Megha Shetty: ಮತ್ತೆ ಕಿರುತೆರೆಗೆ ಮರಳಿದ ಮೇಘಾ ಶೆಟ್ಟಿ; ಆದರೆ ನಟಿಯಾಗಿ ಅಲ್ಲ
ನಟಿಯಾಗಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಮೇಘಾ ಶೆಟ್ಟಿ ಇದೀಗ ಸಣ್ಣ ಗ್ಯಾಪ್ನ ನಂತರ ಮತ್ತೆ ಕಿರುತೆರೆಯತ್ತ ಮರಳಿದ್ದಾರೆ. ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ನಾಯಕಿ ಅನು ಸಿರಿಮನೆ ಆಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದ ಮೇಘಾ ಶೆಟ್ಟಿ ಇದೀಗ ನಿರ್ಮಾಪಕಿಯಾಗಿ ಕಿರುತೆರೆಗೆ ಮರಳುತ್ತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಮುದ್ದು ಸೊಸೆ' ಯನ್ನು ನಿರ್ಮಾಣ ಮಾಡುತ್ತಿದ್ದಾರೆ ನಟಿ ಮೇಘಾ ಶೆಟ್ಟಿ. ಅಂದ ಹಾಗೇ ಈ ಸಂತಸದ ವಿಚಾರವನ್ನು ಒಂದು ದಿನದ ಹಿಂದೆಯಷ್ಟೇ ಮೇಘಾ ಶೆಟ್ಟಿ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಧಾರಾವಾಹಿಯ ಪ್ರೋಮೋವನ್ನು ಇನ್ಸ್ಟಾಗ್ರಾಂ ಸ್ಟೋರಿ ಹಾಕಿರುವ ಈಕೆ "ಇದು ನಮ್ಮ ಪ್ರೊಡಕ್ಷನ್ನ ಧಾರಾವಾಹಿ. ನಿಮ್ಮೆಲ್ಲರ ಪ್ರೋತ್ಸಾಹ ನಮ್ಮ ಮೇಲಿರಲಿ" ಎಂದು ಈಕೆ ಬರೆದುಕೊಂಡಿದ್ದರು.

ಅಂದ ಹಾಗೇ ಮೇಘಾ ಶೆಟ್ಟಿ ಅವರು ಇದು ಮೊದಲ ಬಾರಿ ಧಾರಾವಾಹಿಯನ್ನು ನಿರ್ಮಿಸುತ್ತಿರುವುದಲ್ಲ. ಬದಲಿಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗೌರಿಶಂಕರ' ಧಾರಾವಾಹಿಯನ್ನು ಕೂಡಾ ಮೇಘಾ ಶೆಟ್ಟಿ ಅವರೇ ನಿರ್ಮಾಣ ಮಾಡುತ್ತಿರುವುದು ಎಂಬ ವಿಚಾರ ಅನೇಕರಿಗೆ ತಿಳಿದಿರಲಿಕ್ಕಿಲ್ಲ.
'ಗೌರಿಶಂಕರ' ಧಾರಾವಾಹಿಯ ನಂತರ ಇದೀಗ "ಮುದ್ದುಸೊಸೆ" ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ ನಟಿ ಮೇಘಾ ಶೆಟ್ಟಿ. ಧಾರಾವಾಹಿಯ ಪ್ರೋಮೋ ಈಗಾಗಲೇ ರಿಲೀಸ್ ಆಗಿದ್ದು "ಸ್ಕೂಲ್ ಬೆಂಚ್ನಿಂದ ಹಸೆಮಣೆಯವರೆಗೆ" ಎಂಬ ಶೀರ್ಷಿಕೆಯಿದೆ. ಸರಕಾರಿ ಪದವಿ ಪೂರ್ವ ಕಾಲೇಜು ಹೊನ್ನೆಮಡು, ಮಂಡ್ಯ ಇಲ್ಲಿ ಇತಿಹಾಸದ ವಾರ್ಷಿಕ ಪ್ರಶಸ್ತಿ ನಡೆಯುತ್ತಿರುತ್ತದೆ. ಅಲ್ಲಿ ಮಕ್ಕಳೆಲ್ಲಾ ಪರೀಕ್ಷೆ ಬರೆಯುತ್ತಿರುತ್ತಾರೆ. ಒಂದೆರಡು ಮಕ್ಕಳು ಪರೀಕ್ಷೆಗೆ ಏನು ಬರೆಯುವುದು ಎಂದು ಆಲೋಚಿಸುತ್ತಿರುತ್ತಾರೆ.
ಆಗ ಹಿಂದೆಯಿಂದ ಅಡಿಶನಲ್ ಶೀಟ್ ಎಂಬ ಧ್ವನಿ ಕೇಳುತ್ತದೆ. ಧ್ವನಿ ಬಂದ ಕಡೆ ನೋಡಿದರೆ ಮದುವೆಯ ವಧುವಿನಂತೆ ಅಲಂಕಾರಗೊಂಡ ಹೆಣ್ಣು ಮಗಳೊಬ್ಬಳು ಪರೀಕ್ಷೆ ಬರೆಯುತ್ತಿರುತ್ತಾಳೆ. ಶೀರ್ಷಿಕೆಯೇ ಹೇಳುವಂತೆ ಆಕೆ ಮುದ್ದು ಸೊಸೆ ಎಂಬುದು ತಿಳಿಯುತ್ತದೆ. ಬದಲಾಗಿ ಬೇರೇನೂ ಗೊತ್ತಾಗುವುದಿಲ್ಲ. ಇನ್ನು ಮೇಘಾ ಶೆಟ್ಟಿ ನಿರ್ಮಾಣದ "ಮುದ್ದು ಸೊಸೆ" ಧಾರಾವಾಹಿಯಲ್ಲಿ ನಾಯಕಿಯಾಗಿ ಪ್ರತಿಮಾ ಅವರು ಕಾಣಿಸಿಕೊಳ್ಳಲಿದ್ದಾರೆ.

