುಗಳ ಪಾತ್ರ ನಿರ್ವಹಿಸುತ್ತಾ, ವೀಕ್ಷಕರಿಗೆ ಮತ್ತಷ್ಟು ಹತ್ತಿರವಾದ ಮೇಘಾ ಶೆಟ್ಟಿ ಅವರನ್ನು ಜನರು ಪ್ರೀತಿಯಿಂದ 'ಅನು ಬಂಗಾರ' ಎಂದೇ ಕರೆಯುತ್ತಾರೆ.
ಒಮ್ಮೆ ಮೇಘಾ ಶೆಟ್ಟಿ ಅವರು ಧಾರಾವಾಹಿಯಿಂದ ಹೊರ ನಡೆದರು ಎಂಬ ಸುದ್ದಿ ತಿಳಿದು ಬರುತ್ತಿದ್ದಂತೆ ಅವರ ಅಭಿಮಾನಿಗಳು ಬಹಳ ಬೇಸರ ವ್ಯಕ್ತಪಡಿಸಿದ್ದರು. ಆಗ ಮೇಘಾ ಶೆಟ್ಟಿ ಅವರೇ ಇನ್ ಸ್ಟಾಗ್ರಾಂನಲ್ಲಿ "ನಾನು ಧಾರಾವಾಹಿಯನ್ನು ಬಿಟ್ಟು ಹೋಗುವುದಿಲ್ಲ" ಎಂದು ವೀಕ್ಷಕರ ಬಳಿ ತಿಳಿಸಿದ್ದರು.

ನಟಿ ಮೇಘಾ ಇನ್ಮುಂದೆ ನಿರ್ಮಾಪಕಿ
ಹೀಗೆ ಪ್ರತಿಯೊಂದು ವಿಷಯವನ್ನು ತಮ್ಮ ಅಭಿಮಾನಿಗಳ ಬಳಿ ಹಂಚಿಕೊಳ್ಳುವ ಮೇಘಾ ಶೆಟ್ಟಿ ಅವರು ಇದೀಗ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹೌದು, ಇಷ್ಟು ದಿನ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದ ಮೇಘಾ ಶೆಟ್ಟಿ ಅವರು, ಇದೀಗ ನಿರ್ಮಾಪಕಿಯಾಗಿದ್ದಾರೆ. ಮೇಘಾ ಶೆಟ್ಟಿ ಅವರು ಈ ವಿಷಯವನ್ನು ತಮ್ಮ ಇನ್ ಸ್ಟಾಗ್ರಾಂ ಪೇಜ್'ನಲ್ಲಿ ಹಂಚಿಕೊಂಡಿದ್ದಾರೆ. ಧಾರಾವಾಹಿಯ ಪ್ರೊಮೊ ವಿಡಿಯೋವನ್ನು ಕೂಡ ಅಪ್ ಲೋಡ್ ಮಾಡಿರುವುದನ್ನು ನೀವು ನೋಡಬಹುದು. ವಿಡಿಯೋ ಕೆಳಗೆ "ನಮ್ಮ ಪ್ರೊಡಕ್ಷನ್ ಹೌಸ್'ನಿಂದ ಕನ್ನಡದಲ್ಲಿ ಹೊಸ ಧಾರಾವಾಹಿ. ವೀಕ್ಷಿಸಿ, ಬೆಂಬಲಿಸಿ, ನಿಮ್ಮ ಶುಭ ಹಾರೈಕೆಗಳು ಇರಲಿ" ಎಂದು ಬರೆದುಕೊಂಡಿದ್ದಾರೆ.

