ದಾರಿ ತಪ್ಪಿದ 'ಜೊತೆ ಜೊತೆಯಲಿ': ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತಿರುವ ಪ್ರಿಯದರ್ಶಿನಿ!
'ಜೊತೆ ಜೊತೆಯಲಿ' ಧಾರಾವಾಹಿ ಈಗ ನಿತ್ಯ ಬೇಡದ ಟ್ವಿಸ್ಟ್ ಗಳೇ. ರಾಜನಂದಿನಿ ರಹಸ್ಯ ಕಥೆಯನ್ನು ಹೇಳುವಾಗ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿತ್ತು. ಆದರೆ ಈಗ ಆರ್ಯವರ್ಧನ್ ಪಾತ್ರ ಬದಲಾದಾಗಿನಿಂದಲೂ ಧಾರಾವಾಹಿಯ ಕಥೆಯೇ ಹಾದಿ ತಪ್ಪಿದೆ.
ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್ ಧಾರಾವಾಹಿ ತಂಡವನ್ನು ಬಿಟ್ಟು ಆಗಸ್ಟ್ ತಿಂಗಳಿನಲ್ಲಿ ಹೊರ ನಡೆದರು. ಆಗ 'ಜೊತೆ ಜೊತೆಯಲಿ' ಧಾರಾವಾಹಿ ನಿಂತು ಹೋಗುತ್ತೆ ಎಂದು ಹಲವರು ನಂಬಿದ್ದರು. ಆದರೆ, ಅದು ಸುಳ್ಳಾಯಿತು. ಹೇಗಾದರೂ ಮಾಡಿ ಧಾರಾವಾಹಿಯನ್ನು ಗೆಲ್ಲಿಸಲೇಬೇಕು ಎಂದು ಹಠಕ್ಕೆ ಬಿದ್ದ ತಂಡ ಹೊಸ ಕಲಾವಿದನನ್ನು ಹುಡುಕಾಡಿತ್ತು.
ಅನಿರುದ್ಧ್ ಅವರ ಬದಲಿಗೆ ನಟ ಹರೀಶ್ ಅವರನ್ನು ಆರ್ಯವರ್ಧನ್ ಪಾತ್ರಕ್ಕೆ ಕರೆತರಲಾಯಿತು. ಈ ವೇಳೆಯೂ ಧಾರಾವಾಹಿಯಲ್ಲಿ ಸಿಕ್ಕಾಪಟ್ಟೆ ಟ್ವಿಸ್ಟ್ಗಳಿದ್ದವು. ಪ್ರೇಕ್ಷಕರೂ ಕೂಡ ಕುತೂಹಲದಿಂದ ಧಾರಾವಾಹಿಯನ್ನು ತಪ್ಪದೇ ನೋಡುತ್ತಿದ್ದರು.

ಸತ್ಯ ಮುಚ್ಚಿಟ್ಟ ಪ್ರಿಯದರ್ಶಿನಿ
ಆದರೆ ಈಗ 'ಜೊತೆ ಜೊತೆಯಲಿ' ಧಾರಾವಾಹಿ ಸಂಪೂರ್ಣವಾಗಿ ದಾರಿ ತಪ್ಪಿದೆ. ಕಥೆ ಎಲ್ಲಿಂದಲೋ ಎಲ್ಲಿಗೋ ಸಾಗುತ್ತಿದೆ. ಅಪಘಾತದಲ್ಲಿ ನೆನಪು ಕಳೆದುಕೊಂಡಿರುವ ಆರ್ಯನ ಮುಖವೂ ಬದಲಾಗಿದೆ. ಹೀಗಾಗಿ ವರ್ಧನ್ ಕುಟುಂಬ ಆರ್ಯ ಸಾವನ್ನಪ್ಪಿದ್ದಾನೆ ಎಂದು ನಂಬಿದ್ದಾರೆ. ಆದರೆ, ವಿಶ್ವಾಸ್ ದೇಸಾಯಿ ಮುಖ ಹೊತ್ತು ನಿತ್ಯ ಎದುರಿಗೇ ಆರ್ಯ ಓಡಾಡುತ್ತಿದ್ದರೂ, ಯಾರೂ ಗುರುತು ಹಿಡಿಯಲು ಸಾಧ್ಯವಾಗಿಲ್ಲ. ಆದರೆ ವಿಶ್ವಾಸ್ ದೇಸಾಯಿ ಅವರ ಪತ್ನಿಯ ಎಂಟ್ರಿ ಆಗಿದೆ. ಧಾರಾವಾಹಿಯಲ್ಲಿ ಆರ್ಯನಿಗೆ ನೆನಪು ಬರಬೇಕು. ಅಥವಾ ಪ್ರಿಯದರ್ಶಿನಿ ಸತ್ಯ ಹೇಳಬೇಕು. ಆದರೆ, ಇದ್ಯಾವುದೂ ನಡೆಯುತ್ತಲೇ ಇಲ್ಲ.

