ಅನು ಗರ್ಭಿಣಿಯಾಗಿರುವುದು ಅಮ್ಮನಿಗೆ ಗೊತ್ತಾಯ್ತು! ಮುಂದೇನು?
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನುಗೆ ನಿತ್ಯ ತಾನು ಗರ್ಭಿಣಿ ಎಂಬ ವಿಚಾರವನ್ನು ಮನೆಯಲ್ಲಿ ಹೇಳಿಲ್ಲವಲ್ಲ ಎಂಬ ಚಿಂತೆಯಲ್ಲಿದ್ದಾಳೆ. ಇನ್ನು ಆರ್ಯವರ್ಧನ್ ಹೇಳಿರುವ ವಿಚಾರಗಳೆಲ್ಲವೂ ಎಷ್ಟು ಸತ್ಯ ಎಂಬ ಬಗ್ಗೆಯೂ ಅನುಗೆ ಅನುಮಾನವಿದೆ. ಇದೆಲ್ಲವನ್ನೂ ಬಗೆ ಹರಿಸಿಕೊಳ್ಳಲು ಮುಂದಾಗಿದ್ದಾಳೆ.
ಆರ್ಯವರ್ಧನ್ಗೆ ಅನು ತನ್ನನ್ನು ಒಪ್ಪುತ್ತಾಳಾ ಇಲ್ಲವೋ ಎಂಬ ಗೊಂದಲದಲ್ಲಿದ್ದಾನೆ. ಈಗ ಆರ್ಯನಿಗೆ ಅನು ತನ್ನನ್ನು ಒಪ್ಪಿಕೊಂಡರೆ ಸಾಕು, ಈ ಆಸ್ತಿ, ಹೆಸರು ಯಾವುದೂ ಬೇಡ ಎಂಬಂತಾಗಿದೆ. ಎಲ್ಲವನ್ನು ತ್ಯಜಿಸಿ ಅನು ಜೊತೆಗೆ ಬದುಕುವ ಆಸೆ ಆರ್ಯನಿಗಾಗಿದೆ.
ಝೇಂಡೇ ಆರ್ಯನ ಮಾತುಗಳಿಂದ ಭಯಗೊಂಡಿದ್ದಾನೆ. ಎಲ್ಲಾ ಸತ್ಯವನ್ನು ಅನು ಬಳಿ ಹೇಳಿಬಿಟ್ಟರೆ, ಇನ್ಮುಂದೆ ತನಗೆ ಅಲ್ಲಿ ಜಾಗವೇ ಇರುವುದಿಲ್ಲ. ಅನು ಯಾವ ನಿರ್ಧಾರ ತೆಗೆದುಕೊಳ್ಳುತ್ತಾಳೋ ಗೊತ್ತಿಲ್ಲ. ಆರ್ಯ ಯಾಕೆ ಹೀಗಾದ ಎಂಬ ಆತಂಕದಲ್ಲಿ ಝೇಂಡೇ ಇದ್ದಾನೆ.

ಎಲ್ಲವನ್ನು ಬಿಟ್ಟು ಬಿಡಲು ಆರ್ಯ ನಿರ್ಧಾರ!
ಆರ್ಯವರ್ಧನ್ಗೆ ಈಗ ಯಾವುದರ ಮೇಲೂ ಮೋಹವಿಲ್ಲ. ಪ್ರೀತಿಸಿದ ರಾಜನಂದಿನಿಯನ್ನು ಕಳೆದುಕೊಂಡ ಆತಂಕದಲ್ಲಿದ್ದ ಆರ್ಯನಿಗೆ, ಈಗ ಅನು ಬಳಿ ಸತ್ಯ ಹೇಳಿಕೊಂಡಾಗಿನಿಂದಲೂ ನಿರಾಳನಾಗಿದ್ದಾನೆ. ಆದರೆ ಅನು ತನ್ನನ್ನು ಒಪ್ಪಿಕೊಳ್ಳುತ್ತಾಳಾ ಎಂಬ ಆತಂಕದಲ್ಲಿದ್ದಾನೆ. ಈ ವಿಚಾರವನ್ನು ಝೇಂಡೇ ಬಳಿ ಹೇಳಿದ್ದಾನೆ. ಆದರೆ ಝೇಂಡೇಗೆ ಆತಂಕ ಶುರುವಾಗಿದೆ. ಹೀಗಾಗಿ ಝೇಂಡೇ ಆರ್ಯನ ಜೊತೆ ವಾದ ಮಾಡಿದ್ದಾನೆ. ಬಟ್ ಆರ್ಯನಿಗೆ ಅನು ಬಿಟ್ಟರೆ ಬೇರೇನು ಬೇಡ ಎನ್ನುವಂತಾಗಿದೆ.