ಪ್ರತಿಮಾ ಅವರಿಗೆ ಕಿರುತೆರೆ ಹೊಸದೇನಲ್ಲ. ಈ ಹಿಂದೆ 'ದೊರೆಸಾನಿ', 'ಅಂತರಪಟ' ಧಾರಾವಾಹಿಯಲ್ಲಿ ಈಕೆ ಅಭಿನಯಿಸಿದ್ದರು. ಜೊತೆಗೆ 'ಸಿವಂಗಿ' ಎನ್ನುವ ತೆಲುಗು ಧಾರಾವಾಹಿಯಲ್ಲಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿಯೂ ಈಕೆ ಗುರುತಿಸಿಕೊಂಡಿದ್ದರು. ಇನ್ನು ಈ ಧಾರಾವಾಹಿಯಲ್ಲಿ ನಾಯಕರಾಗಿ ಯಾರು ನಟಿಸುತ್ತಿದ್ದಾರೆ ಎಂಬ ವಿಚಾರ ಇನ್ನೂ ಕೂಡಾ ಬಹಿರಂಗಗೊಂಡಿಲ್ಲ.
'ಬಿಗ್ ಬಾಸ್ ಸೀಸನ್ 11'ರ ಸ್ಪರ್ಧಿ ತ್ರಿವಿಕ್ರಮ್ ಅವರು 'ಮುದ್ದು ಸೊಸೆ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ ಎಂಬ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆಯಾದರೂ, ಸ್ಪಷ್ಟವಾದ ಮಾಹಿತಿ ಇನ್ನೂ ಹೊರಬಿದ್ದಿಲ್ಲ.
ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮೇಘಾ ಶೆಟ್ಟಿ ಅವರು ಇದೀಗ ನಟಿಯಾಗಿ ಅಲ್ಲದಿದ್ದರೂ, ನಿರ್ಮಾಪಕರಾಗಿ ಕಿರುತೆರೆಗೆ ಮರಳುತ್ತಿರುವುದು ಕಿರುತೆರೆ ವೀಕ್ಷಕರಿಗೆ ಸಂತಸ ತಂದಿದೆ. ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಗೌರಿ ಶಂಕರ' ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆದ ಹಾಗೇ 'ಮುದ್ದು ಸೊಸೆ' ಧಾರಾವಾಹಿಯು ಕೂಡಾ ವೀಕ್ಷಕರ ಮನ ಸೆಳೆಯಲಿದೆಯಾ ಎಂದು ನೋಡಬೇಕಾಗಿದೆ.


Click it and Unblock the Notifications











