ಝೇಂಡೇ ಕೈ ಬಿಟ್ಟ ಆರ್ಯ: ಮುಂದೆ ಕೇಶವನ ಕಥೆಯೇನು..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಮನೆ ಬಿಟ್ಟು ಹೋಗಿರುವುದಕ್ಕೆ ಶಾರದಾ, ಪುಷ್ಪಾ, ಸುಬ್ಬು ಎಲ್ಲರೂ ಗಾಬರಿಗೊಂಡಿರುತ್ತಾರೆ. ಅನುಳನ್ನು ಹುಡುಕಾಡಲು ಮುಂದಾಗುತ್ತಾರೆ.
ಆರಾಧನಾಳಿಗೂ ಸತ್ಯದ ಅರಿವಾಗಿ, ತನಗೋಸ್ಕರ ಅನು ಇಂತಹ ದೊಡ್ಡ ತ್ಯಾಗ ಮಾಡಲು ಮುಂದಾದಳು ಎಂದು ಬೇಸರವಾಗುತ್ತದೆ. ಅನು ಎಲ್ಲೇ ಇದ್ದರು ಆದಷ್ಟು ಬೇಗ ಬನ್ನಿ ಎಂದು ವಾಯ್ಸ್ ನೋಟ್ ಕಳಿಸಿರುತ್ತಾಳೆ.
ಆರ್ಯ, ಹರ್ಷ, ಅನುಳ ಫೋನ್ ಲೊಕೇಶನ್ ಅನ್ನು ಟ್ರ್ಯಾಕ್ ಮಾಡುತ್ತಾರೆ. ಆಗ ವರ್ಧನ್ ಅವರ ಆರೋಗ್ಯ ಕೇಂದ್ರದಲ್ಲಿ ಅನು ಇರುವುದು ತಿಳಿಯುತ್ತದೆ. ಕಾಲ್ ಮಾಡಿದರೆ, ಅನು ಕಾಣೆಯಾಗಿದ್ದಾರೆ, ಮೊಬೈಲ್ ಮಾತ್ರವೇ ಇಲ್ಲಿದೆ ಎಂದು ಹೇಳುತ್ತಾರೆ.

ಕಟ್ಟಾಕಿದ್ರೂ ಖುಷಿಯಾಗಿರುವ ಅನು
ಅನುಳನ್ನು ಝೇಂಡೇ ಆರೋಗ್ಯ ಕೇಂದ್ರದಿಂದ ಕಿಡ್ನ್ಯಾಪ್ ಮಾಡಿರುತ್ತಾನೆ. ಆರೋಗ್ಯ ಕೇಂದ್ರದ ಸಿಸಿಟಿವಿ ಫುಟೇಜ್ಗಳನ್ನು ನಾಶ ಮಾಡಿರುತ್ತಾನೆ. ಆರೋಗ್ಯ ಕೇಂದ್ರದಲ್ಲಿ ಅನು ಇಲ್ಲದೇ ಇರುವುದನ್ನು ನೋಡಿ ಎಲ್ಲರೂ ಗಾಬರಿಯಾಗುತ್ತಾರೆ. ಆದರೆ, ಝೇಂಡೇ ಅನುಳನ್ನು ಕಟ್ಟಿ ಹಾಕಿರುತ್ತಾನೆ. ಹೀಗಿದ್ದರೂ ಅನು ಸ್ವಲ್ಪವೂ ಆತಂಕ ಪಡದೇ ಖುಷಿಯಾಗಿರುತ್ತಾಳೆ. ಅನು ನಗುವುದನ್ನು ನೋಡಿ ಸಹಿಸಲಾಗದ ಝೇಂಡೇ ಆಕೆಯನ್ನು ನಿನಗೆ ಭಯ ಆಗುತ್ತಿಲ್ಲವಾ ಎಂದು ಕೇಳುತ್ತಾನೆ. ಅದಕ್ಕೆ ಅನು ಇಲ್ಲ. ನಿನ್ನ ಕೊನೆಗಾಲ ಶುರುವಾಗಿದೆ, ನೀನು ಭಯಪಡಬೇಕು ನಾನ್ಯಾಕೆ ಹೆದರಲಿ ಎಂದು ಹೇಳುತ್ತಾಳೆ. ಈ ಮಾತಿನಿಂದ ಝೇಂಡೇ ಇನ್ನಷ್ಟು ಕೋಪ ಮಾಡಿಕೊಳ್ಳುತ್ತಾನೆ.