ಮೇಘಾ ಶೆಟ್ಟಿ ಪೋಸ್ಟ್ಗೆ ಅಭಿಮಾನಿಗಳ ಶುಭ ಹಾರೈಕೆ
ಮೇಘಾ ಶೆಟ್ಟಿ ಅವರ ಈ ಪೋಸ್ಟ್'ಗೆ ಅಭಿಮಾನಿಗಳು ಕೂಡ ಬೆಂಬಲಿಸಿದ್ದು, ಮೇಘಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅಂದಹಾಗೆ ಮೇಘಾ ಅವರು ನಿರ್ಮಾಣ ಮಾಡುತ್ತಿರುವ ಈ ಧಾರಾವಾಹಿಯ ಹೆಸರು 'ಕೆಂಡ ಸಂಪಿಗೆ' ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಧಾರಾವಾಹಿ ವಿಡಿಯೋ ನೋಡಿದರೆ ಇದು ಬಡ ವರ್ಗದ ಹೆಣ್ಣು ಮಗಳ ಕಥೆಯಾಗಿದೆ. ಸುಮನಾ ಎಂಬ ಹುಡುಗಿ ತನ್ನ ಒಡಹುಟ್ಟಿದವರ ಯೋಗಕ್ಷೇಮಕ್ಕಾಗಿ ತನ್ನ ಜೀವನವನ್ನು ತ್ಯಾಗ ಮಾಡುವ ಕಥೆಯಾಗಿದೆ. ಅನೇಕರು "ಪ್ರೊಮೊ ನೋಡಿದರೆ 'ಜೊತೆ ಜೊತೆಯಲಿ', 'ಸತ್ಯ' ಧಾರಾವಾಹಿ ನೆನಪಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ನಟನೆ ಮೂಲಕ ಮೆನೆ ಮಗಳಾಗಿರುವ ಮೇಘಾ ಶೆಟ್ಟಿ!
ಇದೇ ಮೊದಲ ಬಾರಿಗೆ ಮೇಘಾ ಶೆಟ್ಟಿಯವರು ಧಾರಾವಾಹಿಗೆ ಬಂಡವಾಳ ಹೂಡುತ್ತಿರುವುದು ವಿಶೇಷ. ಮೇಘಾ ಶೆಟ್ಟಿ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲೇ ಧಾರಾವಾಹಿ ನಿರ್ಮಾಣಕ್ಕೆ ಕೈ ಹಾಕಿದ್ದು, ಅನೇಕರ ಹುಬ್ಬೇರುವಂತೆ ಮಾಡಿದೆ. 'ಜೊತೆ ಜೊತೆಯಲಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಮೇಘಾ ಶೆಟ್ಟಿ, ಅನು ಸಿರಿಮನೆ ಪಾತ್ರದಲ್ಲಿ ಮೊದಲ ಬಾರಿಗೆ ವೀಕ್ಷಕರ ಮನ ಗೆದ್ದರು. ಈ ಧಾರಾವಾಹಿಯು ಆರಂಭದಲ್ಲೇ ಕಿರುತೆರೆಯಲ್ಲಿ ಹೆಚ್ಚಿನ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆಯಿತು.

ಸಿನಿಮಾಗಳಿಂದಲೂ ಸಾಲು ಸಾಲು ಆಫರ್ ಪಡೆಯುತ್ತಿದ್ದಾರೆ
ಕಿರುತೆರೆಯಲ್ಲಿ ಮಾತ್ರವಲ್ಲದೆ, ಬೆಳ್ಳಿ ತೆರೆಯಲ್ಲೂ ಮಿಂಚುತ್ತಿರುವ ಮೇಘಾ ಶೆಟ್ಟಿ ರೊಮ್ಯಾಂಟಿಕ್ ಕಾಮಿಡಿ ಚಿತ್ರ 'ತ್ರಿಬಲ್ ರೈಡಿಂಗ್' ನಲ್ಲಿಯೂ ಸಹ ಕಾಣಿಸಿಕೊಂಡಿದ್ದಾರೆ. ಇದು ಕನ್ನಡದಲ್ಲಿ ಮೇಘಾ ಶೆಟ್ಟಿ ಅವರ ಮೊದಲ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ಮೇಘಾ ಶೆಟ್ಟಿ ಅವರು ಮೊದಲ ಬಾರಿಗೆ ಗಣೇಶ್ ಅವರೊಂದಿಗೆ ಪರದೆ ಹಂಚಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಚಂದನ್ ಶೆಟ್ಟಿ ಅವರು ಸಂಗೀತ ಸಂಯೋಜನೆ ಮಾಡಿರುವ 'ನೋಡು ಶಿವ' ಎಂಬ ಮ್ಯೂಸಿಕ್ ವಿಡಿಯೋದಲ್ಲಿಯೂ ಮೇಘಾ ಶೆಟ್ಟಿ ಅವರು ಕಾಣಿಸಿಕೊಂಡಿದ್ದಾರೆ.


Click it and Unblock the Notifications











