ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಿಯದರ್ಶಿನಿ: ಇಬ್ಬರು ಮಕ್ಕಳಲ್ಲಿ ಯಾರು ಬದುಕುತ್ತಾರೆ..?
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಈಗ ಆರ್ಯವರ್ಧನ್ ಹಾಗೂ ವಿಶ್ವಾಸ್ ಇಬ್ಬರೂ ಆಸ್ಪತ್ರೆ ಸೇರಿದ್ದಾರೆ. ವಿಶ್ವಾಸ್ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾನೆ. ಇತ್ತ ಆರ್ಯನಿಗೆ ಆಕ್ಸಿಡೆಂಟ್ ಆಗಿದೆ.
ಆರ್ಯನಿಗೆ ಆಕ್ಸಿಡೆಂಟ್ ಆಗಿರುವ ವಿಚಾರ ಝೇಂಡೇಗೆ ಗೊತ್ತಾಗಿದೆ. ಬಳಿಕ ಶಾರದಾ ದೇವಿಗೂ ಗೊತ್ತಾಗಿದ್ದು, ಶಾಕ್ ಆಗಿದ್ದಾರೆ. ಆಸ್ಪತ್ರೆಗೆ ಸೇರಿಸಿದವರು ಆರ್ಯನ ಮುಖ ಸಂಪೂರ್ಣವಾಗಿ ಜಜ್ಜಿ ಹೋಗಿದೆ ಎಂದು ಹೇಳಿದ್ದಾರೆ.
ಇತ್ತ ಜೋಗ್ತವ್ವ ಹೇಳಿದ ಮಾತು ನಿಜವಾಗಿದೆ. ಪ್ರಿಯದರ್ಶಿನಿ ಅವರ ಮಕ್ಕಳ ಜೀವಕ್ಕೆ ಕಂಟಕ ಎದುರಾಗಿದೆ. ಈಗ ಪ್ರಿಯದರ್ಶನಿ ತನ್ನ ಇಬ್ಬರು ಮಕ್ಕಳಲ್ಲಿ ಯಾರನ್ನು ಉಳಿಸಿಕೊಳ್ಳುತ್ತಾಳೋ.?

ಬೆಳಗಾವಿಗೆ ಹೊರಟ ಶಾರದಾ ದೇವಿ
ಆರ್ಯನಿಗೆ ಅಪಘಾತವಾಗಿದೆ ಎಂಬುದನ್ನು ತಿಳಿದ ಶಾರದಾ ಸೀದಾ ಬೆಳಗಾವಿಗೆ ಹೊರಟಿದ್ದಾಳೆ. ಮಾನ್ಸಿ ಹಾಗೂ ಹರ್ಷನಿಗೆ ಅನುಗೆ ಈ ಸತ್ಯವನ್ನು ಹೇಳಬೇಡಿ. ಮನೆಕಡೆ ಹುಷಾರು ಎಂದು ಹೇಳಿ ಹೊರಟಿದ್ದಾಳೆ. ದಾರಿಯಲ್ಲಿ ಅನುಗೆ ಫೋನ್ ಮಾಡಿ ಮಾತನಾಡಿದ್ದಾಳೆ. ಅನು ತವರಿನಲ್ಲಿ ನೆಮ್ಮದಿಯಾಗಿದ್ದು, ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಲಿಲ್ಲ. ಬೆಳಗಾವಿ ಪ್ರಿಯದರ್ಶಿನಿ ಅವರನ್ನು ಮಾತನಾಡಿಸಲು ಹೋಗುತ್ತಿದ್ದೇನೆ. ನಾನು ಆರ್ಯ ಒಟ್ಟಿಗೆ ಬರುತ್ತೇವೆ. ಅಲ್ಲಿಯವರೆಗೂ ನೀನು ಅಲ್ಲೇ ಇರು ಎಂದು ಹೇಳಿದ್ದಾಳೆ. ಅನು ಸದ್ಯ ತನ್ನ ಮಗು, ಮುಂದಿನ ಬದುಕಿನ ಖುಷಿಯಲ್ಲಿ ತೇಲುತ್ತಿದ್ದಾಳೆ.