ಹಾದಿ ತಪ್ಪಿದ ಧಾರಾವಾಹಿ
ಬೇಡದ ಕಥೆಯ ಕಡೆ ಧಾರಾವಾಹಿ ಸಾಗುತ್ತಿದೆ. ಸುಖಾ ಸುಮ್ಮನೆ ಈಗ ಸಂಪಿಗೆಪುರದ ಬಂಗಲೆ, ಝೇಂಡೇ, ರಮ್ಯಾ ಎಂಗೇಜ್ ಮೆಂಟ್ ಎಲ್ಲವೂ ಸೇರಿ ಧಾರಾವಾಹಿ ಕಲಸುಮೇಲೊಗಹ ಆಗಿದೆ. ಇದರಿಂದ ಪ್ರೇಕ್ಷಕರ ತಲೆ ಕೆಟ್ಟೋಗಿದೆ. ವೀಕ್ಷಕರಿಗೆ ಧಾರಾವಾಹಿ ಕಥೆಯಲ್ಲಿದ್ದ ಕುತೂಹಲ ಈಗಿಲ್ಲ. ಕಥೆ ಎಲ್ಲೆಲ್ಲೋ ಸಾಗುತ್ತಿದೆ ಎಂದು ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಧಾರಾವಾಹಿಯಲ್ಲಿ ಚಿಕ್ಕ ಚಿಕ್ಕ ವಿಚಾರಗಳು ತಪ್ಪಾಗುತ್ತಿವೆ. ಸಂಜು ಮನೆಯಲ್ಲಿ ಕಾಣಿಸುತ್ತಿಲ್ಲವೆಂದರೂ ಎಲ್ಲರೂ ಒಂದೂ ಫೋನ್ ಕೂಡ ಮಾಡದೇ ಮನೆಯಲ್ಲಿ ಎಲ್ಲರೂ ಕೂಲ್ ಆಗಿದ್ದಾರೆ. ಆರಾಧನಾ ಒಬ್ಬಳೇ ತಲೆ ಕೆಡಿಸಿಕೊಂಡಿದ್ದಾಳೆ. ಇನ್ನು ಸೊಸೆ ಬಂದ ಮೇಲೂ ಪ್ರಿಯದರ್ಶಿನಿ ತನ್ನ ಮಗ ಸಾವನ್ನಪ್ಪಿರುವ ಸುದ್ದಿಯನ್ನು ಮುಚ್ಚಿಟ್ಟಿದ್ದಾಳೆ. ಇದೆಲ್ಲವೂ ಪ್ರೇಕ್ಷಕರಿಗೆ ಇರಿಟೇಟ್ ಮಾಡುತ್ತಿದೆ.

