ಆಫೀಸಿನ ಮತ್ತೊಂದು ರಹಸ್ಯವನ್ನು ಬಯಲು ಮಾಡುತ್ತಾನಾ ಸಂಜು?
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಸಂಜು ಆರಾಧನಾಳನ್ನು ಅವಾಯ್ಡ್ ಮಾಡುತ್ತಿದ್ದಾನೆ. ಆರಾಧನಾಳಿಂದ ದೂರ ಇರಲು ಸಂಜು ಪ್ರಯತ್ನಿಸುತ್ತಿದ್ದಾನೆ. ಹಾಗಾಗೊ ಆಫೀಸ್ ಕೆಲಸವಿದೆ ಎಂದು ಹೇಳಿ ಆಫೀಸಿಗೆ ಬಂದಿದ್ದಾನೆ.
ಆಫೀಸಿಗೆ ಬಂದ ಸಂಜು ತನಗೇನಾದರೂ ಕೆಲಸ ಕೊಡಿ ಎಂದು ಮೀರಾಳನ್ನು ಕೇಳುತ್ತಾನೆ. ಮೀರಾ ಕಂಪನಿ ಓನರ್ಗೆ ಇಲ್ಲದ ಆಸಕ್ತಿ ನಿಮಗಿದೆಯಲ್ಲ ಎಂದು ಖುಷಿ ಪಡುತ್ತಾಳೆ. ಇನ್ನು ಟ್ಯಾಕ್ಸ್ ಸಂಬಂಧಪಟ್ಟ ಕೆಲಸವನ್ನು ಮಾಡಲು ಹೇಳುತ್ತಾಳೆ.
ಆಫೀಸಿನ ಕೆಲಸದಲ್ಲಿ ಹೆಚ್ಚು ಕಾಳಜಿ ವಹಿಸುವ ಸಂಜು, ತನ್ನ ಟ್ರೀಟ್ ಮೆಂಟ್ ಬಗ್ಗೆ ಹಾಗೂ ಆರಾಧನಾ ಬಗ್ಗೆ ಯೋಚಿಸುವುದೇ ಇಲ್ಲ. ಬದಲಿಗೆ ಆರಾಧನಾ ಬಂದಿದ್ದೇ ತಪ್ಪು ಎಂಬಂತೆ ನಡೆದುಕೊಳ್ಳುತ್ತಿದ್ದಾನೆ.

ಶಾನುಬೋಗರು ಸಂಜುಗೆ ಹೇಳಿದ್ದೇನು?
ಸಂಜು ಆಫೀಸಿನ ಮತ್ತೊಂದು ಕರ್ಮಕಾಂಡವನ್ನು ಪತ್ತೆ ಮಾಡಿದ್ದಾನೆ. ಆಫೀಸಿನಲ್ಲಿ ಮೀರಾ ಕೊಟ್ಟ ಕೆಲಸವನ್ನು ಮಾಡುವಾಗ ಸಂಜುಗೆ ಫೈಲ್ ಒಂದು ಸಿಗುತ್ತದೆ. ಅದರ ಪ್ರಕಾರ ಕಳೆದ ವರ್ಷ ವರ್ಧನ್ ಗ್ರೂಪ್ಸ್ ಕಂಪನಿಯ ಪ್ರಾಪರ್ಟಿ ಒಂದು ಸೇಲ್ ಆಗಿರುತ್ತದೆ. ಆದರೆ ಇದರ ಲೆಕ್ಕವನ್ನು ಮುಚ್ಚಿಡಲಾಗಿರುತ್ತದೆ. ಇದನ್ನು ಪತ್ತೆ ಮಾಡಿದ ಸಂಜು ಈ ಬಗ್ಗೆ ಶಾನುಭೋಗರ ಬಳಿ ಬಂದು ತೋರಿಸುತ್ತಾನೆ. ಆಗ ಶಾನುಭೋಗರು ಫೈಲ್ ಅನ್ನು ನೋಡಿ ಭಯಪಡುತ್ತಾರೆ. ಈ ಆಫೀಸಿನಲ್ಲಿ ನಡೆಯುವ ಕೆಲ ಕೆಲಸಗಳು ಹೀಗೆ ಇರುತ್ತವೆ. ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಇದನ್ನು ಹಾಗೆ ಇಟ್ಟು ಬಿಡಿ ಎಂದು ಹೇಳುತ್ತಾರೆ.