ಮಗಳು ಗರ್ಭಿಣಿ ಎಂದು ತಿಳಿದ ಪುಷ್ಪ!
ಅನು ಸಿರಿಮನೆ ಪುಷ್ಪ ಮನೆಗೆ ಸರ್ಪ್ರೈಸಿಂಗ್ ಆಗಿ ಬಂದಿದ್ದಾಳೆ. ಮಗಳು ಮನೆಗೆ ಬಂದಿದ್ದಕ್ಕೆ ಖುಷಿ ಪಟ್ಟಿರುವ ಪುಷ್ಪ ಆರತಿ ಮಾಡಿ ಮನೆ ಒಳಗೆ ಕರೆದುಕೊಳ್ಳುತ್ತಾಳೆ. ಸಿಹಿ ಮಾಡುತ್ತಾಳೆ. ಇದೇ ವೇಳೆಗೆ ಅನು ತಂದಿದ್ದ ಫೈಲ್ ಅನ್ನು ತೆರೆದು ನೋಡುತ್ತಾಳೆ. ಅದರಲ್ಲಿ ಅನು ಗರ್ಭಿಣಿ ಎಂದು ಬರೆದಿರುವ ರಿಪೋರ್ಟ್ ನೋಡುತ್ತಾಳೆ. ರಿಪೂರ್ಟ್ ನೋಡಿದ ಪುಷ್ಪಗೆ ಹಾರಾಡಿದಂತಾಗುತ್ತದೆ. ತನ್ನ ಅನುಮಾನ ನಿಜವಾಗಿದೆ. ಅನು ಗರ್ಭಿಣಿಯಾಗಿದ್ದಾಳೆ ಎಂದು ಖುಷಿ ಪಡುತ್ತಾಳೆ. ಅಷ್ಟರಲ್ಲಿ ಆರ್ಯ ಕರೆ ಮಾಡುತ್ತಾರೆ. ಅವರೇ ಅನುಳನ್ನು ಈ ವಿಚಾರ ತಿಳಿಸಲು ಕಳಿಸಿರಬೇಕು ಎಂದು ತಿಳಿದ ಪುಷ್ಪಾ ಫೋನ್ ರಿಸೀವ್ ಮಾಡುತ್ತಾಳೆ. ಮಾತನಾಡುವ ವೇಳೆಗೆ ಅನು ಬಂದು ಫೋನ್ ತೆಗೆದುಕೊಂಡು ಬಿಡುತ್ತಾಳೆ.

ಅಮ್ಮನನ್ನು ಸತ್ಯ ಹೇಳದಂತೆ ತಡೆದ ಅನು!
ಅನು ಫೋನ್ ಕಟ್ ಮಾಡಿದ ಮೇಲೆ ಪುಷ್ಪಾ ಈ ರಿಪೋರ್ಟ್ ನಿಜಾನಾ ಎಂದು ಕೇಳುತ್ತಾಳೆ. ಆಗ ಅನು ನಿಜ ಎಂದು ಹೇಳುತ್ತಾಳೆ. ಆದರೆ ಮನೆಯಲ್ಲಿ ಯಾರಿಗೂ ಹೇಳಿಲ್ಲ. ನೀನೂ ಹೇಳಬೇಡ ಅಮ್ಮ. ನಾನು ನನ್ನದೇ ಕೆಲ ಸಮಸ್ಯೆಯಲ್ಲಿದ್ದೀನಿ ಎಂದು ಹೇಳುತ್ತಾಳೆ. ಆಗ ಪುಷ್ಪಾ ಈ ಸುದ್ದಿಯನ್ನೆಲ್ಲಾ ಹಾಗೆ ಮುಚ್ಚಿಟ್ಟುಕೊಳ್ಳಬಾರದು. ಆದಷ್ಟು ಬೇಗ ಎಲ್ಲರಿಗೂ ಹೇಳು ಎಂದು ಹೇಳುತ್ತಾಳೆ. ಬಳಿಕ ಪುಷ್ಪಾ ಅನುಗೆ ಮಡಿಲಕ್ಕಿಯನ್ನು ತುಂಬುತ್ತಾಳೆ. ಹುಷಾರಾಗಿರು, ಚೆನ್ನಾಗಿ ತಿನ್ನು, ಏನು ಯೋಚಿಸಬೇಡ ಎಂದು ಹೇಳಿ ಕಳಿಸುತ್ತಾಳೆ.

ಝೇಂಡೇ ಮಾಡಿರುವ ಆಸ್ತಿ, ಹಣ!
ಆರ್ಯ ಆಫೀಸಿನಿಂದ ಮನೆಗೆ ಹೋಗಿದ್ದಾನೆ. ಎಲ್ಲಾ ವ್ಯವಹಾರವನ್ನೂ ಹರ್ಷವರ್ಧನ್ಗೆ ಒಪ್ಪಿಸುವಂತೆ ಹೇಳಿದ್ದಾನೆ. ಈ ವಿಚಾರವನ್ನು ಮೀರಾ ಝೇಂಡೇಗೆ ಹೇಳುತ್ತಾಳೆ. ಆಗ ಝೇಂಡೇ ಶಾಕ್ ಆಗುತ್ತಾನೆ. ಸೀದಾ ಮನೆಗೆ ಹೋಗುವ ಝೇಂಡೇ, ಮನೆಯಲ್ಲಿರುವ ಕೆಲ ಬ್ಯಾಗ್, ಪೆಟ್ಟಿಗೆ, ಸೂಟ್ ಕೇಸ್ಗಳನ್ನು ತೆಗೆಯುತ್ತಾನೆ. ಅವೆಲ್ಲವನ್ನೂ ಓಪನ್ ಮಾಡುತ್ತಾನೆ. ಅದೆಲ್ಲದರಲ್ಲೂ ಹಣ ಹಾಗೂ ಚಿನ್ನದ ಕಾಯಿನ್ ಗಳು ಇರುತ್ತವೆ.


Click it and Unblock the Notifications











