ಫ್ಯಾಮಿಲಿ ಫೋಟೊಗೆ ಎಲ್ಲರೂ ಪೋಸ್ ಕೊಟ್ಟಾಯ್ತು: 4 ವರ್ಷಗಳ ಬಳಿಕ ಮುಗೀತು 'ಜೊತೆ ಜೊತೆಯಲಿ' ಕಥೆ
ಸೆಪ್ಟೆಂಬರ್ 09 2019ರಲ್ಲಿ ಶುರುವಾದ ಜೊತೆ ಜೊತೆಯಲಿ ಧಾರಾವಾಹಿ ಕೊನೆಗೂ ಮುಕ್ತಾಯಗೊಂಡಿದೆ. ಒಟ್ಟು 953 ಎಪಿಸೋಡ್ಗಳಲ್ಲಿ ಈ ಧಾರಾವಾಹಿ ಪ್ರಸಾರ ಕಂಡಿದೆ. ಈ ಧಾರಾವಾಹಿಯ ಅಷ್ಟೂ ಪಾತ್ರಗಳು ಕೂಡ ತನ್ನದೇ ಆದ ವಿಶೇಷ ಸ್ಥಾನಗಳನ್ನು ಹೊಂದಿದ್ದವು. ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದ ಈ ಧಾರಾವಾಹಿ ಇಷ್ಟು ಬೇಗ ಮುಕ್ತಾಯಗೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
ಧಾರಾವಾಹಿ ಇದ್ದಕ್ಕಿದ್ದ ಹಾಗೆಯೇ ಕೊನೆ ಕಂಡಿರುವುದಕ್ಕೆ ಪ್ರೇಕ್ಷಕರಿಗೆ ಬೇಸರವಾಗಿದೆ. ಅನಿವಾರ್ಯ ಕಾರಣಗಳಿಂದಾಗಿ ಧಾರಾವಾಹಿ ಸುಖಾಂತ್ಯವನ್ನು ಕಂಡಿದೆ. ಕೊನೆ ಎಪಿಸೋಡ್ನಲ್ಲಿ ಆರಾಧನಾ ಮನೆ ಬಿಟ್ಟು ಹೋಗಿದ್ದಕ್ಕೆ ಆರ್ಯನಿಗೆ ಬೇಸರವಾಗುತ್ತದೆ. ಅದಕ್ಕೆ ಹರ್ಷ ಹಾಗೂ ಮಾನ್ಸಿ ಸಮಾಧಾನ ಹೇಳುತ್ತಾರೆ. ಇದೆಲ್ಲಾ ಅವಾಂತರವೂ ಆರಾಧನಾ ಅವರ ತಪ್ಪು ತಿಳುವಳಿಕೆಯಿಂದ ಆಗಿದ್ದು. ಅದನ್ನೆಲ್ಲಾ ತಲೆಗೆ ಹಚ್ಚಿಕೊಳ್ಳಬೇಡಿ. ಈಗಿರುವ ಕ್ಷಣವನ್ನು ಎಂಜಾಯ್ ಮಾಡಿ. ದೂರ ಇದ್ದಿದ್ದಕ್ಕೆ ನಿಮ್ಮಿಬ್ಬರ ಪ್ರೀತಿಯ ಬೆಲೆಯೂ ಅರ್ಥವಾಗಿದೆ ಎನ್ನುತ್ತಾರೆ.

ಇನ್ನು ಝೇಂಡೇ ಕೂಡ ಹೌದು. ಇನ್ಮುಂದೆ ಅನು ಮತ್ತು ಆರ್ಯ ಇಬ್ಬರೂ ಕೂಡ ಸದಾ ಜೊತೆ ಜೊತೆಯಾಗಿ ಇರಬೇಕು. ಇಷ್ಟು ದಿನ ನಾನು ನಿಮ್ಮನ್ನು ಬೇರೆ ಮಾಡಲು ಪ್ರಯತ್ನಿಸಿದ್ದಕ್ಕೆ ನನ್ನನ್ನು ಕ್ಷಮಿಸಿಬಿಡಿ. ಮತ್ತೆ ಈ ಕೆಲಸ ಯಾವತ್ತೂ ಮಾಡುವುದಿಲ್ಲ. ಹಾಗೇನಾದರೂ ಮಾಡಿದರೆ, ಮತ್ತೆ ಯಾವತ್ತೂ ನಿಮಗೆ ಮುಖ ತೋರಿಸುವುದಿಲ್ಲ ಎಂದು ಹೇಳುತ್ತಾನೆ.
ತಾಳಿ ಕಟ್ಟಿದ ಆರ್ಯ
ಇನ್ನು ಅನು ಮತ್ತು ಆರ್ಯ ಇಬ್ಬರು ಒಂದಾಗುತ್ತಾರೆ. ದೇವರ ಮನೆಯ ಎದುರಿಗೆ ನಿಂತು ಎಲ್ಲರ ಎದುರಿಗೂ ಅನು ಹಾಗೂ ಆರ್ಯ ಇಬ್ಬರೂ ಹಾರವನ್ನು ಬದಲಾಯಿಸಿಕೊಳ್ಳುತ್ತಾರೆ. ನಂತರ ಆರ್ಯ, ಅನು ಕುತ್ತಿಗೆಗೆ ಜೋಗ್ತವ್ವ ಕೊಟ್ಟಿದ್ದ ಅರಿಶಿನದ ಕೊಂಬನ್ನು ಕಟ್ಟುತ್ತಾನೆ. ಎಲ್ಲರೂ ಅನು ಆರ್ಯ ಇಬ್ಬರಿಗೂ ವಿಷ್ ಮಾಡುತ್ತಾರೆ. ನೀವಿಬ್ಬರೂ ಹೀಗೆ ಜೊತೆ ಜೊತೆಯಾಗಿ ಇರಿ ಎಂದು ಹೇಳುತ್ತಾರೆ.
ಆಫೀಸಿನಿಂದ ಬಂದವರೆಲ್ಲಾ ಹೂ ಗುಚ್ಛ ಕೊಟ್ಟು ಅನು ಮತ್ತು ಆರ್ಯನಿಗೆ ಶುಭಾಷಯ ಕೋರುತ್ತಾರೆ. ಮೀರಾ ನೀವು ಹೀಗೆ ಜೊತೆ ಜೊತೆಯಾಗಿ ಇರಿ ಎಂದಾಗ ಆರ್ಯ, ಮೀರಾಳಿಗೆ ನಿನಗೆ ನನ್ನ ಮನದಲ್ಲಿ ವಿಶೇಷವಾದ ಸ್ಥಾನವಿದೆ ಎನ್ನುತ್ತಾನೆ. ಅನು ಕೂಡ ನಮ್ಮಿಬ್ಬರನ್ನು ಒಂದು ಮಾಡಲು ಪ್ರಯತ್ನಿಸಿದ ನಿನಗೆ ಧನ್ಯವಾದ ಎಂದು ಹೇಳುತ್ತಾಳೆ. ಇದರಿಂದ ಮೀರಾ ಎಮೋಷನಲ್ ಆಗುತ್ತಾಳೆ.