ಝೇಂಡೇ ಕಪಾಳಕ್ಕೆ ಹೊಡೆದ ಆರ್ಯ
ವರ್ಧನ್ ನಿವಾಸಕ್ಕೆ ಅನುಳನ್ನು ಝೇಂಡೇ ಕರೆದುಕೊಂಡು ಬರುತ್ತಾನೆ. ಅನುಳನ್ನು ಆರ್ಯನ ಎದುರಿಗೆ ನಿಲ್ಲಿಸಿ, ನೋಡು ಆರ್ಯ ಅನುಳನ್ನು ಕರೆದುಕೊಂಡು ಬಂದಿದ್ದೀನಿ. ನಿನಗೋಸ್ಕರ ಇದನ್ನೆಲ್ಲಾ ಮಾಡುತ್ತಿದ್ದೇನೆ ಎಂದು ಹೇಳುತ್ತಾನೆ. ಆಗ ಅನು ಸುಮ್ಮನಿರದೇ, ಝೇಂಡೇ ಮಾಡಿದ್ದನ್ನೆಲ್ಲಾ ಹೇಳಿ ಬೈಯುತ್ತಾಳೆ. ಆರ್ಯ ಸರ್ಗೆ ನಿನ್ನ ಬಗ್ಗೆ ಗೊತ್ತಾಗಿದೆ. ಸುಮ್ಮನೆ ಅವರ ಮುಂದೆ ನಾಟಕ ಮಾಡಬೇಡ ಎಂದು ಹೇಳುತ್ತಾಳೆ. ಆದರೆ ಝೇಂಡೇ, ಆರ್ಯನ ಬಳಿ ಹೋಗಿ ಅನು ಹೇಳುತ್ತಿರುವುದು ಸುಳ್ಳು ಎಂದು ವಾದಿಸುತ್ತಾನೆ. ಆಗ ಆರ್ಯ ಝೇಂಡೇಗೆ ಕಪಾಳಕ್ಕೆ ಹೊಡೆದು ಮುಖ ತೋರಿಸಬೇಡ ಎಂದು ಹೇಳಿ ಹೊರಡುತ್ತಾನೆ. ಶಾರದಾ ಕೂಡ ಝೇಂಡೇಗೆ ಬುದ್ಧಿ ಹೇಳಿ ಕಳಿಸುತ್ತಾಳೆ.

ಒಂದಾದ ಅನು- ಆರ್ಯ
ನಂತರ ಆರಾಧನಾ ಅನು ಜೊತೆಗೆ ಮಾತನಾಡುತ್ತಾಳೆ. ಅನುಳನ್ನು ಕ್ಷಮೆ ಕೇಳುತ್ತಾಳೆ. ನನಗೋಸ್ಕರ ಇಷ್ಟು ದೊಡ್ಡ ತ್ಯಾಗಲು ಮುಂದಾದ ನಿಮ್ಮನ್ನು ಅರ್ಥ ಮಾಡಿಕೊಳ್ಳಲಿಲ್ಲ ಕ್ಷಮಿಸಿ ಎಂದು ಹೇಳುತ್ತಾಳೆ. ನಂತರ ಆರ್ಯ ಜೊತೆಗೆ ಮಾತನಾಡಿ ಎಂದು ಹೇಳಿ ಕಳಿಸುತ್ತಾಳೆ. ಅನು ಆರ್ಯನ ಜೊತೆಗೆ ಮಾತನಾಡುತ್ತಾಳೆ. ಇಬ್ಬರೂ ಒಂದಾಗುತ್ತಾರೆ.

ಮೀರಾ ಬಳಿ ಕಣ್ಣೀರಿಟ್ಟ ಝೇಂಡೇ
ಇತ್ತ ಝೇಂಡೇಗೆ ಆರ್ಯ ಮಾಡಿದ್ದು, ಸ್ವಲ್ಪವೂ ಇಷ್ಟವಾಗುವುದಿಲ್ಲ. ಎಷ್ಟು ಸಲ ಫೋನ್ ಮಾಡಿದರೂ ಆರ್ಯನ ಮೊಬೈಲ್ ಸ್ವಿಚ್ ಆಫ್ ಎಂದು ಬರುತ್ತದೆ. ಆಗ ಝೇಂಡೇ ಹಾಗೂ ಮೀರಾ ಫೋನ್ನಲ್ಲಿ ಮಾತನಾಡುತ್ತಾರೆ. ಝೇಂಡೇ ನನಗೆ ಪಶ್ಚಾತಾಪವಾಗಿದೆ. ಆರ್ಯನನ್ನು ಬಿಟ್ಟಿರಲು ಸಾಧ್ಯವಿಲ್ಲ. ನನ್ನ ಮುಂದಿನ ಜೀವನ ಪೂರ್ತಿ ಆರ್ಯನ ಕಾಲಡಿ ಇರುತ್ತೇನೆ. ಅದಕ್ಕಾದರೂ ಅವಕಾಶ ಮಾಡಿಕೊಡು ಎಂದು ಝೇಂಡೇ, ಮೀರಾಳನ್ನು ಕೇಳುತ್ತಾನೆ. ಧಾರಾವಾಹಿಯನ್ನು ನೋಡುತ್ತಿದ್ದರೆ, ಕೊನೆಯ ಹಂತ ತಲುಪಿದೆ ಎಂಬುದು ಸ್ಪಷ್ಟವಾಗುತ್ತಿದೆ.


Click it and Unblock the Notifications