ಮೀರಾಗೆ ಯಾಕೆ ಸಂಜು ಮೇಲೆ ಕೋಪ?
ಝೇಂಡೇ ಪದೇ ಪದೇ ಮೀರಾಳನ್ನು ಭೇಟಿ ಮಾಡುವಂತೆ ಫೋನ್ ಮಾಡುತ್ತಿರುತ್ತಾನೆ. ಇದರಿಂದ ಕೋಪಗೊಂಡ ಮೀರಾ ಝೇಂಡೇ ಅನ್ನು ಭೇಟಿ ಮಾಡಿ ಬೈಯುತ್ತಾಳೆ. ಪದೇ ಪದೇ ಆಫೀಸ್ ಸಮಯದಲ್ಲಿ ನನ್ನನ್ನು ಭೇಟಿ ಮಾಡಲು ಹೇಳಬೇಡಿ ಎನ್ನುತ್ತಾಳೆ. ಇದೇ ವೇಳೆಗೆ ಸಂಜು ಫೈಲ್ ವಿಚಾರವನ್ನು ಮೀರಾಗೆ ಹೇಳಬೇಕೆಂದು ಫೋನ್ ಮಾಡುತ್ತಾನೆ. ಸಿಟ್ಟಿನಲ್ಲಿ ಫೋನ್ ರಿಸೀವ್ ಮಾಡಿ ಮಾತನಾಡುತ್ತಾಳೆ. ಸಂಜು ಫೈಲ್ ಬಗ್ಗೆ ಹೇಳಿದಾಗ ಮೀರಾ ಭೈದು ಫೋನ್ ಇಡುತ್ತಾಳೆ. ಹೇಳಿದ ಕೆಲಸವನ್ನಷ್ಟೇ ಮಾಡಿ ಎನ್ನುತ್ತಾಳೆ. ಅಲ್ಲಿಂದ ಮೀರಾ ಹೊರಟ ಮೇಲೆ ಝೇಂಡೇ ಆರ್ಯನ ಆಸ್ತಿಯೆಲ್ಲಾ ತನ್ನ ಸಾಮ್ರಾಜ್ಯ ಎಂಬಂತೆ ಮಾತನಾಡಿಕೊಳ್ಳುತ್ತಾನೆ.

ಸಂಜು ಮೇಲೆ ಅನುಮಾನಿಸಿದ ಆರಾಧನಾ
ಮೀರಾ ಕೂಡ ಸಂಜು ಮಾತನನ್ನು ಕೇಳದಿದ್ದಾಗ ಈ ಬಗ್ಗೆ ಅನುಗೆ ಹೇಳಲು ಮನೆಗೆ ಬರುತ್ತಾನೆ. ಅಲ್ಲಿ ಆರಾಧನಾ ಸಂಜುನನ್ನು ನೋಡಿ ಖುಷಿ ಪಡುತ್ತಾಳೆ. ನಿನ್ನ ಬಳಿ ಮಾತನಾಡಬೇಕು ಎಂದು ಪ್ರೀತಿಯಿಂದ ಹೇಳುತ್ತಾಳೆ. ಆದರೆ ಆರಾಧನಾ ಕಡೆ ಗಮನಿಸದ ಸಂಜು ಸೀದಾ ಅನು ಬಳಿ ಬಂದು ನಿಮ್ಮ ಬಳಿ ಮಾತನಾಡಬೇಕು ಎನ್ನುತ್ತಾನೆ. ಇನ್ನು ನೀವು ಅರಾಮಾಗಿದ್ದೀರಾ ಎಂದೆಲ್ಲಾ ವಿಚಾರಿಸುತ್ತಾನೆ. ಇದರಿಂದ ಆರಾಧನಾ ಬೇಸರ ಮಾಡಿಕೊಳ್ಳುತ್ತಾಳೆ. ಇದನ್ನು ಗಮನಿಸುವ ಅನು ಮತ್ತು ಶಾರದಾ ಇಬ್ಬರೂ ಈಗ ನೀನು ಆಫೀಸಿನ ಬಗ್ಗೆ ಯೋಚಿಸಬೇಡಿ. ಆರಾಧನಾ ಜೊತೆ ಸಮಯ ಕಳೆಯಿರಿ ಎಂದು ಹೇಳಿ ಕಳುಹಿಸುತ್ತಾರೆ. ಆದರೆ ರೂಮಿಗೆ ಹೋದ ಮೇಲೆ ಮತ್ತೆ ಸಂಜು ಆರಾಧನಾಳನ್ನು ಬಿಟ್ಟು ಹೊರಗೆ ಬರುತ್ತಾನೆ. ಆಗ ಆರಾಧನಾ ಸಂಜುಗೆ ತನ್ನ ಮೇಲೆಯೇ ಆಸಕ್ತಿ ಇಲ್ಲ ಎಂದು ಅನುಮಾನಿಸುತ್ತಾಳೆ.

ಇನ್ನು ಎಷ್ಟು ದಿನ ಸತ್ಯ ಮುಚ್ಚಿಡುತ್ತಾರೆ
ಪ್ರಿಯದರ್ಶಿನಿ ಎರಡು ದಿನವಾದರೂ ರೂಮಿನಿಂದ ಹೊರಗೆ ಬರುವುದಿಲ್ಲ. ಇದರಿಂದ ಅನು, ಶಾರಾದಾ ದೇವಿಗೆ ಮನದೊಳಗೆ ಅನುಮಾನ ಮೂಡುತ್ತದೆ. ಅವರ ಆರೋಗ್ಯ ಹೇಗಿದೆ ಎಂದು ಪ್ರಭು ದೇಸಾಯಿ ಅವರ ಬಳಿ ವಿಚಾರಿಸುತ್ತಾರೆ. ಇದೇ ವೇಳೆಗೆ ಸಂಜು ಕೂಡ ಮಾತನಾಡುತ್ತಾನೆ. ಆದರೆ ಪ್ರಭು ದೇಸಾಯಿ ಸತ್ಯವನ್ನು ಹೇಳುತ್ತಾರೋ ಇಲ್ಲ ಅವರೂ ಕೂಡ ಮುಚ್ಚಿಡುತ್ತಾರೋ ಗೊತ್ತಿಲ್ಲ.


Click it and Unblock the Notifications