ಸಂಜು ಕಿಡ್ನ್ಯಾಪ್..?
ಸದ್ಯ ಧಾರಾವಾಹಿಯಲ್ಲಿ ಝೇಂಡೇ, ಸಂಜುನನ್ನು ಕಿಡ್ನ್ಯಾಪ್ ಮಾಡುವ ಸಲುವಾಗಿ ವಠಾರದ ಸುತ್ತ ಕಾವಲು ಹಾಕಿದ್ದಾನೆ. ಸಂಜು ಅನುಗೆ ತೊಂದರೆ ಮಾಡಲು ಝೇಂಡೇ ಈ ಕೆಲಸ ಮಾಡುತ್ತಿದ್ದಾನೆ ಎಂದು ನಂಬಿದ್ದಾನೆ. ಹಾಗಾಗಿ ಅನು ಎಷ್ಟು ಹೇಳಿದರೂ ಕೇಳದೆ ವಠಾರದಲ್ಲೇ ಉಳಿದುಕೊಂಡಿದ್ದಾನೆ. ರಮ್ಯಾ ಎಂಗೇಜ್ ಮೆಂಟ್ ನೆಪ ಹೇಳಿ ಉಳಿದಿರುವ ಸಂಜು, ಅನುಗೆ ಝೇಂಡೇ ಇಂದ ಅಪಾಯವಿದೆ ಎಂಬುದನ್ನು ಹೇಳಿದ್ದಾನೆ. ಇತ್ತ ಆರಾಧನಾ ತನ್ನ ಗಂಡ ಮನೆಗೆ ಬಂದಿಲ್ಲ ಎಂದು ಚಿಂತೆಗೀಡಾಗಿದ್ದಾಳೆ. ಅವನನ್ನು ಇಲ್ಲಿಂದ ಕರೆದುಕೊಂಡು ಹೋಗುವುದೇ ಸರಿ ಎಂದು ನಿರ್ಧರಿಸಿದ್ದಾಳೆ.

ಧಾರಾವಾಹಿ ರೇಟಿಂಗ್ ಇಳಿಯುತ್ತಾ..?
ಇತ್ತ ಪ್ರಿಯದರ್ಶಿನಿ ಮನೆಯವರಗೆ ಸಂಜುನೇ ಆರ್ಯ ಎಂಬ ಸತ್ಯ ಹೇಳಲು ಬಂದಿದ್ದಾಳೆ. ಆದರೆ, ಝೇಂಡೇ ಮಾತು ನಂಬಿ ಸತ್ಯವನ್ನು ಮುಚ್ಚಿಟ್ಟು ವಾಪಸ್ ಊರಿಗೆ ಹೋಗಲು ಮುಂದಾಗಿದ್ದಾಳೆ. ಪ್ರಿಯದರ್ಶಿನಿ ಏನು ಮಾಡುತ್ತಿದ್ದಾಳೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ. ಹೀಗಾಗಿ ಧಾರಾವಾಹಿಯ ಪ್ರೇಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ಕೆಲವರಂತೂ ಧಾರಾವಾಹಿಯನ್ನು ನೋಡುವುದನ್ನೇ ನಿಲ್ಲಿಸಿದ್ದಾರೆ. ಧಾರಾವಾಹಿ ಕಥೆ ಹೀಗೆ ಮುಂದುವರಿದರೆ, ಪ್ರೇಕ್ಷಕರೆಲ್ಲರೂ 'ಜೊತೆ ಜೊತೆಯಲಿ' ಧಾರಾವಾಹಿಯನ್ನು ನೋಡುವುದನ್ನು ಕಂಪ್ಲೀಟ್ ಆಗಿ ನಿಲ್ಲಿಸಿದರೂ ಆಶ್ಚರ್ಯವಿಲ್ಲ. ಇದರಿಂದ ಧಾರಾವಾಹಿಯ ರೇಟಿಂಗ್ ಕೂಡ ತೀರಾ ಕಡಿಮೆಯಾಗಬಹುದು.


Click it and Unblock the Notifications