ಮನೆಗೆ ಬಂದ ಜಲಂಧರ್
ಎಲ್ಲರೂ ಊಟಕ್ಕೆ ಹೊರಟ ನಂತರ ಝೇಂಡೇ, ಮೀರಾ ಮತ್ತು ಶಾರದಾ ದೇವಿ ಅನ್ನು ಕ್ಷಮೆ ಕೇಳುತ್ತಾನೆ. ನಿಮ್ಮ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡೆ ಎನ್ನುತ್ತಾನೆ. ಶಾರದಾ ಅದನ್ನೆಲ್ಲಾ ಮರೆತುಬಿಡಿ ಎಂದು ಹೇಳುತ್ತಾಳೆ. ಇನ್ನು ಆರ್ಯ ಮುಖ್ಯವಾದ ವ್ಯಕ್ತಿಯೊಬ್ಬರು ಬರಬೇಕಿತ್ತು, ಅವರಿಗೆ ಕಾಯುತ್ತಿದ್ದೇನೆ ಎಂದು ಹೇಳಿದ ಕೂಡಲೇ ಆ ವ್ಯಕ್ತಿ ಬರುತ್ತಾರೆ. ಅದು ಬೇರೆ ಯಾರೂ ಅಲ್ಲ ಜಲಂಧರ್.
ಆರ್ಯ ಮತ್ತು ಝೇಂಡೇ ಸೇರಿ ಮಾಡಿದ ಅನ್ಯಾಯದಿಂದ ಜೀವನ ಪೂರ್ತಿ ಜಲಂಧರ್ ಜೈಲಿನಲ್ಲಿ ಕಳೆಯುವಂತೆ ಆಗಿರುತ್ತದೆ. ಇದಕ್ಕೆ ಇಬ್ಬರೂ ಕ್ಷಮೆ ಕೇಳುತ್ತಾರೆ. ಶಾರದಾ ದೇವಿ ಕೂಡ ಇನ್ಮುಂದೆ ನಮ್ಮ ಕಂಪನಿಯ ಪಾರ್ಟನರ್ ಆಗಿ ನೀವು ಇರಬೇಕು ಎಂದು ಹೇಳುತ್ತಾಳೆ. ಅನು ಕೂಡ ಇದಕ್ಕೆ ಒಪ್ಪಿಕೊಳ್ಳುತ್ತಾಳೆ.
ರಾಜನಂದಿನಿ ರೂಮಿಗೆ ಅನು - ಆರ್ಯ
ಇನ್ನು ಅನು ಮತ್ತು ಆರ್ಯ ಒಬ್ಬರಿಗೊಬ್ಬರು ಕ್ಷಮೆ ಕೇಳಿಕೊಂಡು ರಾಜನಂದಿನಿ ರೂಮ್ಗೆ ಒಟ್ಟಿಗೆ ತೆರಳುತ್ತಾರೆ. ಇಬ್ಬರೂ ಇನ್ಯಾವತ್ತು ಒಬ್ಬರನ್ನೊಬ್ಬರು ಬಿಟ್ಟಿರುವುದಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಇಬ್ಬರೂ ಹೀಗೆ ಸದಾ ಜೊತೆ ಜೊತೆಯಲಿ ಇರೋಣ ಎಂದು ಹೇಳುತ್ತಾರೆ. ಅಲ್ಲಿಗೆ ಧಾರಾವಾಹಿ ಸುಖಾಂತ್ಯವನ್ನು ಕಂಡಿದೆ.


Click it and Unblock the Notifications