ಪೊಲೀಸ್ ಠಾಣೆಗೆ ಬಂದ ಝೇಂಡೇ
ಆರ್ಯನಿಗೆ ಅಪಘಾತವಾಗಿದೆ ಎಂದು ತಿಳಿದರೂ ಕೂಡ ಝೇಂಡೇ ಬೆಳಗಾವಿಗೆ ಹೋಗಿಲ್ಲ. ಬದಲಿಗೆ ಸೀದಾ ಪೊಲೀಸ್ ಠಾಣೆಗೆ ಬಂದಿದ್ದಾನೆ. ಪೊಲೀಸರ ಬಳಿ ಕಂಪ್ಲೇಂಟ್ ಮಾಡಿದ್ದಾನೆ. ಗೌಪ್ಯವಾಗಿ ದೂರನ್ನು ದಾಖಲಿಸಿಕೊಳ್ಳುವಂತೆ ಹೇಳಿದ್ದಾನೆ. ಬೆಂಗಳೂರು-ಬೆಳಗಾವಿ ಹೆದ್ದಾರಿಯಲ್ಲಿ ಆರ್ಯನಿಗೆ ಅಪಘಾತವಾಗಿದೆ. ಇದು ಆಕ್ಸಿಡೆಂಟ್ ಅಲ್ಲ. ಕೊಲೆ ಪ್ರಯತ್ನ. ಅದು ಯಾರು ಮಾಡಿಸಿದ್ದು ಎಂಬುದಕ್ಕೆ ನನ್ನ ಬಳಿ ಸಾಕ್ಷಿ ಇದೆ ಎಂದು ಹೇಳಿದ್ದಾನೆ. ಅಲ್ಲದೇ, ಹತ್ಯೆಗೆ ಯತ್ನಿಸಿದವರ ಹೆಸರನ್ನೂ ಹೇಳಿದ್ದು, ಸದ್ಯ ಧಾರಾವಾಹಿಯಲ್ಲಿ ಬಹಿರಂಗಪಡಿಸಿಲ್ಲ. ಈ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಆಸ್ಪತ್ರೆಗೆ ಬಂದ ಪ್ರಿಯದರ್ಶನಿ
ವಿಶ್ವಾಸ್ ಪೋಷಕರು ಮಗನನ್ನು ನೋಡಲು ಆಸ್ಪತ್ರೆಗೆ ಬಂದಿದ್ದಾರೆ. ಆತ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಈ ಮಾತನ್ನು ಕೇಳಿದ ಪ್ರಿಯದರ್ಶಿನಿ, ನನ್ನ ಮಾತಿನ ಮೇಲೆ ನಂಬಿಕೆ ಇಲ್ಲದೇ, ಈ ಕೆಲಸ ಮಾಡಿಕೊಂಡೆಯಾ ಎಂದು ಅಳುತ್ತಿರುತ್ತಾರೆ. ಇದೇ ವೇಳೆಗೆ ಆರ್ಯನಿಗೆ ರಕ್ತದಾನ ಅವಶ್ಯಕತೆ ಇದೆ ಎಂದಾಗ, ಪ್ರಿಯದರ್ಶಿನಿ ಅವರು ತಾವು ಕೊಡುವುದಾಗಿ ಹೇಳುತ್ತಾರೆ. ರಕ್ತ ಕೊಟ್ಟ ಮೇಲೆ ಅದು ಆರ್ಯ ಎಂದು ತಿಳಿದು ಬಿಕ್ಕಿ ಬಿಕ್ಕಿ ಅಳುತ್ತಾರೆ. ಆರ್ಯನ ಮುಖ ಜಜ್ಜಿ ಹೋಗಿದ್ದು, ಪ್ಲಾಸ್ಟಿಕ್ ಸರ್ಜರಿ ಮಾಡಬೇಕು ಎನ್ನುತ್ತಾರೆ. ಇತ್ತ ವಿಶ್ವಾಸ್ ಸಾವನ್ನಪ್ಪಿರುತ್ತಾನೆ. ಈ ಸುದ್ದಿಯನ್ನು ಕೇಳಿ ಪ್ರಿಯದರ್ಶಿನಿ ಸಂಕಟ ಅನುಭವಿಸುತ್ತಾಳೆ.

ಆರ್ಯನಾಗಿ ಬರಲಿದ್ದಾರಾ ಹರೀಶ್ ರಾಜ್..?
ಈ ಹಿಂದೆ ಆರ್ಯವರ್ಧನ್ ಪಾತ್ರದಿಂದ ಅನಿರುದ್ಧ್ ಅವರು ಹೊರ ನಡೆದಿದ್ದರು. ಈ ವಿಚಾರ ದೊಡ್ಡ ಸುದ್ದಿಯಾಗಿತ್ತು. ಮುಂದೆ ಆರ್ಯನ ಪಾತ್ರಕ್ಕೆ ಹರೀಶ್ ರಾಜ್ ಅವರನ್ನು ಕರೆ ತರಲಾಗುತ್ತಿದೆ ಎಂದು ಹೇಳಲಾಗಿತ್ತು. ಆದರೆ, ಹರೀಶ್ ರಾಜ್ ಅವರು ವಿಶ್ವಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಗಿದ್ದರೆ ಆರ್ಯ ಯಾರು ಎಂದು ಯೋಚಿಸುತ್ತಿರುವಾಗಲೇ ಈ ಅಪಘಾತ ಸಂಭವಿಸಿದೆ. ಈಗ ಆರ್ಯನ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಗಿದೆ. ವಿಶ್ವಾಸ್ ಕೊನೆಯುಸಿರೆಳೆದಿರುವುದರಿಂದ ಅವರ ಮುಖದ ಚರ್ಮವನ್ನೇ ಆರ್ಯನಿಗೆ ಹಾಕಬಹುದು ಎಂದು ಊಹಿಸಲಾಗಿದೆ. ಹಾಗೇನಾದರೂ ಆದರೆ, ಹರೀಶ್ ರಾಜ್ ಆರ್ಯವರ್ಧನ್ ಪಾತ್ರವನ್ನು ಮಾಡುವುದು ಪಕ್ಕಾ ಆಗಿದೆ.


Click it and Unblock the Notifications











